Advertisement

Lok Sabha Elections: “ಸಮೀಕ್ಷೆ’ಗಳ ಸಿದ್ಧತೆ; ದೇಶಾದ್ಯಂತ ಸರ್ವೇ ಮಾಡುತ್ತಿರುವ ಬಿಜೆಪಿ

08:51 PM Apr 17, 2023 | Team Udayavani |

ನವದೆಹಲಿ: ಇತ್ತ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಉತ್ತುಂಗದಲ್ಲಿರುವಂತೆಯೇ, ಅತ್ತ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡಮಟ್ಟದ ತಯಾರಿಯಲ್ಲಿ ತೊಡಗಿದೆ.

Advertisement

ಕಳೆದ ಚುನಾವಣೆಗಿಂತ ಹೆಚ್ಚಿನ ಸೀಟುಗಳನ್ನು ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್‌, ದೇಶದ ಮೂಲೆ ಮೂಲೆಯಲ್ಲೂ ವ್ಯಾಪಕ ಸಮೀಕ್ಷೆಗಳನ್ನು ಕೈಗೊಂಡಿದೆ. ಕನಿಷ್ಠ 4 ಸರ್ವೇಗಳನ್ನು ನಡೆಸಲಾಗುತ್ತಿದ್ದು, ಇವುಗಳ ಆಧಾರದಲ್ಲಿ ಮುಂದಿನ ಕಾರ್ಯತಂತ್ರ ರೂಪಿಸುವುದು ಬಿಜೆಪಿಯ ಲೆಕ್ಕಾಚಾರ.
ದೇಶದ ಒಂದು ಲಕ್ಷ ಬೂತ್‌ಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಕೆಲವು ಕಡೆ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇನ್ನು ಕೆಲವು ಸಮೀಕ್ಷೆಗಳು 2024ರವರೆಗೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಉಲ್ಲೇಖೀಸಿ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಮೋದಿ ಪ್ಲ್ಯಾನ್ :
ಒಟ್ಟು 543 ಸಂಸದೀಯ ಕ್ಷೇತ್ರಗಳಲ್ಲಿ ಬರುವ ಒಂದು ಲಕ್ಷ ಬೂತ್‌ಗಳಲ್ಲಿ ಸುಮಾರು 10 ದಶಲಕ್ಷ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿಯವರ ಪ್ಲ್ರಾನ್‌ ಆಗಿದೆ ಎಂದು ದೆಹಲಿಯ ಸಮೀಕ್ಷಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. “ಕಳೆದ ವರ್ಷದ ಮೇ ತಿಂಗಳಿಂದಲೇ ಸರಳ್‌ ಆ್ಯಪ್‌ ಮೂಲಕ ಪಕ್ಷವು ಈ ಪ್ರಕ್ರಿಯೆ ಆರಂಭಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು 160 ಸೀಟುಗಳನ್ನು ಏಕೆ ಕಳೆದುಕೊಂಡೆವು ಎಂಬ ಬಗ್ಗೆ ಬೂತ್‌ ಮಟ್ಟದ ದತ್ತಾಂಶಗಳನ್ನು ಸಂಗ್ರಹಿಸುವಂತೆ ಪ್ರಧಾನಿ ಮೋದಿಯವರು ಸೂಚಿಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ರಾಜ್ಯಮಟ್ಟದ 2 ಸಾವಿರ ಪ್ರತಿನಿಧಿಗಳ ಸಹಾಯದಿಂದ ಎಲ್ಲ ಬೂತ್‌ ಮಟ್ಟದ ಕಾರ್ಯಕರ್ತರು ಜನರನ್ನು ಸಂಪರ್ಕಿಸಿ, ಕಳೆದ ಚುನಾವಣೆಯಲ್ಲಿ ನೀವು ಬಿಜೆಪಿಗೆ ಏಕೆ ಮತ ಹಾಕಿಲ್ಲ, ಇತರೆ ಪಕ್ಷಗಳ ಅಭ್ಯರ್ಥಿಗಳಿಗೆ ಯಾವ ಕಾರಣಕ್ಕಾಗಿ ಮತ ಹಾಕಿದರು ಎಂಬ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ’ ಎಂದಿದ್ದಾರೆ.

ಸೋಲಲು ಕಾರಣವೇನು?
ಈಗಾಗಲೇ ಸಂಗ್ರಹವಾಗಿರುವ ಮಾಹಿತಿಯ ಪ್ರಕಾರ, ಬಿಜೆಪಿ ಚುನಾವಣೆಯಲ್ಲಿ ಸೋಲಲು 3-4 ಪ್ರಮುಖ ಕಾರಣಗಳಿವೆ. ಮೊದಲನೆಯದು, ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಹೆಚ್ಚು ವರ್ಚಸ್ಸು ಇರುವುದು, ಎರಡನೆಯದು ಆಂತರಿಕ ಕಲಹ, ಮೂರನೆಯದು ಕೇಂದ್ರದ ಯೋಜನೆಗಳನ್ನು ಆಯಾ ರಾಜ್ಯಗಳು ತಮ್ಮದೆಂದು ಹೇಳಿಕೊಳ್ಳುತ್ತಿರುವುದು. ಇದರಿಂದಾಗಿ ಜನರು ಎಲ್ಲ ಯೋಜನೆಗಳೂ ಸ್ಥಳೀಯ ಸರ್ಕಾರದ್ದು ಎಂದು ನಂಬಿರುವುದು.

Advertisement

ಮುಸ್ಲಿಮರ ಓಲೈಕೆ
ಮುಸ್ಲಿಮರನ್ನೂ ಪಕ್ಷದ ವ್ಯಾಪ್ತಿಗೆ ತರುವ ಗುರಿ ಹಾಕಿಕೊಂಡಿರುವ ಬಿಜೆಪಿ, ಅದಕ್ಕೂ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಪ್ರಸಕ್ತ ವರ್ಷದ ಏ.20ರಿಂದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಮೋದಿ ಮಿತ್ರ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, 2024ರ ಫೆಬ್ರವರಿಯವರೆಗೂ ಮುಂದುವರಿಯಲಿದೆ. ಮುಸ್ಲಿಮರ ಜನಸಂಖ್ಯೆಯು ಶೇ.30ಕ್ಕಿಂತ ಹೆಚ್ಚಿರುವಂತಹ 65 ಕ್ಷೇತ್ರಗಳನ್ನು ಇದಕ್ಕಾಗಿ ಆಯ್ದುಕೊಳ್ಳಲಾಗಿದೆ. ಈದ್‌ ಹಬ್ಬ ಮುಗಿದ ಕೂಡಲೇ ಈ ಅಭಿಯಾನ ಆರಂಭವಾಗಲಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್‌ ಸಿದ್ದಿಕಿ ಹೇಳಿದ್ದಾರೆ.

ಸೋತ ಕ್ಷೇತ್ರಗಳತ್ತ ಚಿತ್ತ
ಕಳೆದ ಚುನಾವಣೆಯಲ್ಲಿ ಬಿಜೆಪಿ 160 ಕ್ಷೇತ್ರಗಳಲ್ಲಿ ಸೋಲುಂಡಿತ್ತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಪಣತೊಟ್ಟಿರುವ ಬಿಜೆಪಿ, 160 ಕ್ಷೇತ್ರಗಳ ಪೈಕಿ ಸುಮಾರು 40-45 ಕಡೆ ಪ್ರಧಾನಿ ಮೋದಿಯವರನ್ನು ಕರೆಸಿ, ರ್ಯಾಲಿ ಮಾಡಿಸಲು ಯೋಜನೆ ರೂಪಿಸಿದೆ. ಉಳಿದ 120 ಕ್ಷೇತ್ರಗಳ ಪೈಕಿ 60ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮತ್ತು ಉಳಿದದ್ದರಲ್ಲಿ ನಡ್ಡಾ ಅವರು ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟು ಎಷ್ಟು ಸಮೀಕ್ಷೆಗಳು? – 4
ಸಮೀಕ್ಷೆ ನಡೆಸುವ ಕಾರ್ಯಕರ್ತರು- 40,000
543 ಕ್ಷೇತ್ರಗಳ ಎಷ್ಟು ಬೂತ್‌ಗಳಲ್ಲಿ ಸರ್ವೇ?- 1,00,000
ಸಮೀಕ್ಷೆಯಲ್ಲಿ ಪಾಲ್ಗೊಂಡವರು- 1 ಕೋಟಿ ಮಂದಿ

Advertisement

Udayavani is now on Telegram. Click here to join our channel and stay updated with the latest news.

Next