ಹಾವೇರಿ: ಭ್ರಷ್ಟಾಚಾರ ನಿಗ್ರಹ ದಳ ರಚನೆಯಾಗಿದ್ದರಿಂದ ಲೋಕಾಯುಕ್ತದಲ್ಲಿ ದಾಖ ಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಲೋಕಾಯುಕ್ತದ ಶಕ್ತಿಯೂ ಕುಂದಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದರು. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ದುರ್ಬಲವಾಗಿದೆ ಎಂಬ ಭಾವನೆ ಕೆಲವರಲ್ಲಿದೆ. ಲೋಕಾಯುಕ್ತಕ್ಕೆ ತನ್ನದೇ ಆದ ಶಕ್ತಿಯಿದೆ. ಲೋಕಾಯುಕ್ತಕ್ಕೆ ಎಫ್ಐಆರ್ ದಾಖಲಿಸುವ ಅಧಿಕಾರ ಇಲ್ಲ ಎನ್ನುವುದು ಬಿಟ್ಟರೆ, ಆಡಳಿತ ಯಂತ್ರವನ್ನು ಸರಿ ದಾರಿಗೆ ತರುವ ಎಲ್ಲಾ ಅವಕಾಶವಿದೆ. ತಪ್ಪು ಮಾಡಿದ ಅಧಿಕಾರಿ ವಿರುದ್ಧ ಸ್ವಯಂ ಪ್ರೇರಿತವಾಗಿ ಶಿಸ್ತು ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಮಾಡಬಹುದಾಗಿದೆ ಎಂದರು.
ತನಿಖೆಗೆ ಸಿಬಂದಿ ಸಮಸ್ಯೆ
ಲೋಕಾಯುಕ್ತಕ್ಕೆ ಸರ್ಕಾರ ನೀಡುವ ತನಿಖಾ ಕೆಲಸಗಳೇ ಬಹಳಷಿವೆೆ. ಲೋಕಾಯುಕ್ತದಲ್ಲಿ 6500 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಲೋಕಾಯುಕ್ತಕ್ಕೆ ಇನ್ನೂ ಒಂಬತ್ತು ಹೆಚ್ಚುವರಿ ತನಿಖಾಧಿಕಾರಿ, ಪೊಲೀಸ್ ಹಾಗೂ ಸಿಬಂದಿ ಕೋರಿ ತಾವು ಅಧಿಕಾರಕ್ಕೆ ಬಂದ ಆರಂಭದಲ್ಲೇ ಸರಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು.
ಸರಕಾರ 2007ರಿಂದ 2011ರವರೆಗಿನ ಉದ್ಯೋಗ ಖಾತ್ರಿ ಯೋಜನೆಯ ಅವ್ಯವಹಾರ ಕುರಿತು ತನಿಖೆಗೆ ಸೂಚಿಸಿದೆ. ಇದು ದೊಡ್ಡ ಪ್ರಕರಣವಾಗಿದ್ದು, ಇದರ ತನಿಖೆಗೆ ಇನ್ನಷ್ಟು ಪೊಲೀಸ್ ಸೇರಿದಂತೆ ಇತರ ಸಿಬಂದಿ ಆವಶ್ಯಕತೆ ಇರುವ ಬಗ್ಗೆ ಸರಕಾರಕ್ಕೆ ತಿಳಿಸಿದ್ದೇನೆ. ತನಿಖೆಗೆ ಹಳೆಯ ಕಡತಗಳು ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ ತನಿಖಾ ವರ್ಷದ ಕೊನೆಯ ಎರಡು ಮೂರು ವರ್ಷದ ಲೆಕ್ಕ ಶೀರ್ಷಿಕೆ ಪರಿಶೀಲಿಸಿ ತನಿಖೆ ನಡೆಸಲು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ನ್ಯಾ.ವಿಶ್ವನಾಥ ಶೆಟ್ಟಿ ತಿಳಿಸಿದರು.