Advertisement

ಪುಟ್ಟ ಪುಟ್ಟ ಕತೆಗಳು

06:00 AM Nov 04, 2018 | |

ಹಾರೈಕೆ
ಅವನಿಗೆ ಹೈಸ್ಕೂಲಿನಲ್ಲಿ ಪಾಠ ಮಾಡಿದ್ದ ಮೂವರು ಶಿಕ್ಷಕರು ಕಾರ್ಯಕ್ರಮವೊಂದರಲ್ಲಿ ಒಬ್ಬೊಬ್ಬರಾಗಿ ಎದುರಾಗುತ್ತ ಹೋದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಈ ಮೂವರಿಂದಲೂ ಒಳ್ಳೆ ಹುಡುಗನೆಂಬ ಬಿರುದು ಪಡೆದಿದ್ದ ಅವನು, ಸದ್ಯ ಕಾಲೇಜು ವಿದ್ಯಾರ್ಥಿಗಳಿಗೆ ವಿಜ್ಞಾನ ಬೋಧಿಸುವ ಅಧ್ಯಾಪಕನಾಗಿದ್ದ. ಮೂವರೂ ಸಹಜವಾಗಿಯೇ ಎದುರಾದ ಕೂಡಲೇ, “”ಹೇಗಿದ್ಯ? ಏನ್‌ ಮಾಡ್ತಿದ್ಯ?” ಅಂತ ಮಾತು ಪ್ರಾರಂಭಿಸಿದರು. ಇವನು ತನ್ನ ಸದ್ಯದ ಬದುಕಿನ ಕುರಿತು ಒಂದಿಷ್ಟು ಮಾಹಿತಿ ನೀಡಿದ ನಂತರ, ಮೂವರೂ ತಮ್ಮ ಒಲವು-ನಿಲುವಿಗೆ ತಕ್ಕಂತೆ ಆಡಿದ ಒಂದೊಂದು ಮಾತೂ ಅವನಲ್ಲಿ ಖುಷಿ-ಬೇಸರ ಎರಡಕ್ಕೂ ಕಾರಣವಾಯಿತು.

Advertisement

“”ಒಬ್ಬರು ಕಾರ್‌ನಲ್ಲಿ ಬಂದಿದ್ಯಾ?” ಅಂತ ಕೇಳಿದ್ರೆ, ಮತ್ತೂಬ್ಬರು, “”ದೊಡ್‌ ಮೇಷ್ಟ್ರು” ಅಂತ ಬೆನ್ನು ತಟ್ಟಿದ್ದರು. ಇನ್ನೊಬ್ಬರು ತಮ್ಮ ಪುಟ್ಟ ಮಗನನ್ನು ತೋರಿಸಿ, “”ನಿನ್ನಂಗೆ ಆಗ್ಲಿ ಅಂತ ಆಶೀರ್ವಾದ ಮಾಡು” ಅಂದರು. ದೇವರು-ಆಶೀರ್ವಾದದ ಮಹಿಮೆ ನಂಬದ ಅವನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಹಾರೈಸಿ, ತನ್ನ ಬೈಕ್‌ ಏರಿ ಮನೆ ದಾರಿ ಹಿಡಿದ.

ಉಸಾಬರಿ
ಮನೆ ಮುಂದೆ ಫೋನ್‌ನಲ್ಲಿ ಮಾತಾಡುತ್ತ ನಿಂತಿದ್ದ ಅವನಿಗೆ, ಎದುರು ರಸ್ತೆಯಲ್ಲಿ ಮೂವರು ಯುವಕರು ಒಟ್ಟಾಗಿ ಒಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಕಾಣುತ್ತದೆ. ಏನಾಗುತ್ತಿದೆ ಎಂದು ಪರಿಶೀಲಿಸಲು ಆ ರಸ್ತೆಗೆ ಅಂಟಿಕೊಂಡಂತಿರುವ ತನ್ನ ಮನೆಯ ಕಾಂಪೌಂಡಿನ ಬಳಿ ಹೋದವನಿಗೆ ಯುವಕನೊಬ್ಬನನ್ನು ಹಿಡಿದು ಬಡಿಯುತ್ತಿರುವವರನ್ನು ಉದ್ದೇಶಿಸಿ, “”ಯಾಕ್‌ ಅವ್ನಿಗೆ ಹೊಡಿತಿದೀರ ನಿಲ್ಸಿ” ಅಂತ ಕಿರುಚದೇ ಇರಲಾಗಲಿಲ್ಲ. ಕ್ಷಣಕಾಲ ಬಡಿಯುವುದನ್ನು ನಿಲ್ಲಿಸಿ ಇವನ ಮಾತಿಗೆ ಓಗೊಟ್ಟ ಒಬ್ಬ , “”ನಿನ್ನ… ನ್‌… ನಿಂದ್‌ ಎಷ್ಟಿದ್ಯೋ ಅಷ್ಟು ನೋಡ್ಕೊಂಡ್‌ ಮುಚ್ಕೊಂಡಿರು. ಇಲ್ಲಾಂದ್ರೆ ನಿಂಗೂ ನಾಲ್ಕು ತದುಕ್ತೀವಿ” ಅಂತ ಗದರಿ ಮತ್ತೆ ತಾನು ಮಾಡುತ್ತಿದ್ದನ್ನು ಮುಂದುವರಿಸಿದ.

ಹೊರಗೆ ತನ್ನ ಮಗ ಯಾರೊಂದಿಗೋ ಜೋರಾಗಿ ಮಾತಾಡ್ತಿದಾನೆ ಅನಿಸಿ ಹೊರಬಂದ ಅವನ ತಾಯಿಗೆ, ಅಲ್ಲಿನ ಸನ್ನಿವೇಶ ನೋಡಿ ಏನು ನಡೆಯುತ್ತಿದೆ ಎನ್ನುವುದರ ಚಿತ್ರಣ ದೊರೆಯಿತು. ಅಲ್ಲೇ ಸಮೀಪದಲ್ಲೇ ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದ ಪಕ್ಕದ ಮನೆಯ ವ್ಯಕ್ತಿಗೆ, “”ಇಷ್ಟೆಲ್ಲ ನಡೀತಿದ್ರೂ ಸುಮ್ನೆ ನೋಡ್ತಾ ನಿಂತಿದ್ದೀರಲ್ಲ, ಬಿಡ್ಸೋದಲ್ವ. ನನ್‌ ಮಗಂಗೆ ಹೊಡೊಕ್‌ ಬಂದಿದ್ರೂ ನೀವೇನು ಬಿಡ್ಸೋಕ್‌ ಬರಿ¤ರ್ಲಿಲ್ವೇನೊ, ಥೂ ನಿಮ್‌ ಜನ್ಮಕ್ಕಿಷ್ಟು” ಅಂತ ಉಗಿದು ತನ್ನ ಮಗನನ್ನು ಒಳಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳತೊಡಗಿದರು.

“”ಅಲ್ಲ ಕಣೋ, ನಿಂಗ್ಯಾಕೋ ಬೇಕಿತ್ತು ಆ ಉಸಾಬರಿ. ದೊಡ್ಡವ್ರೆ ಸುಮ್ನೆ ನೋಡ್ಕೊಂಡ್‌ ನಿಂತಿರಾÌಗ ನೀನ್ಯಾಕೆ ಗಲಾಟೆ ಬಿಡ್ಸೋಕೆ ಬಾಯಾಕೆª?” ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.””ಅಲ್ಲ ಕಣಮ್ಮಾ, ನಾಳೆ ದಿನ ನಂಗೇ ಹಿಂಗೆ ಯಾರಾದ್ರೂ ರೋಡಲ್ಲಿ ಹೊಡೀತಿದ್ರೆ ಜನ ಬಿಡಿಸೆªà ಸತೂ ನೀನು ಜನ ಮಾಡಿದ್ದು ಸರಿ ಅಂತೀಯ? ಇವತ್ತು ಆ ಹುಡುಗನೆ ಆಗಿದ್ದು ನಾಳೆ ನನೂ ಆಗ್ಬಹುದಲ್ಲ?” ಅಂದ. “”ನಿಂಗೆ ಯಾವಳ್‌ ಬುದ್ಧಿ ಹೇಳ್ತಾಳೆ ಹಾಳಾಗೊØàಗು” ಅಂತ ಕೊಸರಿಕೊಂಡೇ ತಾವು ಮಾಡುತ್ತಿದ್ದ ಕೆಲಸ ಮುಂದುವರೆಸಲು ಅಡುಗೆ ಮನೆ ಸೇರಿಕೊಂಡರು ಆ ಮಹಾತಾಯಿ.

Advertisement

ವೀಡಿಯೋ
ಅವಳ ಅಪ್ಪ ಸತ್ತು ಹೆಣವಾಗಿ ಮಲಗಿದ್ದಾನೆ. ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳೂ ಜರುಗುತ್ತಿವೆ. ಅಲ್ಲಿ ನೆರೆದಿರುವ ನೆಂಟರಿಷ್ಟರು, ಊರವರು, ಹಿತೈಷಿಗಳೆಲ್ಲ ಸತ್ತಿರುವವನಿಗಿಂತ ಅವನ ಮಗಳ ಕುರಿತೇ ಹೆಚ್ಚು ಚರ್ಚಿಸತೊಡಗಿ¨ªಾರೆ. ಇನ್ನೂ ಮದುವೆಯಾಗದ ಅವಳ ಭವಿಷ್ಯದ ಕುರಿತು ಅವರೇನು ಚಿಂತಿತರಾಗಿಲ್ಲ. ಇನ್ನೇನು ಮಣ್ಣಿಗೆ ಸೇರಲಿರುವ ತನ್ನ ತಂದೆಯ ಶವದೆದುರು ಕುಳಿತು ರೋದಿಸುವ ಬದಲಿಗೆ, ಮುಖದ ಮೇಲೆ ನಿರ್ಭಾವುಕತೆ ಆವಾಹಿಸಿಕೊಂಡು ತನ್ನ ಮೊಬೈಲಿನಲ್ಲಿ ತಂದೆಯ ಬದುಕಿನ ಅಂತಿಮ ಕ್ಷಣಗಳನ್ನು ವೀಡಿಯೋ ಮಾಡತೊಡಗಿರುವುದು ಅವರೆಲ್ಲರ ಪಾಲಿಗೆ ತೀರಾ ವಿಚಿತ್ರವಾಗಿ ತೋರುತ್ತಿದೆ. ಇವಳಿಗೇನಾಗಿದೆ? ಅನ್ನುವವರಿಂದ ಹಿಡಿದು ಇಂಥ ಮಕ್ಕಳೂ ಇರ್ತಾರ? ಅನ್ನುವವರೆಗೆ ಅವಳ ಬಗೆಗೆ ಹತ್ತಾರು ಟೀಕೆ-ಟಿಪ್ಪಣಿಗಳು ವಿನಿಮಯವಾಗುತ್ತಿವೆ. ಅವಳು ಮಾತ್ರ ತನ್ನ ತಂದೆಯ ದೇಹ ಮತ್ತು ಮಾಡುತ್ತಿರುವ ವೀಡಿಯೋ ಬಗೆಗಷ್ಟೇ ತಲೆಕೆಡಿಸಿಕೊಂಡವಳಂತೆ ಚಿತ್ರೀಕರಿಸಿಕೊಳ್ಳುತ್ತಲೆ ಇದ್ದಾಳೆ; ಸಾವಿನ ಬದುಕನ್ನು… ಬದುಕಿನ ಸಾವನ್ನು!

ಬುದ್ಧಿಜೀವಿ
ಅವನು: ಬುದ್ಧಿಜೀವಿಗಳನ್ನ ಕಂಡ್ರೆ ಮೈಯೆಲ್ಲ ಉರಿಯುತ್ತೆ.
ಇವನು: ಬುದ್ಧಿ ಇರದ ಜೀವಿಗಳನ್ನ ಕಂಡ್ರೆ?
ಅವನು: ನೀನು ಸುಮ್ಮನಿರಪ್ಪ, ನನ್ನನ್ನ ಮತ್ತಷ್ಟು ಕೆಣಕಬೇಡ.
ಇವನು: ಅಭಿಮಾನ ಉಕ್ಕಿ ಹರಿಯುತ್ತಾ?
ಅವನು: ಹೌದು, ಏನೀಗ?
ಇವನು: ಏನೂ ಇಲ್ಲ, ಸುಮ್ಮನೆ ಕೇಳೆª. ನಿಂಗೆ ಬುದ್ಧಿ ಇದ್ಯೋ ಇಲ್ವೋ ಅಂತ ನೋಡೋಕೆ!
ಅವನು: ಹೌದು, ನಂಗೆ ಬುದ್ಧಿ ಇಲ್ಲ.
ಇವನು: ಬುದ್ಧಿ ಇಲ್ಲಾಂದ್ರೆ ಒಪ್ಕೊತೀನಿ. ಆದ್ರೆ ಬುದ್ಧಿ ಇರೋದೆ ಆದ್ರೆ, ನೀನೂ ಬುದ್ಧಿಜೀವಿನೇ! ಆಮೇಲೆ ಕನ್ನಡಿಯಲ್ಲಿ ನಿನ್ನನ್ನ ನೀನೇ ನೋಡ್ಕೊಂಡ್ರೂ ಮೈ ಉರಿಯುತ್ತೆ ಹುಷಾರು!

ಪಾನಿ ಪೂರಿ 
ರಸ್ತೆಯ ತಿರುವಿಗೆ ಆತುಕೊಂಡೇ ನಿಲ್ಲುವ ಪಾನಿಪೂರಿ- ಮಸಾಲೆಪೂರಿ ಗಾಡಿಯವನ ಬಳಿ ಅರ್ಧ ಪ್ಲೇಟು ಮಸಾಲೆಪೂರಿ ತಿನ್ನುತ್ತ ನಿಂತಿದ್ದೆ. ಸುತ್ತಮುತ್ತಲಿನ ಇತರ ಪಾನಿಪೂರಿ ಗಾಡಿಯವರಿಗೆ ಹೋಲಿಸಿದರೆ ಶುಚಿ-ರುಚಿ ಎರಡರಲ್ಲೂ ಒಂದು ಕೈ ಮೇಲೆ ಎಂಬಂತಿದ್ದ ಕಾರಣಕ್ಕೆ ಎಂದಿನಂತೆ ಅಂದು ಕೂಡ ತಿಂಡಿಪೋತರ ಹಿಂಡು ಅಲ್ಲಿ ಬೀಡು ಬಿಟ್ಟಿತ್ತು. ಈ ನಡುವೆ ಕಾರೊಂದು ಬಂದು ಮೊದಲೇ ನಿಂತಿದ್ದ ಕಾರೊಂದರ ಹಿಂದೆ ಸ್ಥಳಾವಕಾಶ ಮಾಡಿಕೊಂಡು ನಿಂತಿತು. ಪಾನಿಪೂರಿ-ಮಸಾಲೆಪೂರಿ ಮೆಲ್ಲಲು ಆ ಕಾರಿನಲ್ಲಿ ಒಂದು ಕುಟುಂಬವೇ ಬಂದಿತ್ತು. ಪುಟ್ಟ ಹುಡುಗನೊಬ್ಬ ಕಾರಿನಿಂದ ಹೊರ ಬಂದು ತನ್ನ ತಂದೆ-ತಾಯಿ, ಅಕ್ಕ ಹಾಗೂ ತನಗೆ ಬೇಕಿರುವುದನ್ನು ಆರ್ಡರ್‌ ಮಾಡಿದ. ತನ್ನ ಸರದಿಗಾಗಿ ಕಾಯುತ್ತ ನಿಂತ ಆ ಹುಡುಗ, ಮೊದಲೇ ಬಂದಿದ್ದ ಕಾರಿನವರು, ಹೊರ ಬಾರದೆ ಅಲ್ಲಿಗೇ ತರುವಂತೆ ಪಾನಿಪೂರಿ ಗಾಡಿಯವನಿಗೆ ಸೂಚಿಸುತ್ತಿದ್ದನ್ನು ಗಮನಿಸಿ, “”ಅಂಕಲ್‌, ಅವರಿಗೆ ಕಾರ್‌ನಿಂದ ಇಳಿದು ಬಂದು ತಿನ್ನೋಕೇನು ಪ್ರಾಬ್ಲಿಮ್‌?” ಅಂತ ಪಾನಿಪೂರಿ ಅಂಗಡಿಯವನನ್ನು ಪ್ರಶ್ನಿಸಿದ.

ನನಗೆ ಮಾತ್ರ ಈ ಹುಡುಗನನ್ನು ಕಳಿಸಿ ಕಾರಿನಲ್ಲೇ ಕುಳಿತಿರುವ ಉಳಿದ ಮೂವರನ್ನೂ ಮತ್ತೂಮ್ಮೆ ಕಣ್ಣರಳಿಸಿ ನೋಡಬೇಕೆನಿಸಿತು. ಮತ್ತೂಂದು ಕಾರಿನಲ್ಲಿ ಬಂದು ಕುಳಿತವರ ತಪ್ಪನ್ನು ಎತ್ತಿ ಹಿಡಿದು, ತನ್ನವರೂ ಅದೇ ತಪ್ಪು ಮಾಡುತ್ತಿದ್ದರೂ ತಲೆಗೆ ಹಚ್ಚಿಕೊಳ್ಳದ ಹುಡುಗನ ಉತ್ಸಾಹ ನನ್ನಲ್ಲೂ- ಪಾನಿಪೂರಿ ಹಾಕಿ ಕೊಡುವವನಲ್ಲೂ ವಿಷಾದ ಬೆರೆತ ನಗೆಯೊಂದು ಸರಿದು ಹೋಗಲು ನೆಪವಾಯಿತು.

ಪೇಸರ್‌ ಬಾಲ್‌
ಕ್ರಿಕೆಟ್‌ ಆಡಲು ಟೆನ್ನಿಸ್‌ ಬಾಲ್‌ ಖರೀದಿಗೆಂದು ಸ್ಟೇಷನರಿ ಅಂಗಡಿಗೆ ಬಂದ ಯುವಕರಿಬ್ಬರು, “”ಪೇಸರ್‌ ಬಾಲ್‌ ಕೊಡಿ” ಅಂತ ಕೇಳಿದರು. ಅಂಗಡಿಯವನು ಪೇಸರ್‌ ಬಾಲ್‌ ಇದ್ದ ಕವರ್‌ ಕೊಟ್ಟ. “”ಪಿಚ್‌ ಬೀಳ್ಸಿ ನೋಡºಹುದಾ?” ಅಂತ ಒಬ್ಬ ಕೇಳಿದ. “”ಆಯ್ತು, ಕವರ್‌ ತೆಗೆಯದೇ ಹಾಗೆ ಪಿಚ್‌ ಬೀಳ್ಸಿ ನೋಡ್ಕೊಳಿ ಬೇಕಾದ್ರೆ” ಅಂದ ಅಂಗಡಿಯವನು. 
ಇವರಿಬ್ಬರ ಪಿಚ್‌ ಟೆಸ್ಟ್‌ ಗಮನಿಸುತ್ತಿದ್ದ ಮತ್ತೂಬ್ಬ ಗ್ರಾಹಕ, “”ಎಲ್ಲಾ ಬಾಲೂ ಒಂದೇ ಥರ ಇರತ್ತಲ್ವಾ? ಹೀಗೆ ಪಿಚ್‌ ಬೀಳ್ಸಿ ನೋಡೇ ತಗೋಬೇಕಾ?” ಅಂತ ಪ್ರಶ್ನಿಸಿದ. 

“”ಹೌದು, ನಿಮ್ಗೆನ್‌ ಕಷ್ಟ!” ಅಂತ ಬಾಲ್‌ ಕೊಂಡವನು ಸಿಡಿಮಿಡಿಗೊಂಡ. ಹೊರಡುವಾಗ ಇವನಿಗೆ ಕೇಳುವಂತೆಯೇ ತನ್ನೊಂದಿಗೆ ಬಂದಿದ್ದ ಮತ್ತೂಬ್ಬನ ಬಳಿ, “”ಆ ನನ್ಮಗ ನೋಡೋಕೆ ಒಳ್ಳೆ ಗಾಂಧಿ ಪೀಸ್‌ ಇದ್ದಂಗೆ ಅವೆ°. ಪಿಚ್‌ ಬೀಳೆ ಬಾಲ್‌ ತಗೋಬೇಕಾ ಅಂತ ಬೇರೆ ಕೇಳ್ತಾನೆ. ಜೀವುನªಲ್ಲಿ ಯಾವತ್ತೂ ಕ್ರಿಕೆಟ್ಟೇ ಆಡಿಲ್ವೇನೊ ಗುಬಾಲು” ಅಂತಂದ. ಗ್ರಾಹಕನಾಗಿ ಅಲ್ಲಿ ನಿಂತು ತನಗೆ ಇವರು ಬೈಯುತ್ತಿರುವುದನ್ನು ಕೇಳಿಸಿಕೊಂಡ ಅವನು, ಪ್ಲಾಸ್ಟಿಕ್‌ ಬಾಲ್‌ನಿಂದ ಪ್ರಾರಂಭಿಸಿ ಲೆದರ್‌ ಬಾಲ್‌ವರೆಗೆ ಎಲ್ಲದರಲ್ಲೂ ತಾನು ಕ್ರಿಕೆಟ್‌ ಆಡಿರುವೆನೆಂದು ಅವರಿಗೆ ತಿಳಿಸುವ ಗೋಜಿಗೆ ಹೋಗಲಿಲ್ಲ. “ಮನಸ್ಸುಗಳನ್ನು ಪಿಚ್‌ ಬೀಳ್ಸಿ ಟೆಸ್ಟ್‌ ಮಾಡೋಕಾಗೂದಿಲ್ವಲ್ಲ’ ಎಂದು ತನ್ನಲ್ಲೆ ಗೊಣಗಿಕೊಂಡು  ಸುಮ್ಮನಾದ.

ಎಚ್‌. ಕೆ. ಶರತ್‌

Advertisement

Udayavani is now on Telegram. Click here to join our channel and stay updated with the latest news.

Next