Advertisement

ಬದುಕು ಬಾಡಿಗೆ ಮನೆ

10:49 PM Oct 05, 2019 | sudhir |

ಮನೆಗೂ ಮನಕ್ಕೂ ಭಾವನಾತ್ಮಕ ಸಂಬಂಧವಿದೆ ಎನ್ನುತ್ತಾರೆ. ಹಾಗಿದ್ದರೆ, ಬಾಡಿಗೆ ಮನೆಗಳಲ್ಲಿ ಬದುಕುವವರ ಮನಸ್ಸನ್ನು ಹೇಗೆ ಪರಿಭಾವಿಸುವುದು? ಕೆಲವರ ಬದುಕಂತೂ ಬಾಡಿಗೆ ಮನೆಗಳಲ್ಲಿಯೇ ಕಳೆದುಹೋಗುತ್ತದೆ. ಮನೆಯ ಎಂಬ ಭಾವನಾತ್ಮಕ ಬಂಧ ಅವರೊಳಗೆ ಹೇಗೆ ಬೆಸೆದುಕೊಂಡಿರುತ್ತದೆ ಎಂಬುದು ಅಚ್ಚರಿಯ ಸಂಗತಿಯೇ. ಇಷ್ಟಕ್ಕೂ ಗೊತ್ತಿದ್ದವರಿಗೆ ಗೊತ್ತಿದೆ- ಈ ಬದುಕೇ ಒಂದು ಬಾಡಿಗೆ ಮನೆಯೆಂದು !
ದಾರ್ಶನಿಕರ ಪ್ರಕಾರ ದೇಹವೂ ಒಂದು ಬಾಡಿಗೆ ಮನೆಯೇ !

Advertisement

ನಮ್ಮ ಬದುಕು ತುಂಬಿಕೊಳ್ಳುತ್ತಿದೆ ಎಂದು ನಾವು ಬೀಗುತ್ತಿರುವಾಗಲೇ ಅದು ಇನ್ನೊಂದು ದಿಕ್ಕಿನಲ್ಲಿ ಖಾಲಿಯಾಗುತ್ತ ಹೋಗುತ್ತಿರುತ್ತದೆ.
.
ಹಿಂದೆ ವಾಸ ಮಾಡಿದ್ದ ಊರುಗಳಿಗೆ, ಮನೆಗಳಿಗೆ ಈಗ ಭೇಟಿ ನೀಡುವುದು ನನಗೆ ಒಂದು ಅಭ್ಯಾಸವೇ ಆಗಿ ಹೋಗಿದೆ. ಹೀಗೆ ಹೋಗಿ ನೋಡುವಾಗ ನಾನು ಏನನ್ನು ನೋಡಲು ಬಯಸುತ್ತೇನೆ ಎಂಬುದೇ ನನಗೆ ಸ್ಪಷ್ಟವಿಲ್ಲ. ದಶಕಗಳ ಕಾಲದ ಹಿಂದಿನ ಬದುಕು-ಜನ ನಾನು ನೋಡಿದ ಸ್ವರೂಪದಲ್ಲಿ ಇನ್ನೂ ಹಾಗೇ ಇರುತ್ತಾರೆಂದೆ? ಹೀಗೆ ಇದ್ದಕ್ಕಿದ್ದಂತೆ ಹೋಗಿ ನಿಲ್ಲುವ ನನ್ನನ್ನು ನೋಡುವ ತವಕ ಈಗಲೂ ಅಲ್ಲಿ ವಾಸಿಸುತ್ತಿರುವವರಿಗೂ ಇದೆಯೆ? ನಾನು ಅಲ್ಲಿಗೆ ಹೋಗಿ ಕಾಣಲು ಬಯಸುವುದು ನನ್ನ ನೆನಪಿನಲ್ಲಿ ಉಳಿದುಬಿಟ್ಟಿರುವ ಜನರನ್ನು, ಜಾಗವನ್ನು, ವಾತಾವರಣವನ್ನು. ಅದಕ್ಕೆಲ್ಲ ಅಸ್ತಿತ್ವವಿರುವುದು ನನ್ನ ನೆನಪಿನಲ್ಲಿ. ನೆನಪಿನಲ್ಲಿ ಉಳಿದಿರುವ ವಾಸನೆ, ದೃಶ್ಯ, ಗಾಳಿ, ಬೆಳಕು, ಇಷ್ಟನ್ನೇ ಮತ್ತೆ ನೆನಪಿಸಿಕೊಂಡು ಎದುರಿಸಿದರೆ ಸಾಕೆ? ಆದರೆ, ಮನಸ್ಸು ಕೇಳುವುದಿಲ್ಲ. ಮತ್ತೆ ಮತ್ತೆ ಹೋಗಿ ನಿಲ್ಲುತ್ತೇನೆ. ಹೋಗಿ ಬಂದ ಕೆಲ ದಿವಸ ಮನಸ್ಸಿಗೆ ಮಂಕು, ವಿಷಾ ದ; ಸರಿದು ಹೋಗುವ ಕಾಲದ ಸ್ವರೂಪದ ಬಗ್ಗೆ, ನೆನಪಿನ ಸ್ವರೂಪದ ಬಗ್ಗೆ, ನನ್ನ ಮರುಕಳಿಕೆಯ ಹಂಬಲದ ಬಗ್ಗೆ.
.
ಬಾಡಿಗೆ ಮನೆಗಳಿಗೆ ಹೋಗುವಾಗ, ವಾಸ ಮಾಡುವಾಗ, ಖಾಲಿ ಮಾಡುವಾಗ ಯಾವಾಗಲೂ ಹೀಗೇ ಆಗುತ್ತದೆ. ಇರುವ ತನಕ ಚೆನ್ನಾಗಿಯೇ ಇರುತ್ತೇವೆ; ಖಾಲಿ ಮಾಡಬೇಕಾದಾಗ ಅಷ್ಟೇ ಸಲೀಸಾಗಿ ಎದ್ದು ಹೊರಟೂ ಬಿಡುತ್ತೇವೆ. ಮನೋಧರ್ಮವೊಂದು ಕಾಲಾನುಕ್ರಮದಲ್ಲಿ ರೂಪುಗೊಳ್ಳುವುದು ಹೀಗೇ ಎಂದು ಕಾಣುತ್ತದೆ. ಸ್ವಂತ ಮನೆ ಮಾಡಿಕೊಳ್ಳಲು ಹಣ, ಸೈಟು ಎಲ್ಲ ಅನುಕೂಲವಿದ್ದರೂ ಒಂದಲ್ಲ ಒಂದು ಕಾರಣಕ್ಕೆ ನಿರ್ದಿಷ್ಟ ಬಡಾವಣೆಯೊಂದರಲ್ಲಿ ಬಾಡಿಗೆ ಮನೆಯÇÉೇ ದಶಕಗಳನ್ನು ಕಳೆದದ್ದರಿಂದ ಒಬ್ಬ ಮಿತ್ರರಿಗೆ ಬಾಡಿಗೆ ಮನೆಯ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುವುದು, ಹಾಗೆ ತಮಗೆ ವ್ಯಾಮೋಹವಿದೆಯೆಂದು ತೋರುವುದು ಅನಿವಾರ್ಯವಾಯಿತು.

ನಮ್ಮ ತಂದೆ ತಮ್ಮ ವೃತ್ತಿ-ವೈವಾಹಿಕ ಜೀವನವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದರೂ ಮತ್ತೆ ಬೆಂಗಳೂರು ಕಡೆಗೆ ವೃತ್ತಿಗಾಗಿ ಬಂದದ್ದು ಸುಮಾರು ಮೂವತ್ತು ವರ್ಷಗಳ ನಂತರ. ಅದೂ ನಿವೃತ್ತಿಯ ಆಸುಪಾಸಿನಲ್ಲಿ. ನಮ್ಮ ತಂದೆ-ತಾಯಿ ಇಬ್ಬರೂ ಬೆಂಗಳೂರಿನÇÉೇ ತೀರಿಕೊಂಡರು. ಈಗ ನಾವು ನಾಲ್ಕು ಮಕ್ಕಳೂ ಬೆಂಗಳೂರಿನಲ್ಲಿ ಸ್ವಂತ ಮನೆಗಳÇÉೇ ಇದ್ದೇವೆ. ಮುಂದಿನ ಪೀಳಿಗೆಯವರ ಬಗ್ಗೆ ಈಗಲೇ ಏನೂ ಹೇಳುವುದು ಸಾಧ್ಯವಿಲ್ಲ. ಅವರ ಉದ್ಯೋಗ, ಆಕಾಂಕ್ಷೆಗಳ ಸ್ವರೂಪವೇ ಅಂತಹುದು. ಈಗ ಯಾರಾದರೂ ಒಂದು ಸೈಟು, ಮನೆ ಕೊಳ್ಳುವಾಗ, ಹೌದು, ಈ ಮನೆಯಲ್ಲಿ ವಾಸ ಮಾಡಬಹುದು, ಮಾಡಬೇಕಾಗುತ್ತದೆ ಎನ್ನುವ ಧೋರಣೆಗಿಂತ, ಇರುವ ಹಣವನ್ನು, ಸಂಪನ್ಮೂಲವನ್ನು ಹೂಡುವ, ತೊಡಗಿಸುವ (Investment) ಒಂದು ಮಾಧ್ಯಮವಾಗಿ ಪರಿಗಣಿಸಿದಾಗ, ಯಾವ ರೀತಿಯ ಭಾವನಾತ್ಮಕ ಸಂಬಂಧ ಮೂಡುತ್ತದೆ ! ಒಂದು ಮನೆಯೊಡನೆ ಭಾವನಾತ್ಮಕ ಸಂಬಂಧ ಮೂಡಬೇಕಾದರೆ, ನಾವು ಮಾತ್ರ ಅಲ್ಲಿ ವಾಸ ಮಾಡಿದರೆ ಸಾಲದು, ಹಿಂದಿನ ತಲೆಮಾರಿನವರೂ ಅಲ್ಲಿರಬೇಕು. ಹೆರಿಗೆ, ಮರಣ, ಮದುವೆ, ಪ್ರಸ್ಥ- ಇವೆಲ್ಲ ಅಲ್ಲಿ ಜರುಗಿರಬೇಕು. ಮನೆಯ ಮಾತು ಹಾಗಿರಲಿ, ಒಂದೊಂದು ತೊಟ್ಟಿಲಿಗೂ, ಒನಕೆಗೂ, ದೇವರ ಮಂಟಪಕ್ಕೂ, ಮೊಸರಿನ ಜಾಡಿಗೂ ಎಷ್ಟೊಂದು ಇತಿಹಾಸವಿರುತ್ತಿತ್ತು. ಅವುಗಳನ್ನು ಬಳಸುತ್ತಿದ್ದುದರಿಂದಲೇ ಒಂದು ರೀತಿಯ ಕಂಪನ, ಪುಳಕ ನಮ್ಮ ದೇಹ, ಮನಸ್ಸಿನಲ್ಲಿ ಜಾಗೃತವಾಗುತ್ತಿತ್ತು.

ಒಂದೊಂದು ಬಾಡಿಗೆ ಮನೆಯಲ್ಲಿ¨ªಾಗಲೂ ನಮ್ಮ ಭಾವಲೋಕ, ಒಡನಾಟ, ದೃಷ್ಟಿಕೋನ, ಅನುಭವ ಎಲ್ಲವೂ ಬದಲಾಗುತ್ತದೆ ಎಂಬುದು ನಿಜ. ಆದರೆ, ನಮ್ಮ ವಯಸ್ಸು, ಸಾಮಾಜಿಕತೆ, ಕುಟುಂಬವು ಹಾದು ಹೋಗುತ್ತಿರುವ ಆರ್ಥಿಕ ಸ್ಥಿತಿ, ಈ ಅಂಶಗಳು ಕೂಡ ಪರಿಣಾಮ ಬೀರುತ್ತವೆ. ಆದರೆ, ಯಾವ ನೆನಪುಗಳೂ, ಸಂಬಂಧಗಳೂ ಗಾಢವಾಗಿ, ತೀವ್ರವಾಗಿ ದೀರ್ಘ‌ಕಾಲದಲ್ಲಿ ಉಳಿಯುವುದಿಲ್ಲ. ನಾವು ಮದ್ರಾಸಿನಲ್ಲಿ ಒಂದೇ ಕ್ವಾರ್ಟರ್ಸ್‌ನಲ್ಲಿ ಹನ್ನೊಂದು ವರ್ಷ ವಾಸವಾಗಿ¨ªೆವು. ಬಾಡಿಗೆ ಮನೆಗಳಲ್ಲಿ ನಮಗೆ ದಕ್ಕುವ ಆಯಸ್ಸಿನ ಹಿನ್ನೆಲೆಯಲ್ಲಿ ಈ ಕಾಲಾವಧಿ ತುಂಬಾ ದೀರ್ಘ‌ವಾಯಿತೆಂದೇ ಹೇಳಬೇಕು. ಈಗ ಮದ್ರಾಸು ಬಿಟ್ಟು ಹದಿನಾರು ವರ್ಷಗಳಾಗಿವೆ. ನೆನಪುಗಳೇನೋ ಚೆನ್ನಾಗಿಯೇ ಇವೆ. ಅದರಲ್ಲೂ ಅÇÉೇ ಶಾಲಾ ಶಿಕ್ಷಣವನ್ನು ಪೂರೈಸಿದ ಮಕ್ಕಳಿಗೆ, ನಮಗೆ ಒಂದಿಷ್ಟು ಈ facebook ಸಂಬಂಧಗಳೂ ಇವೆ. ಒಂದು ನಾಲ್ಕಾರು ಕುಟುಂಬಗಳು/ಸಹೋದ್ಯೋಗಿಗಳು ಮಾತ್ರ ಈಗ ಸಂಪರ್ಕದಲ್ಲಿದ್ದಾರೆ. ಈ ಸಂಪರ್ಕದ ತೀವ್ರತೆಯ ಎಳೆಗಳು ಕೂಡ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.
.
ನಾನು ಮಗುವಾಗಿ¨ªಾಗ ನಮ್ಮಜ್ಜಿ ಕೂಡ ಬೆಂಗಳೂರಿಗೆ ಬರುತ್ತಿದ್ದರಂತೆ- ಮಗಳು ಮತ್ತು ಚಿಕ್ಕ ಮಗುವನ್ನು ನೋಡಿಕೊಳ್ಳಲು. ಎಲ್ಲರೂ ಸೇರಿ ಒಮ್ಮೆ ಲಾಲ್‌ಬಾಗ್‌ಗೆ ಬಂದಿ¨ªಾಗ ನನ್ನ ಕತ್ತಿಗೆ ಹಾಕಿದ್ದ ಒಂದೆಳೆ ಚಿನ್ನದ ಸರ ಬಿದ್ದು ಕಳೆದುಹೋಯಿತಂತೆ. ಆ ದಿನಗಳಲ್ಲಿ ಮದುವೆಯಾದ ಎಂಟು-ಹತ್ತು ವರ್ಷಗಳಾದರೂ ದಾಂಪತ್ಯ ಕಚ್ಚಿಕೊಂಡಿತು ಎಂದು ಹೇಳುವ ಹಾಗಿರಲಿಲ್ಲವಂತೆ. ಯಾವ ಕಾರಣಕ್ಕಾದರೂ ಸರಿ, ಯಾವ ದಿನವಾದರೂ ಸರಿ, ಗಂಡ, ಗಂಡನ ಮನೆಯವರು ಹೆಣ್ಣು ಮಕ್ಕಳನ್ನು ವಾಪಸ್‌ ಕಳಿಸಿಬಿಡುತ್ತಿದ್ದರಂತೆ.

ಹೀಗಿ¨ªಾಗ ನಮ್ಮ ತಾಯಿ, ಅಜ್ಜಿ ಇಬ್ಬರೂ ನಡುಗಿ ಹೋಗಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ನಮ್ಮ ತಂದೆಗೆ ಗೊತ್ತಾಗದ ಹಾಗೆ ನಮ್ಮ ತಾಯಿ ಮತ್ತು ಅಜ್ಜಿ ಇಬ್ಬರೂ ಒಂದೆರಡು ದಿನ ಬಂದು ಲಾಲ್‌ಬಾಗಿನÇÉೆಲ್ಲ ಇಡಿಯಾಗಿ ಶೋಧಿಸಿದರಂತೆ. ಸರವು ಖಂಡಿತವಾಗಿ ಸಿಗಲಿಲ್ಲವಾಗಿ, ಮನೆಯಲ್ಲಿದ್ದ ಸಣ್ಣಪುಟ್ಟ ಚಿನ್ನದ ಒಡವೆಗಳನ್ನೇ ಕರಗಿಸಿ ನಮ್ಮ ತಂದೆಗೆ ಗೊತ್ತಾಗದ ಹಾಗೆ ಹೊಸದಾದ ಸರ ಮಾಡಿಸಿದರಂತೆ.

Advertisement

ಬಾಡಿಗೆಮನೆಗಳಲ್ಲಿರುವಾಗ ಸಿಗುವ ಅನುಭವ, ಅನಿಸಿಕೆಗಳು, ಬೀಳುವ ಕನಸುಗಳು ಕೂಡ ಹೀಗೆಯೇ ಕಳೆದುಹೋಗುತ್ತವೆಯೆ? ಕಾಲಪ್ರವಾಹದಲ್ಲಿ ಉಳಿಯಲಾಗದ ನೆನಪುಗಳು ಹುಡುಕಿದರೂ ಸಿಗುವುದಿಲ್ಲವೆ? ಅದೆಲ್ಲ ಬೇಕೆಂದಾಗ ನಮ್ಮಜ್ಜಿ, ತಾಯಿ ಮಾಡಿಸಿದಂತೆ ಮನೆಯೊಳಗೆ/ಮನಸ್ಸಿನೊಳಗೆ ಇರುವ ಸಣ್ಣಪುಟ್ಟ ಚಿನ್ನದ ಒಡವೆಗಳು/ನೆನಪುಗಳನ್ನು ಕರಗಿಸಿ ಮತ್ತೆ ಬೆರಸಿ ಹೊಸ ಸರ ಮಾಡಿಸಿಕೊಳ್ಳಬೇಕೆ? ಈ ಪ್ರಶ್ನೆಗಳಿಗೆ, ಅನುಮಾನಗಳಿಗೆ ಎಲ್ಲರಿಗೂ ಅನ್ವಯವಾಗುವಂತಹ ಉತ್ತರಗಳು ಇರಲಾದರೂ ಎಲ್ಲಿ ಸಾಧ್ಯ?
.
ನಮ್ಮ ತಂದೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನಿವೃತ್ತಿಯಾಗುವ ಹೊತ್ತಿಗೆ ಗೆಜೆಟೆಡ್‌ ಅಲ್ಲದ ಕ್ಲಾಸ್‌ ಟು ಹಂತವನ್ನು ತಲುಪಿ ಜಿÇÉಾ ಕೇಂದ್ರಗಳಲ್ಲಿ, ಆರೋಗ್ಯ ನಿರೀಕ್ಷಕರು ಮತ್ತು ಪ್ರಾಥಮಿಕ ಆರೋಗ್ಯ ಕಾರ್ಯಕರ್ತರ ಕೆಲಸಗಳನ್ನು ಮೇಲುಸ್ತುವಾರಿ ಮಾಡುವ ಕೆಲಸದಲ್ಲಿದ್ದರು.

ಅವರು ಒಂದು ಸ್ವಂತ ಮನೆ ಮಾಡಲಿಲ್ಲ. ಸೈಟು ಕೂಡ ಮಾಡಲಿಲ್ಲ. ಅದೊಂದು ಆವಶ್ಯಕತೆ ಎಂದು ಅವರಿಗೆ ಯಾವತ್ತೂ ಅನಿಸಲೇ ಇಲ್ಲ. ಹಾಗೆಂದು ಮಕ್ಕಳಾದ ನಮಗೆ ಕೂಡ ಅನಿಸದಂತೆ ನೋಡಿಕೊಂಡರು. ಆಸ್ತಿವಂತರ ಮನೆತನದ ಹಿನ್ನೆಲೆಯಿಂದ ಬಂದ ನನ್ನ ಹೆಂಡತಿಗೆ ವೈವಾಹಿಕ ಜೀವನದ ಪ್ರಾರಂಭದಲ್ಲಿ ನನಗೆ ಮನೆ, ಸೈಟು ಮಾಡುವುದರ ಬಗ್ಗೆ ಇದ್ದ ಉದಾಸೀನ, ನಿರ್ಲಕ್ಷ್ಯ ಕುರಿತಂತೆ ಮೊದಲು ಆಶ್ಚರ್ಯವೂ, ನಂತರ ಬೇಸರವೂ ಆಗಿತ್ತು. ನಾನು ನನ್ನ ಮೂವತ್ತೈದನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿದಾಗಲೂ ನಮ್ಮ ತಂದೆಗೆ ಅದರ ಬಗ್ಗೆ ವಿಶೇಷವಾದ ಉತ್ಸಾಹವಾಗಲಿ, ಹೆಮ್ಮೆಯಾಗಲಿ ಇರಲಿಲ್ಲ. ಜಮೀನಾªರಿ ಹಿನ್ನೆಲೆಯಿಂದ ಬಂದ ನನ್ನ ತಾಯಿಗೇ ಇದೆಲ್ಲದರ ಬಗ್ಗೆ ಹೆಚ್ಚು ಆಸಕ್ತಿ, ಕುತೂಹಲಗಳಿದ್ದವು.
ಒಂದು ನಮ್ಮ ತಂದೆಗೆ ಮನೆ ಕಟ್ಟಲು ಸೈಟು ಕೊಳ್ಳಲು ಬೇಕಾದ ಆರ್ಥಿಕ ಸಂಪನ್ಮೂಲಗಳಿರಲಿಲ್ಲ ಮತ್ತು ಸರಕಾರಿ ನೌಕರಿಯಲ್ಲಿದ್ದರೂ ಬರುವ ಸಂಬಳ ಬೆಳೆಯುತ್ತಿದ್ದ, ಓದುತ್ತಿದ್ದ ನಾಲ್ಕು ಮಕ್ಕಳನ್ನು ನಿರ್ವಹಿಸಲು, ಪ್ರೋತ್ಸಾಹಿಸಲು ಸಾಕಾಗುತ್ತಿರಲಿಲ್ಲ. ಈ ಜವಾಬ್ದಾರಿಯೇ ಅವರಿಗೆ ವಿಪರೀತವೆನಿಸಿತ್ತು ಮತ್ತು ಇಷ್ಟಕ್ಕೇ ಅವರು ಪ್ರಾಮಾಣಿಕವಾಗಿ ಕಂಗಾಲಾಗಿದ್ದರು. ಆದರೆ, ಸಂಪನ್ಮೂಲದ ಕೊರತೆಯ ಕಾರಣವನ್ನು ನಮ್ಮ ತಂದೆ ಮುಂದೆ ಮಾಡುತ್ತಿರಲಿಲ್ಲ. ಆಸ್ತಿ, ಭೂಮಿ, ಕಾಣಿ ಇವೆಲ್ಲ ಇದ್ದರೆ ಮುಂದೆ ಮಕ್ಕಳಲ್ಲಿ ಒಡಕು-ಮನಸ್ತಾಪ ಬಂದೇ ಬರುತ್ತದೆ; ಅವೆಲ್ಲ ಬೇಡವೆಂದೇ ನಾನು ಇದಕ್ಕೆಲ್ಲ ಕೈ ಹಾಕಲಿಲ್ಲ ಎಂದು ನನಗೆ ಒಮ್ಮೆ ಗಂಭೀರವಾಗಿಯೇ ಹೇಳಿದ್ದರು. ಈ ಕಾರಣಕ್ಕಾಗಿ ಅವರಿಗೆ ಯಾವ ರೀತಿಯ ಕೀಳರಿಮೆಯಿಲ್ಲದೆ ಹೋದರೂ ಬಂಧುಗಳ ನಡುವೆ ನಡೆಯುತ್ತಿದ್ದ ಆಸ್ತಿಪಾಸ್ತಿ ಜಗಳಗಳು, ಕ್ಯಾತೆಗಳು ಮತ್ತು ಪಾಲುದಾರಿಕೆಯ ವಿವಾದಗಳ ಬಗ್ಗೆ ಮಾತ್ರ ತುಂಬಾ ಆಸಕ್ತಿಯಿತ್ತು. ಕೆಲವೊಮ್ಮೆ ಇಂತಹ ವಿವಾದಗಳನ್ನು ಅವರೇ ಚಿತಾವಣೆ ಮಾಡಿ ಎಬ್ಬಿಸುತ್ತಿದ್ದರು. ನಾನು ಬಿ.ಎ. ಓದುತ್ತಿ¨ªಾಗ, ಸರ್ಕಾರಿ ನೌಕರರಿಗೆ ನಗರದ ಹೊರಗೆ ಒಂದು ಬಡಾವಣೆಯಲ್ಲಿ ನಿವೇಶನಗಳನ್ನು ಆದ್ಯತೆಯ ಮೇಲೆ ಕೊಡುವುದಾಗಿ ಒಂದು ಗೃಹನಿರ್ಮಾಣ ಸೊಸೈಟಿಯವರು ಘೋಷಿಸಿದಾಗ, ನನ್ನ ಸಹಪಾಠಿಗಳನೇಕರು ಇದರ ಬಗ್ಗೆ ಕಾಲೇಜಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದರಿಂದ ಪ್ರೇರಣೆ ಪಡೆದ ನಾನು ನಮ್ಮ ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದೆ. ಸರಿ, ದಿನನಿತ್ಯದ ಜೀವನ ನಡೆಸುವುದೇ ಕಷ್ಟ. ಇನ್ನು ಸೈಟು ಕೊಳ್ಳುವುದೆಲ್ಲಿ ಬಂತು ಎಂದು ಹತಾಶೆಯ ಮಾತುಗಳನ್ನಾಡಿದ್ದರು. ಮಂಡ್ಯದಲ್ಲಿ ನಾನು ಓದುತ್ತಿ¨ªಾಗ ನನ್ನ ಬಹುಪಾಲು ಗೆಳೆಯರು, ಸಹಪಾಠಿಗಳು ಅನುಕೂಲಸ್ಥ ಒಕ್ಕಲಿಗರ ಕುಟುಂಬಕ್ಕೆ ಸೇರಿರುತ್ತಿದ್ದುದರಿಂದ, ನಾನು ಕೂಡ ಬದುಕುತ್ತಿದ್ದ ಕೆಳ ಮಧ್ಯಮ ವರ್ಗದ ಜೀವನ ಮತ್ತು ಕಲ್ಪಿತ ಬಡತನ ಇವೆರಡರಿಂದಾಗಿ ಮೂಡಿದ ಕೀಳರಿಮೆಯ ಭಾವನೆಗಳನ್ನು ಅನುಭವಿಸುತ್ತಿ¨ªೆ. ಇದೊಂದೇ ಸಲ ಎಂದು ಕಾಣುತ್ತದೆ ನಾನು ನಮ್ಮ ತಂದೆಯ ಹತ್ತಿರ ಸೈಟು-ಮನೆ ಕೊಳ್ಳುವುದನ್ನು ಚರ್ಚಿಸಿದ್ದು. ಅವರ ಮಾತಿನಲ್ಲಿದ್ದ ಹತಾಶೆಯಿಂದಾಗಿ ನನ್ನ ಕೀಳರಿಮೆಯ ಭಾವನೆ ಇನ್ನೂ ಹೆಚ್ಚಾಗಿತ್ತು.

ಬಾಡಿಗೆ ಮನೆಗಳು ಕೂಡ ಇಂತಹುದೇ ಇರಬೇಕು. ಇಷ್ಟೇ ಅನುಕೂಲಗಳಿರಬೇಕು ಎಂದು ಕೂಡ ನಮ್ಮ ತಂದೆ ನಂಬಿರಲಿಲ್ಲವೆಂದು ಕಾಣುತ್ತದೆ. ಇದು ನಾವು ವಾಸ ಮಾಡಿ ದ ಬಾಡಿಗೆ ಮನೆಗಳ ಸಂಖ್ಯೆ ಮತ್ತು ಸ್ವರೂಪದಿಂದ ಗೊತ್ತಾಗುತ್ತದೆ. ಮಂಡ್ಯ ಮತ್ತು ಗುತ್ತಲಿನಲ್ಲಿ ನಾವು ಸುಮಾರು ಆರು ಮನೆಗಳಲ್ಲಿ ಇ¨ªೆವು; ಎರಡು-ಮೂರು ಮೈಲಿ ಅಂತರದಲ್ಲಿ.

ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಕಾಮಗೆರೆಯಂತಹ ಗ್ರಾಮದಲ್ಲಿ ಕೂಡ ನಾವು ಮೂರು ಸಲ ಮನೆ ಬದಲಾಯಿಸಿ¨ªೆವು. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ ಏನೇನು ಅನುಕೂಲ, ಅನನುಕೂಲಗಳಿವೆ ಎಂದು ನೋಡಲು ಕೂಡ ಹೋಗದೆ ಮನೆ ಹೊರಗಿನಿಂದ ಕಿಟಕಿಯ ಸಂದಿಯ ಮೂಲಕ ಕಂಡಷ್ಟನ್ನು ನೋಡಿಕೊಂಡು ನಮ್ಮ ತಂದೆ ಮನೆಯನ್ನು ಒಪ್ಪಿಕೊಂಡು ಬಂದಿದ್ದರು. ಆ ಮನೆಯಲ್ಲಿ ನಾವು ನಾನಾ ರೀತಿಯ ಅನನುಕೂಲಗಳನ್ನು ಎದುರಿಸಬೇಕಾಯಿತು. ಇದರ ಬಗ್ಗೆ ನಮ್ಮ ತಾಯಿ ಯಾವಾಗಲೂ ಗೊಣಗುತ್ತಿದ್ದರು. ಅದಕ್ಕೆ ನಮ್ಮ ತಂದೆ ಸೊಪ್ಪು ಹಾಕುತ್ತಿರಲಿಲ್ಲ.

ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋಗುವುದರಲ್ಲಿ ಒಂದು ರೀತಿಯ ಸಲೀಸುತನವಿತ್ತು. ಈಗ ನಾನು ಹಾಗೆಂದುಕೊಳ್ಳುತ್ತಿರಬಹುದು. ಆ ಸಲೀಸುತನದ ಹಿಂದೆ ಒಂದು ರೀತಿಯ ಒತ್ತಡವೂ ಇದ್ದಿರಬಹುದೇನೋ? ಜೊತೆಗೆ ಅಭದ್ರತೆಯ ಭಾವನೆಯೂ ಕೂಡ. ಕುಟುಂಬದ ಸದಸ್ಯರಿಗೆ ಯಾವ ರೀತಿಯ ಅನುಕೂಲಗಳು, ಅನನುಕೂಲಗಳು ಆಗಬಹುದೆಂದು ನಮ್ಮ ತಂದೆ ಯಾಕೆ ಯೋಚಿಸುವುದಿಲ್ಲ ಎಂದು ಎಷ್ಟೋ ಮನೆಗಳನ್ನು ಬದಲಾಯಿಸಿದ ನಂತರ ನನಗೆ ಅನಿಸಿದರೂ ಅಥವಾ ಈಗ ಬರೆಯುವಾಗ ಅನಿಸುತ್ತಿದ್ದರೂ, ಕುಟುಂಬದ ಮುಖ್ಯಸ್ಥರಾಗಿ ಅವರ ಆದ್ಯತೆಗಳೇ ಬೇರೆ ಇದ್ದಿರಬೇಕು. ನಮ್ಮ ಜೊತೆ ಕೂಡ ಕೆಲವು ವರ್ಷ ಇದ್ದರೂ, ಬೆಂಗಳೂರು-ಮದ್ರಾಸುಗಳಲ್ಲಿ. ನಮ್ಮ ವಿಶಾಲವಾದ ಕ್ವಾರ್ಟರ್ಸ್‌ಗಳನ್ನು ಕೂಡ ನೋಡಿದರು, ನಮ್ಮೊಡನೆ ಬಂದು ಇದ್ದರೂ ಕೂಡ. ಇದೆಲ್ಲದರಲ್ಲಿ ಅವರಿಗೆ ಏನಾದರೂ ವಿಶೇಷವಿದೆಯೆಂದು ಅನಿಸಲೇ ಇಲ್ಲವೆಂದು ಕಾಣುತ್ತದೆ.
ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋದಾಗ, ಮೊಳೆ ಹೊಡೆಯುವುದರಿಂದ ಹಿಡಿದು, ತಂತಿ ಕಟ್ಟುವ ತನಕ ನಾನಾ ರೀತಿಯ ಕೆಲಸಗಳು ಇರುತ್ತವೆ. ಮತ್ತೆ ಮತ್ತೆ ಇದನ್ನೆಲ್ಲ ಮಾಡುತ್ತಲೇ ಇರಬೇಕಾಗುತ್ತದೆ. ಇದು ತುಂಬಾ ರೇಜಿಗೆಯ ಕೆಲಸ. ಆದರೆ, ಈ ರೇಜಿಗೆಗಾಗಿ ನಮ್ಮ ತಂದೆ ಎಂದೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ನಾನು ಏಳುವ ಹೊತ್ತಿಗೆ ರೇಡಿಯೋದಲ್ಲಿ ಗೀತಾರಾಧನೆ, ರೈತರಿಗೆ ಸಲಹೆ, ಪ್ರದೇಶ ಸಮಾಚಾರ ಕೇಳಿ ಬರುತ್ತಿತ್ತು. ನಮ್ಮ ತಂದೆ ಅಷ್ಟು ಹೊತ್ತಿಗೇ ಎದ್ದು ಯಾವುದಾದರೂ ಜಾಯಿಕಾಯಿ ಪೆಟ್ಟಿಗೆಯ ರಿಪೇರಿ ಮಾಡುತ್ತಿರುತ್ತಿದ್ದರು ಇಲ್ಲಾ ಗೋಡೆಗೆ ಮೊಳೆ ಹೊಡೆಯುತ್ತಿರುತ್ತಿದ್ದರು. ಅದರ ಮಧ್ಯೆಯೂ ಆಗತಾನೇ ಏಳುತ್ತಿದ್ದ ಎಲ್ಲ ಮಕ್ಕಳನ್ನು ಅಡ್ಡ ಹೆಸರಿನಿಂದ ಕರೆದು ಪ್ರೀತಿಯಿಂದ ಏಳಿಸುತ್ತಿದ್ದರು. ಒಳಗಡೆ ಅಡುಗೆ ಮನೆಯಲ್ಲಿ, ಏಳುತ್ತಿರುವ ಮಕ್ಕಳಿಗೆ ಕೊಡಬೇಕಾದ ಕಾಫಿ-ತಿಂಡಿಯನ್ನು ನಮ್ಮ ತಾಯಿ ತಯಾರು ಮಾಡುತ್ತಿದ್ದರು. ಹೊಸ ದಿನವೊಂದಕ್ಕೆ ಪ್ರವೇಶಿಸಲು ನಮ್ಮ ಕುಟುಂಬ ತನ್ನೆಲ್ಲ ಸಾಧಾರಣತೆಯ ದಿವ್ಯ ಕ್ಷಣಗಳಲ್ಲಿ ಗರಿಗೆದರಿಕೊಳ್ಳುತ್ತಿದ್ದ ಸಮಯ ಅದಿರಬೇಕು. ನಿಜವಾಗಿಯೂ ನಮಗೆ ದಕ್ಕಿದ ಆ ಕ್ಷಣಗಳು, ಆದರೆ ಆವಾಗ ಗೊತ್ತಾಗದೇ ಹೋದ, ಆದರೂ ಸುಪ್ತಪ್ರಜ್ಞೆಯ ಭಾಗವಾಗಿರುವ ನಮ್ಮ ಕುಟುಂಬದ Spiritual Moments ಇರಬೇಕು.

ಬೆಳೆಯುವ ಮಕ್ಕಳಿಗೆ ಆ ವಯಸ್ಸಿನಲ್ಲಿ ಬೇಕಾದ ಏಕಾಂತ, ಅಧ್ಯಯನಕ್ಕಾಗಿ ಪ್ರತ್ಯೇಕ ಕೋಣೆ-ಅನುಕೂಲಗಳ ಬಗ್ಗೆ ನಮ್ಮ ತಂದೆ ಯೋಚಿಸಬೇಕಿತ್ತು, ಅನುಕೂಲ ಮಾಡಿಕೊಡಬೇಕಿತ್ತು ಎಂದು ಈಗ ನಾನು ವಾದಿಸುವುದು ಸರಿಯಲ್ಲ. ಅವರ ಬಾಲ್ಯವೇ ಆ ರೀತಿ ಇದ್ದಿರಲಿಲ್ಲ. ಹಾಗಾಗಿ, ಇದೆಲ್ಲ ಬೆಳೆಯುವ ಮಕ್ಕಳಿಗೆ ಅವಶ್ಯ ಎಂದು ಅವರಿಗೆ ಅನಿಸದೆ ಇರಲೂಬಹುದು. ಇದೆಲ್ಲ ತೀರಾ ಆವಶ್ಯಕತೆಯೇ ಅಲ್ಲವೇನೋ ಎಂಬ ಮನೋಧರ್ಮ ನನ್ನಲ್ಲು ಕೂಡ ಮೂಡಲು ಈ ಹಿನ್ನೆಲೆಯÇÉೇ ರೂಪುಗೊಂಡಿರಬೇಕು. ಈವತ್ತು ಕೂಡ ನಮ್ಮ ಮನೆ ಅಥವಾ ನನ್ನ ಕೋಣೆ ಅಸ್ತವ್ಯಸ್ತಗೊಂಡಿ¨ªಾಗ, ಮನೆಯೊಳಗೆ ಸಣ್ಣಪುಟ್ಟ ಗಲಾಟೆ, ಮಾತುಕತೆ ನಡೆಯುತ್ತಿರುವಾಗ, ಮನೆಗೆ ನಿರಂತರವಾಗಿ ಯಾರಾದರೂ ಬಂದು ಹೋಗುತ್ತಲೇ ಇರುವಾಗಲೂ ನನಗೆ ಓದಲು ಬರೆಯಲು ಅಷ್ಟೊಂದು ಕಷ್ಟವಾಗುವುದಿಲ್ಲ. ನನ್ನ ಏಕಾಗ್ರತೆಗೆ ಕೊಂಚವೂ ಭಂಗ ಬರುವುದಿಲ್ಲ. ಸಂತೆಯೊಳಗೊಂದು ಮನೆಯ ಮಾಡಿ ವಚನದ ಸಾಲುಗಳು ನನಗೆ ಅನ್ವಯಿಸುವುದಿಲ್ಲ. ಇದೆಲ್ಲ ವಾತಾವರಣದಲ್ಲಿ ಇಲ್ಲದೇ ಹೋದಾಗ ಜೀವಂತಿಕೆಯ ಕೊರತೆ ಮನಸ್ಸಿಗೆ ರಾಚುತ್ತಿರುತ್ತದೆ. ಒಂದು ರೀತಿಯ ಮಂಕು ಮೂಡುತ್ತದೆ.

ಇಷ್ಟೊಂದು ಊರುಗಳು, ಇಷ್ಟೊಂದು ಬಾಡಿಗೆ ಮನೆಗಳಲ್ಲಿ ವಾಸ ಮಾಡಿದ ನಮ್ಮ ತಂದೆಗೆ, ಸಹಜವಾಗಿಯೇ ಅಜೀವ ಗೆಳೆಯರು, ಒಡನಾಡಿಗಳು ಎನ್ನುವವರು ರೂಪುಗೊಳ್ಳಲೇ ಇಲ್ಲ. ಪ್ರತಿ ಊರಿನಲ್ಲೂ, ಹೊಸ ಬಾಡಿಗೆ ಮನೆಯಲ್ಲೂ ಇ¨ªಾಗ, ಯಾರು ಯಾರು ಅವರಿಗೆ ಆ ತತ್ಕಾಲಕ್ಕೆ ಆಪ್ತರಾಗಿದ್ದರು, ಯಾವ ಯಾವ ದಿನಸಿ ಅಂಗಡಿಯ ಶೆಟ್ಟರೊಡನೆ ಯಾವ ರೀತಿಯ ಒಡನಾಟವಿತ್ತು ಎಂಬುದೆಲ್ಲ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಆದರೆ ಯಾವ ಸಂಬಂಧಗಳೂ ದೀರ್ಘ‌ಕಾಲ ಉಳಿಯುತ್ತಿರಲಿಲ್ಲ. ಕಾಲಕ್ರಮೇಣ ಕರಗಿಹೋಗುತ್ತಿತ್ತು. ಇದೇ ಸಂಬಂಧಗಳು ಇದೇ ಮಾದರಿ ಮಕ್ಕಳಾದ ನಮ್ಮ ಜೀವನದಲ್ಲೂ ಬೇರೆ ಬೇರೆ ರೀತಿಯಲ್ಲಿ ಮುಂದುವರಿದಿದೆ.
.
ಜಮೀನಾªರಿಕೆ, ಶ್ಯಾನುಭೋಗಿಕೆ ಎರಡರ ಹಿನ್ನೆಲೆಯಿಂದಲೂ ಬಂದಿದ್ದ ನಮ್ಮ ತಾಯಿಗೆ ಇದ್ದ ನಿಲುವುಗಳು ಕೊಂಚ ಭಿನ್ನವಾಗಿದ್ದವು. ನಮ್ಮ ತಂದೆ ವಿದ್ಯಾವಂತರು ಮತ್ತು ಸರಕಾರಿ ನೌಕರಿಯಲ್ಲಿದ್ದವರು ಎಂಬ ಹಿನ್ನೆಲೆಯಲ್ಲಿ ಅವರನ್ನು ತಂದುಕೊಂಡಿರುವುದಾಗಿ ತಾಯಿ ಮನೆಯ ಕಡೆಯವರು ಮಾತನಾಡಿಕೊಳ್ಳುತ್ತಿದ್ದನ್ನು ನಾನೇ ಬಾಲ್ಯದಲ್ಲಿ ಕೇಳಿಸಿಕೊಂಡಿದ್ದೇನೆ. ದಾಂಪತ್ಯದ ಒಂದು ಮುಖ್ಯ ಆಯಾಮವೆಂದರೆ, ದಂಪತಿಗಳಿಗೆ ವಯಸ್ಸಾಗುತ್ತ ಆಗುತ್ತ, ಗಂಡ-ಹೆಂಡತಿ ಇಬ್ಬರೂ ಎಲ್ಲ ಸಂಗತಿ-ವಿದ್ಯಮಾನಗಳನ್ನು ಕುರಿತಂತೆ ಒಂದೇ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ. ಕೆಲವು ಮನಶ್ಯಾಸ್ತ್ರಜ್ಞರು ಮುಂದುವರಿದು ಹೇಳುವ ಹಾಗೆ, ಇಬ್ಬರೂ ಒಂದೇ ರೀತಿ ಕಾಣಲು ಪ್ರಾರಂಭಿಸುತ್ತಾರೆ. ಅವರ ಆಂಗಿಕ ಭಾಷೆ, ಮಾತನಾಡುವ ಶೈಲಿಯಲ್ಲಿ ಕೂಡ ತದ್ರೂಪಿ ಆಯಾಮವೇ ಮುಂದೆ ಬರುತ್ತವಂತೆ. ಮಕ್ಕಳಾದ ನಾವೆಲ್ಲ ವಿದ್ಯಾವಂತರಾದಂತೆ, ಸರ್ಕಾರಿ ಕೆಲಸಗಳನ್ನು ಹಿಡಿದಂತೆ, ನಮ್ಮ ತಾಯಿಗೂ ಕೂಡ ಆಸ್ತಿ, ಭೂಮಿ, ಕಾಣಿಗಳಿಗಿಂತ, ಉದ್ಯೋಗ, ಶಿಕ್ಷಣ, ಪಟ್ಟಣದವಾಸವೇ ಮುಖ್ಯವೆನಿಸಿತು. ಈ ಸಾಧನೆಯನ್ನೇ ಮುಂದೆ ಮಾಡಿ ಅವರು ಇತರರೊಡನೆ ಹೋಲಿಸಿಕೊಂಡು ಹೆಮ್ಮೆ ಪಡುತ್ತಿದ್ದರು. ಹೀಗಿದ್ದರೂ ಅವರಿಗೆ ಆಸ್ತಿವಂತರು, ಸ್ಥಿತಿವಂತರುಗಳ ಬಗ್ಗೆ ಕುತೂಹಲ-ಗೌರವಗಳಿದ್ದವು. ವಿಶೇಷವಾಗಿ ಅವರ ಒಬ್ಬನೇ ಅಣ್ಣ ಸಾಕಷ್ಟು ಸ್ಥಿತಿವಂತರಾಗಿದ್ದು, ತರಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದ್ದುದು ಅವರಿಗೆ ಯಾವಾಗಲೂ ಹೆಮ್ಮೆಯ ವಿಷಯವಾಗಿತ್ತು. ಇದರಿಂದಲೇ ಒಂದು ರೀತಿಯ ಕರ್ಷಣವೂ ಮೂಡಿ ಬರುತ್ತಿತ್ತು. ನಮ್ಮ ತಾಯಿಯ ಹತ್ತಿರವಿದ್ದುದು ಒಂದೇ ಒಂದು ಎರಡೆಳೆಯ ಚಿನ್ನದ ಸರ. ಕಷ್ಟ ಬಂದಾಗಲೆಲ್ಲ ಅದನ್ನೇ ಮತ್ತೆ ಮತ್ತೆ ಅಡವಿಟ್ಟು ಸಾಲ ಪಡೆಯುತ್ತಿ¨ªೆವು. ಮೊದಮೊದಲು ಸಾಹುಕಾರರಿಂದ, ನಂತರ ರಾಷ್ಟ್ರೀಕೃತ ಬ್ಯಾಂಕುಗಳಿಂದ. ಹೀಗೆ ಅಡವಿಡುವುದು ಅವರ ಅಣ್ಣನ ಮನೆಯವರಿಗೆ ಗೊತ್ತಾಗಬಾರದೆಂದು, ಸರವನ್ನು ಬಿಡಿಸಿಕೊಳ್ಳುವ ತನಕ ಯಾವ ಧಾರ್ಮಿಕ-ಸಾಮಾಜಿಕ ಸಮಾರಂಭಗಳು ತವರುಮನೆಯ ಕಡೆ ನಡೆಯಬಾರದೆಂದು ಯಾವಾಗಲೂ ಪರಿತಪಿಸುತ್ತಿದ್ದರು. ಒಂದು ಸಲ ಸರವನ್ನು ಸಾಹುಕಾರರ ಹತ್ತಿರ ಅಡವಿಡಲು ಹೋದಾಗ ನಮ್ಮ ಮಾವ ಕೂಡ ಸಾಹುಕಾರರ ಹತ್ತಿರ ಮತ್ತೆ ಯಾವುದೋ ವ್ಯವಹಾರಕ್ಕೆ ಬಂದಿದ್ದು, ಆವತ್ತು ಅಡವಿಟ್ಟು ಸಾಲ ಪಡೆಯಲಾಗದೆ ತುಂಬಾ ತೊಂದರೆಯಾಯಿತು. ನಮ್ಮ ಮನೆಯವರು ಅನುಕೂಲಸ್ಥರು. ಕಷ್ಟ ಬಂದಾಗ ಆಗಿ ಬರುತ್ತಾರೆ ಎಂಬ ಹೆಮ್ಮೆ; ಆದರೆ ಅವರನ್ನು ಏನೂ ಕೇಳಬಾರದೆಂಬ ಸ್ವಾಭಿಮಾನ, ಇವೆರಡನ್ನೂ ಸಮತೋಲನಗೊಳಿಸುವುದು ನಮ್ಮ ತಾಯಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೂ ಅಣ್ಣ, ತವರು ಮನೆಯವರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಮತ್ತೆ ಮತ್ತೆ ಪರೀಕ್ಷಿಸುವ, ಸಕಾರಾತ್ಮಕ ಫ‌ಲಿತಾಂಶವನ್ನು ಸಾಬೀತುಪಡಿಸುವ ಪ್ರವೃತ್ತಿಯೂ ಇತ್ತು. ಊರೊಳಗೆ ದೊಡ್ಡ ತೊಟ್ಟಿಯ ಹಲವಾರು ಕಂಬಗಳ ಮನೆಯಿದ್ದರೂ ನಮ್ಮ ಮಾವ ಊರ ಹೊರಗಿದ್ದ ನಿವೇಶನದಲ್ಲಿ ಎರಡು ಮನೆಗಳನ್ನು ಕಟ್ಟುತ್ತಿದ್ದರು. ನಾವು ಕೂಡ ಹತ್ತಿರದÇÉೇ ವಿಶಾಲವಾದ ಒಂದು ಮನೆಯಲ್ಲಿ ಬಾಡಿಗೆಗಿ¨ªೆವು. ಆದರೂ ಅಣ್ಣ ಕಟ್ಟಿದ ಮನೆಯನ್ನು ಬಾಡಿಗೆಗೆ ಪಡೆಯಲೇಬೇಕು, ಬಾಡಿಗೆಗೆ ಕೊಡುತ್ತಾರೋ ಇಲ್ಲವೋ ಎಂದು ಪರೀಕ್ಷಿಸಬೇಕು ಎಂದು ನಮ್ಮ ತಾಯಿ ಪರೀಕ್ಷೆ ಮಾಡಿ, ಗೃಹಪ್ರವೇಶವಾದ ತಕ್ಷಣ ಮನೆಯನ್ನು ಬಾಡಿಗೆಗೆ ಪಡೆದು, ತುಂಬಾ ದೊಡ್ಡದಾಗಿದ್ದ ಮನೆಗೆ ಹೋಗಿಯೂ ಆಯಿತು.

ನಾನು ಬೆಂಗಳೂರಿನಲ್ಲಿ ನಿವೇಶನವನ್ನು ಕೊಂಡಾಗ, ಮನೆ ಕಟ್ಟಿದಾಗ, ಹೆಚ್ಚು ಖುಷಿಪಟ್ಟವರು ನಮ್ಮ ತಾಯಿಯೇ. ಅವರಿಗೆ ಸ್ವಂತ ಮನೆಯಲ್ಲಿ ವಾಸಿಸುವ ಆಸೆಯೂ ಇತ್ತು. ಆದರೆ ನಾನು ಕಟ್ಟಿದ ಮನೆ ಬೆಂಗಳೂರು ನಗರದ ಹೊರವಲಯದಲ್ಲಿ ಇದ್ದುದರಿಂದ ಆ ಮನೆಗೆ ಹೋಗುವುದು ಸಾಧ್ಯವಾಗಲಿಲ್ಲ. ನನ್ನ ತಂಗಿ ಮದುವೆ ಆಗಿದ್ದುದು ಬೆಂಗಳೂರಿನಲ್ಲಿ ಎರಡು-ಮೂರು ತಲೆಮಾರುಗಳಿಂದ ವಾಸವಾಗಿದ್ದ ಒಂದು ಕುಟುಂಬಕ್ಕೆ. ಆ ಕುಟುಂಬಕ್ಕೆ ಬೆಂಗಳೂರಿನ ಹಳೆಯ ಮತ್ತು ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸಾಕಷ್ಟು ದೊಡ್ಡದಾದ ನಿವೇಶನವಿತ್ತು. ಆ ನಿವೇಶನದಲ್ಲಿ ನಮ್ಮ ತಂಗಿಯ ಪರವಾಗಿ ಪಾಲು ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ನಾನು, ನನ್ನ ಸೋದರರು, ನಮ್ಮ ತಂದೆ ಎಲ್ಲರೂ ಬೆಂಬಲವಾಗಿ ನಿಲ್ಲಲು ಕಾರಣರಾದವರು ಕೂಡ ನಮ್ಮ ತಾಯಿಯೇ. ಒಂದು ಮನೆ ಕಟ್ಟಾದ ಮೇಲೆ, ಒಂದು ಆಸ್ತಿ ನಮ್ಮ ಒಡೆತನಕ್ಕೆ ಬಂದ ಮೇಲೆ, ಅದರ ಒಡೆತನ, ಯಜಮಾನಿಕೆಯ ಭಾವವನ್ನು ಮೊದಲು ಮತ್ತು ಹೆಚ್ಚಾಗಿ ಅನುಭವಿಸುವವರು ಗಂಡಸರೇ. ಅದರ ಹಿಂದೆ ಇರುವ ಹೆಂಗಸರ ಆಸೆ, ಪರಿಶ್ರಮ, ತ್ಯಾಗಗಳನ್ನು ಹಿನ್ನೆಲೆಗೆ ಸರಿಸಿ, ಬದಲಿಗೆ ಅವರಿಗೆ ಮಾತ್ರ ಆಸ್ತಿ, ಅಧಿಕಾರ, ಹಣದ ಬಗ್ಗೆ ಒಂದು ದೌರ್ಬಲ್ಯವಿದೆ ಎಂದು ಹೇಳುವುದು ಪುರುಷ ಸಮಾಜದ ಒಂದು ಚಟ ಎಂಬ ಸಮಾಜಶಾಸ್ತ್ರಜ್ಞರ ಅಭಿಪ್ರಾಯ ಇಲ್ಲಿ ನೆನಪಾಗುತ್ತದೆ.

(ಹಲವು ಲೇಖನಗಳ ಆಯ್ದ ಭಾಗ. ಕೆ. ಸತ್ಯ ನಾರಾಯಣ ಅವರ ಆತ್ಮಚರಿತ್ರೆಯ ನಾಲ್ಕನೆಯ ಕೃತಿ ಬಾಡಿಗೆ ಮನೆಗಳ ರಾಜ ಚರಿತ್ರೆ ಯನ್ನು ಬೆಂಗಳೂರಿನ “ಅಭಿನವ’ ಪ್ರಕಟಿಸುತ್ತಿದೆ)

– ಕೆ. ಸತ್ಯ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next