Advertisement

ಶಿಕ್ಷಕರು ಸಾಹಿತ್ಯ ಚಿಂತನೆಯಲ್ಲಿ ತೊಡಗಲಿ

11:50 AM Jul 07, 2018 | Team Udayavani |

ಬೀದರ: ಸಮಾಜದ ಹಿತ ಕಾಯುವ, ರಾಷ್ಟ್ರ ಅಭಿವೃದ್ಧಿಗೊಳಿಸುವ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು ಎಂದು ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಶಿರಹಟ್ಟಿ ಮಠ ಹೇಳಿದರು.

Advertisement

ನಗರದ ಬಸವ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮ, ಕಲೇಶಂ ಅಧಿಕಾರ ಹಸ್ತಾಂತರ ಹಾಗೂ ಕಸ್ತೂರಿ ಪಟಪಳ್ಳಿ ಅವರು ಬರೆದ “ಡಾ| ಎಸ್‌.ಎಲ್‌. ಭೈರಪ್ಪನವರ ತಂತು: ಸಾಂಸ್ಕೃತಿಕ ಚಿಂತನ’ ಪುಸ್ತಕ ಲೋಕಾರ್ಪಣೆ‌ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಶಿಕ್ಷಕರು ಶಾಲೆ ಚಟುವಟಿಕೆಗಳ ಜೊತೆಗೆ ಸಾಹಿತ್ಯ ಸಂಸ್ಕೃತಿಯ ಚಿಂತನೆಯಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು. ಉತ್ತಮ ಸಂಸ್ಕಾರಗಳ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಅನೇಕ ಮಹಾನ್‌ ವ್ಯಕ್ತಿಗಳ, ಶರಣರ ಚಿಂತನೆಗಳನ್ನು ತಿಳಿದುಕೊಳ್ಳುವ ಮೂಲಕ ಆ ಸಂದೇಶಗಳನ್ನು ಇತರರಿಗೂ ತಿಳಿಸುವ ಕಾರ್ಯ ನಡೆದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.

ಕಲಬುರಗಿಯ ಸರಕಾರಿ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ| ಕಲ್ಯಾಣರಾವ್‌ ಪಾಟೀಲ ಪುಸ್ತಕ ಲೋಕಾರ್ಪಣೆ‌ ಮಾಡಿ ಮಾತನಾಡಿ, ಕಸ್ತೂರಿಯವರ ಈ ಸಂಶೋಧನಾ ಕೃತಿ, ತಂತು ಕಾದಂಬರಿಯು ಕಲುಷಿತವಾದ ಸಮಕಾಲೀನ ಸಮಾಜೋರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಜ್ವಲಂತ ಸಮಸ್ಯೆಗಳ ಮೇಲೆ
ಬೆಳಕು ಚಲ್ಲುತ್ತದೆ ಎಂದರು. ಕಲ್ಯಾಣಗುಣ ಹೊಂದಬೇಕಿದ್ದ ಸಾಂಸ್ಕೃತಿಕ ವಲಯಗಳೂ ಭ್ರಷ್ಟಾಚಾರದಲ್ಲಿ ಮುಳುಗುತ್ತಿರುವುದು ನಮ್ಮ ಮಧ್ಯದ ಸಾಂಸ್ಕೃತಿಕ ದುರಂತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರಂತರ ನಂತರ ಕಾದಂಬರಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು ಎಸ್‌.ಎಲ್‌. ಭೈರಪ್ಪನವರಾಗಿದ್ದು, ಸಾಂಪ್ರದಾಯಿಕ ಭಾರತ ಹಾಗೂ ಆಧುನಿಕ ಭಾರತದ ಮುಖಾಮುಖೀಯೇ ಅವರ ಕಾದಂಬರಿಗಳ ಕೇಂದ್ರ ಆಶಯವಾಗಿದೆ. ಅದನ್ನು ವಿಶ್ಲೇಷಿಸುವಲ್ಲಿ ಕಸ್ತೂರಿಯವರು ಯಶಸ್ವಿಯಾಗಿದ್ದಾರೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತರಿವುದು ಕನ್ನಡ ವಿರೋಧಿ ನೀತಿಯಾಗಿದೆ. ಇಂಗ್ಲಿಷ್‌ ಒಂದು ಭಾಷೆಯಾಗಿ ಬೋಧಿಸಬೇಕೆ ವಿನಃ ಮಾಧ್ಯಮವಾಗಿ ಬೇಡ. 

Advertisement

ಜೊತೆಗೆ ಶೂನ್ಯ ಫಲಿತಾಂಶದ, ಹಾಗೂ ದಾಖಲಾತಿ ಕಡಿಮೆ ಇರುವ ಕನ್ನಡ ಶಾಲೆಗಳನ್ನು ಮುಚ್ಚುವ ಸರಕಾರದ ನೀತಿ ಖಂಡನಾರ್ಹವಾಗಿದೆ. ಅಗತ್ಯಬಿದ್ದರೆ ಅಂಥ ಶಾಲೆಗಳನ್ನು ಪರಿಷತ್ತು ದತ್ತು ಪಡೆದು ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗುವುದು. ಸರ್ಕಾರ ಮೂಲ ಸೌಕರ್ಯಗಳನ್ನು ನೀಡುವ ಕೆಲಸ ಮೊದಲು ಮಾಡಲಿ ಎಂದರು.

ಹುಲಸೂರ ಗುರುಬಸವ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ| ಬಂಡಯ್ಯ ಸ್ವಾಮಿ, ಸಂಜೀವಕುಮಾರ ಜುಮ್ಮಾ, ಶಕುಂತಲಾ ಮಲಕಪನೊರ್‌, ಎಸ್‌.ಮನೋಹರ, ಲೀಲಾವತಿ ನಿಂಬುರೆ, ಮೀನಾಕುಮಾರಿ ಬೋರಾಳಕರ, ಡಿ.ಝಾಕೀರ್‌ ಹುಸೇನ್‌, ಕಸ್ತೂರಿ ಪಟಪಳ್ಳಿ, ವಿಠೊಬಾ ಪತ್ತಾರ, ಪಂಚಾಕ್ಷರಿ ಪುಣ್ಯಶೆಟ್ಟಿ, ಪ್ರೊ| ವೈಜನಾಥ ಚಿಕಬಸೆ, ಪ್ರೊ| ಜಗನ್ನಾಥ ಕಮಲಾಪುರೆ, ಶಿವಪುತ್ರ ಪಟಪಳ್ಳಿ, ಡಾ| ಬಸವರಾಜ ಬಲ್ಲೂರ, ಟಿ.ಎಂ. ಮಚ್ಚೆ, ಶಿಶಂಕರ ಟೋಕರೆ ಇದ್ದರು. ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬಸವಕೇಂದ್ರ, ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next