Advertisement

ಧರ್ಮ-ಧರ್ಮಗಳಲ್ಲಿ ಸಾಮರಸ್ಯ ಸಾಧಿಸಿದ ಸಂತ

12:16 PM Dec 30, 2019 | Team Udayavani |

ಬೆಳಗಾವಿ: ಉಡುಪಿಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ನಮ್ಮ ರಾಷ್ಟ್ರಕಂಡ ಅಪರೂಪದ ಸಂತರಾಗಿದ್ದರು. ಇಡೀ ರಾಷ್ಟ್ರದ ಜನರ ಮೇಲೆ ಅವರಷ್ಟು ಪ್ರಭಾವವನ್ನು ಬೀರಿದ ಸಂತರು ಬಹಳ ವಿರಳ. ಸಂಪ್ರದಾಯಬದ್ಧ ಮಠಾಧೀಶರಾಗಿದ್ದೂ ಅವರು ಪ್ರಗತಿಪರ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ಗದುಗಿನ ಜಗದ್ಗುರು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.

Advertisement

ಸಂಪ್ರದಾಯಗಳನ್ನು ಮೀರಿ ಎಲ್ಲ ಸಮುದಾಯದ ಮಠಗಳಿಗೆ ಆಗಮಿಸಿ ಧರ್ಮ-ಧರ್ಮಗಳಲ್ಲಿ ಸಾಮರಸ್ಯವನ್ನು ಸಾಧಿಸುವ ನಿರಂತರ ಪ್ರಯತ್ನ ಅವರದಾಗಿತ್ತು. ರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆಯ ವಿಷಯದಲ್ಲಿ ಅವರ ಕಾಳಜಿ ಅನನ್ಯ. ಹಾಗಾಗಿ ರಾಷ್ಟ್ರಸಂತರೆಂಬ ಅಭಿದಾನಕ್ಕೆ ಅವರು ಅನ್ವರ್ಥಕವಾಗಿದ್ದರು. ಇಂತಹ ಮಹಾನ್‌ ಸಂತರನ್ನು ಕಳೆದುಕೊಂಡ ನಮ್ಮ ರಾಷ್ಟ್ರವು ಬಡವಾದಂತಾಗಿದೆ. ಅವರ ಅಗಲುವಿಕೆಯ ನೋವು ನಮ್ಮನ್ನು ನಿರಂತರ ಬಾಧಿಸದೇ ಇರದು ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ್ವರ ತೀರ್ಥರ ಸಂಬಂಧವನ್ನು ಮೆಲುಕು ಹಾಕಿದ ಶ್ರೀಗಳು ಜಾತಿ ಮತ ಪಂಥಗಳ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ, ಸಮರಸಗೊಳಿಸುವ ಅವರ ಔದಾರ್ಯ ಇತರ ಮಠಾಧೀಶರಿಗೆ ಆದರ್ಶ ಪ್ರಾಯವಾದುದು ಎಂದಿದ್ದಾರೆ. ಇತರ ಸಂಪ್ರದಾಯಬದ್ಧ ಮಠಾಧೀಶರ ವಿರೋಧದ ಮಧ್ಯೆಯೂ ಅವರು ತಮ್ಮ ಸಂಪ್ರದಾಯವನ್ನು ಬದಿಗಿರಿಸಿ, ಪ್ರಪ್ರಥಮವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಮಠ ಮಾಡುತ್ತಿರುವ ಸೇವಾ ಕಾರ್ಯಗಳನ್ನು ಮೆಚ್ಚಿಕೊಂಡು ಪ್ರಶಂಸಿಸಿರುವುದು ಅವರು ಸದಾ ಒಳ್ಳೆಯದನ್ನು ಗೌರವಿಸುತ್ತಿದ್ದರು ಎಂಬುದಕ್ಕೆ ನಿದರ್ಶನವಾಗಿದೆ.

ಲಿಂಗಾಯತ ಮಠಗಳು ಮತ್ತು ಮಠಾಧೀಶರು ಬಸವಾದಿ ಶರಣರ ಕಾಯಕ-ದಾಸೋಹ-ಸಮಾನತೆಯ ತಣ್ತೀಗಳನ್ನು ಅಳವಡಿಸಿಕೊಂಡು ತಮ್ಮ ತಮ್ಮ ಮಠಗಳಲ್ಲಿ ಜಾತಿ ಮತ ಪಂಥ ಪ್ರದೇಶಗಳ ಭೇದವಿಲ್ಲದೆ ಬಡವಿದ್ಯಾರ್ಥಿಗಳಿಗೆ ಅನ್ನ-ಆಶ್ರಯ ನೀಡಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸುತ್ತಿರುವುದನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು ಎಂದು ಗದಗದ ಶ್ರೀಗಳು ಸ್ಮರಿಸಿದ್ದಾರೆ. ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರುವ ಈ ಕ್ರಮದಿಂದಾಗಿ ಲಿಂಗಾಯತ ಮಠಗಳು ದೇಶದ ಎಲ್ಲ ಮಠ-ಮಠಾಧೀಶರಿಗೆ ಮಾದರಿಯಾಗಿವೆ ಎಂದು ಅಭಿಮಾನದಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು.

ಹಿಂದೂ ಧರ್ಮದ ವರ್ಣಾಶ್ರಮ ಭೇದಗಳ ಮಧ್ಯೆಯೂ ಉಡುಪಿಯ ಪೇಜಾವರ ಮಠಾಧೀಶರು ದೇಶದ ಜನರ ಐಕ್ಯತೆ ಹಾಗೂ ಸಮಗ್ರತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ನಿರಂತರ ಶ್ರಮಿಸಿರುವುದನ್ನು ಈ ರಾಷ್ಟ್ರವು ಎಂದೂ ಮರೆಯಲು ಸಾಧ್ಯವಿಲ್ಲ. ಧರ್ಮದ ಸಂವಿಧಾನದ ಜೊತೆಗೆ ರಾಷ್ಟ್ರದ ಸಂವಿಧಾನವನ್ನು ಗೌರವಿಸಿ ರಾಷ್ಟ್ರ ದ ಜನತೆಗೆ ಉದಾತ್ತ ಸಂದೇಶ ನೀಡಿದ ಮಹಾನ್‌ ಸಂತರಾಗಿದ್ದರು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

ಚಂದ್ರಶೇಖರ ಸ್ವಾಮೀಜಿ: ಅಷ್ಟ ಮಠಗಳಲ್ಲಿ ಒಂದಾದ ಉಡುಪಿಯ ಪೇಜಾವರ ಮಠದ 32ನೇ ಯತಿಯಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿಯ ಅಗಲಿಕೆಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ. ಅನುಕರಣಿಯ ಸಂತ, ಕ್ರಾಂತಿಕಾರಿ ಯತಿಯಾಗಿದ್ದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಕೇವಲ ಬ್ರಾಹ್ಮಣ ಸಮುದಾಯದ ಸ್ವಾಮೀಜಿಯಾಗದೆ ಇಡೀ ವಿಶ್ವದ ಸಮುದಾಯ ಹಾಗೂ ವೀರಶೈವದವರೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದಲ್ಲದೆ ಎಲ್ಲ ಸಮುದಾಯವನ್ನು ಪ್ರೀತಿಯಿಂದ ಕಾಣುವ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಅವರ ಅಗಲಿಕೆಯಿಂದ ಕೋಟ್ಯಂತರ ಭಕ್ತರಲ್ಲಿ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ. ಸಾಮರಸ್ಯ ಸಹಬಾಳ್ವೆಯ ಪ್ರತೀಕವಾಗಿದ್ದ ಅವರು, ದೇಶ ಕಂಡ ಅಪರೂಪದ ಸಂತ.

ತಮ್ಮದೆಯಾದ ವಿಚಾರವನ್ನು ನಾಡಿನ ಜನತೆಗೆ ತಿಳಿಸುವ ಮೂಲಕ ಕೃಷ್ಣನ ಪ್ರೀತಿಗೆ ಪಾತ್ರರಾಗಿದ್ದರು. ಸಾಕಷ್ಟು ವಿದ್ಯಾರ್ಥಿಗಳಿಗೆ ತಮ್ಮ ಅಪಾರವಾದ ಜ್ಞಾನ ಕೊಟ್ಟ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಹುಕ್ಕೇರಿ ಶ್ರೀಗಳು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next