Advertisement

ಪ್ರಕೃತಿಯ ಮೌಲ್ಯಗಳೊಂದಿಗೆ ಬದುಕು ರೂಪಿಸೋಣ

12:26 AM Jan 28, 2021 | Team Udayavani |

ಬದುಕು ನಿಂತ ನೀರಲ್ಲ. ಹರಿಯುತ್ತಿರುವ ನದಿ ಯಂತೆ. ಮಗುವೊಂದು ಜನಿಸಿದೊಡನೆ ತಿಳಿದೋ ತಿಳಿಯದೆಯೋ ಬದುಕಿನ ಪಾಠವನ್ನು ಅದು ಕಲಿಯಲು ಆರಂಭಿಸುತ್ತದೆ. ತಾನು ಬೆಳೆದಂತೆಲ್ಲ ಹೆಚ್ಚೆಚ್ಚು ಜನರೊಂದಿಗೆ ಅದರ ಸಂವಹನ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಡೆಯುತ್ತಿರುತ್ತದೆ. ಚಿಕ್ಕ ಮಗುವೊಂದು ಯಾವುದೋ ಕಾರಣದಿಂದ ಅಳುತ್ತಿರಬಹುದು. ಮಗುವಿನ ಅಳು ತಾಯಿಯ ಹೃದಯವನ್ನು ತಟ್ಟದಿರದು. ಅಳುವಿಗೆ ನಿರ್ದಿಷ್ಟವಾದ ಕಾರಣವನ್ನು ಕಂಡು ಹಿಡಿದು ಪರಿಹಾರವನ್ನು ಕೊಟ್ಟೇ ಕೊಡುತ್ತಾಳೆ ಆ ಮಹಾತಾಯಿ. ಈ ಪರಸ್ಪರ ಅವಿನಾ ಭಾವ ಸಂಬಂಧ ಮಗು ಮತ್ತು ಅಮ್ಮ ಇಬ್ಬರಿಗೂ ಅನೇಕ ಪಾಠಗಳನ್ನು ಕಲಿಸುತ್ತದೆ. ಮಗು ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಅಳಬೇಕು ಎಂಬ ಪಾಠವನ್ನು ಕಲಿತರೆ ಮಗು ಅತ್ತಾಗ ಅದಕ್ಕೆ ಏನೋ ತೊಂದರೆಯುಂಟಾಗಿದೆ ಹಾಗೂ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಜಿಜ್ಞಾಸೆ ತಾಯಿಯಲ್ಲೂ ಉಂಟಾಗುತ್ತದೆ. ಹೀಗೆ ಪರಸ್ಪರ ಪವಿತ್ರವಾದ, ನಿಸ್ವಾರ್ಥದಿಂದ ಕೂಡಿದ, ಪ್ರೇಮಮ ಯವಾದ, ಕಲುಷಿತವಿಲ್ಲದ ಸಂಬಂಧ ಬೆಸೆಯುತ್ತದೆ.

Advertisement

ಈ ತಾಯಿ-ಮಗುವಿನ ಸಂಬಂಧವನ್ನು ವಿಸ್ತರಿಸಿದರೆ, ಪ್ರಕೃತಿ ಮತ್ತು ಜೀವರಾಶಿಗಳ ಮಧ್ಯೆ ನಡೆಯುವ ಕೊಡು-ಕೊಳ್ಳುವಿಕೆ ಹಾಗೂ ಪರಸ್ಪರ ಬೆಸೆ ಯುವ ಸಂಬಂಧಗಳು ಅತೀ ಮುಖ್ಯವಾಗಿ ಕಾಣುತ್ತದೆ. ಪ್ರಕೃತಿ ಮತ್ತು ಜೀವರಾಶಿಗಳು ಬೇರೆ ಬೇರೆಯೆಂದು ಮೇಲ್ನೋಟಕ್ಕೆ ಕಂಡರೂ ಯಥಾರ್ಥವಾಗಿ ಒಂದು ಇನ್ನೊಂದನ್ನು ಬಿಟ್ಟಿರಲಾರದು.

ಪ್ರಕೃತಿ ಹಾಗೂ ಜೀವರಾಶಿ ಎಲ್ಲವೂ ಭಗವಂತನ ಸೃಷ್ಟಿ. ಇಲ್ಲಿ ದೇವರು ಸಕಲ ಜೀವರಾಶಿಗೂ ನೆಮ್ಮದಿಯಿಂದ ಬದುಕಲು ವ್ಯವಸ್ಥೆಯನ್ನು ಕಲ್ಪಿಸಿದ್ದಾನೆ. ಪ್ರತಿಯೊಂದು ಜೀವಿಗೂ ಬೇಕಾಗುವ ಗಾಳಿ, ನೀರು, ಬೆಳಕು, ಆಹಾರ, ವಸತಿ ಇವೇ ಮೊದಲಾದ ಅವಶ್ಯಗಳನ್ನು ಧಾರಾಳವಾಗಿ ಪೂರೈಸಿದ್ದಾನೆ. ಜತೆ ಜತೆಗೆ ಭಗವಂತ ಒಂದು ಸಾತ್ವಿಕವಾದ ನಿಯಮವನ್ನೂ ನಮ್ಮ ಮುಂದಿಟ್ಟಿದ್ದಾನೆ. ಯಾವೊಂದು ಪ್ರಾಣಿಯೇ ಆಗಲಿ, ಮನುಷ್ಯನೇ ಆಗಲಿ ಪ್ರಕೃತಿಯ ಕೊಡುಗೆಯನ್ನು ಹಿತಮಿತವಾಗಿ ಬಳಸಬೇಕು. ತನ್ನ ಅಗತ್ಯಕ್ಕೆ ತಕ್ಕಷ್ಟು ತನ್ನ ಪಾಲನ್ನು ಸ್ವೀಕರಿಸಬೇಕಲ್ಲದೆ, ಇತರರ ಪಾಲನ್ನಲ್ಲ. ಈ ರೀತಿಯ ನಿಯಮದೊಳಗೆ ಬದುಕಿದವನಿಗೆ ಶಾಶ್ವತವಾಗಿ ಸಾತ್ವಿಕತೆ, ಮಾನವೀಯತೆ, ಪರೋಪಕಾರ, ಇತರರ ಕಷ್ಟದ ಬಗ್ಗೆ ಅನುಕಂಪ ಇತ್ಯಾದಿಗಳು ಸಹಜವಾಗಿಯೇ ಇರುತ್ತವೆ. ಆದರೆ ಈ ನಿಯಮದೊಳಗೆ ಬದುಕಲಾರದವ ಸಮಾಜಕ್ಕೆ ಹಾಗೂ ಇತರ ಎಲ್ಲ ಜೀವ ರಾಶಿಗಳಿಗೆ ಸದಾ ಕಂಟಕನಾಗುತ್ತಾನೆ. ಆತ ಸ್ವಾರ್ಥ, ಅನ್ಯಾಯ, ಹಿಂಸೆ, ವ್ಯಭಿಚಾರ ಇವೇ ಮೊದಲಾದ ಗುಣಗಳುಳ್ಳ ಸಮಾಜಘಾತಕ ಶಕ್ತಿಯಾಗಿ ಬೆಳೆಯುತ್ತಾನೆ.

ನದಿಯೊಂದು ತಾನು ಏನನ್ನೂ ಬಯಸದೆ ಎಷ್ಟೋ ದೂರ ಹರಿದು ಸಾಗುತ್ತಾ ಕೃಷಿ ಭೂಮಿಗೆ, ಜನರಿಗೆ, ಗಿಡಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಾ ತ್ಯಾಗದ ಪ್ರತೀಕವಾಗಿ ಕಾಣಿಸುತ್ತದೆ. ಒಂದು ಗಿಡ ಅದೆಷ್ಟೋ ಸುಮಧುರವಾದ ಹೂಗಳನ್ನು ಕೊಡುತ್ತಾ ತನ್ನನ್ನು ಇತರರಿಗೆ ಹಾಗೂ ದೇವರಿಗೆ ಸಮರ್ಪಿಸಿಕೊಳ್ಳುತ್ತದೆ. ಆದರೆ ಅದು ನಮ್ಮಿಂದ ಏನನ್ನೂ ಕೇಳುವುದಿಲ್ಲ. ಹುಲ್ಲುಕಡ್ಡಿ ಒಣಗಿ ಮಣ್ಣಿನೊಳಗೆ ಸೇರಿದ್ದು, ಮಳೆಬಿದ್ದು ಇಳೆ ತಂಪಾದಾಗ ಪುಟಿದೆದ್ದು ಚಿಗುರಿ ನಿಂತು ಅನೇಕ ಪ್ರಾಣಿಗಳಿಗೆ ಆಹಾರವಾಗಿ ತನ್ನ ಜೀವನವನ್ನು ಸಾರ್ಥಕಗೊಳಿಸುತ್ತದೆ. ಗಿಡವೊಂದು ಬೆಳೆದು ಮರವಾಗಿ ಕೊನೆಗೆ ಹಣ್ಣನ್ನು ನೀಡುವುದರೊಂದಿಗೆ, ಪುನಃ ಅದೇ ಹಣ್ಣಿನ ಬೀಜ ಗಿಡವಾಗಿ, ಮರವಾಗಿ ಬೆಳೆದು ಮತ್ತೆ ಮತ್ತೆ ಹಣ್ಣನ್ನು ಕೊಡುತ್ತಿರುತ್ತದೆ.

ಭೂಮಿ ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ಸ್ವಲ್ಪವೂ ವ್ಯತ್ಯಾಸವಾಗದೆ, ಸುತ್ತುತ್ತಾ ಹಗಲು-ರಾತ್ರಿಗಳಾಗುತ್ತಲೇ ಇರುತ್ತದೆ. ಸೂರ್ಯ ಮತ್ತು ಗ್ರಹಗಳ ಈ ನಂಟು ಹಾಗೂ ಚಲನೆ ಪ್ರಾಮಾ ಣಿಕತೆಗೆ ಪ್ರತಿಬಿಂಬದಂತಿದೆ. ಮೇಲಿನ ಈ ಎಲ್ಲ ಉದಾಹ ರಣೆಗಳಲ್ಲಿ ಕಾಣಸಿಗುವ ಮೌಲ್ಯಗಳು ಅಪಾರ. ತ್ಯಾಗ, ಪರೋಪಕಾರ, ನಂಬಿಕೆ, ಪ್ರಾಮಾಣಿಕತೆ, ನಿಷ್ಟೆ ಇತ್ಯಾದಿ.

Advertisement

ನಮ್ಮ ಬಾಳಿನ ಶಿಲ್ಪಿ ನಾವೇ ಆದಾಗ ಮಾತ್ರ ನಾವು ದಾರ್ಶನಿಕರಾಗುತ್ತೇವೆ. ದೇವರು ಪ್ರತಿಯೊಬ್ಬನನ್ನೂ ಹರಸುತ್ತಾನೆ. ಆದರೆ ಆತನ ಅನುಗ್ರಹ ಶಕ್ತಿ ಧನಾತ್ಮಕ ಮೌಲ್ಯಗಳೊಂದಿಗೆ ಸೇರಿಕೊಂಡಾಗ ಬದುಕು ಸಾರ್ಥಕತೆಯನ್ನು ಕಂಡುಕೊಳ್ಳುವುದರಲ್ಲಿ ಸಂದೇಹವಿಲ್ಲ.

ಈ ಎಲ್ಲ ಅಂಶಗಳಿಂದ ಜಾಗೃತಗೊಂಡು ಹಿರಿಯರು ಮನೆಯಲ್ಲಿ, ಶಿಕ್ಷಕರು ವಿದ್ಯಾಸಂಸ್ಥೆಗಳಲ್ಲಿ, ತಮ್ಮ ಜತೆಗಿನ ಯುವಪೀಳಿಗೆಗೆ ಪ್ರತೀ ಹಂತದಲ್ಲೂ, ತಮ್ಮ ನಡತೆ, ಮಾತು ಹಾಗೂ ಸಂವಹನಗಳಲ್ಲಿ ಮೌಲ್ಯಗಳನ್ನು ಬಟ್ಟಿ ಇಳಿಸುವುದು ಅತೀ ಆವಶ್ಯಕವಾದ ವಿಚಾರ.  ಸಮಾಜದ ಎಲ್ಲ ತೊಂದರೆಗಳನ್ನು ನಿವಾರಿಸಲು ಬೇಕಾದ ಅತೀ ಅಗತ್ಯದ ಸರಕು ಎಂದರೆ ಪ್ರಕೃತಿಯಿಂದ ಬಂದ ಮೌಲ್ಯಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳುವುದು. ಪ್ರಕೃತಿಯ ಸರಳ ನಿಯಮಗಳನ್ನು ಪಾಲಿಸದೆ ಮುನ್ನಡೆಯುವುದು ಇನ್ನಷ್ಟು ತೊಂದರೆಗಳಿಗೆ ಆಹ್ವಾನವಾಗಬಹುದು. ತ್ಯಾಗ ಹಾಗೂ ಪರೋಪಕಾರದಿಂದ ಕೂಡಿದ ಸರಳ, ಸಾತ್ವಿಕ, ಆಧ್ಯಾತ್ಮಿಕ ಹಾಗೂ ಯೋಗ ಮಾರ್ಗದ ನಮ್ಮ ದೇಶದ ಸಂಸ್ಕೃತಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎನ್ನುವ ಸತ್ಯದರ್ಶನ ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ಮೂಡಿಸಲಿ ಹಾಗೂ ಮುಂದಿನ ನಮ್ಮ ಪೀಳಿಗೆ ಇನ್ನಷ್ಟು ಸತ್ವಭರಿತವಾಗಿ ಬಾಳಿ ದೇಶವನ್ನು ಮುನ್ನಡೆಸಲಿ ಎನ್ನುವುದೇ ಎಲ್ಲರ ಸದಾಶಯವಾಗಿರಲಿ.

 

ಡಾ| ಈಶ್ವರ ಭಟ್‌ ಎಸ್‌. ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next