Advertisement

ಬೆಂಗಳೂರಿನ ಹಳೆಯ ಕನ್ನಡ ಮಾಧ್ಯಮ ಶಾಲೆಗೆ ಬೀಗ

12:48 PM Jan 03, 2018 | Team Udayavani |

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಕಳೆದ 10 ವರ್ಷದಿಂದ ಶಿಕ್ಷಕರನ್ನು ನೇಮಿಸದೇ ವ್ಯವಸ್ಥಿತವಾಗಿ ಬೆಂಗಳೂರಿನ ಅತ್ಯಂತ ಹಳೆಯ ಕನ್ನಡ ಮಾಧ್ಯಮ ಅನುದಾನಿತ ಶಾಲೆಯೊಂದನ್ನು ಮುಚ್ಚಿದೆ.

Advertisement

ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣು ವರ್ಧನ್‌, ಹಿರಿಯ ನಟ ರಮೇಶ್‌ ಭಟ್‌, ಬೆಂಗಳೂರಿನ ಪ್ರಸಿದ್ಧ ವಕೀಲರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಓದಿರುವ ಚಾಮರಾಜಪೇಟೆ 4ನೇ ಮುಖ್ಯರಸ್ತೆಯ ಮಾಡೆಲ್‌ ಸ್ಕೂಲ್‌ ಎಜುಕೇಷನ್‌ ಸೊಸೈಟಿಯ ಪ್ರೌಢಶಾಲೆಯನ್ನು ಎರಡು ತಿಂಗಳ ಹಿಂದೆಯೇ ಇಲಾಖೆ ಮುಚ್ಚಿದೆ. ಈಗ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ.

6 ರಿಂದ 8ನೇ ತರಗತಿಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ 80 ವಿದ್ಯಾರ್ಥಿಗಳು ಹಾಗೂ ಅವರಿಗೆ ಪಾಠ ಹೇಳಿಕೊಡಲು 6 ಶಿಕ್ಷಕರಿದ್ದರು. ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಹಾಗೂ ಅನುದಾನಿತ ಶಾಲೆಗೆ ವರ್ಗಾಯಿಸಿ, ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಿ ಶಿಕ್ಷಣ ಇಲಾಖೆಯಿಂದಲೇ  ಪ್ರೌಢಶಾಲಾ ವಿಭಾಗಕ್ಕೆ ಬೀಗ ಜಡಿದಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ (1ರಿಂದ 7ನೇ ತರಗತಿ) ಸುಮಾರು 35 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಶಾಲೆಯನ್ನು ಮುಚ್ಚಲು ಇಲಾಖೆಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನಿಯಮದ ಪ್ರಕಾರ ಅನುದಾನಿತ ಶಾಲೆಯ ಪ್ರತಿ ತರಗತಿಯಲ್ಲಿ  ಕನಿಷ್ಠ 25 ವಿದ್ಯಾರ್ಥಿಗಳು ಇರಬೇಕು. ಸರ್ಕಾರಿ ನಿಯಮಕ್ಕೆ ಬದ್ಧವಾಗಿದ್ದ ಈ ಶಾಲೆಯಲ್ಲಿ ಕಳೆದ ಮೂರು ವರ್ಷದಿಂದ ಫ‌ಲಿತಾಂಶ ಕುಸಿದಿತ್ತು. ಇದಕ್ಕೆ ಶಿಕ್ಷಕರ ಕೊರತೆಯೇ ಕಾರಣ, ಕಳೆದ 10 ವರ್ಷದಿಂದ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಲ್ಲ.

Advertisement

2016ರಲ್ಲಿ ಶಾಲೆಯ ಶಿಕ್ಷಕರೊಬ್ಬರು ನಿವೃತ್ತಿ ಹೊಂದಿದ್ದರು. ನಂತರವೂ ನೇಮಕಾತಿ ನಡೆದಿಲ್ಲ. ಇಲಾಖೆಯಿಂದ ಶಿಕ್ಷಕರ ನೇಮಕಕ್ಕೆ ಆದೇಶ ಆಗಿದ್ದರೂ, ಬಿಇಒ ಮತ್ತು ಡಿಡಿಪಿಐಗಳು ಇದಕ್ಕೆ ಅವಕಾಶ ನೀಡಿಲ್ಲ. ಮುಖ್ಯಶಿಕ್ಷಕರ ಜವಾಬ್ದಾರಿಯನ್ನು ಬಿಇಒ ನಿಭಾಯಿಸುತ್ತಿದ್ದರು ಎಂದು ಶಾಲೆಯ ಮೂಲಗಳು ಮಾಹಿತಿ ನೀಡಿದರು.

1870ರಲ್ಲಿ ನರ್ಸರಿಯೊಂದಿಗೆ ಆರಂಭಗೊಂಡ ಮಾಡೆಲ್‌ ಸ್ಕೂಲ್‌ ಎಜುಕೇಷನ್‌ ಸೊಸೈಟಿ, 1957ರಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ತೆರೆದಿತ್ತು. ಹಲವು ಗಣ್ಯರು ಓದಿದ ಮತ್ತು ಭೇಟಿ ನೀಡಿದ ಶಾಲೆ ಇದಾಗಿದೆ. ಬಾಸ್ಕೊ ಮನೆಯ ನೂರಾರು ಅನಾಥ ಮಕ್ಕಳಿಗೆ ಶಿಕ್ಷಣ ನೀಡಿದ ಸಂಸ್ಥೆಯೂ ಹೌದು. ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಸೀಟು ಪಡೆಯಲು ತೀವ್ರ ಪೈಪೋಟಿ ಇತ್ತು. 8 ಸುಸಜ್ಜಿತ ಕೊಠಡಿ ಇಂದಿಗೂ ಇದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಶಾಲೆ ಮುಚ್ಚುವಂತೆ ಇಲಾಖೆಯಿಂದ ಪತ್ರ ಬಂದಿದೆ. ಮಕ್ಕಳಲ್ಲಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಬಂದು ಸಮೀಕ್ಷೆ ಮಾಡಿ ವರದಿ ನೀಡಿದ್ದಾರೆ. ಬೆಂಗಳೂರಿನ ಪ್ರಪ್ರಥಮ ಕನ್ನಡ ಮಾಧ್ಯಮ ಶಾಲೆ ಇದು. ಅದನ್ನು ಉಳಿಸಿಕೊಳ್ಳಲು ಇಲಾಖೆಯೇ ಪ್ರಯತ್ನ ಮಾಡುತ್ತಿಲ್ಲ. 
-ಯದುಕುಮಾರ್‌, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next