Advertisement

ಕೈ ಕೊಟ್ಟ ಅಲ್ಪೇಶ್‌ ಠಾಕೂರ್‌

12:51 AM Apr 11, 2019 | mahesh |

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡದ ಕಾರಣಕ್ಕೆ ಕಾಂಗ್ರೆಸ್‌ ಶಾಸಕ ಅಲ್ಪೇಶ್‌ ಠಾಕೂರ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಠಾಣ್‌ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅಲ್ಪೇಶ್‌ ಠಾಕೂರ್‌ ಬಯಸಿದ್ದರು. ಆದರೆ ಟಿಕೆಟ್‌ ನಿರಾಕರಿಸಿದ ಕಾಂಗ್ರೆಸ್‌, ಮಾಜಿ ಸಂಸದ ಜಗದೀಶ್‌ ಠಾಕೂರ್‌ಗೆ ಟಿಕೆಟ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ತನ್ನ ಗುಜರಾತ್‌ ಕ್ಷತ್ರಿಯ ಠಾಕೂರ್‌ ಸೇನೆಗೆ ಸೂಚನೆ ನೀಡಿರುವ ಅಲ್ಪೇಶ್‌, ಎಲ್ಲ ಮುಖಂಡರೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಗುಜರಾತ್‌ನಲ್ಲಿ ಪ್ರಮುಖ ಒಬಿಸಿ ನಾಯಕನಾಗಿ ಗುರುತಿಸಿಕೊಂಡಿದ್ದ ಅಲ್ಪೇಶ್‌, 2017ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸೇರಿ ರಾಧನ್‌ಪುರದಿಂದ ಗೆಲುವು ಸಾಧಿಸಿದ್ದರು. ಕೆಲವೇ ದಿನಗಳ ಹಿಂದೆ ಗುಜರಾತ್‌ಗೆ ಆಗಮಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಮಾಡಿದ್ದ ಅಲ್ಪೇಶ್‌, ರಾಜ್ಯ ಅಧ್ಯಕ್ಷ ಅಮಿತ್‌ ಚಾವಾx ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಪಠಾಣ್‌ ಕ್ಷೇತ್ರ ಅಭ್ಯರ್ಥಿ ಆಯ್ಕೆಯಲ್ಲಿ ತನ್ನನ್ನು ಪರಿಗಣಿಸಲಿಲ್ಲ. ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

Advertisement

ಕೆಸಿಆರ್‌ಗೆ ಆಯೋಗ ನೋಟಿಸ್‌
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ಗೆ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದೆ. ಮಾ.17ರಂದು ಕರೀಂನಗರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಎಚ್‌ಪಿ ನಾಯಕ ಎಂ.ರಾಮ ರಾಜು ದೂರು ನೀಡಿದ್ದರು. ಅದನ್ನು ಪರಿಗಣಿಸಿದ ಚುನಾವಣಾ ಆಯೋಗ ಈ ನೋಟಿಸ್‌ ಜಾರಿ ಮಾಡಿದೆ. “ಮೇಲ್ನೋಟಕ್ಕೆ ರ್ಯಾಲಿಯಲ್ಲಿ ಮಾತನಾಡಿ ರುವ ಅಂಶಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂ ಸಿದಂತೆ ಕಂಡು ಬರುತ್ತಿದೆ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಿದೆ’ ಎಂದು ಹೇಳಿದೆ. ಜತೆಗೆ ಮಾದರಿ ನೀತಿ ಸಂಹಿತೆಯನ್ನು ಪಾಲಿಸುವಂತೆಯೂ ಅವರಿಗೆ ಸೂಚನೆ ನೀಡಿದೆ.

ಗಡಚಿರೋಲಿಯಲ್ಲಿ ನಕ್ಸಲ್‌ ದಾಳಿ
ಮಹಾರಾಷ್ಟ್ರದ ಗಡಿcರೋಲಿಯಲ್ಲಿ ಬುಧವಾರ ಸುಧಾರಿತ ಸ್ಫೋಟಕ (ಐಇಡಿ) ಸಂಭವಿಸಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ ಒಬ್ಬ ಯೋಧ ಗಾಯಗೊಂಡಿದ್ದಾನೆ. ಈ ಪ್ರದೇಶದಲ್ಲಿ ಬುಧವಾರ ಮೊದಲ ಹಂತದ ಮತದಾನ ನಡೆಯಲಿದೆ. ಗಟ್ಟ ಜಂಬಿಯಾ ಎಂಬ ಗ್ರಾಮದಲ್ಲಿ ಚುನಾವಣಾ ಸಿಬಂದಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದೇ ವೇಳೆ, ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದೆ. ಅದರಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ನಕ್ಸಲ್‌ ದಾಳಿಯಲ್ಲಿ ಬಿಜೆಪಿ ಶಾಸಕ ಮತ್ತು ನಾಲ್ವರು ಮೃತರಾದ ಮಾರನೇ ದಿನವೇ ಘಟನೆ ನಡೆದಿದೆ.

ಗುಜ್ಜರ್‌ ಹೋರಾಟದ ರೂವಾರಿ ಬಿಜೆಪಿಗೆ
ರಾಜಸ್ಥಾನದಲ್ಲಿ ಗುಜ್ಜರ್‌ ಸಮುದಾಯಕ್ಕೆ ಮೀಸಲು ನೀಡಬೇಕು ಎಂದು ಪ್ರಬಲ ಹೋರಾಟ ನಡೆಸಿದ್ದ ಕಿರೋರಿ ಸಿಂಗ್‌ ಬೈನ್ಸಾ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗುಜ್ಜರ್‌ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶದಲ್ಲಿ ಬಿಜೆಪಿ ಪರ ಮತಗಳನ್ನು ಸೆಳೆಯುವುದೇ ಈ ಕ್ರಮದ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತದೆ. ಕಿರೋರಿ ಸಿಂಗ್‌ ಬೈನ್ಸಾ ಮತ್ತು ಅವರ ಪುತ್ರ ವಿಜಯ್‌ ಬೈನ್ಸಾ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಯಾಗಿ ಪಕ್ಷ ಸೇರ್ಪಡೆಯ ನಿರ್ಧಾರ ಪ್ರಕಟಿಸಿದರು. ನಂತರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಮತ್ತು ಇತರ ಪ್ರಮುಖ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆ ಯಾದರು. ಮೂಲಗಳ ಪ್ರಕಾರ ಒಂದು ಕ್ಷೇತ್ರದಲ್ಲಿ ಬೈನ್ಸಾ ಅಥವಾ ಪುತ್ರನಿಗೆ ಟಿಕೆಟ್‌ ಕೊಡಲು ಬಿಜೆಪಿ ಚಿಂತನೆ ನಡೆಸುತ್ತಿದೆ.

ಮಧ್ಯ ಪ್ರದೇಶ ಈಗ ಕಾಂಗ್ರೆಸ್‌ ಎಟಿಎಂ: ಪಿಎಂ
ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತ ಇದ್ದಾಗ ಆ ಪಕ್ಷಕ್ಕೆ
ರಾಜ್ಯ ಎಟಿಎಂ ಆಗಿತ್ತು. ಈಗ 15 ವರ್ಷಗಳ ಬಳಿಕ ಗೆದ್ದಿರುವ ಮಧ್ಯಪ್ರದೇಶ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಗುಜರಾತ್‌ ಮತ್ತು ಗೋವಾಗಳಲ್ಲಿ ಪ್ರಚಾರ ಮಾಡಿದ ಅವರು, ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದ್ದ 280 ಕೋಟಿ ರೂ. ಅಕ್ರಮ ವಿಚಾರ ಪ್ರಸ್ತಾಪಿಸಿದರು. ಇದು ಕಾಂಗ್ರೆಸ್‌ನ ಹೊಸ ಹಗರಣ ಎಂದಿದ್ದಾರೆ.

ದೆಹಲಿಯಲ್ಲಿನ ತುಘಲಕ್‌ ರಸ್ತೆಯಲ್ಲಿ ಕಾಂಗ್ರೆಸ್‌ ಕಚೇರಿ ಮತ್ತು ಭೋಪಾಲ್‌ನ ತುಘಲಕ್‌ ರಸ್ತೆಯಲ್ಲಿ ಸಿಎಂ ನಿವಾಸ ಇರುವುದನ್ನು ಉಲ್ಲೇಖೀಸಿ ಮಾತನಾಡಿದ ಅವರು ಇದೊಂದು ತುಘಲಕ್‌ ರಸ್ತೆಯ ಚುನಾವಣೆ ಹಗರಣ ಎಂದಿದ್ದಾರೆ. ಐದು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕರಿಗೆ ಜೈಲಿನ ದಾರಿ ತೋರಿಸಿದ್ದೇವೆ. ಗರ್ಭಿಣಿಯರು, ಬಡವರಿಗೆ ನೀಡಲು ಮೀಸಲಿಟ್ಟಿದ್ದ ಹಣವನ್ನು ಕಾಂಗ್ರೆಸ್‌ ಲೂಟಿ ಮಾಡಿದೆ ಎಂದಿದ್ದಾರೆ.

ಇಂದು ಸ್ಮತಿ ನಾಮಪತ್ರ ಸಲ್ಲಿಕೆ
ಅಮೇಠಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಸ್ಮತಿ ಇರಾನಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಬಿಜೆಪಿಯ ಇತರ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ. ಎ. 17ರಂದು ಅವರು ನಾಮಪತ್ರ ಸಲ್ಲಿಸಬೇಕಾಗಿತ್ತು. ಆ ದಿನ ರಜೆ ಇರುವುದರಿಂದ ದಿನದಲ್ಲಿ ಬದಲಾವಣೆ ಮಾಡಲಾಗಿದೆ.

ಮೈತ್ರಿ ಪ್ರಸ್ತಾವಕ್ಕೆ ತಿರಸ್ಕಾರ
ಹೊಸದಿಲ್ಲಿಯಲ್ಲಿ ಚುನಾವಣಾ ಮೈತ್ರಿ ಮಾಡಿ ಕೊಳ್ಳಬೇಕು ಎಂಬ ಕಾಂಗ್ರೆಸ್‌ನ ಪ್ರಸ್ತಾವವನ್ನು ಆಮ್‌ ಆದ್ಮಿ ಪಕ್ಷ ಬುಧವಾರ ತಿರಸ್ಕರಿಸಿದೆ. ಈ ನಿಟ್ಟಿನಲ್ಲಿ ದಿಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಶೀಲಾ ದೀಕ್ಷಿತ್‌, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಸೇರಿದಂತೆ ಪ್ರಮುಖರು ಸಭೆ ನಡೆಸಿದರು. ಬಳಿಕ ಈ ಬಗ್ಗೆ ಆಮ್‌ ಆದ್ಮಿ ಪಕ್ಷಕ್ಕೆ ಕೋರಿಕೆ ಸಲ್ಲಿಸಲಾ ಯಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪಕ್ಷದ ನಾಯಕ ಸಂಜಯ ಸಿಂಗ್‌ ಕಾಂಗ್ರೆಸ್‌ ಕೋರಿಕೆಯನ್ನು ಒಪ್ಪಿ ಕೊಳ್ಳಲಾಗದು. ಪಂಜಾಬ್‌ನಲ್ಲಿ ನಾಲ್ವರು ಸಂಸದರು, 20 ಮಂದಿ ಶಾಸಕರು ಇದ್ದಾರೆ. ಅಲ್ಲಿ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್‌ ಕೊಡಲಿಲ್ಲ ಎಂದಿ ದ್ದಾರೆ. ಮುಂದಿನ ದಿನಗಳಲ್ಲಿ ಮೈತ್ರಿ ಬಗ್ಗೆ ಕಾಂಗ್ರೆಸ್‌ ಜತೆ ಮಾತುಕತೆಯೂ ಇಲ್ಲ ಎಂದಿದ್ದಾರೆ.

ಗಲ್ಲಾ ನಿವಾಸಕ್ಕೆ ರೈಡ್‌ ಮಾಡಿಲ್ಲ
ಗುಂಟೂರು ಜಿಲ್ಲೆಯ ಟಿಡಿಪಿ ಸಂಸದ ಜಯದೇವ್‌ ಗಲ್ಲಾ ಅವರ ನಿವಾಸಗಳ ಮೇಲೆ ಮಂಗಳವಾರ ರಾತ್ರಿ ನಡೆದಿದೆಯೆನ್ನಲಾಗಿದ್ದ ದಾಳಿಗಳ ಬಗೆಗಿನ ವರದಿಗಳನ್ನು ಆದಾಯ ತೆರಿಗೆ ಇಲಾಖೆ ಅಲ್ಲಗಳೆದಿದೆ.
ಇಲಾಖೆಯ ಟೋಲ್‌ ಫ್ರೀ ಸಂಖ್ಯೆಗೆ ಬಂದ ಕರೆ ಯೊಂದರ ಜಾಡು ಹಿಡಿದು, ಮಂಗಳವಾರ ರಾತ್ರಿ ವಿಜಯವಾಡದಲ್ಲಿ ಗುರಪ್ಪ ನಾಯ್ಡು ಎಂಬ ಅಕೌಂಟೆಂಟ್‌ ಅವರ ನಿವಾಸದಲ್ಲಿ ಹುಡುಕಾಟ ನಡೆಸಲಾಗಿತ್ತು. ಆ ವೇಳೆ, ಅವರ ನಿವಾಸದಲ್ಲಿ 45.4 ಲಕ್ಷ ರೂ. ಮೊತ್ತದಷ್ಟು ದಾಖಲೆ ರಹಿತ ಹಣ ದೊರಕಿದೆ. ಇದನ್ನು ಬಿಟ್ಟರೆ ಮತ್ತೆಲ್ಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿಲ್ಲ ಎಂದಿದೆ.

5ನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ
ಐದನೇ ಹಂತದ ಲೋಕಸಭೆ ಚುನಾವಣೆಗಾಗಿ ಬುಧವಾರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಮೇ 6 ರಂದು ಏಳು ರಾಜ್ಯಗಳ 51 ಕ್ಷೇತ್ರಗಳಿಗೆ 5ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಉಳಿದ ಹಂತ ಗಳಿಗೆ ಹೋಲಿಸಿದರೆ ಈ ಹಂತದಲ್ಲಿ ಅತಿ ಕಡಿಮೆ ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 5ನೇ ಹಂತದಲ್ಲಿ ಬಿಹಾರದಲ್ಲಿ ಐದು, ಜಾರ್ಖಂಡದಲ್ಲಿ 4, ಉತ್ತರ ಪ್ರದೇಶದಲ್ಲಿ 17, ಪಶ್ಚಿಮ ಬಂಗಾಳದಲ್ಲಿ 7, ಜಮ್ಮು ಕಾಶ್ಮೀರದಲ್ಲಿ ಒಂದು ಮತ್ತು ಜಾರ್ಖಂಡದಲ್ಲಿ 12 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಕೊನೆಯ ದಿನಾಂಕ ಎಪ್ರಿಲ್‌ 18 ಆಗಿರ ಲಿದೆ. ನಾಮಪತ್ರ ಹಿಂಪಡೆಯಲು ಎಪ್ರಿಲ್‌ 22 ರ ವರೆಗೆ ಅವಕಾಶವಿದೆ.

ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸುತ್ತಾರೆ. ಆದರೆ ಅವರ ಸರಕಾರ ಯಾವ ರೀತಿಯ ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಮೌನವಾಗಿಯೇ ಇದ್ದಾರೆ. ಇಂದಿರಾ, ರಾಜೀವ್‌ ಅವಧಿಯ ಲ್ಲಿಯೂ ಪಾಕ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಶರದ್‌ ಪವಾರ್‌, ಎನ್‌ಸಿಪಿ ಅಧ್ಯಕ್ಷ

ಕೇಂದ್ರ ಸರಕಾರ ತ್ರಿವಳಿ ತಲಾಖ್‌ ಮೇಲೆ ನಿಷೇಧ ಹೇರುವ ಮೂಲಕ ಬಿಜೆಪಿ ಮುಸ್ಲಿಂ ಮಹಿಳೆಯರ ಗೌರವವನ್ನು ಹಿಂತಿರುಗಿಸಿದೆ. ವಯನಾಡ್‌ನ‌ಲ್ಲಿ ರಾಹುಲ್‌ ನಾಮಪತ್ರದ ವೇಳೆ ಇದ್ದದ್ದು ಮುಸ್ಲಿಂ ಲೀಗ್‌ನ ಧ್ವಜಗಳು ಮಾತ್ರ.
ಯೋಗಿ ಆದಿತ್ಯನಾಥ್‌, ಉ.ಪ್ರ.ಸಿಎಂ

ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಮಂತ್ರಿಯಾಗುವುದೇ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ, ಪೌರತ್ವ ಕಾಯ್ದೆ ಜಾರಿಗೆ ನಾನು ಅವಕಾಶವನ್ನೇ ಕೊಡುವುದಿಲ್ಲ.
ಮಮತಾ ಬ್ಯಾನರ್ಜಿ,ಪ.ಬಂ. ಮುಖ್ಯಮಂತ್ರಿ

ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಗೆ ನಾವು 200ರಲ್ಲಿ 100 ಅಂಕಗಳನ್ನು ಕೊಡುತ್ತೇವೆ. ಸಮಾನ ನಾಗರಿಕ ಸಂಹಿತೆ ಮತ್ತು 370ನೇ ವಿಧಿ ವಿಚಾರದಲ್ಲಿ ರಾಜಿ ಮಾಡಿಕೊಂಡವರನ್ನು ಇತಿಹಾಸ ಎಂದೂ ಕ್ಷಮಿಸುವುದಿಲ್ಲ.
ಶಿವಸೇನೆ

ಪಾಕ್‌ ಪ್ರಧಾನಿ ಹೇಳಿದ ಅಂಶಗಳ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು. ಪಾಕಿಸ್ಥಾನ ಮತ್ತು ಅಲ್ಲಿನ ಉಗ್ರರು ಬಿಜೆಪಿ ಚುನಾವಣೆಯಲ್ಲಿ ಸೋಲಬೇಕೆಂದು ಬಯಸುತ್ತಿವೆ ಎಂದು ಹೇಳಿದ್ದರು.
ಒಮರ್‌ ಅಬ್ದುಲ್ಲಾ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next