Advertisement

ಅಸಭ್ಯವರ್ತನೆ ತೋರಿದಾತನ ಕೊಲೆ: ದಂಪತಿಗೆ ಜೀವಾವಧಿ ಸಜೆ

08:50 AM Aug 02, 2017 | Team Udayavani |

ಉಡುಪಿ: ಆರು ವರ್ಷಗಳ‌ ಹಿಂದೆ ಕಾರ್ಕಳ ತಾಲೂಕು ಕಾಂತಾವರ ಗ್ರಾಮದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯು ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿ ಅವರನ್ನು ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕಾಂತಾವರ ಗ್ರಾಮದ ಬಾರಾಡಿಯ ಶೇಖರ ದೂಜ ಮೂಲ್ಯ (53) ಹಾಗೂ ಅವರ ಪತ್ನಿ ಮಾಲತಿ ಮೂಲ್ಯ (46) ಶಿಕ್ಷೆಗೊಳಪಟ್ಟವರು. ಬಾರಾಡಿ ನಿವಾಸಿ ರಾಮ ಮೂಲ್ಯ (65) ಕೊಲೆಯಾಗಿದ್ದವರು.

Advertisement

2011ರ ಸೆ. 16ರ ರಾತ್ರಿ 11 ಗಂಟೆಗೆ ಕಾಂತಾವರ ಗ್ರಾಮದ ಬಾರಾಡಿ ದರ್ಕಾಸು ಮನೆಯಲ್ಲಿ ಶೇಖರ ಮತ್ತವರ ಪತ್ನಿ ಮಾಲತಿ ಇದ್ದಾಗ ಅಲ್ಲಿಗೆ ಬಂದಿದ್ದ ರಾಮ ಮೂಲ್ಯ ಅವರು ಅಸಭ್ಯವಾಗಿ ವರ್ತಿಸಿದ್ದರು. ಅದರಿಂದ ಕೋಪಗೊಂಡ ದಂಪತಿ ಮನೆಯ ಮುಂಭಾಗದ ಪಂಚಾಂಗದಲ್ಲಿ ಹಾರೆಯ ಹಿಡಿಯಿಂದ ತಲೆ, ಮುಖಕ್ಕೆ ಹೊಡೆದು, ಕತ್ತಿಯಿಂದ ಕಡಿದು ಕಟ್ಟಿ ಹಾಕಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಬಂಧನವಾಗಿತ್ತು. ಅಂದಿನ ಸರ್ಕಲ್‌ ಇನ್ಸ್‌ಪೆಕ್ಟರ್‌ ವಿಜಯ ಪ್ರಸಾದ್‌ ಎಸ್‌. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಆ. 1ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 5,000 ರೂ. ದಂಡ ಹಾಗೆಯೇ ದಂಡದ ಮೊತ್ತವನ್ನು ನೊಂದವರಿಗೆ ಪರಿಹಾರವಾಗಿ ನೀಡಬೇಕು ಎಂದು ಪ್ರಕಟಿಸಿದ್ದಾರೆ. ಅಭಿಯೋಜನೆಯ ಪರ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next