Advertisement

ಸುಳ್ಳಿನ ಕಂತೆ v/s ಕಲ್ಯಾಣದ ಚಿಂತನೆ

12:22 PM Mar 28, 2017 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2017-18ನೇ ಸಾಲಿನ ಬಜೆಟ್‌ ಮೇಲೆ ಸೋಮವಾರ ಚರ್ಚೆ ನಡೆಯಿತು. ವಿರೋಧ ಪಕ್ಷದ ಸದಸ್ಯರು ಇದೊಂದು ಸುಳ್ಳಿನ ಕಂತೆ ಎಂದು ಲೇವಡಿ ಮಾಡಿದರೆ, ಈ ಬಾರಿಯದ್ದು ಜನಕಲ್ಯಾಣದ ಬಜೆಟ್‌ ಎಂದು ಆಡಳಿತ ಪಕ್ಷದ ನಾಯಕರು ಸಮರ್ಥಿಸಿಕೊಂಡರು.

Advertisement

ಕಾರ್ಪೋರೇಟರ್‌ಗಳು ತಮ್ಮ ವಾರ್ಡ್‌ಗಳಿಗೆ ಅನುದಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಈ ನಡುವೆ ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಕೇಳಿದಷ್ಟು ಅನುದಾನ ನೀಡದ ಪಾಲಿಕೆ ಆಡಳಿತದ ವಿರುದ್ಧ ಸ್ವತಃ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರೇ ಆಕ್ರೋಶ ವ್ಯಕ್ತಪಡಿಸಿದರು. 

ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, “ಬಿಬಿಎಂಪಿ ಬಜೆಟ್‌ನಲ್ಲಿ ಸುಳ್ಳಿನ ಲೆಕ್ಕ ಪೋಣಿಸಲಾಗಿದೆ. ರಾಜಧಾನಿಯ ಜನತೆ ಬಿಬಿಎಂಪಿ ಮೇಲೆ ಇರಿಸಿಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ  ಮುಂದಿನ ವರ್ಷ  ವಿಧಾನಸಭೆ ಚುನಾವಣೆ ಇರುವುದರಿಂದ  ಈ ಬಾರಿಯ ಬಜೆಟ್‌ ವಿಶೇಷವಾಗಿರುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಜನವಿರೋ ಬಜೆಟ್‌ ಮಂಡಿಸಿದೆ,” ಎಂದು ದೂರಿದರು.

“ಅನುದಾನ ಹಂಚಿಕೆಯಲ್ಲಿ ತಾರತಮ್ಯ ಅನುಸರಿಸಲಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಿ ಉಳಿದ ವಾರ್ಡ್‌ಗಳಿಗೆ ಅನ್ಯಾಯ ಮಾಡಲಾಗಿದೆ,” ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್‌ ಪದ್ಮಾವತಿ, “ವಾಸ್ತವಿಕ ಬಜೆಟ್‌ ಮಂಡನೆ ಮಾಡಿರುವ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ಉತ್ತಮ ಪತ್ರಿಕ್ರಿಯೆ ಬಂದಿದೆ. ಉತ್ತಮ ಬಜೆಟ್‌ ನೀಡಿರುವುದಕ್ಕೆ ನಿಮಗೆ ಹೊಟ್ಟೆ ಉರಿ ಎಂದು ತಿರುಗೇಟು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, “”ಹೆತ್ತೋರಿಗೆ ಹೆಗ್ಗಣ ಮುದ್ದು, ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಬೇಕು,” ಎಂದು ಪದ್ಮನಾಭರೆಡ್ಡಿ ಲೇವಡಿ ಮಾಡಿದರು.

Advertisement

ಮುಂದುವರಿದು ಮಾತನಾಡಿದ ರೆಡ್ಡಿ, “ಪಾಲಿಕೆಯಲ್ಲಿ ಮೂರು 4 ವರ್ಷಗಳ ಮುಂದುವ ರಿದ ಕಾಮಗಾರಿ ಹಾಗೂ ಹಳೇ ಬಿಲ್‌ ಸೇರಿ 10 ಸಾವಿರ ಕೋಟಿ ರೂ. ಬಾಕಿಯಿದೆ. ಗುತ್ತಿಗೆದಾರರಿಗೆ ಬಾಕಿ ಬಿಲ್‌ ನೀಡುವ ಕುರಿತು ಆಯವ್ಯಯದಲ್ಲಿ ಉಲ್ಲೇಖವಿಲ್ಲ,” ಎಂದು ಹೇಳಿದರು.

“ಸರ್ಕಾರದ ಅನುದಾನದಿಂದ ಜಾರಿಗೊಳಿಸುವ ಯೋಜನೆಗಳು ಸ್ಥಾಯಿ ಸಮಿತಿ ಮತ್ತು ಕೌನ್ಸಿಲ್‌ ಮುಂದೆ ಅನುಮೋದನೆಗೆ ಬರುತ್ತಿಲ್ಲ. ಇದರಿಂದಾಗಿ ಸರ್ಕಾರದ ಅನುದಾನದ ಬಗ್ಗೆ ಯಾವುದೇ ಸದಸ್ಯರಿಗೂ ಮಾಹಿತಿಯಿಲ್ಲ. ಆ ಮೂಲಕ ಪಾಲಿಕೆಯ ಸದಸ್ಯರನ್ನು ಕತ್ತಲಲ್ಲಿ ಇಡುವ ಪ್ರಯತ್ನ ನಡೆಯುತ್ತಿದೆ,” ಎಂದು ಆರೋಪಿಸಿದರು. 

“ನಗರದಲ್ಲಿರುವ ಸಮಸ್ಯೆಗಳಿಗೆ ಶೀಘ್ರ ಪರಿ ಹಾರಗಳನ್ನು ನೀಡುವ ಉದ್ದೇಶದಿಂದ ನಗರದಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವುದಾಗಿ ತಿಳಿಸಿದ್ದು, ವಲಯ ವರ್ಗೀಕರಣ ಸಂಬಂಧ ಪಾಲಿಕೆ ಯಿಂದ ನಿರ್ಣಯ ಮಾಡಿ ಕಳುಹಿಸಲಾಗಿದೆ. ಆದರೆ, ಸರ್ಕಾರದ ಹಂತದಲ್ಲಿ ಇನ್ನೂ ಅದನ್ನು ಅಂಗೀಕರಿ ಸಿಲ್ಲ. ಒಂದೊಮ್ಮೆ ಸರ್ಕಾರ ಅದನ್ನು ತಿರಸ್ಕರಿಸಿದರೆ ಮತ್ತೆ ನಗರದ ಜನತೆಯ ಮೇಲೆ ತೆರಿಗೆ ಹೊರೆ ಬೀಳಲಿದೆ,” ಎಂದು ಆತಂಕ ವ್ಯಕ್ತಪಡಿಸಿದರು. 

ಬಹುಗುಣ ಗುಣಶೇಖರ್‌ರಿಂದ ಜಂಬೋ ಜೆಟ್‌ ಬಜೆಟ್‌!: ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಹುಗುಣ ಗುಣಶೇಖರ್‌, ಧೃತರಾಷ್ಟ್ರರಂತಿರುವ ಆಯುಕ್ತ ಮಂಜುನಾಥ ಪ್ರಸಾದ್‌, ಚಾಣಾಕ್ಯ ಮತ್ತು ಚಂದ್ರಗುಪ್ತ ವಿಶೇಷ ಆಯುಕ್ತ ಮನೋಜ್‌, ಸುಳ್ಳು ಲೆಕ್ಕ ನೀಡುವ ಮುಖ್ಯ ಲೆಕ್ಕಾಕಾರಿ ಮಹದೇವ್‌ ಎಲ್ಲರೂ ಸೇರಿ ಪಾಲಿಕೆಗೆ ಜಂಜೋಜೆಟ್‌ ಬಜೆಟ್‌ ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ವ್ಯಂಗ್ಯವಾಡಿದರು.

ಅನುದಾನ ನೀಡದಿದ್ದರೆ ಎಚ್ಚರ 
ಕಳೆದ ಬಾರಿ ಮಳೆಗೆ ಜಲಾವೃತವಾಗಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಅರಕೆರೆ ವಾರ್ಡ್‌ಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ ಎಂದು ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿಆರೋಪಿಸಿದರು. ಆಯುಕ್ತರಿಗೆ ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಅನುದಾನ ನೀಡಲು ಮುಂದಾಗಿಲ್ಲ. ಮತ್ತೆ ಮಳೆ ಬಂದಾಗ ಅನಾಹುತ ಸಂಭವಿಸಿದರೆ ಅದಕ್ಕೆ ಆಯುಕ್ತರೇ ನೇರ ಹೊಣೆ ಎಂದು  ಎಚ್ಚರಿಕೆ ನೀಡಿದರು.

ಅದಾಯ ಸಂಗ್ರಹಕ್ಕೆ ಒತ್ತು  
ಬಜೆಟ್‌ ಸಮರ್ಥನೆ ಮಾಡಿಕೊಂಡ ಆಡಳಿತ ಪಕ್ಷ ನಾಯಕ ಮಹಮದ್‌ ರಿಜ್ವಾನ್‌, ಬಜೆಟ್‌ನಲ್ಲಿ ಬೆಂಗಳೂರು ನಗರ ಅಭಿವೃದ್ಗಾಗಿ ಹಲವು ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ವಾಹನ ನಿಲುಗಡೆ ನೀತಿ, ಜಾಹೀರಾತು ನೀತಿ ಜಾರಿ ಮಾಡುವ ಮೂಲಕ ಬಿಬಿಎಂಪಿ ಆದಾಯ ವೃದ್ಯಾಗುವಂತೆ ಮಾಡಲಾಗುತ್ತಿದೆ. ಜತೆಗೆ ಡಯಾಲಿಸಿಸ್‌ ಕೇಂದ್ರ, ಹೃದ್ರೋಗಿಗಳಿಗೆ ಸ್ಟಂಟ್ಸ್‌ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಲಾಗಿದೆ ಎಂದು ಹೇಳಿದರು.

ಬಡವರ ಸೇವೆ ಮಾಡಿ
ಬಡವರ ವೈದ್ಯಕೀಯ ವೆಚ್ಚಗಳಿಗೆ ಮೇಯರ್‌ ನಿ ಯಿಂದ ಸಮರ್ಪಕವಾಗಿ ಅನುದಾನ ನೀಡಲಾಗುತ್ತಿಲ್ಲ. ಬಡವರ ಸೇವೆ ದೊರೆಯಲು ಅವಕಾಶ ಸಿಕ್ಕಿದ್ದು ಅದನ್ನು ಮಾಡಿ ಎಂದು ಮೇಯರ್‌ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಇದನ್ನು ತಳ್ಳಿಹಾಕಿದ ಮೇಯರ್‌, ನಾನು ಯಾವುದೇ ಕಡತಗಳನ್ನು ಉಳಿಸಿಕೊಳ್ಳವುದಿಲ್ಲ. ಈವರೆಗೆ ವೈದ್ಯಕೀಯ ಬಿಲ್‌ಗೆ ಸಂಬಂಸಿದಂತೆ 1350 ಕಡತಗಳನ್ನು ವಿಲೇವಾರಿ ಮಾಡಿದ್ದೇನೆ.

ಬಿಬಿಎಂಪಿ ಸದಸ್ಯರು 10ಕ್ಕೂ ಹೆಚ್ಚಿನ ಕಡತ ತಂದು ಪರಿಹಾರವನ್ನು ಕೊಡಿಸುತ್ತಿದ್ದಾರೆ. ಹಾಗಾಗಿ ಕೆಲ ಪಾಲಿಕೆ ಸದಸ್ಯರು ಪರಿಹಾರ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಪಾಲಿಕೆ ಸದಸ್ಯರಿಗೆ ಪರಿಹಾರ ಕೊಡಿಸುವ ಮೊತ್ತವನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆ ಮಾಡ್ತೇನೆ ಎಂದ ಮುನಿರತ್ನ
ಬೆಂಗಳೂರು ಅಭಿವೃದ್ಗೆ ಶ್ರಮಿಸಿದ ಕೆಂಪೇಗೌಡರನ್ನು ಸ್ಮರಿಸುವ ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ 17 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಬಜೆಟ್‌ನಲ್ಲಿ ಅಧ್ಯಯನ ಪೀಠಕ್ಕಾಗಿ 100 ಕೋಟಿ ಮೀಸಲಿಡುವಂತೆ ಕೋರಲಾಗಿತ್ತು.

ಆದರೆ, ಕೇವಲ 7 ಕೋಟಿ ರೂ. ನೀಡಿರುವುದು ಸರಿಯಲ್ಲ. ಕನಿಷ್ಠ 70 ಕೋಟಿ ಅನುದಾನ ನೀಡಿ, ಇಲ್ಲದಿದ್ದರೆ ಸಂಸದ ಡಿ.ಕೆ.ಸುರೇಶ್‌ ನೇತೃತ್ವದಲ್ಲಿ ಮುಂದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕ ಮನಿರತ್ನ ಅವರೇ ಎಚ್ಚರಿಕೆ ನೀಡಿದರು. 

ಹಳಸಲು ಆಹಾರದ ಪೊಟ್ಟಣ ಹಿಡಿದು ಆಕ್ರೋಶ 
ಪೌರ ಕಾರ್ಮಿಕರಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದು  ಸ್ವಾಗತಾರ್ಹ. ಆದರೆ, ಹಳಸಿದ ಊಟ ಕೊಡಲಾಗುತ್ತಿದೆ ಎಂದು ಆರೋಪಿಸಿದ ಪದ್ಮನಾಭರೆಡ್ಡಿ, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಸೋಮವಾರ ಪೌರಕಾರ್ಮಿಕರಿಗೆ ವಿತರಿಸಿದ ಆಹಾರವು ಹಳಸಿಹೋಗಿದೆ. ಕಳಪೆ ಗುಣಮಟ್ಟದ ಆಹಾರ ನೀಡಿದರೆ, ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಹಳಸಿರುವ ಅನ್ನ-ಸಾಂಬರ್‌ ಪೊಟ್ಟಣ ಪ್ರದರ್ಶಿಸಿ,

“ಇದೇನಾ ನೀವು ನೀಡುವ ಗುಣಮಟ್ಟ ಆಹಾರ,” ಎಂದು ತರಾಟೆಗೆ ತೆಗೆದುಕೊಂಡರು. ಆ ಭಾಗದ  ಸದಸ್ಯೆ ಪ್ರತಿಭಾ ಧನರಾಜ್‌, ಸೋಮವಾರ ನೀಡಿದ ಆಹಾರವೂ ಅಳಿಸಿ ಹೋಗಿತ್ತು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಪದ್ಮಾವತಿ, ಪೌರಕಾರ್ಮಿಕರಿಗೆ ಪೂರೈಕೆ ಮಾಡುತ್ತಿರುವ ಆಹಾರವನ್ನು ಕೂಡಲೇ ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next