Advertisement

ಭಾಷಾಪ್ರೇಮ ಬೆಳೆಸಿಕೊಂಡು ಕನ್ನಡ ಉಳಿಸೋಣ

02:29 PM Mar 15, 2022 | Team Udayavani |

ಬೆಳಗಾವಿ: ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಲ್ಲೂ ಕನ್ನಡ ಭಾಷಾ ಪ್ರೇಮವಿರಬೇಕು. ಬೆಳಗಾವಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಕನ್ನಡ ಉಳಿಸುವ ಅನಿವಾರ್ಯತೆ ಇದೆ. ಕೇವಲ ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ಬೆಳೆಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಸಾಲದು. ಎಲ್ಲರೂ ಸಹ ಭಾಷೆಗೆ ಹೆಚ್ಚಿನ ಒತ್ತು ಕೊಟ್ಟು ತನು-ಮನ-ಧನ ಅರ್ಪಿಸಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.

Advertisement

ಬೆಳಗಾವಿ ತಾಲೂಕಾ ಕ.ಸಾ.ಪ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗಡಿಭಾಗದಲ್ಲಿ ಕನ್ನಡವನ್ನು ಬೆಳೆಸುವ ಕಾರ್ಯದಲ್ಲಿ ಕೆ.ಎಲ್‌.ಇ ಸಂಸ್ಥೆ, ನಾಗನೂರು ಮಠಗಳು ತನ್ನದೇ ಆದ ಸೇವೆ ಮಾಡುತ್ತಾ ಬಂದಿವೆ. ಕಾಲ ಮಿಂಚಿಲ್ಲ, ಈಗಲೂ ನಾವು ಭಾಷಾ ಪ್ರೇಮ ಬೆಳೆಸಿಕೊಂಡು ಉಳಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್‌, ಹಳ್ಳಿಹಳ್ಳಿಗಳಲ್ಲಿ ಸಾಹಿತ್ಯಕ ಕೆಲಸಗಳು ನಡೆಯಲಿ. ಅನ್ಯ ಭಾಷಿಕರನ್ನು ನೋಡಿದರೆ ನಮಗೆ ಭಾಷೆಯ ಅಭಿಮಾನ ಕಡಿಮೆ. ಅದು ಹೆಚ್ಚಬೇಕು. ಕನ್ನಡ ಭವನ ಕನ್ನಡ ಪರವಾದ ಚಟುವಟಿಕೆಗಳಿಗೆ ಮೀಸಲಾಗಿದೆ. ಈ ನಿಟ್ಟಿನಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನಾಡುನುಡಿಯನ್ನು ಸಮƒದ್ಧಿ ಗೊಳಿಸೋಣ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ, ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಮ್ಮ ಸಮಯವನ್ನು ಮೀಸಲಿಟ್ಟು ಸೇವೆ ಮಾಡಬೇಕಾದ ಅನಿವಾರ್ಯತೆ ಬಂದಿರುವುದು ನಿಜಕ್ಕೂ ಖೇದನೀಯ. ಜನಪ್ರತಿನಿಧಿಗಳು ಮೊದಲಿಗೆ ಕನ್ನಡ ಭಾಷೆಗೆ ಆದ್ಯತೆ ನೀಡುವುದನ್ನು ರೂಢಿಸಿಕೊಳ್ಳಬೇಕು. ಸರಕಾರದಿಂದ ಬರುವ ಸೌಲಭ್ಯಗಳನ್ನು ಮುಂಬರುವ ದಿನಗಳಲ್ಲಿ ಸಾಹಿತ್ಯಕ ಕ್ಷೇತ್ರ ಬಲಪಡಿಸಲು ಶ್ರಮಿಸುವೆ ಎಂದು ಭರವಸೆ ನೀಡಿದರು.

ಕ.ಸಾ.ಪ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ತಲ್ಲೂರ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಪರಿಚಯಿಸಿದರು. ಬೆಳಗಾವಿ ತಾಲೂಕಿನ ನೂತನ ಕಾರ್ಯಕಾರಿ ಸಮಿತಿಗೆ ನೇಮಕಗೊಂಡ ಗೌರವ ಕಾರ್ಯದರ್ಶಿಗಳಾದ ಎನ್‌. ಬಿ. ಕರವಿನಕೊಪ್ಪ, ಜ್ಞಾನದೀಪ ಸಂಸ್ಥೆಯ ರಮೇಶ ಬಾಗೇವಾಡಿ, ಮಹಿಳಾ ಪ್ರತಿನಿಧಿಗಳಾದ ರಾಜನಂದಾ ಘಾರ್ಗಿ, ಆಶಾ ಯಮಕನಮರಡಿ, ಸಂಘ ಸಂಸ್ಥೆಗಳ ಪ್ರತಿನಿಧಿ ಬಿ.ಜಿ ವಾಲಿ ಇಟಗಿ, ಬೆಳಗಾವಿ ಗ್ರಾಮೀಣ ವಲಯದ ಶಿಕ್ಷಣಾಧಿಕಾರಿ ರುದ್ರಗೌಡ ಜುಟ್ಟನವರ, ಬೆಳಗಾವಿ ನಗರವಲಯದ ರವಿ ಭಜಂತ್ರಿ, ಸದಸ್ಯರಾಗಿ ನೇಮಕಗೊಂಡ ಲೋಕೇಶ ತಲ್ಲೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ದೇಯಣ್ಣವರ, ಎಂ.ಜಿ.ಪಾಟೀಲ, ಡಾ| ಎಸ್‌.ಡಿ ಪಾಟೀಲ, ಡಾ| ಜಯಾನಂದ ಧನವಂತ ಮತ್ತು ಮಾಧ್ಯಮ ಪ್ರತಿನಿಧಿಗಳಾಗಿ ನೇಮಕಗೊಂಡ ರಮೇಶ ಮಗದುಮ್‌, ವಿನೋದ ಜಗಜಂಪಿ ಮೊದಲಾದವರು ಉಪಸ್ಥಿತರಿದ್ದರು.

Advertisement

ರಾಜನಂದಾ ಘಾರ್ಗಿ ಸ್ವಾಗತಿಸಿದರು. ಬೆಳಗಾವಿ ತಾಲೂಕಾ ಕ.ಸಾ.ಪ ಅಧ್ಯಕ್ಷ ಸುರೇಶ ಹಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಕಸಾಪ ಘಟಕ ರೂಪಿಸಿರುವ ಯೋಜನೆಗಳ ಕುರಿತು ತಿಳಿಸಿದರು. ಆಶಾ ಯಮಕನಮರಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಎನ್‌. ಬಿ ಕರವಿನಕೊಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next