Advertisement

ಸಾಹಿತ್ಯದ ಉತ್ಸಾಹ ಒಲುಮೆ ಬದುಕಿನ ಚಿಲುಮೆ: ಶಿವ ಪಡ್ರೆ

12:49 AM Nov 08, 2019 | sudhir |

ಪೆರ್ಲ: ಸಾಹಿತ್ಯದ ಉತ್ಸಾಹದ ಒಲುಮೆಯು ಬದುಕಿನ ಚಿಲುಮೆಯಾಗಿದೆ. ಸಮತೂಲಿತ ಮನಃಸ್ಥಿತಿಯನ್ನು ಕಾಪಿಡುವಲ್ಲಿ ಸಾಹಿತ್ಯ ಕೃತಿಗಳ ಓದು-ಬರಹಗಳಲ್ಲಿ ತೊಡಗಿಸಿ ಕೊಳ್ಳುವಿಕೆ ಬದುಕಿನ ಸಾರ್ಥಕತೆಯಾಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವ ಪಡ್ರೆ (ವಾಸುದೇವ ಭಟ್‌) ಅವರು ತಿಳಿಸಿದರು.

Advertisement

ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಇದರ ನೇತೃತ್ವದಲ್ಲಿ ಪೆರ್ಲದ ಹಿರಿಯ ಸಾಹಿತಿ ಹರೀಶ್‌ ಪೆರ್ಲ ಅವರ ಗೃಹ ಗುಲಾಬಿಯಲ್ಲಿ ಆಯೋಜಿಸಲಾಗಿದ್ದ ದೀಪಾವಳಿ- ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೋರ್ವ ವ್ಯಕ್ತಿಯ ಅಂತರಾಳದಲ್ಲೂ ಅನುಭವಗಳನ್ನು ಪ್ರತಿಬಿಂಬಿಸುವ ಭಾವನೆಗಳ ಸಾಗರ ಮೊರೆಯುತ್ತಿರುತ್ತದೆ. ಅಂತಹ ಅನುಭವ, ದೃಷ್ಟಿಗಳನ್ನು ಸಮಾಜದೊಂದಿಗೆ ಸಂವಹಿಸುವ ಪ್ರಕ್ರಿಯೆಯಾದ ಸಾಹಿತ್ಯ ಸುದೀರ್ಘ‌ ಪರಂಪರೆ ಯೊಂದಿಗೆ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದೆ.

ಆದರೆ ಹೊಸ ತಲೆಮಾರು ಆಧುನಿಕತೆಯ ವೇಗದಲ್ಲಿ ಸಾಹಿತ್ಯ ಸಂವಹನದಿಂದ ದೂರ ಸರಿಯುತ್ತಿರುವುದು ವ್ಯಾಪಕ ಗೊಂದಲ ಸೃಷ್ಟಿಗೆ ಕಾರಣವಾಗುವ ಭೀತಿಯಿದ್ದು, ಸಾಹಿತ್ಯದ ಒಲುಮೆಗೆ ಪ್ರೇರೇಪಿಸುವ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ಆಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹರೀಶ್‌ ಪೆರ್ಲ ಅವರು ಮಾತನಾಡಿ ಕಾಸರ ಗೋಡಿನ ಕನ್ನಡ ಭಾಷೆ, ಸಾಂವಿಧಾನಿಕ ಹಕ್ಕಿನ ಮೇಲಾಗುತ್ತಿರುವ ಆಘಾತಗಳನ್ನು ಜನಸಾಮಾನ್ಯರಿಗೆ ತಲಪಿಸುವಲ್ಲಿ ಸಾಹಿತಿಗಳು ಕ್ರಿಯಾಶೀಲರಾಗಿ ಅಕ್ಷರ ಕ್ರಾಂತಿಯನ್ನು ಸೃಷ್ಟಿಸಬೇಕು.

ಸಾಮೂಹಿಕ ಒಗ್ಗಟ್ಟು, ಸರಿ-ತಪ್ಪುಗಳ ಅರಿವು ಮೂಡಿಸುವಲ್ಲಿ ಪರಿಣಾಮಕಾರಿಯಾದ ಬರಹಗಳು ಸೃಜನಾತ್ಮಕವಾಗಿ ಯುವ ಸಾಹಿತಿ ಗಳಿಂದ ಮೂಡಿಬರಲಿ ಎಂದರು. ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನಿರಂತರ ಕಾರ್ಯಕ್ರಮಗಳು ಗಡಿನಾಡಿನ ಕನ್ನಡ ಭಾಷೆ, ಸಂಸ್ಕೃತಿಗಳ ಅಸ್ಮಿತೆಯ ಕಾಪಿಡುವಲ್ಲಿ ದೊಡ್ಡ ಭರವಸೆಯ ಶಕ್ತಿಯಾಗಿ ಸ್ತು¤ತ್ಯರ್ಹವಾದ ಕೈಂಕರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

Advertisement

ಹಿರಿಯ ವ್ಯಂಗ್ಯಚಿತ್ರ ಕಲಾವಿದ-ಚುಟುಕು ಸಾಹಿತಿ ವೆಂಕಟ್‌ ಭಟ್‌ ಎಡನೀರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಚುರುಕು ಮುಟ್ಟಿಸುವ ಬರಹಗಳು ಜನರನ್ನು ಎಚ್ಚರಿಸುವ, ಹೊಸ ಚಿಂತನೆಗಳಿಗೆ ತೊಡಗಿಸಿ ಕೊಳ್ಳುವ ಶಕ್ತಿ ಸಂಪನ್ನತೆ ಹೊಂದಿದ್ದು, ಸಮಕಾಲೀನ ಬರಹಗಳಿಗೆ ಬೆಂಬಲ ವ್ಯಕ್ತವಾಗುತ್ತದೆ ಎಂದರು.

ಸವಿ ಸೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಸ್‌ ಪೆರ್ಲ ಉಪಸ್ಥಿತರಿದ್ದು, ವೇದಿಕೆಯ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಯುವ ಸಾಹಿತಿಗಳನ್ನು, ಕಲಾವಿದರನ್ನು ಒಕ್ಕೂಟದಲ್ಲಿ ಸಂಘಟಿಸುವ ಮೂಲಕ ಸಾಮಾಜಿಕ ನಿರಂತರತೆಯಲ್ಲಿ ತೊಡಗಿಸಿಕೊಳ್ಳುವಿಕೆಗೆ ವೇದಿಕೆ ಬದ್ಧªವಾಗಿದೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ, ಪತ್ರಕರ್ತ ಪುರುಷೋತ್ತಮ ಭಟ್‌ ಕೆ. – ಅಕ್ಷತಾ ದಂಪತಿ ಪುತ್ರ ಪೃಥ್ವಿನ್‌ ಕೃಷ್ಣನ ಆರನೇ ಜನ್ಮ ದಿನವನ್ನು ಲಕ್ಷ್ಮಣ ಫಲದ ಸಸಿ ವಿತರಣೆಯ ಮೂಲಕ ಆಚರಿಸಲಾಯಿತು. ಪುತ್ರನ ಸಹಿತ ದಂಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರಿಗೆ ಸಸಿ ಹಸ್ತಾಂತರಿಸಿ ಚಾಲನೆ ನೀಡಿದರು.

ಭಾಗವಹಿಸಿದವರೆಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಪ್ರಮೀಳಾ ಚುಳ್ಳಿಕ್ಕಾನ, ರಿತೇಶ್‌ ಕಿರಣ್‌ ಕಾಟುಕುಕ್ಕೆ, ನಿರ್ಮಲಾ ಎಸ್‌. ಖಂಡಿಗೆ, ಗೋಪಾಲಕೃಷ್ಣ ಭಟ್‌, ಚೇತನಾ ಕುಂಬಳೆ, ಆನಂದ ರೈ ಅಡ್ಕಸ್ಥಳ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ಪುರುಷೋತ್ತಮ ಭಟ್‌ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ಎಸ್‌. ಖಂಡಿಗೆ ವಂದಿಸಿದರು.

ಸಾಮಾಜಿಕ ಕಳಕಳಿಗೆ ಮಾದರಿ
ಸಾಮಾಜಿಕ ಕಾಳಜಿಯ ಆಚರಣೆಗಳಿಗೆ ಇದೊಂದು ಮಾದರಿಯಾಗಿದೆ. ವಾತಾವರಣದ ಸಮತೋಲನವನ್ನು ಕಾಪಿಡುವ ನಿಟ್ಟಿನಲ್ಲಿ ಚರ್ಚೆಗಳು-ಕಾರ್ಯಯೋಜನೆಗಳು ಜಾರಿಯಲ್ಲಿರುವ ಇಂದು ಮಗುವಿನ ಜನ್ಮ ದಿನಾಚರಣೆಯನ್ನು ಪ್ರಕೃತಿಯೊಂದಿಗೆ ಸ್ಪಂದಿಸುವ ರೂಪದಲ್ಲಿ ಆಚರಿಸಿರುವುದು ಪತ್ರಕರ್ತ ಮತ್ತು ಕವಿ ಮನಸ್ಸಿನ ಬದ್ಧªತೆಯ ಸಂಕೇತ.
-ರಾಧಾಕೃಷ್ಣ ಕೆ. ಉಳಿಯತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next