Advertisement

Lok Sabha Elections 22 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವಿನ ವಿಶ್ವಾಸ

12:40 AM May 12, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬಿಜೆಪಿ ಕಚೇರಿಯಲ್ಲಿ ಮಹತ್ವದ “ಅವಲೋಕನ’ ಸಭೆ ನಡೆದಿದ್ದು, 22 ಸ್ಥಾನಗಳಲ್ಲಿ ಎನ್‌ಡಿಎಗೆ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಈ ಸಭೆ ನಡೆದಿದ್ದು, ವಿಪಕ್ಷ ನಾಯಕರಾದ ಆರ್‌.ಅಶೋಕ್‌, ಕೋಟ ಶ್ರೀನಿವಾಸ್‌ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ.ರವಿ, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೊದಲಾದವರು ಭಾಗವಹಿಸಿದ್ದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸಂಖ್ಯಾಬಲ ಕಡಿಮೆ ಯಾಗುವ ಸಾಧ್ಯತೆ ಬಗ್ಗೆ ಪರೋಕ್ಷ ಅಭಿಪ್ರಾಯ ವ್ಯಕ್ತವಾಗಿದೆಯಾದರೂ, ಯಾವುದೇ ಕ್ಷೇತ್ರದ ಅಭ್ಯರ್ಥಿಯಾಗಲಿ, ಚುನಾವಣ ಉಸ್ತುವಾರಿಯಾಗಲಿ ಸೋಲಿನ ಭೀತಿಯನ್ನು ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ. ಸರಾಸರಿ ಮತದಾನದ ಆಧಾರದ ಮೇಲೆ ಬಿಜೆಪಿ ಹಾಗೂ ಜೆಡಿಎಸ್‌ ಗೆಲ್ಲುವ ಕ್ಷೇತ್ರಗಳ ಮತಗಳ ಅಂತರದ ಮೇಲೆ ಮೂರು ರೀತಿಯ ವರ್ಗೀಕರಣ ಮಾಡಲಾಗಿದೆ. ಪ್ರಹ್ಲಾದ್‌ ಜೋಷಿ, ಬಿ.ವೈ.ರಾಘವೇಂದ್ರ, ತೇಜಸ್ವಿ ಸೂರ್ಯ, ರಾಜವಂಶಸ್ಥ ಯದುವೀರ್‌ ಮೊದಲಾದವರು ಭಾರೀ ಅಂತರದಿಂದ ಗೆಲ್ಲುವ ಅಂದಾಜು ಮಾಡಲಾಗಿದೆ. ಆದರೆ ಕರಾವಳಿಯ 3 ಕ್ಷೇತ್ರಗಳು ಸಹಿತ ಮಹತ್ವದ ಸಂಘಟನಾತ್ಮಕ ಕ್ಷೇತ್ರಗಳಲ್ಲಿ ಮತಗಳ ಅಂತರ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಜತೆಗೆ ಕಡಿಮೆ ಅಂತರದಿಂದ ಗೆಲ್ಲುವ ಕ್ಷೇತ್ರಗಳ ಪಟ್ಟಿಯನ್ನು ಮಾಡಲಾಗಿದೆ.

ರಾಜ್ಯ ಸರಕಾರದ ಗ್ಯಾರಂಟಿ ಯೋಜ ನೆಗಳ ಮಧ್ಯೆಯೂ ರಾಜ್ಯದ ಜನರು ನರೇಂದ್ರ ಮೋದಿಯವರ ಪರವಾಗಿ ಮತ ಚಲಾಯಿಸಲು ಬದ್ಧ ರಾಗಿರುವುದು ಸಭೆಯಲ್ಲಿ ಪ್ರಸ್ತಾವ ವಾಗಿದ್ದು, ಕೊನೆ ಗಳಿಗೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಸಮಸ್ಯೆ ಸೃಷ್ಟಿ ಯಾದ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಜತೆಗೆ ಕೆಲವು ಕ್ಷೇತ್ರಗಳಲ್ಲಿ ಹಣಕಾಸು ವಿಚಾರವಾಗಿ ಅಭ್ಯರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು ಎಂಬ ಬೇಸರವೂ ವ್ಯಕ್ತವಾಗಿದೆ.

ಜತೆಗೆ ಪರಿಷತ್‌ ಚುನಾವಣೆ ಸಿದ್ಧತೆ ಬಗ್ಗೆಯೂ ಚರ್ಚೆಯಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ ನಾಲ್ವರು ಪ್ರಭಾರಿಗಳ ನೇಮಕದ ಜತೆಗೆ 25 ಮತದಾರರಿಗೆ ಒಬ್ಬ ಪ್ರಮುಖರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಅಭ್ಯರ್ಥಿ ಅಂತಿಮಗೊಳಿಸುವುದು ತಡವಾದರೂ ಒಂದು ವರ್ಷದ ಹಿಂದಿನಿಂದಲೇ ತಯಾರಿ ನಡೆದಿರುವುದರಿಂದ ಸಮಸ್ಯೆಯಾಗು ವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಪ್ರಮುಖರ ಮಧ್ಯೆ ಕುಳಿತ ಯದುವೀರ್‌
ಸಭೆಗೆ ಆಗಮಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ರಾಜವಂಶಸ್ಥ ಯದುವೀರ್‌ ಅಭ್ಯರ್ಥಿಗಳು ಹಾಗೂ ಪ್ರಮುಖರ ಮಧ್ಯೆಯೇ ಕುಳಿತಿದ್ದರು. ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ, ಶೋಭಾ, ಬಸವರಾಜ್‌ ಬೊಮ್ಮಾಯಿ ಸಹಿತ ಕೆಲವು ಪ್ರಮುಖ ಅಭ್ಯರ್ಥಿಗಳು ಸಭೆಗೆ ಗೈರಾಗಿದ್ದರು.

ಸರಕಾರದ ವಿರುದ್ಧ ಬಿಜೆಪಿ 152 ಚುನಾವಣ ದೂರು
ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದ ರಾಜ್ಯ ಕಾಂಗ್ರೆಸ್‌ ಸರಕಾರ ಆಡಳಿತ ಯಂತ್ರವನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿದ್ದು, ಸರಕಾರದ ವಿರುದ್ಧ 152 ದೂರುಗಳನ್ನು ಚುನಾವಣ ಆಯೋಗಕ್ಕೆ ನೀಡಲಾಗಿದೆ ಎಂದು ಬಿಜೆಪಿ ಚುನಾವಣೆ ನಿರ್ವಹಣ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್‌ ಕುಮಾರ್‌ ತಿಳಿಸಿದರು.

ಲೋಕಸಭಾ ಚುನಾವಣೆ ಅವಲೋಕನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರ ಎಲ್ಲ ಜಿÇÉೆ- ತಾಲೂಕುಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬೆದರಿಸುವ ತಂತ್ರ ನಡೆಸಿದೆ. ಕಾರ್ಯಕರ್ತರ ವಿರುದ್ಧ ಅಪಾರ ಮೊಕದ್ದಮೆ ದಾಖಲಿಸಲಾಗಿದೆ. ಇವುಗಳ ವಿರುದ್ಧ ಸ್ಥಳೀಯವಾಗಿ ದೂರು ಕೊಡಲಾಗಿದೆ. ರಾಜಕೀಯವಾಗಿಯೂ ನಾವು ಈ ಆಕ್ರಮಣವನ್ನು ಎದುರಿಸುತ್ತೇವೆ ಎಂದು ಹೇಳಿದರು.

60 ಸಾವಿರಕ್ಕೂ ಹೆಚ್ಚು ಬೂತ್‌ ಸಭೆ
ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹಿತ 14 ಜನ ರಾಷ್ಟ್ರೀಯ ಪ್ರಮುಖರು 79 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. 39 ಕಡೆಗಳಲ್ಲಿ ರೋಡ್‌ ಶೋ ನಡೆದಿವೆ. ರಾಜ್ಯ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ ಮತ್ತು ಆರ್‌.ಅಶೋಕ್‌ ಸಹಿತ ಸುಮಾರು 30 ಪ್ರಮುಖರು 557 ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 139 ಕಡೆಗಳಲ್ಲಿ ರಾಜ್ಯ ನಾಯಕರು ರೋಡ್‌ ಶೋ ನಡೆಸಿದ್ದಾರೆ ಎಂದು ವಿವರಿಸಿದರು.

ಒಟ್ಟು 650ಕ್ಕೂ ಹೆಚ್ಚು ಸಾರ್ವಜನಿಕ ಸಭೆ, 180ಕ್ಕೂ ಹೆಚ್ಚು ರೋಡ್‌ ಶೋಗಳನ್ನು ಮಾಡಲಾಗಿದೆ. ಕಾಂಗ್ರೆಸ್‌ ಅಪಪ್ರಚಾರ ಬಗ್ಗೆ ಹಾಗೂ ಕಾಂಗ್ರೆಸ್‌ ಅಪಾಯಕಾರಿ ಎಂದು ತಿಳಿಸಲು ಮನೆಯಂಗಳದಲ್ಲಿ ಸಭೆ ನಡೆಸಿದ್ದೇವೆ. 50-75 ಜನರನ್ನು ಒಳಗೊಂಡ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣಸಣ್ಣ ಸಭೆಗಳನ್ನು ಬೂತ್‌ ಮಟ್ಟದಲ್ಲಿ ನಡೆಸಿರುವುದು ಈ ಚುನಾವಣೆಯ ವಿಶೇಷ ಎಂದು ತಿಳಿಸಿದರು.

ಕಾಂಗ್ರೆಸ್‌ ಸರಕಾರ ಅವರದೇ ಅಂತಃಕಲಹದ ಭಾರದಲ್ಲಿ ಕುಸಿದು ಬೀಳಲಿದ್ದು, ಅವರು ಬಿದ್ದಾಗ ನಮ್ಮ ರಾಜಕಾರಣ ನಡೆಸುತ್ತೇವೆ. ನಾಯಕತ್ವಕ್ಕಾಗಿ 4 ರೀತಿಯ ಪೈಪೋಟಿ ಕಾಂಗ್ರೆಸ್‌ ಪಕ್ಷದಲ್ಲಿದೆ. ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಮಾಡಿದ ಭಾಷಣ ಇದಕ್ಕೆ ಜ್ವಲಂತ ಉದಾಹರಣೆ.
-ವಿ. ಸುನಿಲ್‌ಕುಮಾರ್‌, ಬಿಜೆಪಿ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next