Advertisement

ಜೀವನ ಪಥ ಬದಲಿಸುವ ಶಕ್ತಿ ವಚನಗಳಿಗಿದೆ: ಪ್ರಭಾಕರ ಕೋರೆ

06:04 PM Aug 20, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಮಹಾಮಾನವತಾವಾದಿ ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಮೌಲಿಕವೆನಿಸಿವೆ. ಅವುಗಳು ನಮ್ಮ ಅನುಕರಣೆಯ ಭಾಗವಾಗಬೇಕಾಗಿದೆ. ಜೀವನ ಪಥವನ್ನು ಬದಲಾಯಿಸುವ ಶಕ್ತಿ ಬಸವಣ್ಣನವರ ವಚನಗಳಲ್ಲಿ ಅಡಗಿದೆ ಎಂದು
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಹೇಳಿದರು.

Advertisement

ಇಲ್ಲಿಯ ಶಹಾಪುರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ, ಶ್ರೀ ದಾನಮ್ಮದೇವಿ ಮಂದಿರ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ವಾಹಿನಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶತಶತಮಾನಗಳವರೆಗೆ ನಾವು ಬಸವಣ್ಣನವರನ್ನು ರಾಜ್ಯದ ಆಚೆಗೆ ಬಿಟ್ಟುಕೊಡಲಿಲ್ಲ.ಇಂದು ಅವರ ಸಂದೇಶಗಳು ವಿಶ್ವಮಾನ್ಯವೆನಿಸಿವೆ.

ಇಂದಿನ ಯುವಜನಾಂಗಕ್ಕೆ ಅದನ್ನು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು. ಫ.ಗು.ಹಳಕಟ್ಟಿಯಂತಹ ಮಹನೀಯರಿಂದ ವಚನ ಸಾಹಿತ್ಯ ಬೆಳಕು ಕಂಡಿತು. ಅವರನ್ನು ಸ್ಮರಿಸಿಕೊಳ್ಳಲೇಬೇಕು. ಧಾರವಾಡದ ಬಸವಪೀಠಕ್ಕೆ ಎಸ್‌.ವಿ.ಬೆಂಬಳಗಿಯವರ ಕೊಡುಗೆ ಅಪಾರವಾಗಿದೆ.

ಮುರಗೋಡದ ಮಹಾಂತಜ್ಜನವರ ಭಕ್ತರಾಗಿ ಅವರ ಕಾರ್ಯವನ್ನು ಬಸವಪೀಠದ ಮೂಲಕ ಯಶಸ್ವಿಯಾಗಿ ನೆರವೇರಿಸಿದರು ಎಂದು ಡಾ| ಕೋರೆ ಸ್ಮರಿಸಿದರು. ಬಸವಣ್ಣ ಸಾಂಸ್ಕೃತಿಕ ನಾಯಕ ವಿಷಯದ ಕುರಿತು ಮಾತನಾಡಿದ ವಿದ್ವಾಂಸರಾದ ಡಾ| ವಿ.ಎಸ್‌.ಮಾಳಿ ಅವರು, ಮತ, ಮೌಡ್ಯ, ಅಜ್ಞಾನ ತ್ರಿವಿಧ ಮಲಗಳನ್ನು ತೊಳೆದು ನಮ್ಮ ಆತ್ಮಹೃದಯದಲ್ಲಿ ಭಕ್ತಿಜ್ಞಾನ
ಸುಜಲವನ್ನು ತುಂಬಿದವರು ಬಸವಣ್ಣನವರು. ಕನ್ನಡ ಕುಲಕೋಟಿಯ ಸಂಸ್ಕೃತಿಯ ಕುಲಪತಿ ಬಸವಣ್ಣ. ನಡೆ ನುಡಿಯ ಮೂಲಕ ಬದುಕಲು ಕಲಿಸಿದವ ಬಸವ.

ಪ್ರಳಯದ ಕಸವನ್ನು ಕಿತ್ತು ಅಮೃತದ ಬೆಳೆಯನ್ನು ಬೆಳೆದವರು ಬಸವಣ್ಣ. ಅವರು ಕರ್ನಾಟಕಕ್ಕೆ ಅಷ್ಟೇ ಅಲ್ಲ, ಇಡೀ ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ| ಕೆ.ಬಿ.ಗುಡಸಿ ಮಾತನಾಡಿ, ಬಸವಣ್ಣನವರನ್ನು ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿದೆ. ಅದು ಸಲ್ಲದು.ಅವರು ಸಮಾನತೆಯ ಹರಿಕಾರರು. ಬಸವಪೀಠ ಈ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳಿಂದ ಮಹತ್ತರ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿಯವರು ಆಶೀರ್ವಚನ ನೀಡಿ, ಬಸವಣ್ಣನವರದು ಮಾತೃಹೃದಯಿ
ನಡೆನುಡಿಯಾಗಿತ್ತು. ಒಂದು ಕಾಲಘಟ್ಟದಲ್ಲಿ ನಿಂತು ಸಮಾಜ ಧರ್ಮಗಳನ್ನು ತಿದ್ದಿ ತೀಡುವ ಕಾರ್ಯವನ್ನು ಸೂಕ್ಷ್ಮವಾಗಿ ನಿರ್ವಹಿಸಿದರು ಎಂದು ಹೇಳಿದರು.

ಧಾರವಾಡ ಮುರಘಾಮಠದ ಡಾ| ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕಾಯಕದಾಸೋಹ ಸಿದ್ಧಾಂತಗಳು ವ್ಯಕ್ತಿಕಲ್ಯಾಣ ಹಾಗೂ ಸಮಾಜಕಲ್ಯಾಣದಲ್ಲಿ, ರಾಷ್ಟ್ರನಿರ್ಮಾಣದಲ್ಲಿ ಮಹತ್ವವನ್ನು ಪಡೆದಿವೆ. ಅಂತೆಯೆ ಯುಗ ಯುಗಗಳು ಕಳೆದರೂ ಸತ್ಯದರ್ಶನ ಅಡಗಿದೆ ಎಂದರು.

ಮುರಗೋಡ ದುರದುಂಡೀಶ್ವರಮಠದ ನೀಲಕಂಠ ಸ್ವಾಮಿಗಳು, ಮುರಗೋಡದ ಮಹಾಂತಜ್ಜನವರು, ಎ.ಎಸ್‌.ಪಾಟೀಲ, ಎಂ.ಜಿ.ಬೊಳಮಲ್ಲ, ಡಾ.ಎಂ. ಎಸ್‌.ಉಮದಿ, ಎಸ್‌.ವಿ. ಬಾಗಿ, ಸಚಿನ ಖಡಬಡಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕೆಎಲ್‌ಇ
ಸಂಸ್ಥೆಯಲ್ಲಿ 40 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಡಾ| ಪ್ರಭಾಕರ ಕೋರೆ ಅವರನ್ನು ಟ್ರಸ್ಟ್‌ ವತಿಯಿಂದ ಸತ್ಕರಿಸಲಾಯಿತು.

ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಸವಪೀಠದ ಸಂಯೋಜಕರಾದ ಡಾ| ಸಿ.ಎಂ. ಕುಂದಗೋಳ ಪ್ರಾಸ್ತಾವಿಕ ಭಾಷಣ ಮಾಡಿದರು. ದಾನಮ್ಮದೇವಿ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಂ. ಕಿತ್ತೂರ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next