Advertisement

ನನ್ನ ಪ್ರೀತಿಯ ಕಾಲೇಜು

12:30 AM Feb 15, 2019 | |

ವಿಶ್ವವಿದ್ಯಾನಿಲಯ ಕಾಲೇಜಿಗೆ ನಾನು ಮೊತ್ತ ಮೊದಲು ಕಾಲಿಟ್ಟಿದ್ದು ಕಾಲೇಜು ಪ್ರವೇಶಕ್ಕೆ ಅರ್ಜಿ ಹಾಕುವ ದಿವಸ. ಮಂಗಳೂರು ಅಂದರೆ ಮಹಾನಗರ. ಕಾಲೇಜಿನತ್ತ ಬರುತ್ತಿರಬೇಕಾದರೆ ನನ್ನ ಮನದಲ್ಲಿ ಸಾಮಾನ್ಯವಾಗಿ ನಗರಗಳಲ್ಲಿ ಇರುವಂತಹ ಕಾಲೇಜಿನ ಚಿತ್ರಣವಿತ್ತು. ಕ್ಯಾಂಪಸ್ಸಿನ ಒಳಗಡೆ ಕಾಲಿಟ್ಟದ್ದೇ ತಡ ನಿಜಕ್ಕೂ ನಾನು ಮೂಕವಿಸ್ಮಿತಳಾದೆ. ನಾನು ಮನದಲ್ಲಿ ಚಿತ್ರಿಸಿದ ಕಟ್ಟಡದ ಸ್ಥಾನದಲ್ಲಿ ಭವ್ಯವಾಗಿ ಕಂಗೊಳಿಸುವ ಕೆಂಪುಕೋಟೆಯಿತ್ತು. ಇದರ ಹಿಂದೆ ಏನಾದರೊಂದು ಇತಿಹಾಸ ಇದ್ದೇ ಇರಬಹುದು ಎಂದು ಮನದಲ್ಲೇ ಅಂದುಕೊಂಡೆ. ಮುಂದಿನ ದಿನಗಳಲ್ಲಿ ನಾನಂದುಕೊಂಡದ್ದು ನಿಜವೆಂದು ಅರಿವಾಯಿತು. ಕೆಂಪುಕೋಟೆಯ ಸುತ್ತಲೂ ಹಚ್ಚ ಹಸಿರಿನ ಗಿಡಮರಗಳು ತಲೆಎತ್ತಿದ್ದುವು. ಬನಸಿರಿ ಉದ್ಯಾನವನವಂತೂ ಕಣ್ಣಿಗೆ ಹಸುರು ಹಬ್ಬವನ್ನುಂಟುಮಾಡುತ್ತಿತ್ತು. ಮಂಗಳೂರಿನ ಹೃದಯ ಭಾಗದಲ್ಲಿ ವಾಹನಗಳ ಭರಾಟೆಯ ನಡುವೆ ಈ ಕ್ಯಾಂಪಸ್‌ ಒಳಗಡೆ ಕಾಲಿಟ್ಟರೆ ಪ್ರಶಾಂತ ವಾತಾವರಣದಲ್ಲಿ ಮನಸ್ಸೂ ಶಾಂತವಾಗುತ್ತದೆ.

Advertisement

ನಾನು ಈ ಕಾಲೇಜನ್ನು ಆಯ್ಕೆಮಾಡಿಕೊಳ್ಳುವುದಕ್ಕೆ ಮುಖ್ಯ ಕಾರಣಗಳೆಂದರೆ, ಪತ್ರಿಕೋದ್ಯಮ ಕಲಿಕೆ ಮತ್ತು ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸ ಮಾಡುತ್ತಿರುವ ಕನ್ನಡ ಸಾಹಿತ್ಯದ ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆಯವರನ್ನು ನೋಡುವ ಹಂಬಲ.ಆದರೆ, ನಾನು ಕಾಲೇಜು ಸೇರಿದ ಮೊದಲನೇ ವರ್ಷವೇ ಅವರು ನಿವೃತ್ತಿ ಹೊಂದಿದರು ಎಂಬುದು ಮತ್ತೆಯಷ್ಟೇ ತಿಳಿಯಿತು. ಕ್ಯಾಂಪಸ್‌ ಅಂತೂ ತುಂಬಾ ವಿಶಾಲವಾಗಿದೆ. ಎಲ್ಲಿಬೇಕಾದರಲ್ಲಿ ಇಕ್ಕಟ್ಟಿಲ್ಲದೆ ಓಡಾಡಿಕೊಳ್ಳಬಹುದು. ಕಾಲೇಜು ಸೇರಿದ ಮೊದಲನೇ ದಿನವಂತೂ ಎಲ್ಲಿಂದ ಹೋದರೆ ಎಲ್ಲಿಂದ ಬರಬಹುದು ಎಂದು ತಿಳಿಯದೆ ಇಕ್ಕಟ್ಟಿಗೆ ಸಿಲುಕಿದ್ದೆ. ಮಧ್ಯಾಹ್ನದ ಹೊತ್ತು ಕಾಲೇಜಿನ ಕಾರಿಡಾರ್‌ನಲ್ಲಿ ನಿಲ್ಲುವಾಗಿನ ಖುಷಿಯೇ ಬೇರೆ. ಕಾರಿಡಾರ್‌ನಲ್ಲಿ ಗೆಳೆಯ-ಗೆಳತಿಯರು ನಿಂತು ಹರಟುವುದನ್ನು ನೋಡುವುದೇ ಒಂದು ಚೆಂದ. ಕಾಲೇಜು ಸೇರಿದ ಹಲವು ತಿಂಗಳುಗಳ ಬಳಿಕವಷ್ಟೇ ಗೆಳತಿ ಅಕ್ಷಿತಾಳೊಂದಿಗೆ ವಿಜ್ಞಾನ ವಿಭಾಗದ ಕಟ್ಟಡಕ್ಕೆ ಕಾಲಿರಿಸಿದ್ದು. ಮೆಟ್ಟಿಲೇರಬೇಕಿದ್ದರೆ ಇದೇನಿದು ಭೂತಬಂಗಲೆಯೇ? ಎಂದು ಬೆಚ್ಚಿಬಿದ್ದೆ. ಈ ಕಟ್ಟಡವೇ ಕಾಲೇಜಿನ ಶತಮಾನ ಸ್ಮಾರಕ ಕಟ್ಟಡ.

ಕಾಲೇಜಿನಲ್ಲಿ ಮೂರು ಬ್ರಿಟಿಷ್‌ ವಾಸ್ತುವಿನ್ಯಾಸದ ಪಾರಂಪರಿಕ ಕಟ್ಟಡಗಳಿವೆ. ಅವುಗಳೇ ರವೀಂದ್ರಕಲಾಭವನ, ಆಡಳಿತ ಕಟ್ಟಡ ಮತ್ತೂಂದು ಕಾಮರ್ಸ್‌ ಬ್ಲಾಕ್‌. ಕಾಮರ್ಸ್‌ ಬ್ಲಾಕ್‌ ಆಗಿದ್ದರೂ ಇದೀಗ ಕಲಾವಿಭಾಗದ ನಮಗೂ ಅದೇ ಕಟ್ಟಡದಲ್ಲಿ ತರಗತಿಗಳನ್ನು ನೀಡಿರುವುದರಿಂದ ಗತಕಾಲದ ವೈಭವವಿರುವ ಭವ್ಯ ಕಟ್ಟಡದಲ್ಲಿ ವಿದ್ಯಾರ್ಜನೆಗೆಯ್ಯುವ ಭಾಗ್ಯವು ನಮ್ಮದಾಗಿದೆ. ಈ ಎಲ್ಲ ಕಟ್ಟಡಗಳಲ್ಲಿಯೂ ಕೆಂಪುಕಲ್ಲಿನ ಬಳಕೆಯನ್ನು ಮಾಡಲಾಗಿದೆ. ವಿಶೇಷ ವಿನ್ಯಾಸದ ಕಿಟಿಕಿಗಳು ಆಕರ್ಷಣೀಯವಾಗಿದೆ.

ಕಾಲೇಜಿನ ಆಕರ್ಷಣೀಯ ಪಾರಂಪರಿಕ ಕಟ್ಟಡವೇ ರವೀಂದ್ರ ಕಲಾಭವನ. ಪ್ರಥಮ ವರ್ಷದಲ್ಲಿರುವಾಗಲೇ ಈ ಕಟ್ಟಡವನ್ನು ಪ್ರವೇಶಿಸಲು ಮನಸ್ಸು ಹಪಹಪಿಸುತ್ತಿತ್ತು. ಆದರೆ, ಕಟ್ಟಡದ ಕಾಮಗಾರಿ ನಡೆಯುತ್ತಿದ್ದುದರಿಂದ ಒಳ ಪ್ರವೇಶಿಸಲು ಅವಕಾಶ ಸಿಗಲಿಲ್ಲ. ದ್ವಿತೀಯ ವರ್ಷಕ್ಕೆ ತಲುಪಿದಾಗ ಇಂಗ್ಲೀಷ್‌ ಐಚ್ಛಿಕ ವಿದ್ಯಾರ್ಥಿಗಳ ಒಂದು ಕಾರ್ಯಕ್ರಮದ ಸಲುವಾಗಿ ಗೆಳತಿ ಸೌಮಿತಾಳೊಂದಿಗೆ ಮೊದಲನೆಯದಾಗಿ ಈ ಕಟ್ಟಡದೊಳಗೆ ಕಾಲಿರಿಸಿದೆ. ಅತ್ಯದ್ಭುತ ವಾಸ್ತುವಿನ್ಯಾಸ ಹೊಂದಿರುವ ಕಟ್ಟಡವಿದು. ಬ್ರಿಟಿಷ್‌ ಶ್ಯೆಲಿಯ ದ್ವಾರಗಳು, ಗವಾಕ್ಷಿಗಳು, ಸಭಾಂಗಣದ ಎರಡೂ ಬದಿಗಳಲ್ಲಿ  ವಿಶಾಲವಾದ ಹಲವು ಬಾಗಿಲುಗಳು, ವಿಶಾಲವಾದ ಮೇಲ್ಭಾಗದ ಉಪ್ಪರಿಗೆ ಇವೆಲ್ಲವೂ ಕಣ್ಮನ ಸೆಳೆಯುವಂಥದ್ದು. ಇಂತಹ ಅತ್ಯದ್ಭುತ ವಾಸ್ತುಶಿಲ್ಪವನ್ನು ನಮ್ಮ ಮುಂದಿಟ್ಟ ಶಿಲ್ಪಿಗಳು ಯಾರು? ಎಂಬ ಪ್ರಶ್ನೆ ನನ್ನ ಮನದಲ್ಲಿ ಹಲವು ಬಾರಿ ಮೂಡಿದೆ. ಈ ಸಭಾಂಗಣವನ್ನು ಹಿಂದೆ “ಅಕಾಡೆಮಿಕ್‌ ಹಾಲ…’ ಎಂದು ಕರೆಯಲಾಗುತ್ತಿತ್ತು. 1922ರಲ್ಲಿ ಗುರುದೇವ ರವೀಂದ್ರನಾಥ ಠಾಗೂರರು ಇಲ್ಲಿಗೆ ಆಗಮಿಸಿ ಇದೇ ಹಾಲ್‌ನಲ್ಲಿ ಭಾಷಣ ಮಾಡಿದ್ದರು. ಅದರ ಸವಿನೆನಪಿನÇÉೇ ಈ ಸಭಾಂಗಣಕ್ಕೆ ರವೀಂದ್ರ ಕಲಾಭವನ ಎಂದು ಹೆಸರಿಡಲಾಗಿದೆ. ಅಂದು ಗಾಂಧೀಜಿಯವರ ಚಿತಾಭಸ್ಮವನ್ನು ಇದೇ ರವೀಂದ್ರ ಕಲಾಭವನದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಕಾಲೇಜಿನ ಇನ್ನೊಂದು ಸಭಾಂಗಣಕ್ಕೆ “ಶಿವರಾಮ ಕಾರಂತ ಸಭಾಭವನ’ ಎಂದು ಹೆಸರಿಡಲಾಗಿದೆ. ಶಿವರಾಮ ಕಾರಂತರು ಇಲ್ಲಿನ ವಿದ್ಯಾರ್ಥಿಯಾಗಿ¨ªಾಗಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದು.

ಈ ವಿದ್ಯಾದೇಗುಲದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳಿಗೆ ಹೆಗಲಾಗಿ ನಿಲ್ಲುವ ಗುರುಗಳನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು. ನಮ್ಮ ಸೀನಿಯರ್ಸ್‌ ಜೊತೆಗಿನ ಒಡನಾಟವಂತೂ ಹೇಳತೀರದು. ಸೀನಿಯರ್ಸ್‌ ಎಂದಾಕ್ಷಣ ರ್ಯಾಗಿಂಗ್‌ ನೆನಪಿಗೆ ಬರುತ್ತದೆ.ಅದೇ ಭಯ ನನ್ನನ್ನೂ ಕಾಡುತ್ತಿತ್ತು. ಆದರೆ ಈ ಕಾಲೇಜಿಗೆ ಸೇರಿದ ಬಳಿಕ ನನ್ನ ಆ ಮನೋಭಾವವು ಬದಲಾಗಿಬಿಟ್ಟಿತು. 

Advertisement

ತೇಜಶ್ರೀ ಶೆಟ್ಟಿ
ದ್ವಿತೀಯ ಪತ್ರಿಕೋದ್ಯಮ
                  ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next