Advertisement
ಈ ಬಾರಿಯ ಚುನಾವಣೆ ಉತ್ತರ ಕರ್ನಾಟಕದ ಹಲವು ಲೋಕಸಭಾ ಕ್ಷೇತ್ರಗಳ ಮಟ್ಟಿಗೆ ಹೊಸ ದಾಖಲೆ ಬರೆಯುವ, ದಾಖಲೆಗಳನ್ನು ಸರಿಗಟ್ಟುವ ಅವಕಾಶವನ್ನು ಒದಗಿಸಿದೆ. ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ ಹಾಗೂ ಹಾವೇರಿ ಕ್ಷೇತ್ರಗಳ ಸಂಸದರಿಗೆ ಹ್ಯಾಟ್ರಿಕ್ ಗೆಲುವಿನ ಸವಾಲು ಹಾಗೂ ಅವಕಾಶ ಎದುರಾಗಿದೆ. ಕಲಬುರಗಿ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಹಾಗೂ ದೇಶದ ಗಮನ ಸೆಳೆಯಬಹುದಾದ ಕ್ಷೇತ್ರಗಳಲ್ಲಿ ಒಂದು. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಈ ಕ್ಷೇತ್ರದಲ್ಲಿ ಸತತ ಎರಡು ಗೆಲುವು ಕಂಡಿದ್ದು, ಹಿಂದಿನ ಇಬ್ಬರು ಸಂಸದರ ಸಾಧನೆ ಸರಿಗಟ್ಟಿದ್ದು, 2019ರಲ್ಲಿ ಗೆಲುವು ಸಾಧಿಸಿದರೆ, ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಸಂಸದರಾಗಲಿದ್ದಾರೆ.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಹ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಇದುವರೆಗೆ ರಮೇಶ ಜಿಗಜಿಣಗಿ ಸೇರಿ ನಾಲ್ವರು ಸತತ ಎರಡು ಬಾರಿ ಗೆದ್ದ ಸಾಧನೆ ತೋರಿದ್ದಾರೆ. 1977 ಮತ್ತು 1980ರಲ್ಲಿ ಚೌಧರಿ ಕಾಳಿಂಗಪ್ಪ ಭೀಮಣ್ಣ ಅವರು ಸತತ ಎರಡು ಗೆಲುವು ಸಾಧಿಸಿದ್ದರೆ, 1989 ಮತ್ತು 1991ರಲ್ಲಿ ಬಿ.ಕೆ.ಗುಡದಿನ್ನಿ, 1999 ಮತ್ತು 2004ರಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಸತತ ಎರಡು ಬಾರಿ ಗೆಲುವಿನ ನಗೆ ಬೀರಿದ್ದಾರೆ. 2009 ಮತ್ತು 2014ರಲ್ಲಿ ರಮೇಶ ಜಿಗಜಿಣಗಿ ಅವರು ಸತತ ಎರಡು ಗೆಲುವು ಕಂಡಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನ ಸವಾಲು-ಅವಕಾಶ ಎದುರಾಗಿದೆ. ಇನ್ನು, ಹಾವೇರಿ, ಈ ಹಿಂದೆ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ನಂತರ ಹಾವೇರಿ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಈ ಕ್ಷೇತ್ರದಲ್ಲಿ 2009 ಮತ್ತು 2014ರಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಸತತ ಗೆಲುವು ಕಂಡಿದ್ದು, 2019ರ ಚುನಾವಣೆಯಲ್ಲಿ ಗೆಲುವು ಕಂಡರೆ ಹ್ಯಾಟ್ರಿಕ್ ಗೆಲುವಿನ ಸಾಧನೆ ತೋರಲಿದ್ದಾರೆ.
Related Articles
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ನಾಲ್ವರು ಸಂಸದರು ಸತತ ನಾಲ್ಕು ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಹಿಂದಿನ ದಾಖಲೆಗಳನ್ನು ಸರಿಗಟ್ಟುವ ನಿರೀಕ್ಷೆಯಲ್ಲಿದ್ದಾರೆ. ವಿಶೇಷವೆಂದರೆ, ಈ ನಾಲ್ವರೂ ಬಿಜೆಪಿ ಸಂಸದರಾಗಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಇದುವರೆಗೆ ಒಟ್ಟಾರೆ ಐದು ಗೆಲುವು ಕಂಡಿದ್ದರೂ, ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇದು ಸಾಧ್ಯವಾದರೆ ಸುಮಾರು 19 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಿ.ದೇವರಾಯ ನಾಯ್ಕ ಅವರು 1980ರಿಂದ 91ರವರೆಗೆ ಸತತವಾಗಿ ನಾಲ್ಕು ಬಾರಿ ಗೆಲುವು ಕಂಡಿದ್ದರು. ಅನಂತಕುಮಾರ ಹೆಗಡೆ ಅವರು 1996 ಮತ್ತು 1998ರಲ್ಲಿ ಸತತ ಎರಡು ಗೆಲುವು ಕಂಡಿದ್ದರಾದರೂ, 1999ರಲ್ಲಿ ಈ ಕ್ಷೇತ್ರದಲ್ಲಿ ಮಾರ್ಗರೇಟ್ ಆಳ್ವಾ ಗೆಲುವು ಸಾಧಿಸಿ ಹೆಗಡೆಯವರ ಹ್ಯಾಟ್ರಿಕ್ ಗೆಲುವನ್ನು ಭಗ್ನಗೊಳಿಸಿದ್ದರು. 2004, 2009 ಹಾಗೂ 2014ರಲ್ಲಿ ಗೆಲ್ಲುವ ಮೂಲಕ ಅನಂತಕುಮಾರ ಹೆಗಡೆ ಹ್ಯಾಟ್ರಿಕ್ ಸಾಧನೆ ತೋರಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಗೆದ್ದರೆ ಡಿ.ದೇವರಾಯ ನಾಯ್ಕ ಅವರ ಸತತ ನಾಲ್ಕನೇ ಗೆಲುವಿನ ದಾಖಲೆ ಸರಿಗಟ್ಟಲಿದ್ದಾರೆ.
Advertisement
ಜೋಶಿ, ಗದ್ದಿಗೌಡರ ತವಕ: ಧಾರವಾಡ ಕ್ಷೇತ್ರದಲ್ಲಿ ಇಬ್ಬರು ಸಂಸದರು ಸತತ ನಾಲ್ಕು ಬಾರಿ ಗೆಲುವಿನ ಸಾಧನೆ ತೋರಿದ್ದರೆ, ಹಾಲಿ ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಇಬ್ಬರು ಹ್ಯಾಟ್ರಿಕ್ ಸಾಧನೆ ತೋರಿದ್ದಾರೆ. ಇದೀಗ, ಪ್ರಹ್ಲಾದ ಜೋಶಿಯವರ ಮುಂದೆ ಸತತ ನಾಲ್ಕನೇ ಗೆಲುವಿನ ಸವಾಲು ಎದುರಾಗಿದೆ. ಸರೋಜಿನಿ ಮಹಿಷಿ ಅವರು 1962-1977ರವರೆಗೆ ಹಾಗೂ ಡಿ.ಕೆ.ನಾಯ್ಕರ್ ಅವರು 1980ರಿಂದ 1991ರವರೆಗೆ ಸತತ ನಾಲ್ಕು ಗೆಲುವಿನ ಸಾಧನೆ ತೋರಿದ್ದರು. 1996-1999ರವರೆಗೆ ಬಿಜೆಪಿಯ ವಿಜಯ ಸಂಕೇಶ್ವರ ಅವರು ಸತತ ಮೂರು ಗೆಲುವು ಕಂಡರೆ, 2004ರಿಂದ 2014ರವರೆಗೆ ಬಿಜೆಪಿಯ ಪ್ರಹ್ಲಾದ ಜೋಶಿ ಸತತ ಮೂರು ಗೆಲುವು ಸಾಧಿಸಿದ್ದಾರೆ. 2019ರಲ್ಲಿ ಜೋಶಿ ಗೆಲುವು ಕಂಡರೆ ಸರೋಜಿನಿ ಮಹಿಷಿ ಹಾಗೂ ಡಿ.ಕೆ.ನಾಯ್ಕರ ಅವರ ಸಾಧನೆ ಸರಿಗಟ್ಟಲಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ 1951 ಮತ್ತು 1957ರಲ್ಲಿ ರಾಮಪ್ಪ ಬಾಳಪ್ಪ ಬಿದರಿಯವರು ಸತತ ಗೆಲುವು ಕಂಡಿದ್ದು, ಅದು ಬಿಟ್ಟರೆ 1962ರಿಂದ 1977ರವರೆಗೆ ಸಂಗನಗೌಡ ಪಾಟೀಲರು ಸತತ ನಾಲ್ಕು ಗೆಲುವಿನ ಸಾಧನೆ ತೋರಿದ್ದರು. 1980ರಲ್ಲಿ ಇದೇ ಕ್ಷೇತ್ರದಿಂದ ವೀರೇಂದ್ರ ಪಾಟೀಲರು ಲೋಕಸಭೆಗೆ ಆಯ್ಕೆಯಾಗಿದ್ದರು. 2004, 2009, 2014ರಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ ಗೆಲುವಿನ ಹ್ಯಾಟ್ರಿಕ್ ಸಾಧನೆ ತೋರಿದ್ದು, ನಾಲ್ಕನೇ ಗೆಲುವು ಸಾಧ್ಯವಾದರೆ, ಸುಮಾರು 42 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಲಿದ್ದಾರೆ. 4ನೇ ಬಾರಿ ಅಂಗಡಿ ತೆರೆಯಲು ಸಿದ್ಧತೆ
ಬೆಳಗಾವಿ ಕ್ಷೇತ್ರದಲ್ಲಿ ಸತತ ಮೂರು ಗೆಲುವು ಕಂಡಿರುವ ಬಿಜೆಪಿ ಸಂಸದ ಸುರೇಶ ಅಂಗಡಿಗೆ ನಾಲ್ಕನೇ ಗೆಲುವಿನ ದಾಖಲೆ ಸರಿಗಟ್ಟುವ ಸವಾಲು ಎದುರಾಗಿದೆ. 1980ರಿಂದ 1991ರವರೆಗಿನ ಚುನಾವಣೆಯಲ್ಲಿ ಎಸ್.ಬಿ.ಸಿದ್ನಾಳ ಅವರು ಸತತ ನಾಲ್ಕು ಗೆಲುವು ಕಂಡಿದ್ದರು. ಸಂಸದ ಸುರೇಶ ಅಂಗಡಿ ಅವರು 2004, 2009 ಹಾಗೂ 2014ರಲ್ಲಿ ಗೆಲುವಿನೊಂದಿಗೆ ಹ್ಯಾಟ್ರಿಕ್ ಸಾಧನೆ ತೋರಿದ್ದು, 2019ರಲ್ಲಿ ಗೆಲುವು ಕಂಡರೆ ಎಸ್.ಬಿ.ಸಿದ್ನಾಳ ಅವರ ದಾಖಲೆ ಸರಿಗಟ್ಟಲಿದ್ದಾರೆ. – ಅಮರೇಗೌಡ ಗೋನವಾರ