Advertisement

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು

11:53 PM Apr 20, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಉತ್ತುಂಗದಲ್ಲಿದೆ. ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. 92ರ ವಸಂತಕ್ಕೆ ಕಾಲಿಡುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಚುನಾವಣೆ ಮತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

Advertisement

ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಏನಿತ್ತು?
ಇನ್ನು 20 ದಿನ ಕಳೆದರೆ ನಾನು 92 ವರ್ಷಕ್ಕೆ ಕಾಲಿಡುತ್ತೇನೆ. ಈ ವಯಸ್ಸಿನಲ್ಲಿ ನಾನು ಮೋದಿ ಜತೆ ಸಂಬಂಧ ಬೆಳೆಸಿದ್ದು ಹೌದು! ಅಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ನಾವು ಭಾಗಿಯಾಗಿದ್ದೇವೆ. ನಮಗೆ ಮೂರು ಸೀಟು ಕೊಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷ ದಿಲ್ಲಿಯಲ್ಲಿ ನನ್ನ ಸರಕಾರವನ್ನು ಉರುಳಿಸಿತು. ಕುಮಾರಸ್ವಾಮಿ ಸರಕಾರವನ್ನು ತೆಗೆದು ಕರ್ನಾಟಕದಲ್ಲಿ ಮುಖಭಂಗ ಮಾಡಿದರು. ಐದು ವರ್ಷಗಳ ಹಿಂದೆ ಹಾಸನದಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡುತ್ತ ದೇವೇಗೌಡರು ಬಿಜೆಪಿಯ ಬಿ ಟೀಮ್‌ ಅಂತ ಹೇಳಿದರು. ನನ್ನ ವಯಸ್ಸಿಗಾದರೂ ಅವರು ಬೆಲೆ ಕೊಡಲಿಲ್ಲ. ಬಿಜೆಪಿ ಸಹಕಾರದಿಂದ ಸರಕಾರ ಉಳಿಸಿಕೊಳ್ಳಲು ನಿರಾಕರಿಸಿದ್ದ ನಾನು ಇವತ್ತು ಬಿಜೆಪಿ ಸಖ್ಯದಲ್ಲಿದ್ದೇನೆ.

ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ
ಇಲ್ಲ. ಅದು ಮೋದಿಯವರ ತೀರ್ಮಾನ. ನಾನು ಮಂಡ್ಯದಲ್ಲಿ ಕುಮಾರ ಸ್ವಾಮಿ ಸ್ಪರ್ಧೆ ಬೇಡ, ಪಕ್ಷದ ರಾಜ್ಯಾಧ್ಯಕ್ಷರಾಗಿ ಇಡೀ ರಾಜ್ಯದಲ್ಲಿ ಶಕ್ತಿ ತುಂಬಬೇಕಾಗುತ್ತದೆ ಅಂತಲೇ ಹೇಳಿದ್ದೆ. ಆದರೆ ಸ್ಪರ್ಧಿಸುವಂತೆ ಪ್ರಧಾನಿಯೇ ಹೇಳಿದಾಗ ನಾನು ಸಮ್ಮತಿಸಿದೆ.

ಪ್ರತಿಷ್ಠಿತ ಮಂಡ್ಯ ಕ್ಷೇತ್ರದಲ್ಲಿ ಚುನಾವಣ ಕಣ ಹೇಗಿದೆ?
ಚೆನ್ನಾಗಿದೆ! ಆದರೆ, ಕಾಂಗ್ರೆಸ್‌ ಅಭ್ಯರ್ಥಿಗೆ ಸರಕಾರವೇ ಬಹಳ ಶಕ್ತಿ ತುಂಬಿದೆ. ಬೇರೆಯವರ ಹೆಸರಲ್ಲಿ ಅವರು ಗುತ್ತಿಗೆದಾರಿಕೆ ಮಾಡುತ್ತಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ 10 ತಿಂಗಳಲ್ಲಿ 4 ಸಾವಿರ ಕೋಟಿ ಸರಕಾರದ ಪೇಮೆಂಟ್‌ ಬೇರೆ ಬೇರೆ ರೂಪದಲ್ಲಿ ಅವರಿಗಿದೆ. ಈ ದುಡ್ಡಿನ ಶಕ್ತಿ ಒಂದು ಕಡೆ, ಕುಮಾರಸ್ವಾಮಿ ಅವರಿಗೆ ಇರುವ ಜನಶಕ್ತಿ. ಇದೆರಡರ ನಡುವೆ ಪೈಪೋಟಿ ನಡೀತಿದೆ.

ಸುಮಲತಾ ಅವರು ತಟಸ್ಥರಾಗಿದ್ದಾರಾ?
ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಚಿತ್ರನಟ ದರ್ಶನ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಅದರ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ.

Advertisement

ಡಾ| ಸಿ.ಎನ್‌.ಮಂಜುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಚಿಹ್ನೆ ಮೇಲೆ ಯಾಕೆ ಕಣಕ್ಕಿಳಿಸಲಿಲ್ಲ?
ಅವರನ್ನು ರಾಜಕೀಯಕ್ಕೆ ತರಲು ನನಗೆ ಇಚ್ಛೆ ಇರಲಿಲ್ಲ. ಆದರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕುಮಾರಸ್ವಾಮಿ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇರುವ ಪರಿಸ್ಥಿತಿ ಬಗ್ಗೆ ಖುದ್ದು ಅಮಿತ್‌ ಶಾ ಅವರೇ ಗುಪ್ತಚರ ಮಾಹಿತಿ ತರಿಸಿಕೊಂಡು ಯೋಗ್ಯ, ಪ್ರಾಮಾಣಿಕ, ಜನತೆಯಲ್ಲಿ ಪ್ರೀತಿ ವಿಶ್ವಾಸ ಗಳಿಸಿರುವ ಮಂಜುನಾಥ್‌ ಅವರ ಹಿನ್ನೆಲೆ ತಿಳಿದು ಹಠ ಮಾಡಿ ರಾಜಕೀಯಕ್ಕೆ ಎಳೆದರು. ನಾನು ಮೊದಲಿಗೆ ವಿರೋಧಿಸಿದೆ. ಆದರೆ ಕೇಂದ್ರದ ನಾಯಕರ ತೀರ್ಮಾನವನ್ನು ನಾನು ಒಪ್ಪಬೇಕಾಯಿತು. ಪ್ರಾಮಾಣಿಕವಾಗಿ ಎಲ್ಲವನ್ನೂ ಈ ಕ್ಷೇತ್ರದಲ್ಲಿ ಬಿಜೆಪಿಯವರು ಮಾಡುತ್ತಿದ್ದಾರೆ. ನಾವೇನೂ ಮಾಡುತ್ತಿಲ್ಲ, ಎಲ್ಲವೂ ಅವರೇ ಮಾಡಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಗಳೇ ನಮಗೆ ಶ್ರೀರಕ್ಷೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರಲ್ಲ?
ಅದೆಲ್ಲ ಭ್ರಮೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಗ್ಯಾರಂಟಿಗಳು ಏನಾದವು.

ಲೋಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಸರಕಾರ ಪತನ ಆಗುತ್ತದಾ?
ಎನ್‌ಡಿಎ 28 ಕ್ಷೇತ್ರಗಳಲ್ಲಿ ಗೆದ್ದರೆ ಇನ್ನೇನಾಗುತ್ತೆ. ಮೋದಿಯವರು ಸರಕಾರ ಬೀಳಿಸಬೇಕಿಲ್ಲ. ತನ್ನಿಂತಾನೆ ಬಿದ್ದು ಹೋಗುತ್ತದೆ. ವೀರೇಂದ್ರ ಪಾಟೀಲ್‌ ಸರಕಾರ ಏನಾಗಿತ್ತು ಅಂತಾ ಗೊತ್ತಿಲ್ಲವೇ.

ಎನ್‌ಡಿಎ ಮೈತ್ರಿಕೂಟ 28 ಸ್ಥಾನ ಗೆಲ್ಲುತ್ತಾ?
ಸತ್ಯ ಹೇಳುತ್ತೇನೆ. 28 ಸ್ಥಾನಗಳಲ್ಲಿ ಗೆಲ್ಲಲೇಬೇಕು ಎಂಬ ಛಲದಿಂದ ಕೆಲಸ ಮಾಡುತ್ತಿದ್ದೇವೆ. ಇದು ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರ ಅಚಲವಾದ ನಿರ್ಧಾರವಾಗಿದೆ. 28 ಸ್ಥಾನಗಳು ಗೆಲ್ಲುವ ಸಾಧ್ಯತೆಯಿದೆ. ಆದರೆ ಕೊಪ್ಪಳ ಹೊರತುಪಡಿಸಿ ಅಲ್ಲಿ ಕರಡಿ ಸಂಗಣ್ಣ ಆಟ ಆಡಿದ್ದಾರೆ, ಅದನ್ನೂ ಯಡಿಯೂರಪ್ಪನವರು ನಿಭಾಯಿಸುತ್ತಾರೆ.

ಐಎನ್‌ಡಿಐಎ ಮೈತ್ರಿಕೂಟದ ಬಗ್ಗೆ ಏನು ಹೇಳುತ್ತೀರಿ?
ಬಾಕಿ ಎಲ್ಲ ವಿಚಾರ ಬಿಟ್ಟು ಬಿಡಿ. ಐಎನ್‌ಡಿಐಎ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಈ ದೇಶದ ಜನ ಹೇಳಲಿ. ನಾವು ಹೇಳುವುದು ಬೇಡ. ಮೊನ್ನೆ ಕೋಲಾರದಲ್ಲಿ ರಾಹುಲ್‌ ಗಾಂಧಿ ಮಾಡಿದ ಭಾಷಣ ಕೇಳಿದ್ದೀ
ರಲ್ಲ? ಮೋದಿ ಮತ್ತು ರಾಹುಲ್‌ ಗಾಂಧಿಯವರನ್ನು ಹೋಲಿಕೆ ಮಾಡಲು ಆಗುವುದಿಲ್ಲ.

ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್‌ ಅಸ್ತಿತ್ವ ಇರಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಾರಲ್ಲ?
ನೂರಕ್ಕೆ ನೂರು ಜೆಡಿಎಸ್‌ ಅಸ್ತಿತ್ವಕ್ಕೆ ಏನೂ ಆಗಲ್ಲ. ಜೆಡಿಎಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದರ ಜತೆಗೆ, ಯಾವುದೇ ಕಾರಣಕ್ಕೂ ಮೈತ್ರಿಗೆ ಅಪಾಯ ಆಗದಂತೆ ಮುಂದುವರಿಯುತ್ತೇವೆ. ವಾಜಪೇಯಿ ಸರಕಾರದಲ್ಲಿ ನಿತೀಶ್‌ ಕುಮಾರ್‌ ಕೇಂದ್ರದಲ್ಲಿ ಮಂತ್ರಿ ಆಗಿದ್ದರು. ಅನಂತರ ಬಿಹಾರದಲ್ಲಿ ಆರ್‌ಜೆಡಿ, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಹಾರದಲ್ಲಿ ಜೆಡಿಯು ಕಳೆದು ಹೋಯಿತಾ?

ಐಟಿ, ಇಡಿ, ಸಿಬಿಐ ಅಸ್ತ್ರಗಳನ್ನಿಟ್ಟುಕೊಂಡು ಬಿಜೆಪಿ ಬೆದರಿಕೆ ರಾಜಕಾರಣ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆಯಲ್ಲ?
ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಬೆದರಿಕೆ ಹಾಕಲಾಗುತ್ತಿದೆ ಎಂದಾದರೆ, ಈ ದೇಶದಲ್ಲಿ ಕೋರ್ಟ್‌ಗಳಿಲ್ಲವೇ? ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಕೋರ್ಟ್‌ನಿಂದ ರಿಲೀಫ್ ಯಾಕೆ ಸಿಕ್ಕಿಲ್ಲ. ಸುಮ್ಮನೆ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ.

ಎರಡನೇ ಹಂತದ ಚುನಾವಣೆಗೆ ಉತ್ತರ ಕರ್ನಾಟಕಕ್ಕೆ ಪ್ರವಾಸ ಕೈಗೊಳ್ಳುತ್ತೀರಾ?
28 ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಛಲದಿಂದ ಕೆಲಸ ಮಾಡುತ್ತಿದ್ದೇವೆ, ಚಿಕ್ಕಮಗ ಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಪ್ರಚಾರ ಕೈಗೊಂಡಿದ್ದೇನೆ. ಮೇ 5ರ ವರೆಗೆ ಎಲ್ಲೆಲ್ಲಿ ಸಾಧ್ಯವೂ ಅಲ್ಲಲ್ಲಿ ಪ್ರಚಾರಕ್ಕೆ ಹೋಗುತ್ತೇನೆ.

ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಡಿ.ಕೆ. ಶಿವಕುಮಾರ್‌-ಎಚ್‌.ಡಿ. ಕುಮಾರಸ್ವಾಮಿ ನಡುವೆ ಪೈಪೋಟಿ ನಡೆಯುತ್ತಿದೆ ಎನ್ನುತ್ತಿದ್ದಾರೆ. ಹೌದಾ?
– ಒಕ್ಕಲಿಗ ನಾಯಕತ್ವ ಸುಲಭವಾಗಿ ಸಿಗುವುದಿಲ್ಲ. ಅಷ್ಟಕ್ಕೂ ಒಕ್ಕಲಿಗ ಸಮುದಾಯಕ್ಕೆ ಡಿ.ಕೆ. ಶಿವಕುಮಾರ್‌ ಏನು ಮಾಡಿದ್ದಾರೆ? ಒಬ್ಬ ಒಕ್ಕಲಿಗ ಎಂಜಿನಿಯರ್‌ಗೆ ವರ್ಗಾವಣೆ ಎಷ್ಟು ತಗೊಂಡಿದಾರೆ, ಹಣ ತೆಗೆದುಕೊಳ್ಳದೆ ವರ್ಗಾವಣೆ ಮಾಡಿದಾರೆ ಅಂತ ಒಬ್ಬ ಒಕ್ಕಲಿಗ ಎಂಜಿನಿಯರ್‌ ಕಡೆಯಿಂದ ಹೇಳಿಸಿ. ಬಾಕಿ ಎಲ್ಲ ಆ ಮೇಲೆ. ಡಿ.ಕೆ. ಶಿವಕುಮಾರ್‌ ಇಲಾಖೆಯಿಂದ ಯಾವ ರಾಜ್ಯಕ್ಕೆ ಎಷ್ಟು ಹಣ ಕಳಿಸಿದಾರೆ, 60 ವರ್ಷದಲ್ಲಿ ಒಬ್ಬ ವ್ಯಕ್ತಿಯ ಕೈಯಲ್ಲಿ ಇಂತಹ ಖಾತೆ ಹೋಗಿರಲಿಲ್ಲ. ಅವರು ಕಾಂಗ್ರೆಸ್‌ ಅಧ್ಯಕ್ಷರು. ಸೋನಿಯಾ ಗಾಂಧಿ ಇಂಥ‌ವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದೇ ಕಾಂಗ್ರೆಸ್‌ ಇಳಿಮುಖ ಆಗಲು ಕಾರಣ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next