Advertisement

ಉತ್ತಮರಾಗೋಣ, ಉಪಕಾರಿಗಳಾಗೋಣ…

10:02 AM Jan 13, 2020 | mahesh |

ಉತ್ತಮನಾಗು-ಉಪಕಾರಿಯಾಗು ಎಂದೇ ಬದುಕಿದ ಸ್ವಾಮಿ ವಿವೇಕಾನಂದರ ಜೀವನ ಸಂದೇಶವು ನಮ್ಮ ಮಕ್ಕಳ ಮನಸುಗಳನ್ನು ಚಿರಂತನವಾಗಿ ಪ್ರೇರೇಪಿಸಬೇಕಾದಲ್ಲಿ ಗುರುವಿನ ಸ್ಥಾನದಲ್ಲಿ ನಿಂತ ಶಿಕ್ಷಕರ ಜವಾಬ್ದಾರಿ ದೊಡ್ಡದಿದೆ

Advertisement

ಆತ್ಮೀಯ ಶಿಕ್ಷಕರೇ,
ಕುವೆಂಪುರವರು ತಮ್ಮ “ಸ್ವಾಮಿ ವಿವೇಕಾನಂದ’ ಕೃತಿಯಲ್ಲಿ ಅಮೆರಿಕ ದೇಶದಲ್ಲಿದ್ದ ಸಂದರ್ಭದಲ್ಲಿ ವಿವೇ ಕಾ ನಂದರು ಭಾರತೀಯ ಯುವಕರಿಗೆ ಬರೆದ ಪತ್ರವೊಂದರನ್ನು ಉಲ್ಲೇಖೀಸಿದ್ದಾರೆ. “ಓ ನನ್ನ ತರುಣ ಮಿತ್ರರಿರಾ, ಕಂಕಣ ಬದ್ಧರಾಗಿ ಟೊಂಕ ಕಟ್ಟಿನಿಲ್ಲಿ. ದೀನರಲ್ಲಿ, ಸರ್ವಸಮಾನರಲ್ಲಿ, ಶ್ರದ್ಧಾನ್ವಿತರಲ್ಲಿ. ಬಡವರಿಗಾಗಿ ಮರುಗಿ. ಕೈಯೆತ್ತಿ ಮೊರೆಯಿಡಿ, ನೆರವು ಬಂದೇ ಬರುತ್ತದೆ. ಈ ಒಂದು ಭಾವ ಭಾರವನ್ನು ಹೊತ್ತು, ಹನ್ನೆರಡು ವರ್ಷಗಳ ಕಾಲ ನಾನು ಸುತ್ತಿದ್ದೇನೆ. ಧನಿಕರೆಂಬುವವರ ಮತ್ತು ದೊಡ್ಡವರೆಂಬುವವರ ಮನೆ ಮನೆಗೆ, ಬಾಗಿಲು ಬಾಗಿಲಿಗೆ ತೊಳಲಿದ್ದೇನೆ. ಎದೆ ನೆತ್ತರನ್ನು ದಾರಿಯುದ್ದಕ್ಕೂ ಸೋರಿಸುತ್ತಾ, ಪ್ರಪಂಚಾರ್ಧವನ್ನು ದಾಟಿ ಈ ಪರಕೀಯ ಪ್ರದೇಶಕ್ಕೆ ಸಹಾಯ ಕೋರಲೆಂದು ಬಂದಿದ್ದೇನೆ. ದೇವರೇ ನನಗೆ ನೆರವಾಗುತ್ತಾನೆ. ಈ ದೇಶದಲ್ಲಿಯೇ ಹಸಿವೆಯಿಂದಲೂ, ಚಳಿಯಿಂದಲೂ ನಾನು ಸಾಯಬಹುದು. ಆದರೆ ತರುಣರಿರಾ, ಈ ನನ್ನ ಹೃದಯ ಸಹಾನುಭೂತಿಯನ್ನು, ಬಡವರಿಗಾಗಿರುವ ಹೋರಾಟವನ್ನು, ಅಜ್ಞಾನಿಗಳಿಗಾಗಿ ಕೆಳಗೆ ಬಿದ್ದು ತುಳಿಸಿಕೊಳ್ಳುವವರಿಗಾಗಿರುವ ಮರುಕವನ್ನು ನಿಮಗೆ ದಾನ ಮಾಡಿ ಸಾಯುತ್ತೇನೆ. ಜಗದೀಶ್ವರನ ಚರಣತಲದಲ್ಲಿ, ಮುಖವಿಟ್ಟು ಮಹಾಯಜ್ಞಕ್ಕೆ ಸಿದ್ಧರಾಗಿ. ಸಮಸ್ತ ಜೀವಮಾನವನ್ನೇ ಬಲಿದಾನಗೈಯಲು ಸಿದ್ಧರಾಗಿ. ಶ್ರದ್ಧೆಯಿರಲಿ, ಸಹಾನುಭೂತಿಯಿರಲಿ, ಹೃದಯವಿರಲಿ. ಬಾಳು ತುತ್ಛ ವಾಗಲಿ, ಸಾವೂ ತುತ್ಛವಾಗಲಿ, ಮಹತ್ಕಾರ್ಯದಲ್ಲಿ ಸತ್ತರೇನಂತೆ, ಬದುಕಿದರೇನಂತೆ! ಹಿಂದಿರುಗಿ ನೋಡ ಬೇಡಿ. ಮುಂದೆ…ಮುಂದೆ‰… ಇನ್ನೂ ಮುಂದೆ! ”

ಜನವರಿ 12, ಸ್ವಾಮಿ ವಿವೇಕಾನಂದರ 157ನೇ ಜಯಂತಿ. ದೇಶಾದ್ಯಂತ ರಾಷ್ಟ್ರೀಯ ಯುವ ದಿನವಾಗಿ ಅವರ ಜಯಂತಿಯು ಆಚರಿಸಲ್ಪಡುತ್ತದೆ. ಈ ಬಾರಿಯ ಅವರ ಜಯಂತಿಯ ಘೋಷವಾಕ್ಯ “ಉತ್ತಮನಾಗು- ಉಪಕಾರಿಯಾಗು’. ಕುವೆಂಪುರವರು ಉಲ್ಲೇಖೀಸಿದ ಮೇಲಿನ ಸಾಲುಗಳು ಸ್ವಾಮಿ ವಿವೇಕಾನಂದರ ಉತ್ತಿಷ್ಠಿತ ಜಾಗೃತ ಪ್ರಾಪ್ಯ ವರಾನ್ನಿಬೋಧಿತ ಎಂಬ ಸ್ವಾಮಿ ವಿವೇಕಾನಂದರ ಬದುಕಿನ ಉತ್ಕೃಷ್ಟ ಧ್ಯೇಯವನ್ನು ಹಾಗೂ ಅವರ ಜಯಂತಿಯ ವಿಶಿಷ್ಟ ಘೋಷ ವಾಕ್ಯವನ್ನು ಅದೆಷ್ಟು ಚೆನ್ನಾಗಿ ವಿವರಿಸುತ್ತದೆ ನೋಡಿ.

ಶಿಕಾಗೋದಲ್ಲಿ ನಡೆದ ಆ ಸರ್ವಧರ್ಮ ಸಮ್ಮೇಳನದಲ್ಲಿ ಸವ ಧರ್ಮ ಸಮನ್ವಯದ ಅವರ ಉದಾರ ವೇದವಾಣಿ ವಿಶ್ವದೆಲ್ಲೆಡೆ ಪ್ರತಿಧ್ವನಿಸಿದ ಸಂದರ್ಭದಲ್ಲಿ ಶಿಕಾಗೋದಲ್ಲಿನ ಮುಖ್ಯ ಪತ್ರಿಕೆಯೊಂದು ಸ್ವಾಮಿ ವಿವೇಕಾನಂದರ ಬಗ್ಗೆ ಹೀಗೆ ಬರೆಯಿತಂತೆ. “”ಸರ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠತಮ ವ್ಯಕ್ತಿ. ಅವರ ಭಾಷಣವನ್ನು ಕೇಳಿದಮೇಲೆ ಇಂತಹ ಸುಸಂಸ್ಕೃತ ಜನಾಂಗಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳುಹಿಸುವುದು ಶುದ್ಧ ಮೂರ್ಖತನವೆಂದೇ ಭಾವಿಸುತ್ತೇವೆ.” ಅತ್ಯಂತ ಅರ್ಥಪೂರ್ಣವಾದ ಈ ಸಾಲುಗಳು ಭಾರತೀಯತೆಯ ಶ್ರೇಷ್ಠತೆಯನ್ನು, ಸ್ವಾಮಿ ವಿವೇಕಾನಂದರ ಅನನ್ಯತೆಯನ್ನು ಒಮ್ಮೆಗೇ ಅಭಿವ್ಯಕ್ತಿಸುತ್ತವೆ.

ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡ ಯಾವ ವ್ಯಕ್ತಿಯೂ ತನ್ನ ಆತ್ಮ ಗೌರವವನ್ನು ಪಣಕ್ಕಿಡಲಾರ. ತನ್ನ ತಾಯ್ನೆಲದ ಬಗ್ಗೆ, ತನ್ನ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹಗುರವಾಗಲಾರ. ಸ್ವಾಮಿ ವಿವೇಕಾನಂದರು ಹಿಂದೂ, ಇಂದೂ, ಮುಂದೂ ನಮ್ಮ ಸಾರ್ವತ್ರಿಕ ಆತ್ಮವಿಶ್ವಾಸದ ಶುದ್ಧ ಸಂಕೇತವೇ ಹೌದು. ಹಾಗಾಗಿ ಅವರು ಪ್ರತಿ ದಿನವೂ, ಪ್ರತಿ ಕ್ಷಣವೂ ನಮಗೆ ಪ್ರಸ್ತುತರಾಗಿಯೇ ಉಳಿಯಬೇಕಿದೆ. ಅವರ ತೀಕ್ಷ ¡ತೆ ಅವರ ಆವೇಶ, ಅವರ ವಿದ್ಯಾ ಪ್ರಾವೀಣ್ಯತೆ, ಅವರ ಪರೋಪಕಾರದ ಪ್ರಜ್ಞೆ ನಮ್ಮನ್ನು ನಮ್ಮ ಮುಂದಿನ ಪೀಳಿಗೆಯನ್ನು ಸದಾಕಾಲ ಎಚ್ಚರಿಸಬೇಕಿದೆ.

Advertisement

ಉತ್ತಮನಾಗು-ಉಪಕಾರಿಯಾಗು ಎಂದೇ ಬದುಕಿದ ಸ್ವಾಮಿ ವಿವೇಕಾನಂದರ ಜೀವನ ಸಂದೇಶವು ನಮ್ಮ ಮಕ್ಕಳ ಮನಸುಗಳನ್ನು ಚಿರಂತನವಾಗಿ ಪ್ರೇರಿಪಿಸಬೇಕಾದಲ್ಲಿ ಗುರುವಿನ ಸ್ಥಾನದಲ್ಲಿ ನಿಂತ ನಿಮ್ಮ ಜವಾಬ್ದಾರಿ ದೊಡ್ಡದಿದೆ ಎಂಬುದು ನಿಮಗೆ ನಾನು ನೆನಪಿಸ ಬಯಸುತ್ತೇನೆ. ಅವರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿ ಅವರನ್ನು ಪ್ರಭಾವಿತರನ್ನಾಗಿಸುವ ಮೂಲಕ ಅವರಲ್ಲಿ ದೇಶಪ್ರೇಮವನ್ನು ಬಿತ್ತುವ ಮಹತ್ತರ ಕೆಲಸವನ್ನು ನೀವು ಆಸ್ಥೆಯಿಂದ ನಿರ್ವಹಿಸಬೇಕಿದೆ. ವಿದ್ಯಾರ್ಥಿಯು “ಇನ್ನು ಮುಂದೆ ರಸ್ತೆಯಲ್ಲಿ ಕಸ ಹಾಕಲಾರೆ’ “ಜಂಕ್‌-ಫ‌ುಡ್‌ ತಿನ್ನಲಾರೆ’ “ಪ್ಲಾಸ್ಟಿಕ್‌ ಬಳಸಲಾರೆ’ “ಇದು ನನ್ನ ದೇಶ ಇದು ನನ್ನ ಜವಾಬ್ದಾರಿ’ ಇಂತಹ ಸಾಮಾಜಿಕ ಪ್ರತಿಜ್ಞೆಗಳನ್ನು ಕೈಗೊಂಡಲ್ಲಿ ತಾನು ಉತ್ತಮನೂ, ಉಪಕಾರಿಯೂ ಆಗುತ್ತಿದ್ದೇನೆನ್ನುವ, ಆ ಮೂಲಕ ಸ್ವಾಮಿ ವಿವೇಕಾನಂದರ ದೇಶಸೇವೆಯ ಆದರ್ಶ ಆಶಯವನ್ನು ಪೂರ್ಣಗೊಳಿಸುತ್ತಿದ್ದೇನೆನ್ನುವ ಪ್ರೀತಿ ಪೂರ್ವಕವಾದ ಭಾವನೆಯನ್ನು ಅವಳಲ್ಲಿ/ಅವನಲ್ಲಿ ನೀವು ಒಡಮೂಡಿಸುವ ಪ್ರಯತ್ನವನ್ನು ಪ್ರಾಮಾಣಿ ಕವಾಗಿ ಮಾಡಿದಿರಾದರೆ ನೀವು ದೇಶಸೇವೆಯ ಅಪೂರ್ವ ಕೊಡುಗೆಯನ್ನು ನೀಡಿದಂತೆಯೇ ಸರಿ.

ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಆದಷ್ಟು ಬೇಗ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಯುವ ಮನಸ್ಸುಗಳಿಗೆ ಅರ್ಥೈಸಿದಲ್ಲಿ ಮಾತ್ರ ಸದೃಢವಾದ ದೇಶ ನಿರ್ಮಾಣ ಮಾಡಲು ಸಾಧ್ಯವೆನ್ನುವುದನ್ನು ನಾವು ಮರೆಯುವುದು ಬೇಡ. ಹಾಗಾಗಿ ನೀವೆಲ್ಲರೂ ಈ ಬಾರಿಯ ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ ಈ ರೀತಿ ನಮ್ಮ ವಿದ್ಯಾರ್ಥಿಗಳನ್ನು ಉತ್ತಮರಾಗಲು- ಉಪಕಾರಿಯಾಗಲು ಪ್ರೇರೇಪಿ ಸುತ್ತೀರಿ ಅಲ್ಲವೇ? ವಿವೇಕಾನಂದರನ್ನು ಧ್ಯಾನಿಸುತ್ತಾ, ಹೊಸ ಭರವಸೆಯನ್ನು ಮಕ್ಕಳಲ್ಲಿ ಮೂಡಿಸು ತ್ತೀರಲ್ಲವೇ?

ಈ ಬಾರಿಯ ಸ್ವಾಮಿ ವಿವೇಕಾನಂದರ ಜಯಂತಿ ನಿಮ್ಮ ನಮ್ಮೆಲ್ಲರಲ್ಲಿ ಅಂತಹುದೊಂದು ದೇಶಪ್ರೇಮದ ಪ್ರತಿಜ್ಞಾ ಭಾವವನ್ನು ಮೂಡಿಸಲಿ. ಉತ್ತಮರಾಗೋಣ- ಉಪಕಾರಿಗಳಾಗೋಣ ಎಂಬುದು ಈ ಜಯಂತಿಯ ಸಂದರ್ಭದಲ್ಲಿನ ನಮ್ಮೆಲ್ಲರ ಒಲವು- ನಿಲುವುಗಳಾಗಲಿ.

ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಯುವ ಮನಸ್ಸುಗಳಿಗೆ ಅರ್ಥೈಸಿದಲ್ಲಿ ಮಾತ್ರ ಸದೃಢ‌ ದೇಶ ನಿರ್ಮಾಣ ಸಾಧ್ಯ

ಸ್ವಾಮಿ ವಿವೇಕಾನಂದರು ಹಿಂದೂ, ಇಂದೂ, ಮುಂದೂ ನಮ್ಮ ಸಾರ್ವತ್ರಿಕ ಆತ್ಮವಿಶ್ವಾಸದ ಶುದ್ಧ ಸಂಕೇತವೇ ಹೌದು.

ಎಸ್‌. ಸುರೇಶ್‌ ಕುಮಾರ್‌ ಪ್ರಾಥಮಿಕ -ಪ್ರೌಢ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next