Advertisement

ಲವ್ ಮ್ಯಾರೇಜ್ VS ಅರೇಂಜ್ಡ್ ಮ್ಯಾರೇಜ್

05:07 PM Jan 13, 2021 | Team Udayavani |

ಯಾವ ಕಾಲದಲ್ಲೂ ವಿವಾಹದ ವಿಷಯದಲ್ಲಿ “ಇದಮಿತ್ಥಂ’ ಎನ್ನುವಂತೆ ಇದೇ ಸರಿ, ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಲವ್‌ ಮ್ಯಾರೇಜ್‌ ಈಸ್‌ ಬೆಸ್ಟ್ ಅನ್ನುತ್ತಾರೆ. ಮತ್ತೆ ಕೆಲವರು, ಹಿರಿಯರು ನಿಶ್ಚಯಿಸಿ ನಡೆಸುವ ಅರೇಂಜ್ಡ್ ಮ್ಯಾರೇಜ್‌ ಎಲ್ಲಾ ರೀತಿಯಿಂದಲೂ ಒಳ್ಳೆಯದು ಅನ್ನುತ್ತಾರೆ. ನಿಜ ಹೇಳಬೇಕೆಂದರೆ, ಈ ಎರಡೂ ಬಗೆಯ ವಿವಾಹಗಳಲ್ಲೂ ಅದರದೇ ಆದ ಸಾಧಕ-ಬಾಧಕಗಳಿವೆ.

Advertisement

ಸಮಸ್ಯೆಗಳು- ಸವಾಲುಗಳು ತಂದೆ, ತಾಯಿಯರ ಆಸೆಯಂತೆ ಹುಡುಗ-ಹುಡುಗಿ ಪರಸ್ಪರರನ್ನು ನೋಡಿ, ಜಾತಕ ತೋರಿಸಿ, ಸಂಬಂಧಿಕರೆಲ್ಲ ಈ ಸಂಬಂಧಕ್ಕೆ ಒಪ್ಪಿ, ಅವರೆಲ್ಲರ ಆಶೀರ್ವಾದದಿಂದ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟವರೆಲ್ಲರೂ ಸಂತಸದಿಂದ ಇರುವರೆಂದೋ, ಅಥವಾ ಅವರಿಬ್ಬರೂ ಮೊದಲಿನಿಂದಲೂ ಪರಸ್ಪರ ಅರ್ಥಮಾಡಿಕೊಳ್ಳದಿರುವುದರಿಂದ ಚೆನ್ನಾಗಿರುವುದಿಲ್ಲವೆಂದೂ ಹೇಳಲಾಗುವುದಿಲ್ಲ.

ಆದರೆ ಅಲ್ಲಿ ಇಬ್ಬರ ವಿವಾಹದೊಂದಿಗೆ ಎರಡು ಕುಟುಂಬಗಳೂ, ಸಂಪ್ರದಾಯಗಳೂ ಬೆಸೆಯುವುದರಿಂದ ಇಡೀ ಸಂದರ್ಭದ ಸಂಭ್ರಮ ಹೆಚ್ಚುತ್ತದೆ ಎಂಬುದು ಸತ್ಯ. ಜೊತೆಗೆ, ಆ ದಂಪತಿಗೆ ಭವಿಷ್ಯದಲ್ಲಿ ಏನೇ ಸಮಸ್ಯೆಯಾದರೂ, ಆಗ ಬಂಧುಗಳೆಲ್ಲಾ ಜೊತೆಗೆ ನಿಲ್ಲುತ್ತಾರೆ ಎಂಬುದೂ ಸತ್ಯ.  ಪ್ರೇಮ ವಿವಾಹದ ವಿಷಯಕ್ಕೆ ಬಂದರೆ, ಎಲ್ಲಾ ಪ್ರೇಮ ವಿವಾಹಗಳೂ ಯಶಸ್ವಿಯಾಗುತ್ತವೆಂದು ಹೇಳಲು ಸಾಧ್ಯವೇ ಇಲ್ಲ. ಪರಸ್ಪರರಲ್ಲಿ ನಿಜವಾಗಿ ಮೂಡಿದ ಪ್ರೀತಿಯಿಂದ ಬದುಕು ಸುಂದರವಾಗಿರುತ್ತದೆಯೇ ವಿನಃ ವಯೋ ಸಹಜ ಆಕರ್ಷಣೆಯಿಂದ ಅಲ್ಲ.

ಇದನ್ನೂ ಓದಿ:120ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಗೋಚರ 

ಅದರಲ್ಲೂ ಅಂತರ್ಜಾತೀಯ ವಿವಾಹಗಳಲ್ಲಿ, ಸಮಸ್ಯೆ ಮತ್ತು ಸವಾಲುಗಳು ಜಾಸ್ತಿ. ಎರಡೂ ಕಡೆಯ ಹೆತ್ತವರನ್ನು ಎದುರು ಹಾಕಿಕೊಂಡು ಮದುವೆಯಾದ ಜೋಡಿಯ ಬದುಕಿನ ಕುರಿತು ಏನೂ ಹೇಳಲು ಆಗುವುದಿಲ್ಲ.

Advertisement

ಜಗಳ ಅನ್ನೋದು ಮಾಮೂಲು ಈಗಂತೂ ಗಂಡು ಹೆಣ್ಣು ಇಬ್ಬರೂ ದುಡಿಯುತ್ತಾರೆ. ಅದೇ ಕಾರಣಕ್ಕೆ ಇಬ್ಬರಿಗೂ ಆರ್ಥಿಕ ಸ್ವಾತಂತ್ರ ಇರುತ್ತದೆ. ನನ್ನ ಕಾಸು- ನನ್ನ ಇಷ್ಟ ಎಂಬಂತೆ ಬದುಕು ಇದ್ದಾಗ ವೈಮನಸ್ಯಗಳು ಬರುವುದು ಸಹಜ. ಅಂಥ ಸಂದರ್ಭದಲ್ಲಿ ದಾಂಪತ್ಯದಲ್ಲಿ ದುಸುಮುಸು ಶುರುವಾದರೆ, ಅರೇಂಜ್ಡ್ ಮ್ಯಾರೇಜ್‌ ಆದ ದಂಪತಿಗೆ, ಹಿರಿಯರು ಹೇಳುತ್ತಾರೆ. ಲವ್‌ ಮ್ಯಾರೇಜ್‌ ಆದವರ ಬಳಿಗೆ ಯಾರೂ ಬರುವುದಿಲ್ಲ. ಇಂಥ ಸಂದರ್ಭದಲ್ಲಿ ದಂಪತಿ ಕೂತು ಮಾತಾಡಿ ಅವನ್ನು ಬಗೆಹರಿಸಿಕೊಳ್ಳಬೇಕು, ಹೊಂದಿಕೊಂಡು ಹೋಗಬೇಕು. ಆದರೆ ಈ ದಿನಗಳಲ್ಲಿ ಅಂಥ ಸಂದರ್ಭಗಳು ಕಾಣಿಸುತ್ತಿಲ್ಲ.
ವೈಮನಸ್ಸು ಅಸಮಾಧಾನವಾಗಿ, ಮುನಿಸಾಗಿ, ಜಗಳವಾಗಿ ಪ್ರಕಟಗೊಳ್ಳುತ್ತಿದೆ. ಅದರ ಮುಂದುವರಿದ ಭಾಗವಾಗಿ
ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿಯೇ ಈಗ ಹಿಂದೆಂದಿಗಿಂತ ವಿವಾಹ ವಿಚ್ಛೇದನಗಳು ಜಾಸ್ತಿಯಾಗಿರೋದು. ಇದಕ್ಕೆ ಪ್ರೇಮ ವಿವಾಹ ಅಥವಾ ಹಿರಿಯರು ನಿಶ್ಚಯಿಸಿದ ವಿವಾಹವೆಂಬ ಬೇಧವೇ ಇಲ್ಲ.

ಮೊದಲಾದರೆ ಅರೇಂಜ್ಡ್ ಮ್ಯಾರೇಜ್‌ನ ದಾಂಪತ್ಯದಲ್ಲಿ ಏನಾದರೂ ಅಪಶ್ರುತಿ ಮೂಡಿದರೆ ಹೆಣ್ಣು ಆದಷ್ಟು ಅನುಸರಿಸಿಕೊಂಡು
ಹೋಗಬೇಕೆನ್ನುವುದು ಒಂದು ಅಲಿಖೀತ ಒಪ್ಪಂದವಾಗಿತ್ತು. ಮತ್ತು ಅದು ಅವಳಿಗೆ ಅನಿವಾರ್ಯ ಕೂಡ ಆಗಿತ್ತು. ಈಗ ಹಾಗೇನೂ ಇಲ್ಲ, ತನ್ನ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಪ್ರತಿ ಹೆಣ್ಣೂ ಸಮರ್ಥಳಿದ್ದಾಳೆ. ಅವಳೂ ಹೊಂದಾಣಿಕೆ ಇಲ್ಲದ ವಿವಾಹದಿಂದ ಬಿಡುಗಡೆಯನ್ನೇ ಬಯಸುತ್ತಾಳೆ.

ಅದು ಸಹಜ ಮತ್ತು ಅವಳ ಹಕ್ಕು ಕೂಡ. ಹಾಗಾಗಿ ಮದುವೆ ಯಾವ ಪ್ರಕಾರ ಆಯ್ತು? ಅಥವಾ ಹೇಗೆ ಆಯ್ತು? ಎನ್ನುವುದಕ್ಕಿಂತ ಮದುವೆಯಾದ ಮೇಲೆ ಅವರು ಹೇಗಿದ್ದರು? ಎನ್ನುವುದೇ ಮುಖ್ಯವಾಗುತ್ತೆ. ಸರಸ ಜನನ, ವಿರಸ ಮರಣ, ಸಮರಸವೇ ಜೀವನ
ಎನ್ನುವಂತೆ ಒಬ್ಬರನ್ನೊಬ್ಬರು ಅರಿತುಕೊಂಡು, ಪರಸ್ಪರರ ಭಾವನೆಗಳಿಗೆ ಬೆಲೆ ಕೊಡುತ್ತಾ, ಪರಸ್ಪರರ ತಪ್ಪುಗಳು ಅಥವಾ ದುರ್ಗುಣಗಳನ್ನೇ ಎತ್ತಿ ಆಡುವುದನ್ನು ಬಿಟ್ಟು ಒಬ್ಬರಿಗೊಬ್ಬರು ಪ್ರೀತಿಯಿಂದ ಹೊಂದಿಕೊಂಡು ಹೋಗಿಬಿಟ್ಟರೆ ಆ ವಿವಾಹಬಂಧನ ಯಶಸ್ಸನ್ನು ಪಡೆಯುತ್ತದೆ. ಇಲ್ಲದಿದ್ದರೆ ಆ “ವಿವಾಹ- ಬಂಧನ’ ಆಗುತ್ತದೆ ಅಷ್ಟೆ.

ಒಟ್ಟಿನಲ್ಲಿ ಹೇಳಬೇಕೆಂದರೆ- “ದಾಂಪತ್ಯದಲ್ಲಿ ಪರಸ್ಪರರಲಿರೆ ಪ್ರೀತಿ, ಮದುವೆ’ ತರುವುದು ಜೀವನವಿಡೀ ಮಧು-ವೆ. ಸಮರಸದಿಂದಿರದಿರೆ ಪತಿಪತ್ನಿ, ಕೆಲ ದಿನ ಮಾತ್ರ ಮಧು; ನಂತರ ವ್ಯಾ.. .ವೆ ಆದ್ದರಿಂದ ದಾಂಪತ್ಯವು ಯಶಸ್ವಿಯಾಗ ಬೇಕೆಂದರೆ, ವಿವಾಹದ ನಂತರ ಒಬ್ಬರನ್ನೊಬ್ಬರು ಅರಿತು ಬಾಳಬೇಕು.

ಪ್ರೀತಿ ಮತ್ತು ಹೊಂದಾಣಿಕೆ ಮುಖ್ಯ ಅರೇಂಜ್ಡ್ ಮ್ಯಾರೇಜ್‌ ನಮಗೆ ಇಷ್ಟ ಇಲ್ಲ. ಲವ್‌ ಮ್ಯಾರೇಜ್‌ ಆಗುವುದೇ ಸರಿ ಎಂದು ವಾದಿಸುವವರು, ಮೊದಲು ನೌಕರಿಗೆ ಸೇರಿಕೊಳ್ಳಬೇಕು. ಎರಡು ಮೂರು ವರ್ಷ ಚೆನ್ನಾಗಿ ದುಡಿದು ಒಂದಷ್ಟು ದುಡ್ಡು
ಮಾಡಿಕೊಳ್ಳಬೇಕು. (ಏಕೆಂದರೆ, ಅಕಸ್ಮಾತ್‌ ಎರಡೂ ಕಡೆಯವರನ್ನು ಎದುರು ಹಾಕಿಕೊಂಡು ಮದುವೆಯಾದರೆ, ನಂತರದ ಕೆಲವೇ ದಿನಗಳಲ್ಲಿ ಏನಾದರೂ ಆಪತ್ತು ಜೊತೆಯಾಯ್ತು ಅಂದುಕೊಳ್ಳಿ; ಆಗ ಸಹಾಯಕ್ಕೆ ಯಾರೂ ಬರುವುದಿಲ್ಲ.) ನಂತರ ಎರಡೂ ಕಡೆಯವರನ್ನು ಒಪ್ಪಿಸಿ ವಿವಾಹವಾದರಾಯಿತು. ಈಗಿನ ಹೆಚ್ಚಿನ ತಂದೆತಾಯಿಯರಂತೂ ಮೊದಲಿನಂತಲ್ಲ, ಇರುವ
ಒಂದೋ ಎರಡೋ ಮಕ್ಕಳನ್ನು ದೂರವಂತೂ ಮಾಡಲ್ಲ.

ಹಾಗಾಗಿ ಲವ್‌ ಮ್ಯಾರೇಜ್‌ ಅಥವಾ ಅರೇಂಜ್ಡ್ ಮ್ಯಾರೇಜ್‌ ಯಾವುದೇ ಆದರೂ ಪ್ರೀತಿ ಮತ್ತು ಹೊಂದಾಣಿಕೆ ಹೆಚ್ಚಿದ್ದರೆ ಮಾತ್ರ ಬದುಕು ಬಂಗಾರವಾಗುತ್ತದೆ.

– ಜ್ಯೋತಿ ರಾಜೇಶ್‌

Advertisement

Udayavani is now on Telegram. Click here to join our channel and stay updated with the latest news.

Next