Advertisement

Lok Sabha Election 2024: ಬಾಗಲಕೋಟೆ-ಬಂಡಾಯಗಾರರ ಬೆಂಬಲ ಯಾರಿಗೆ?

06:05 PM Apr 01, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿತಮ್ಮ ಮಾತೃಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದವರು, ಟಿಕೆಟ್‌ ಸಿಗದೇ ಬಂಡಾಯವೆದಿದ್ದ ಹಲವು ನಾಯಕರು ಸದ್ಯ ಅತಂತ್ರದಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಈ ಬಂಡಾಯಗಾರರ ಬೆಂಬಲದ ಬಲ ಯಾರಿಗೆ ? ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

Advertisement

ನಿಜ, ಬಾಗಲಕೋಟೆ, ಜಮಖಂಡಿ, ಹುನಗುಂದ, ಮುಧೋಳ ಹಾಗೂ ತೇರದಾಳ ವಿಧಾನಸಭೆ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಎರಡೂ ಪಕ್ಷಗಳಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಈ ಬಂಡಾಯಗಾರರ ಸ್ಪರ್ಧೆಯೇ, ಆಯಾ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು ಎಂಬುದು ಹಳೆಯ ಮಾತು. ಆದರೆ, ಅವರೆಲ್ಲ ಪ್ರಸ್ತುತ ಲೋಕಸಭೆ ಚುನಾವಣೆಗೆ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲ ಕೊಡುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ಬಾಗಲಕೋಟೇಲಿ ಎಂಸಿಸಿ-ಡಾ| ಪಾಟೀಲ:
ಬಾಗಲಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಬಲ ಬೇಡಿಕೆ ಇಟ್ಟಿದ್ದ ಡಾ| ದೇವರಾಜ ಪಾಟೀಲ, ಟಿಕೆಟ್‌ ಕೈ ತಪ್ಪಿದ ಬಳಿಕ ಜೆಡಿಎಸ್‌ ಸೇರ್ಪಡೆಗೊಂಡು ಅಭ್ಯರ್ಥಿಯಾಗಿದ್ದರು. ಆ ಚುನಾವಣೆಯಲ್ಲಿ ಅವರು 3,470 ಮತ ಪಡೆದಿದ್ದರು. ಬಿಜೆಪಿಯ ಟಿಕೆಟ್‌ ಕೊಡಿ ಇಲ್ಲವೇ ಟಿಕೆಟ್‌ ಬದಲಾವಣೆ ಮಾಡಿ ಎಂಬ ಅಭಿಯಾನ ಮಾಡಿದ್ದ ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್‌ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಕೂಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ 10,116 ಮತ ಪಡೆದು ಗಮನ ಸೆಳೆದಿದ್ದರು. ಇಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಚ್‌.ವೈ. ಮೇಟಿ, ಬಿಜೆಪಿ ಬಂಡಾಯದ ಲಾಭ ಪಡೆದು 5,878 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಜಮಖಂಡಿಯಲ್ಲಿ ಬೆಳಗಲಿ: ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಕಾಂಗ್ರೆಸ್‌ ಟಿಕೆಟ್‌ ಗಾಗಿ ಕೊನೆವರೆಗೂ ಕಸರತ್ತು ನಡೆಸಿದ್ದರು. ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಅವರೂ ಕಾಂಗ್ರೆಸ್‌ಗೆ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರು. ಇಲ್ಲಿ ಬೆಳಗಲಿ ಅವರು 5,975 ಮತ ಪಡೆದು ಗಮನ ಸೆಳೆದರು. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಆನಂದ ನ್ಯಾಮಗೌಡರು, 4,716 ಮತಗಳಿಂದ ಪರಾಭವಗೊಂಡರು. ಕಾಂಗ್ರೆಸ್‌ನ ಬಂಡಾಯದ ಲಾಭ ಪಡೆದ
ಬಿಜೆಪಿಯ ಜಗದೀಶ ಗುಡಗುಂಟಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮುಧೋಳದಲ್ಲಿ ಫಲಿತಾಂಶ ಉಲ್ಟಾಪಲ್ಟಾ:
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಮುಧೋಳದಲ್ಲೂ ಕಾಂಗ್ರೆಸ್‌ಗೆ ಬಂಡಾಯವಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸತೀಶ ಬಂಡಿವಡ್ಡರ ಆಗ ಪರಾಭಗೊಂಡಿದ್ದರು. ಸೋತರೂ 2023ರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಲೇ ಬಂದಿದ್ದರು.

Advertisement

ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿತ್ತು. ಆಗ ಅವರೂ ಕಾಂಗ್ರೆಸ್‌ಗೆ ರೆಬೆಲ್‌ ಆಗಿ ಸ್ಪರ್ಧೆ ಮಾಡಿ, 17,902 ಮತ ಪಡೆದಿದ್ದರು. ಬಂಡಿವಡ್ಡರ ಅವರು ಕಾಂಗ್ರೆಸ್‌ಗೆ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರೂ ಅದರ ಲಾಭ ಇಲ್ಲಿ ಬಿಜೆಪಿಗೆ ತಟ್ಟಲಿಲ್ಲ. ಬದಲಾಗಿ ಬಿಜೆಪಿಗೇ ಮುಳುವಾಗಿತ್ತು. ಬಿಜೆಪಿಯ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಇಲ್ಲಿ, 17,335 ಮತಗಳ ಅಂತರದಿಂದ ಪರಾಭವಗೊಂಡರು. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಆರ್‌.ಬಿ. ತಿಮ್ಮಾಪುರ,
17 ವರ್ಷಗಳ ಬಳಿಕ ಸಾರ್ವತ್ರಿಕ ಚುನಾವಣೆಯಲ್ಲಿ 17 ಸಾವಿರ ಮತಗಳ ಅಂತರದಿಂದ ಗೆದ್ದು, ಕಾಂಗ್ರೆಸ್‌ ಸರ್ಕಾರದಲ್ಲಿ ಅಬಕಾರಿ ಸಚಿವರೂ ಆಗಿದ್ದಾರೆ.

ತೇರದಾಳದಲ್ಲಿ ಡಾ|ಪದ್ಮಜೀತ: ಇನ್ನು ತೇರದಾಳ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದೊಡ್ಡ
ಪೈಪೋಟಿಯೇ ಇತ್ತು. ಸುಮಾರು 13ಕ್ಕೂ ಹೆಚ್ಚು ಜನ ಇಲ್ಲಿ ಆಕಾಂಕ್ಷಿಗಳಾಗಿದ್ದರು. ಪ್ರಮುಖ ಆಕಾಂಕ್ಷಿಯಾಗಿದ್ದ ಡಾ|ಪದ್ಮಜೀತ ನಾಡಗೌಡ ಪಾಟೀಲರು, ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಬರೋಬ್ಬರಿ 22,480 ಮತ ಪಡೆದಿದ್ದರು. ಇಲ್ಲಿನ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಸಿದ್ದು ಕೊಣ್ಣೂರ, 10,745 ಮತಗಳ ಅಂತರದಿಂದ ಪರಾಭವಗೊಂಡರೆ, ಬಿಜೆಪಿಯ ಸಿದ್ದು ಸವದಿ, 4ನೇ ಬಾರಿ ಶಾಸಕರಾಗಿ ಆಯ್ಕೆಯಾದ ದಾಖಲೆ ತಮ್ಮದಾಗಿಸಿಕೊಂಡರು.

ಒಟ್ಟಾರೆ, ಜಿಲ್ಲೆಯ ಏಳು ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಐದು ಕ್ಷೇತ್ರಗಳಲ್ಲಿ ಕಳೆದ ಬಾರಿ ಬಂಡಾಯ ಉಂಟಾಗಿತ್ತು. ಈ ಬಂಡಾಯ ಬಳಸಿಕೊಳ್ಳಲು ಸಚಿವ ಶಿವಾನಂದ ಪಾಟೀಲ ಗಂಭೀರ ಪ್ರಯತ್ನದಲ್ಲಿದ್ದಾರೆ ಎಂದು ಜಿಲ್ಲೆಯಾದ್ಯಂತ ಹರಡಿರುವ ಸುದ್ದಿ. ಆದರೆ, ಬಿಜೆಪಿ ಮನಸ್ಥಿತಿ ಇರುವ, ಅದೇ ಪಕ್ಷದಿಂದ ಹೊರ ಬಂದವರನ್ನು ಮರಳಿ, ತಮ್ಮ ಪಕ್ಷಕ್ಕೆ ಕರೆ ತರುವ ಪ್ರಯತ್ನ ಬಿಜೆಪಿಯಲ್ಲಿ ನಡೆದಿಲ್ಲ ಎನ್ನಲಾಗಿದೆ.

ಬಂಡಾಯಗಾರರಿಗೆ ಸಚಿವ ಶಿವಾನಂದ ಗಾಳ !
ವಿಜಯಪುರ ಜಿಲ್ಲೆಯ ರಾಜಕೀಯದಲ್ಲಿ ಟ್ರಿಬಲ್‌ ಶ್ಯೂಟರ್‌ ಎಂದೇ ಹೆಸರು ಪಡೆದ ಸಕ್ಕರೆ-ಜವಳಿ ಸಚಿವ ಶಿವಾನಂದ ಪಾಟೀಲ, ತಮ್ಮ ಪುತ್ರಿಯ ಗೆಲುವಿಗೆ ನಾನಾ ರೀತಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಸ್ವತಃ ತಾವು ಹಾಗೂ ತಮ್ಮ ಪುತ್ರಿ ಸಂಯುಕ್ತಾ ಪಾಟೀಲರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಹಲವರನ್ನು ಭೇಟಿ ಮಾಡಿ, ಈ ಬಾರಿ ತಮಗೆ ಬೆಂಬಲ ಕೊಡಲು ಕೋರಿದ್ದಾರೆ. ಟಿಕೆಟ್‌ ಘೋಷಣೆಗೂ ನಾಲ್ಕು ದಿನ ಮುಂಚೆ ಕೆಲ ನಾಯಕರನ್ನು ಭೇಟಿ ಮಾಡಿ ಸಪೋರ್ಟ್‌ ಕೇಳಿದ್ದಾರೆ ಎನ್ನಲಾಗಿದೆ. ಸಚಿವ ಶಿವಾನಂದ ಪಾಟೀಲರು, ತಮ್ಮ ಪುತ್ರಿಯನ್ನು ಶತಾಯಗತಾಯ ಗೆಲ್ಲಿಸಲೇಬೇಕೆಂಬ
ಹಠಕ್ಕೆ ಬಿದ್ದಿದ್ದು, ಬಿಜೆಪಿ-ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡು ದೂರ ಉಳಿದವರನ್ನೂ ಸಂಪರ್ಕಿಸಿ, ನೀವು ನೇರವಾಗಿ ಪಕ್ಷಕ್ಕೆ ಬರದಿದ್ದರೂ ಪರವಾಗಿಲ್ಲ. ನಮಗೆ ಬೆಂಬಲ ಕೊಡಿ ನಾನು ನಿಮ್ಮೊಂದಿಗೆ ಇರುವೆ ಎಂಬ ಅಭಯ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಹೊಕ್ರಾಣಿ-ನವಲಿಹಿರೇಮಠ ನಿಲುವೇನು?
ಕಳೆದ 2018ರ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರಕ್ಕೆ ಜೆಡಿಎಸ್‌ ಬೆಂಬಲಗೊಂದಿಗೆ ಅಭ್ಯರ್ಥಿಯಾಗಿದ್ದ, 2023ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬರೋಬ್ಬರಿ 33,790 ಮತ ಪಡೆದಿದ್ದ ಸಮಾಜ ಸೇವಕ ಎಸ್‌.ಆರ್‌. ನವಲಿಹಿರೇಮಠರು, ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲರು 30,007 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ, ಜಿಲ್ಲೆಯಲ್ಲೇ ಅತಿಹೆಚ್ಚು ಅಂತರದಿಂದ ಗೆದ್ದ ಖ್ಯಾತಿ ಪಡೆದಿದ್ದರು. ನವಲಿಹಿರೇಮಠರ ಸ್ಪರ್ಧೆ, ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಣೆ ಆಗ ನಡೆಸಲಾಯಿತು.

ಪ್ರಸ್ತುತ ಲೋಕಸಭೆ ಚುನಾವಣೆಗೆ ಅವರ ಬೆಂಬಲ ಯಾರಿಗೆ ದೊರೆಯಲಿದೆ ಕಾದು ನೋಡಬೇಕು. ಇನ್ನು ಬಾಗಲಕೋಟೆ
ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮದೇ ಆದ ಛಾಪು ಹೊಂದಿರುವ ಯುವ ನಾಯಕ ಸಂತೋಷ ಹೊಕ್ರಾಣಿ ಕೂಡ, ಕಳೆದ
ವಿಧಾನಸಭೆ ಚುನಾವಣೆಗೂ ಮುಂಚೆ, ಬಿಜೆಪಿಯಿಂದ ಉಚ್ಛಾಟನೆಗೊಂಡವರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ
ಬಂಡಾಯವೆದ್ದಿದ್ದ ಮಲ್ಲಿಕಾರ್ಜುನ ಚರಂತಿಮಠ ಜತೆಗೂಡಿ ಚುನಾವಣೆ ಎದುರಿಸಿದ್ದರು. ಇದೀಗ ಯಾವುದೇ ಪಕ್ಷದಲ್ಲಿ
ಗುರುತಿಸಿಕೊಂಡಿಲ್ಲವಾದರೂ ಕಾಂಗ್ರೆಸ್‌ -ಬಿಜೆಪಿಯಲ್ಲೂ ಅವರ ಗೆಳೆಯರ ಬಳಗವಿದೆ. ಆದರೆ, ಲೋಕಸಭೆ ಚುನಾವಣೆಗೆ ಅವರ ನೇರ  ಬೆಂಬಲ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next