Advertisement

ಜೀವ ಹೀರಿದ ಲಾಸ್ಟ್‌ ಪೆಗ್‌

11:15 AM Jul 17, 2018 | Team Udayavani |

ಬೆಂಗಳೂರು: ಬಾಟಲಿಯಲ್ಲಿ ಉಳಿದಿದ್ದ ಕೊನೆಯ ಪೆಗ್‌ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಗಿ, ಮದ್ಯದ ಅಮಲಿನಲ್ಲಿ ಸ್ನೇಹಿತನನ್ನೇ ಕೊಲೆಗೈದು ಪರಾರಿಯಾಗಿದ್ದ ಇಬ್ಬರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಲ್ಲಿಕಾರ್ಜುನ ಅಲಿಯಾಸ್‌ ಮಲ್ಲಿ ಮತ್ತು ಮಹಾಲಿಂಗ ಬಂಧಿತ ಆರೋಪಿಗಳು. ಎರಡು ತಿಂಗಳ ಹಿಂದೆ ಓಲಾ ಕ್ಯಾಬ್‌ ಚಾಲಕ ಕಪಿನಿಗೌಡ ಅಲಿಯಾಸ್‌ ಕುಮಾರ್‌(35) ಎಂಬಾತನನ್ನು ಕೊಲೆಗೈದು ನಾಪತ್ತೆಯಾಗಿದ್ದರು. ಕೊಲೆಯಾದ ಕಪಿನಿಗೌಡ ಆರೋಪಿಗಳ ಸ್ನೇಹಿತನೇ ಆಗಿದ್ದು, ಮೇ 18ರಂದು ಆರೋಪಿಗಳು ಆತನನ್ನು ಉಸಿರುಗಟ್ಟಿಸಿ ಸಾಯಿಸಿದ್ದರು. ಕಾರಿನಲ್ಲಿಯೇ ಶವ ಇಟ್ಟು
ಪರಾರಿಯಾಗಿದ್ದರು.

ಘಟನೆ ಸಂಬಂಧ ನಂದಿನಿ ಲೇಔಟ್‌ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರಿಸಿದಾಗ
ಅದು ಕೊಲೆ ಎಂದು ತಿಳಿದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ತಿಳಿಸಿದ್ದಾರೆ.

ಸಿಂಗಲ್‌ ಪೆಗ್‌ ತಂದ ಆಪತ್ತು: ಸ್ನೇಹಿತರಾಗಿರುವ ಕಪಿನಿಗೌಡ, ಮಲ್ಲಿಕಾರ್ಜನ ಹಾಗೂ ಮಹಾಲಿಂಗ ಪ್ರತಿನಿತ್ಯ ರಾತ್ರಿ ಒಟ್ಟಾಗಿ ಮದ್ಯ ಸೇವಿಸುತ್ತಿದ್ದರು. ಅದರಂತೆ ಮೇ 18ರಂದು ಬಾರ್‌ ಒಂದರಿಂದ ಮದ್ಯದ ಬಾಟಲಿ ತಂದು ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಮೂವರು ಓಲಾ ಕ್ಯಾಬ್‌ನಲ್ಲೇ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಬಾಟಲಿ ಖಾಲಿಯಾಗುತ್ತಾ ಕೊನೆಯ ಪೆಗ್‌
ಉಳಿದುಕೊಂಡಿದ್ದು, ಇದನ್ನು ಯಾರು ಕುಡಿಯಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಕೊನೆಗೆ ಮೂವರೂ ರಾಜಿಯಾಗಿ ಉಳಿದ ಒಂದು ಪೆಗ್‌ ಮದ್ಯವನ್ನು ಮೂವರ ಲೋಟಗಳಿಗೂ ಸಮನಾಗಿ ಹಂಚಲಾಗಿತ್ತು. ಆದರೆ, ಮಿತಿಮೀರಿ ಕುಡಿದಿದ್ದ ಕಪಿನಿಗೌಡ ಮೂರೂ ಲೋಟದ ಮದ್ಯವನ್ನು ಒಬ್ಬನೇ ಕುಡಿದಿದ್ದಾನೆ. ಮೊದಲೇ ಮದ್ಯದ ಅಮಲಿನೊಂದಿಗೆ
ಜಗಳದ ನಶೆಯಲ್ಲೂ ಇದ್ದ ಮಲ್ಲಿ ಕಾರ್ಜುನ ಮತ್ತು ಮಹಾಲಿಂಗ ಇನ್ನಷ್ಟು ಕೋಪಗೊಂಡು ಕಪಿನಿಗೌಡನ ಮೂಗು ಮತ್ತು ಬಾಯಿಯನ್ನು ಬಿಗಿಯಾಗಿ ಅದುಮಿ ಹಿಡಿದುಕೊಂಡಿದ್ದಾರೆ. ಇದರಿಂದ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದ. ಇದನ್ನು ಗಮನಿಸಿದ ಇಬ್ಬರೂ ಕಪಿನಿಗೌಡನ ಮೃತದೇಹವನ್ನು ಕಾರಿನಲ್ಲೇ ಮಲಗಿಸಿ ಬಾಗಿಲು ಲಾಕ್‌ ಮಾಡಿ ಪರಾರಿಯಾಗಿದ್ದರು.

Advertisement

ಸ್ಥಳೀಯರಿಂದ ಮಾಹಿತಿ: ಓಲಾ ಕ್ಯಾಬ್‌ ಚಾಲಕನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು ಕಾರಿನ ಬಾಗಿಲು ಲಾಕ್‌ ಆಗಿದ್ದು, ಒಳಗೆ ಗಾಳಿ ಹೋಗುತ್ತಿರಲಿಲ್ಲ. ಹೀಗಾಗಿ ಕುಡಿದ ಮತ್ತಿನಲ್ಲಿ ಮಲಗಿದ್ದಾಗಲೇ ಕಪಿನಿಪತಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದು ಅಸ್ವಾಭಾವಿಕ ಪ್ರಕರಣ ಕೂಡ ದಾಖಲಿಸಿಕೊಂಡಿದ್ದರು.

ಆದರೆ, ಕಪಿನಿಗೌಡ ಸಾವಿನ ಕುರಿತಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಾಗ ಅದು ಅಸ್ವಾಭಾವಿಕ ಸಾವಲ್ಲ, ಕೊಲೆ ಎಂಬುದು ಗೊತ್ತಾಯಿತು. ಅದರಂತೆ ಜುಲೈ 3ರಂದು ಪ್ರತ್ಯೇಕವಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಕಾರಿನ ನಂಬರ್‌ ಆಧರಿಸಿ ಮತ್ತು ಕೆಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಗಿದೆ.
ಬಳಿಕ ಅವರನ್ನು ಬಂಧಿಸಲಾಯಿತು ಎಂದು ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next