Advertisement

‘ಮನೋಧರ್ಮದಿಂದ ಸಾಹಿತ್ಯ ಪರಿಪೂರ್ಣ’

12:44 PM Oct 29, 2017 | Team Udayavani |

ಮಂಗಳಗಂಗೋತ್ರಿ: ಸಾಹಿತ್ಯ ಎಂಬುದು ಒಂದು ಮನೋಧರ್ಮ. ಈ ಮನೋಧರ್ಮವು ಬಾಲ್ಯದಲ್ಲಿಯೇ
ನಮ್ಮೊಂದಿಗೆ ಸೇರಿಕೊಂಡರೆ ಸಾಹಿತ್ಯದ ಪರಿಪೂರ್ಣತೆಯೆಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ಕನ್ನಡದ ಪ್ರಮುಖ ಕವಿ, ಕಾದಂಬರಿಕಾರ, ಸಂಘಟಕ ಡಾ| ನಾ. ಮೊಗಸಾಲೆ ಅವರು ಅಭಿಪ್ರಾಯಪಟ್ಟರು.

Advertisement

ಅವರು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ದಿಲ್ಲಿ ಇದರ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೇಖಕರೊಂದಿಗೆ ಭೇಟಿ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅರಿವಿನೊಳಗಿನ ಮರವನ್ನು ಪೋಷಿಸಿ ಮುನ್ನಡೆದರೆ ಯಾವುದೇ ಕ್ಷೇತ್ರದಲ್ಲಾದರೂ ಪರಿಪೂರ್ಣತೆಯನ್ನು
ಕಂಡುಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ತರಗತಿಯ ಪಠ್ಯಗಳಿಗೆ ಮಾತ್ರ ಸೀಮಿತವಾಗಿರದೆ ಸಾಹಿತ್ಯ ಸಹಿತ
ಎಲ್ಲ ವಿಚಾರಗಳನ್ನೂ ತೆರೆದ ಮನಸ್ಸಿನಿಂದ ಮನನ ಮಾಡಿಕೊಂಡು ತಮ್ಮ ಅರಿವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾವು ಎಂಬುವ ಬದಲು ನಾನು ಎಂಬುದು ನಮ್ಮ ಎದುರು ಬಂದು ಇಂದು ಅದೆಷ್ಟೋ ತಲ್ಲಣಗಳನ್ನು ಸೃಷ್ಟಿಸುತ್ತಿದೆ.
ಇಂತಹ ಮನೋಭಾವನೆಯಿಂದ ಇಂದು ರಾಜಕೀಯ ಸಹಿತ ಎಲ್ಲ ರಂಗಗಳೂ ಕುಲಗೆಟ್ಟು ಹೋಗುತ್ತಿವೆ. ಅದೇ ರೀತಿಯಲ್ಲಿ ಪ್ರಶಸ್ತಿಗಳು ಕೂಡ ಮೌಲ್ಯಗಳನ್ನು ಕಳೆದುಕೊಂಡು ಕುಲಗೆಡುತ್ತಿವೆ. ಯಾವತ್ತು ನಾನು ಎಂಬ ಮನೋಭಾವ ಜಗತ್ತಿನಲ್ಲಿ ಮರೆಯಾಗುತ್ತದೋ ಆಗ ಉತ್ತಮ ಸಮಾಜವನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಮೊಗಸಾಲೆ ಅವರು ಸಂವಾದ ಕಾರ್ಯಕ್ರಮ ತಮ್ಮ ಬಾಲ್ಯ, ಬಡತನ ಹಾಗೂ ತಾವು ಜೀವನದಲ್ಲಿ ಸಾಗಿ ಬಂದ ಪಯಣವನ್ನು ವಿವರಿಸುತ್ತಾ, ‘ನಾನು ಬ್ರಾಹ್ಮಣನಾಗಿದ್ದರೂ ಬಾಲ್ಯದಲ್ಲಿ ಅದೆಷ್ಟೋ ಶೋಷಣೆಗಳನ್ನು ಎದುರಿಸುತ್ತಾ ಬಂದಿದ್ದೆ. ಆದರೆ ಆಗಿನ ಕಾಲಪರಿಸ್ಥಿತಿಯಲ್ಲಿ ದಲಿತರ, ಹಿಂದುಳಿದ ವರ್ಗದವರ ಸ್ಥಿತಿ ಹೇಗಿರಬಹುದು ಎಂದು ನೀವೇ ಊಹಿಸಿಕೊಳ್ಳಿ. ಬಾಲ್ಯದಲ್ಲಿಯೇ ಕಂಡುಕೊಂಡ ಇಂತಹ ಮನೋಭಾವನೆಯಿಂದ ನನ್ನಲ್ಲಿ ಪ್ರಗತಿಪರ ಚಿಂತನೆಗಳು ಬೆಳೆಯುವಂತೆ ಮಾಡಿತು. ಇಂದಿಗೂ ನನ್ನ ಮನೆಗೆ ನಾನು ಯಾವ ಜಾತಿಯನ್ನೂ ನೋಡದೆ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತೇನೆ’ ಎಂದರು.

Advertisement

ಇದಕ್ಕಿಂತ ಮುನ್ನ ನಡೆದ ಮೊಗಸಾಲೆ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಕ್ಷ ಪ್ರೊ| ಸೋಮಣ್ಣ
ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಗಸಾಲೆ ಅವರ ಸಣ್ಣಕತೆಗಳು ಎಂಬ ವಿಷಯದಲ್ಲಿ ವಿಶ್ವನಾಥ ಎನ್‌. ನೇರಳೆಕಟ್ಟೆ, ಮೊಗಸಾಲೆಯವರ ಸಂಘಟನೆಯ ಕುರಿತು ಡಾ| ಮಾಧವ ಮೂಡುಕೊಣಾಜೆ ಅವರು ಮಾತನಾಡಿದರು. ಬಳಿಕ ಮೊಗಸಾಲೆಯವರ ಕವಿತೆಗಳ ಪ್ರಸ್ತುತಿಯನ್ನು ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಮಾಡಿದರು ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ಪ್ರಾದೇಶಿಕ ಕಾರ್ಯದರ್ಶಿ ಡಾ| ಎನ್‌.ಕೆ. ಮಹಾಲಿಂಗೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಶೋಧನ ವಿದ್ಯಾರ್ಥಿ ಶಿವರಾಜ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next