Advertisement

ಜ್ಞಾನದ ಹಸಿವು ನೀಗಿಸುವ ಗ್ರಂಥಾಲಯ

04:44 PM Mar 16, 2020 | Suhan S |

ಹಾವೇರಿ: ಜ್ಞಾನ ವಿಕಾಸಕ್ಕೆ ಗ್ರಂಥಾಲಯಗಳು ಸಂವರ್ಧನಾ ಶಕ್ತಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತ ಕಿರಿಯರಾದಿಯಾಗಿ ಹಿರಿಯರ ವರೆಗೂ ಜ್ಞಾನದ ಹಸಿವು ನೀಗಿಸುವ ಮಹತ್ವಪೂರ್ಣ ಕಾರ್ಯ ಮಾಡುತ್ತ ಬಂದಿವೆ ಎಂದು ಹುಬ್ಬಳ್ಳಿ ಪಿ.ಸಿ. ಜಾಬೀನ್‌ ಕಾಲೇಜಿನ ಪ್ರಧಾನ ಗ್ರಂಥಪಾಲಕ ಬಸವರಾಜ ಎಸ್‌. ಮಾಳವಾಡ ಹೇಳಿದರು.

Advertisement

ನಗರದ ಗುದೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗವು ಆಯೋಜಿಸಿದ್ದ “ಶೈಕ್ಷಣಿಕ ವರ್ಷದಲ್ಲಿ ಗ್ರಂಥಾಲಯ ಸಂಪನ್ಮೂಲಗಳ ಉಪಯೋಗ’ ಎಂಬ ವಿಷಯದಡಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಜ್ಞಾನ ಹೆಚ್ಚಿಸಿ ಕೊಳ್ಳಬೇಕಾದರೆ ಗ್ರಂಥಾಲಯಗಳು ಅತೀ ಅವಶ್ಯಕವಾಗಿದ್ದು, ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೇ ಆದ ಮಹತ್ವ ಹೊಂದಿದೆ. ಪುಸ್ತಕಗಳು ಹಾಗೂ ಗ್ರಂಥಾಲಯಗಳು ಜೀವಂತ ದೇವಾಲಯಗಳಿದ್ದಂತೆ. ಉತ್ತಮ ಜ್ಞಾನಾಸಕ್ತರಿಗೆ ಪೂರಕ ಮಾಹಿತಿ ಮತ್ತು ವಿಷಯಗಳನ್ನು ಅರ್ಜಿಸಲು ಸಂಪೂರ್ಣವಾದ ಸಂಪನ್ಮೂಲವನ್ನು ಒದಗಿಸಿಕೊಡುತ್ತವೆ. ಓದುವ ಹವ್ಯಾಸದ ಜತೆಗೆ ಬೌದ್ಧಿಕ ಮತ್ತು ಮಾನಸಿಕ ಸ್ಥಿಮಿತತೆ ಕಾಯ್ದುಕೊಳ್ಳಲು ಸಹಕಾರಿ ಎಂದರು.

ಅಪಾರ ಜ್ಞಾನದ ಭಂಡಾರವೇ ಆಗಿರುವ ಗ್ರಂಥಾಲಯವು ಬದುಕಿನ ಶಾಂತಿ ಮತ್ತು ನೆಮ್ಮದಿ ಕಟ್ಟಿಕೊಡುವ ಕೆಲಸ ಮಾಡುತ್ತವೆ. ಪಠ್ಯ ಹಾಗೂ ಪಠ್ಯೇತರ ವಿಷಯಗಳನ್ನು ಏಕಕಾಲಕ್ಕೆ ಬೋಧನೆ ಮಾಡುವ ಸ್ಥಳ ಗ್ರಂಥಾಲಯ. ಸಹಪಠ್ಯವು ಒಳಗೊಳ್ಳುವ ಏಕೈಕ ಸಾಧನೆ. ಗ್ರಂಥಾಲಯವು ಶಿಕ್ಷಣ ಪ್ರಗತಿಗೆ ಪೂರಕವಾದ ಕಾರ್ಯ ನಿರ್ವಹಿಸುತ್ತದೆ. ಜತೆಗೆ ನಾವಿಣ್ಯತೆಯ ತಾಂತ್ರಿಕ ಗ್ರಂಥಾಲಯಗಳು ಇಂದು ಎಲ್ಲೆಡೆ ಲಭ್ಯವಿದ್ದು, ಅಂಗೈಯಲ್ಲಿಯೇ ಗ್ರಂಥಾಲಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬಹುದು ಎಂದರು.

ಇನ್ನೋರ್ವ ಭಾಷಣಕಾರ ಹುಬ್ಬಳ್ಳಿ ಅಗ್ರೀಸ್‌ ಬ್ಯುಸಿನೆಸ್‌ ಸೊಲುಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವೀರು ಉಪ್ಪೀನ ಮಾತನಾಡಿ, ಗ್ರಂಥಾಲಯಗಳು ಅರಿವಿನ ದಿವ್ಯ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದುವವರಿಗೆ ಸುಜ್ಞಾನದ ಬೆಳಕು ನೀಡುವ ಅಕ್ಷಯ ತವನಿ ಗಳಿದ್ದಂತೆ. ಇಲ್ಲಿನ ಸಂಪನ್ಮೂಲ ಎಂದಿಗೂ, ಯಾವ ಕಾಲದಲ್ಲಿಯೂ ಬತ್ತಿ ಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಣಾಲಯಗಳಿರಲಿಲ್ಲ. ಅಂದು ಜ್ಞಾನಾರ್ಜನೆಗಾಗಿ ಬಹಳವೇ ಕಷ್ಟಪಡುವ ಸಂದರ್ಭವಿತ್ತು. ಆದ್ದರಿಂದ ಹೊಸ ಹೊಸ ಆವಿಷ್ಕಾರಗಳ ಮೂಲಕ ಜಗತ್ತು ಕಿರಿದಾಗಿದೆ.

ಅಂತರ್ಜಾಲ ಎಲ್ಲ ಜಾಲಗಳನ್ನು ಬಂಧಿಸಿ ತನ್ನಲ್ಲಿ ಹಿಡಿದಿಟ್ಟುಕೊಂಡಿದೆ. ಅತ್ಯಂತ ಸರಳವಾಗಿ ತಾಂತ್ರಿಕ ವ್ಯವಸ್ಥೆಗಳ ಮೂಲಕ ಗ್ರಂಥಾಲಯವನ್ನು ಇದ್ದಲ್ಲಿಯೇ ಬಳಸುವ ವ್ಯವಸ್ಥೆ ಇದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳಾದವರು ನಿತ್ಯದ ಓದಿನಲ್ಲಿ ಕ್ರಮವಾಗಿ ಬಳಸುವ ಅವಶ್ಯಕತೆಯಿದೆ ಎಂದರು.

Advertisement

ಕಾರ್ಯಾಗಾರದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ| ಎಂ. ಎಸ್‌. ಯರಗೊಪ್ಪ ವಹಿಸಿದ್ದರು. ಪ್ರೊ| ವೈ.ಎಚ್‌. ಯಲವಿಗಿ, ಪ್ರೊ| ಡಿ.ಎ. ಕೊಲ್ಲಾಪುರೆ, ಡಾ| ಎಸ್‌.ವಿ. ಮಡವಾಳೆ, ಪ್ರೊ| ವೆಂಕಟೇಶ ಕಲಾಲ ಇದ್ದರು. ಪ್ರಿಯಾ ಉಪ್ಪಿನ ಸಂಗಡಿಗರು ಪ್ರಾರ್ಥಿಸಿದರು. ನವರತ್ನ ಸ್ವಾಗತಿಸಿದರು. ಡಾ| ಟಿ. ರಾಜೇಶ್ವರಿ ಪ್ರಾಸ್ತಾವಿಕ ಮಾತನಾಡಿದರು. ಗ್ರಂಥಪಾಲಕ ಡಾ| ಆತ್ಮಾನಂದ ಜಿ.ಎಚ್‌. ಪರಿಚಯಿಸಿದರು. ರೂಪಾ ಕೋರೆ ನಿರೂಪಿಸಿದರು. ಶಿವಯೋಗಿ ಎ. ಚನ್ನಶೆಟ್ರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next