Advertisement

ಲೈಫ್ ಈಸ್‌ ಬ್ಯೂಟಿಫ‌ುಲ್‌ ಈ ಜೀವನ ಬೇವು-ಬೆಲ್ಲ

02:24 PM Sep 16, 2017 | Team Udayavani |

ಸುಮಾರು 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರುವ ನಿವೇದಿತಾ ಈಗ ಬೇರೆ ಬೇರೆ ಪಾತ್ರಗಳ ಮೂಲಕ ಸುದ್ದಿ ಮಾಡುತ್ತಿದ್ದಾರೆ. ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾಗಳಲ್ಲಿ ಹೆಚ್ಚಾಗಿ ತನ್ನನ್ನು ತೊಡಗಿಸಿಕೊಳ್ಳುತ್ತಿರುವ ನಿವೇದಿತಾ ಸಿನಿಮಾವನ್ನು ನೋಡುವ ದೃಷ್ಟಿಕೋನವನ್ನೂ ಬದಲಿಸಿಕೊಂಡಿದ್ದಾರೆ. ತನ್ನ ಕೆರಿಯರ್‌ ಬಗ್ಗೆ ನಿವೇದಿತಾ ಇಲ್ಲಿ ಮಾತನಾಡಿದ್ದಾರೆ …

Advertisement

“ಜೀವನ ಅನ್ನೋದು ಬಿಸಿಬೇಳೆ ಬಾತ್‌ ತರಹ. ಎಲ್ಲವೂ ಸರಿಯಾಗಿ ಮಿಶ್ರಣವಾದರೆ ಮಾತ್ರ ಚೆನ್ನಾಗಿರುತ್ತದೆ …’
– ಹೇಗಿದೆ ನಿಮ್ಮ ಕೆರಿಯರ್‌ ಎಂಬ ಪ್ರಶ್ನೆಗೆ ನಿವೇದಿತಾ ಜೀವನವನ್ನು ಬಿಸಿ ಬೇಳೆಬಾತ್‌ಗೆ ಹೋಲಿಸಿ ಮಾತನಾಡಲಾರಂಭಿಸಿದರು. ನಿವೇದಿತಾ ಸಿನಿಮಾ ಕೆರಿಯರ್‌ ಹಾಗೂ ಜೀವನವನ್ನು ಬೇರೆಯಾಗಿ ನೋಡುವುದಿಲ್ಲವಂತೆ. ಸಿನಿ ಕೆರಿಯರ್‌ ಕೂಡಾ ಜೀವನದ ಒಂದು ಭಾಗವಾಗಿರುವುದರಿಂದ ನಿವೇದಿತಾಗೆ ತನ್ನ ಕೆರಿಯರ್‌ ಚೆನ್ನಾಗಿ ಸಾಗಿದೆ ಎಂಬ ಭಾವನೆ ಇದೆ. ಹಾಗೆ ನೋಡಿದರೆ ನಿವೇದಿತಾ ಚಿತ್ರರಂಗಕ್ಕೆ ಬಂದು 10 ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ನಿವೇದಿತಾ ಸಾಕಷ್ಟು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದಾರೆ. ಕೆಲವು ಪಾತ್ರಗಳು ಹೆಸರು, ತೃಪ್ತಿ ಕೊಟ್ಟರೆ ಇನ್ನು ಕೆಲವು ಹೇಳಹೆಸರಿಲ್ಲದಂತೆ ಹೋಗಿವೆ. “ನನಗೆ ನನ್ನ ಒಟ್ಟು ಕೆರಿಯರ್‌ ಬಗ್ಗೆ ತೃಪ್ತಿ ಇದೆ. ನಾನು ಕೆರಿಯರ್‌ ಮತ್ತು ಜೀವನವನ್ನು ಬೇರೆಯಾಗಿ ನೋಡುವುದಿಲ್ಲ. ಸಿನಿಮಾ ಕೂಡಾ ಜೀವನದ ಒಂದು ಭಾಗ. ಮಾಡಿರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ ನನಗೆ ತೃಪ್ತಿ ಇದೆ. ವೈಯಕ್ತಿಕವಾಗಿ ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ನಾನು ಇನ್ನೂ ಸಾಧಿಸುವುದು ತುಂಬಾ ಇದೆ. ಆ ವಿಷಯದಲ್ಲಿ ನನಗೆ ತೃಪ್ತಿ ಇಲ್ಲ. ಒಟ್ಟಾರೆಯಾಗಿ ಬೇವು-ಬೆಲ್ಲದ ತರಹ ಜೀವನ ಸಾಗಿದೆ. ಇಲ್ಲಿ ಏರಿಳಿತಗಳು ಸಹಜ’ ಎನ್ನುತ್ತಾರೆ ನಿವೇದಿತಾ.

ಹಾಗೆ ನೋಡಿದರೆ ನಿವೇದಿತಾ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ಮಾಡಿದ್ದು ಕಡಿಮೆಯೇ. ಅದರಲ್ಲೂ ಕಮರ್ಷಿಯಲ್‌ ಸಿನಿಮಾಗಳಿಂದ ದೂರ ಇದ್ದ ನಿವೇದಿತಾ, ಹೊಸಬರ ಹೊಸ ಪ್ರಯತ್ನಗಳಿಗೆ, ಆಫ್ಬೀಟ್‌ ಎನ್ನುವಂತಹ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟರು. ಆ ತರಹದ ಒಂದು ಪ್ರಯತ್ನದಲ್ಲಿ ನಿವೇದಿತಾಗೆ ಪ್ರಶಸ್ತಿ ಕೂಡಾ ಬರುತ್ತದೆ. ಯಾಕೆ ಈ ತರಹದ ಒಂದು ನಿರ್ಧಾರ ಎಂಬ ಪ್ರಶ್ನೆ ಬರುತ್ತದೆ. ನಿವೇದಿತಾ ಅದಕ್ಕೂ ಉತ್ತರಿಸುತ್ತಾರೆ. “ನಾನು ಯಾವುದನ್ನೂ ತುಂಬಾ ಆಲೋಚಿಸಿ, ಜಡ್ಜ್ ಮಾಡಿ ಮಾಡೋದಿಲ್ಲ. ಕಥೆ, ಪಾತ್ರ ಕೇಳುತ್ತೇನೆ. ಅದು ನನಗೆ ಇಷ್ಟವಾದರೆ, ಕೇಳಿಸಿಕೊಂಡು ಹೋದರೆ ಒಪ್ಪುತ್ತೇನೆ. ಅದಕ್ಕಿಂತ ಹೆಚ್ಚಾಗಿ ಕಮರ್ಷಿಯಲ್‌, ಕಲಾತ್ಮಕ, ಆಫ್ಬೀಟ್‌ … ಎಂಬುದನ್ನು ನಾನು ನಂಬೋದಿಲ್ಲ. ಒಬ್ಬ ಕಥೆಗಾರ ತನ್ನ ಕಥೆಯನ್ನು ಹೇಗೆ ಮತ್ತು ಯಾವ ರೂಪದಲ್ಲಿ ಹೇಳಬೇಕೆಂದು ನಿರ್ಧರಿಸಿ ಆ ಮಾರ್ಗದಲ್ಲಿ ಸಾಗುತ್ತಾನೆ. ಆ ಕಥೆಗೆ ಬೇಕಾದಂತಹ ಅಗತ್ಯಗಳನ್ನು ಆತ ಪೂರೈಸುತ್ತಾನೆ. ಕಥೆ ಬಯಸದೇ ಇದ್ದಾಗಲೂ ಅನಗತ್ಯವಾಗಿ ಏನೇನೋ ಸೇರಿಸಿದಾಗ ಕಥೆಯ ಸಾರ ಹೋಗುತ್ತದೆ. ಹಾಗಾಗಿ ಇತ್ತೀಚಿನ ಬಹುತೇಕ ನಿರ್ದೇಶಕರು ಕಥೆಯ ಆಶಯ ಬಿಟ್ಟು ಹೋಗುವುದಿಲ್ಲ. ಹೊಸ ರೀತಿಯ ಪ್ರಯೋಗಗಳನ್ನು ಕೂಡಾ ಮಾಡುತ್ತಿದ್ದಾರೆ. ಅದನ್ನು ಕಲಾತ್ಮಕ ಎನ್ನುವುದಕ್ಕಿಂತ ನಿರ್ದೇಶಕ ತನ್ನ ಕಥೆ ಹೇಳಲು ಬಳಸಿಕೊಂಡ ಮಾರ್ಗ ಎನ್ನಲು ಇಚ್ಛಿಸುತ್ತೇನೆ. ಕಾಲ ಬದಲಾಗುತ್ತಿದೆ, ಹೊಸ ಟ್ರೆಂಡ್‌ಗೆ ಪ್ರೇಕ್ಷಕರು ಕೂಡಾ ಅಪ್‌ಡೇಟ್‌ ಆಗುತ್ತಿದ್ದಾರೆ. ಅಬ್ಬರಕ್ಕಿಂತ ಜನ ನೈಜತೆ ಬಯಸುತ್ತಿದ್ದಾರೆ’ ಎನ್ನುವ ಮೂಲಕ ಹೊಸ ಬಗೆಯ ಸಿನಿಮಾಗಳಿಗೆ ತೆರೆದುಕೊಳ್ಳುತ್ತಿರುವ ಬಗ್ಗೆ ನಿವೇದಿತಾ ಒಪ್ಪಿಕೊಳ್ಳುತ್ತಿದ್ದಾರೆ. 

ಸಿನಿಮಾ ಮಾಡೋ ಆಸೆ ಇಲ್ಲ
ನಿವೇದಿತಾ ಪ್ರತಿಭಾವಂತ ನಟಿ ಎಂದು ಈಗಾಗಲೇ ಸಾಬೀತಾಗಿದೆ. ಬೇರೆ ಬೇರೆ ಪಾತ್ರಗಳ ಮೂಲಕ ನಿವೇದಿತಾ ಅದನ್ನು ಸಾಬೀತು ಮಾಡಿದ್ದಾರೆ ಕೂಡಾ. ಆದರೆ ಇತ್ತೀಚೆಗೆ ಹೆಚ್ಚು ಸುದ್ದಿಯಾಗದೇ, ಸಿನಿಮಾಗಳನ್ನು ಒಪ್ಪಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದಾರೆ. ನಿವೇದಿತಾಗೆ ಈ ಬಗ್ಗೆ ಬೇಸರವಿಲ್ಲ, ಏಕೆಂದರೆ ಅದು ಅವರ ವೈಯಕ್ತಿಕ ಆಯ್ಕೆ. “ಮೊದಲೇ ಹೇಳಿದಂತೆ ನಾನು ಯಾವುದನ್ನೂ ಉದ್ದೇಶಪೂರ್ವಕವಾಗಿ ಮಾಡುತ್ತಿಲ್ಲ. ನನಗೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನನಗೆ ಯಾವಾಗಲೂ ಚಿತ್ರ ಮಾಡಿಕೊಂಡಿರಬೇಕು, ಜನ ನನ್ನನ್ನು ನೋಡಿಕೊಂಡಿರಬೇಕೆಂಬ ಆಸೆ ಇಲ್ಲ. ಜೀವನ ಸ್ವಾರಸ್ಯಕರವಾಗಿದೆ. ಖುಷಿಯಾಗಿದ್ದೇನೆ. ನಾನು ಸುಖಾಸುಮ್ಮನೆ ಸುದ್ದಿಯಲ್ಲಿರಲು ಇಷ್ಟಪಡುವವಳಲ್ಲ. ನನ್ನ ಸಿನಿಮಾ ಬರುವಾಗ ಮಾತ್ರ ಅದನ್ನು ಜನರಿಗೆ ಮುಟ್ಟಿಸಲು ನಾನು ಪ್ರಮೋಶನ್‌ಗೆ ಬರುತ್ತೇನೆ’ ಎನ್ನುವ ಮೂಲಕ ತಾನು ಚೂಸಿಯಾಗಿರುವ  ಬಗ್ಗೆ ಹೇಳುತ್ತಾರೆ ನಿವೇದಿತಾ. ನಿವೇದಿತಾಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ನಿವೇದಿತಾ ಮಾತ್ರ ತೀರಾ ಇಷ್ಟವಾದ, ತನ್ನನ್ನು ಸೆಳೆದ ಸಿನಿಮಾಗಳನ್ನಷ್ಟೇ ಮಾಡುತ್ತಿದ್ದಾರೆ. ನಿವೇದಿತಾ ಒಂದು ಸಿನಿಮಾ ಒಪ್ಪಿಕೊಳ್ಳುವ ಮುನ್ನ, ಕಥೆ ಜೊತೆಗೆ ಇಡೀ ತಂಡದ ಬಗ್ಗೆ ಗಮನಹರಿಸುತ್ತಾರಂತೆ.

ಶುದ್ಧಿಯ ಪತ್ರಕರ್ತೆ
ನಿವೇದಿತಾ “ಶುದ್ಧಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇಲ್ಲಿ ಜ್ಯೋತಿ ಎಂಬ ದಿಟ್ಟ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡ ನಿವೇದಿತಾಗೆ ಆ ಸಿನಿಮಾ ಹೊಸ ಅನುಭವ ಕೊಟ್ಟಿದೆಯಂತೆ. ಏಕೆಂದರೆ ನಿವೇದಿತಾ ಬಯಸಿದಂತೆ ಇದು ಬೇರೆ ತರಹದ ಸಿನಿಮಾ. ಹೊಸಬರ ತಂಡ ಒಂದು ಕಥೆಯನ್ನು ಹೊಸ ಬಗೆಯಲ್ಲಿ ಹೇಳಹೊರಟ ಸಿನಿಮಾವಿದು. ಮುಖ್ಯವಾಗಿ ಇದು ಮಹಿಳಾ ಪ್ರಧಾನ ಚಿತ್ರ. ಕಥೆ ಮೂರು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ವಿದೇಶಿ ಮಹಿಳೆ ತನಗಾದ ಅನ್ಯಾಯಕ್ಕೆ ಸೇಡು ತೀರಿಸೋದು ಒಂದಾದರೆ, ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಗುಂಪು ಮತ್ತೂಂದು ಕಡೆ. ಕ್ರೈಂ ಬ್ರಾಂಚ್‌ನ ತನಿಖೆ ಚಿತ್ರದ ಮತ್ತೂಂದು ಟ್ರ್ಯಾಕ್‌. ಈ ಮೂರು ಟ್ರ್ಯಾಕ್‌ಗಳಿಗೂ ಒಂದಕ್ಕೊಂದು ಸಂಬಂಧವಿದೆ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಆ ಎಲ್ಲಾ ಟ್ರ್ಯಾಕ್‌ಗಳು ಒಂದಾಗುತ್ತವೆಯಂತೆ. ಈ ತರಹದ ಒಂದು ಹೊಸ ಪ್ರಯತ್ನದ ಜೊತೆ ನಿವೇದಿತಾ ಕೈ ಜೋಡಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಗೆ ತಯಾರಿ ನಡೆದಿದೆ. ನಿವೇದಿತಾ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ, ನಿರ್ದೇಶಕರ ಅಪ್ರೋಚ್‌. ಕೆಲವು ನಿರ್ದೇಶಕರ ನಟ-ನಟಿಯರಿಗೆ ಅವರ ಪಾತ್ರಗಳನ್ನೇ ಸರಿಯಾಗಿ ವಿವರಿಸದ ಈ ಸಮಯದಲ್ಲಿ “ಶುದ್ಧಿ’ ಚಿತ್ರದ ನಿರ್ದೇಶಕ ಆದರ್ಶ್‌ ಮಾತ್ರ ಇಡೀ ಸ್ಕ್ರಿಪ್ಟ್ ಕಳುಹಿಸಿಕೊಟ್ಟರಂತೆ. ಪ್ರತಿಯೊಬ್ಬ ಕಲಾವಿದ ಕೂಡಾ ಕಥೆಯಲ್ಲಿ ಸಂಪೂರ್ಣವಾಗಿ ಇನ್ವಾಲ್‌ ಆಗಬೇಕೆಂಬ ಆಸೆ ಅವರದು. ಹಾಗಾಗಿ ನಿವೇದಿತಾಗೂ ಸ್ಕ್ರಿಪ್ಟ್ ಕಳುಹಿಸಿದರಂತೆ. ಇವೆಲ್ಲವೂ ನಿವೇದಿತಾ “ಶುದ್ಧಿ’ ಒಪ್ಪಲು ಕಾರಣವಾದ ಅಂಶಗಳಂತೆ. 

Advertisement

ಗೋವಾದ ಬ್ಯಾಡ್‌ ಇನ್ಸಿಡೆಂಟ್‌
ನಿವೇದಿತಾ “ಶುದ್ಧಿ’ ಚಿತ್ರೀಕರಣ ಮುಗಿಸಿಕೊಂಡು ಗೋಕಾರ್ಣದಿಂದ ಗೋವಾಗೆ ಹೋಗುವಾಗ ಅವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿಬಿಡುವಂತಹ ಘಟನೆಯೊಂದು ನಡೆದಿದೆ. ಒಂದು ಕ್ಷಣ ಏನು ಮಾಡಬೇಕೆಂದು ತೋಚದಂತಹ ಸ್ಥಿತಿ ನಿವೇದಿತಾಗೆ ಎದುರಾಗಿದೆ. ಆ ಘಟನೆ ಏನು ಎಂಬುದನ್ನು ಸ್ವತಃ ನಿವೇದಿತಾ ಹೇಳುತ್ತಾರೆ. “ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗುತ್ತೆ, ಅಸಭ್ಯವಾಗಿ ವರ್ತಿಸುತ್ತಾರೆಂಬುದನ್ನು ನಾನು ಕೇಳಿದ್ದೆ. ಆದರೆ ಇತ್ತೀಚೆಗೆ ಆ ಅನುಭವ ಸ್ವತಃ ನನಗೂ ಆಯಿತು. ನೆನೆಪಿಸಿಕೊಂಡರೆ ಇವತ್ತಿಗೂ ಅಸಹ್ಯವಾಗುತ್ತದೆ. ಆ ಘಟನೆ ನಡೆದಿದ್ದು “ಶುದ್ಧಿ’ ಚಿತ್ರೀಕರಣ ಮುಗಿಸಿಕೊಂಡು ಗೋವಾಕ್ಕೆ ಹೋದ ಸಮಯದಲ್ಲಿ. ಗೋಕಾರ್ಣದಲ್ಲಿ ಚಿತ್ರೀಕರಣ ಮುಗಿಸಿಕೊಂಡು ನಾನು ಗೋವಾಗೆ ಹೊರಟೆ. ಸ್ನೇಹಿತರು ಜೊತೆಗೆ ಬರಿ¤àವಿ ಅಂದ್ರು ಬೇಡ ಎಂದು ನಾನೊಬ್ಬಳೇ ಹೋದೆ. ಗೋಕಾರ್ಣದಿಂದ ಗೋವಾಗೆ ಟ್ಯಾಕ್ಸಿಯಲ್ಲಿ ಪಯಣ. ಟ್ಯಾಕ್ಸಿಯವನು ಒಳ್ಳೆಯವನು. ಯಾವುದೇ ಕಿರಿಕ್‌ ಇಲ್ಲದೇ ಗೋವಾ ತಲುಪಿಸಿದ. ಆದರೆ, ಗೋವಾದಲ್ಲಿ ಮಾತ್ರ ಒಂದು ಕಹಿ ಘಟನೆ ನಡೆಯಿತು. ಊಟಕ್ಕೆಂದು ಬೀಚ್‌ಸೈಡ್‌ನ‌ ರೆಸ್ಟೋರೆಂಟ್‌ಗೆ ಹೋದೆ. ಆಗಲೇ ಅಲ್ಲಿ ಒಂದಷ್ಟು ಹುಡುಗರ ಗುಂಪು ಕುಡಿಯುತ್ತಾ ಎಂಜಾಯ್‌ ಮಾಡುತ್ತಿತ್ತು. ನಾನು ಒಬ್ಬಳೇ ಇರೋದನ್ನು ನೋಡಿ ತುಂಬಾ ಕೆಟ್ಟದಾಗಿ ಕಾಮೆಂಟ್‌ ಮಾಡಲಾರಂಭಿಸಿತು. ಒಂದು ಹಂತದಲ್ಲಿ ಕುಡಿದು ತೂರಾಡುತ್ತಾ ಮೈ ಮೇಲೆ ಬೀಳುವ ರೀತಿಯಲ್ಲಿ ಹತ್ತಿರ ಬಂದ ಆ ಗುಂಪು, “ಬರಿ¤àಯಾ, ನಮ್‌ ಜೊತೆ ಜಾಯಿನ್‌ ಆಗು’ ಎಂದೆಲ್ಲಾ ಅಸಹ್ಯವಾಗಿ ಕಾಮೆಂಟ್‌ ಮಾಡಲಾರಂಭಿಸಿತ್ತು. ಹಾಗೆ ನೋಡಿದರೆ ನಾನು ಅಷ್ಟು ಬೇಗ ಹೆದರುವವಳಲ್ಲ. ನನ್ನನ್ನು ಇಂಡಿಪೆಂಡೆಂಟ್‌ ಆಗಿ ಬೆಳೆಸಿದ್ದಾರೆ. ಎಲ್ಲೇ ಹೋಗುವುದಾದರೂ ನಾನು ಒಬ್ಬಳೇ ಹೋಗುತ್ತೇನೆ. ಶೂಟಿಂಗಿಗೂ ನಾನು ಅಪ್ಪ-ಅಮ್ಮನ ಕರೆದುಕೊಂಡು ಹೋಗುವುದಿಲ್ಲ. ಅದೇ ರೀತಿ ಗೋವಾಕ್ಕೂ ಒಬ್ಬಳೇ ಹೋಗಿದ್ದೆ. ಆದರೆ ಆ ಗುಂಪಿನ ವರ್ತನೆ ನೋಡಿ ಒಂದು ಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ಆ ರೆಸ್ಟೋರೆಂಟ್‌ನಲ್ಲಿ ಒಬ್ಬ ಸಪ್ಲೆ„ಯರ್‌ ಕನ್ನಡದವನಾಗಿದ್ದ. ಕೊನೆಗೆ ಅವನ ಸಹಾಯ ತಗೊಂಡು ಅಲ್ಲಿಂದ ನನ್ನ ರೂಂಗೆ ಬಂದೆ. ಆತ “ಮೇಡಂ ಏನೇ ಸಮಸ್ಯೆಯಾದರೂ ಫೋನ್‌ ಮಾಡಿ’ ಎಂದು ಫೋನ್‌ ನಂಬರ್‌ ಕೊಟ್ಟು ಹೋದ. ನಿಜಕ್ಕೂ ಆತನ ಸಹಾಯವನ್ನು ಮರೆಯುವಂತಿಲ್ಲ. ಕೊನೆಗೆ ನನ್ನ ಸ್ನೇಹಿತರನ್ನು ಬೇಗ ಗೋವಾಕ್ಕೆ ಬರುವಂತೆ ಹೇಳಿದೆ. ಸಮಾಜದಲ್ಲಿ ಇವತ್ತಿಗೂ ಈ ತರಹದ ಘಟನೆಗಳು ನಡೆಯುತ್ತಿವೆ, ಹೆಣ್ಣು ಮಕ್ಕಳು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಸಾಕ್ಷಿಯಂತಾಯಿತು ಆ ಘಟನೆ’ ಎನ್ನುತ್ತಾ ಗೋವಾದಲ್ಲಾದ ಕಹಿ ಘಟನೆಯ ಬಗ್ಗೆ ಹೇಳುತ್ತಾರೆ ನಿವೇದಿತಾ. 

ನಿವೇದಿತಾ ಆ ಘಟನೆಯಿಂದ ಸಾಕಷ್ಟು ಬೇಸರಗೊಂಡಿದ್ದಾರೆ. “ನನ್ನ ಜೊತೆ ಒಬ್ಬ ಹುಡುಗ ಸಹಾಯಕ್ಕೆ ಇದ್ದಾಗ ಎಲ್ಲರೂ ಸುಮ್ಮನಾಗಿದ್ದಾರೆ. ಆತ ಆ ಹೋಟೆಲ್‌ ವೇಟರ್‌ ಎಂದು ಅವರಿಗೆ ಗೊತ್ತಿಲ್ಲ. ಅಂದರೆ ಹುಡುಗಿ ಮತ್ತೂಬ್ಬನ ಸ್ವತ್ತುಃ ಎಂದದಾಗ ಜನ ಸುಮ್ಮನಾಗುತ್ತಾರೆ. ನಮ್ಮ ಸಮಾಜದ ಈ ತರಹದ ಆಲೋಚನೆಗಳು ನನ್ನನ್ನು ತುಂಬಾ ಇರಿಟೇಟ್‌ ಮಾಡುತ್ತವೆ’ ಎನ್ನುವುದು ನಿವೇದಿತಾ ಮಾತು. 

ಬರಹ: ರವಿಪ್ರಕಾಶ್‌ ರೈ; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next