Advertisement

ಅರ್ಹರಿಗೆ ಯೋಜನೆ ಫಲ ದೊರೆಯಲಿ

10:02 AM Mar 06, 2019 | |

ದಾವಣಗೆರೆ: ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆಯ ಕಾರ್ಡ್‌ಗಳನ್ನು ಅರ್ಹ ಪಲಾನುಭವಿಗಳಿಗೆ ನೀಡಿಲ್ಲ. ಯೋಜನೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಜನೆ ಜಾರಿಯಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಂಚಣಿ ಯೋಜನೆ ಕಾರ್ಡ್‌ಗಳು ಅರ್ಹ ಫಲಾನುಭವಿಗಳಿಗೆ ಸಿಕ್ಕಿಲ್ಲ. ಆ ಬಗ್ಗೆ ಪರಿಶೀಲಿಸಿ, ಜಿಲ್ಲೆಯಲ್ಲಿರುವ ಎಲ್ಲ ಅಸಂಘಟಿತ ಕಾರ್ಮಿಕರಿಗೂ ಈ ಯೋಜನೆ ತಲುಪಬೇಕು ಎಂದರು.

ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆ ಘೋಷಿಸಿದ್ದು, ಪ್ರಧಾನ ಮಂತ್ರಿಯವರು 15 ಸಾವಿರಕ್ಕಿಂತ ಕಡಿಮೆ ಮಾಸಿಕ ವರಮಾನವಿರುವ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ.
ಅಸಂಘಟಿತ ಕಾರ್ಮಿಕರು ಈ ಯೋಜನೆ ಸದ್ಬಳಕೆ ಮಾಡಿಳ್ಳಬೇಕು ಎಂದು ಮನವಿ ಮಾಡಿದರು.

ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆ ತರಾತುರಿಯಲ್ಲಿ ಜಾರಿಗೆ ತಂದಿರುವುದರಿಂದ ಕಾರ್ಡಗಳ ವಿತರಣೆಯಲ್ಲಿ ಲೋಪದೋಷಗಳಾಗಿವೆ. ಅಧಿಕಾರಿಗಳು ಆ ಲೋಪ ಸರಿಪಡಿಸಬೇಕು. ಈ ಯೋಜನೆಯನ್ನು ಸಮರ್ಪಕ ರೀತಿ ಪ್ರಚುರ ಪಡಿಸಿ ಅಸಂಘಟಿತ ಕಾರ್ಮಿಕರಿಗೆ ತಲುಪಿಸಬೇಕು ಎಂದು ತಿಳಿಸಿದರು.

ಯೋಜನೆ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮೊದಲೇ ತಿಳಿಸಿದ್ದರೆ, ನಾವು ಭಾಗವಹಿಸುವ ಕಾರ್ಯಕ್ರಮದಲ್ಲಿ ಈ ಯೋಜನೆ ಕುರಿತು ಪ್ರಚಾರ ಮಾಡುತ್ತಿದ್ದೆವು, ಅಧಿಕಾರಿಗಳ ಗಮನಕ್ಕೆ ತರದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಬಹುತೇಕ ಮಂದಿಗೆ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ಮುಖ್ಯ ಅತಿಥಿಯಾಗಿದ್ದ ಕಾರ್ಮಿಕ ಮುಖಂಡ ಎಚ್‌.ಕೆ.ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ಶೇ. 93ರಷ್ಟಿರುವ ಅಸಂಘಟಿತ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆಯ ಫಲಾನುಭವಿಗಳಾಗಬೇಕಿದೆ. ಇಂದು ಕಾರ್ಮಿಕರಿಗಾಗಿ ಜಾರಿಯಾಗಿರುವ ಇಂತಹ ಅನೇಕ ಯೋಜನೆಗಳು ದುಡಿಯುವ ವರ್ಗ ತಲುಪುತ್ತಿಲ್ಲ. ಅಧಿಕಾರಿಗಳು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು ಎಂದು ಕೋರಿದರು. ಈ ಯೋಜನೆಯಡಿ ಅಸಂಘಟಿತ ಕಾರ್ಮಿಕರಾದಂತಹ ರಿಕ್ಷಾ ಎಳೆಯುವವರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ತಯಾರಕರು, ಇಟ್ಟಿಗೆ ಗೂಡು ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಸಲಸದವರು, ದೋಬಿಗಳು, ಕೈಮಗ್ಗ ಕಾರ್ಮಿಕರು, ಗಾರೆ ಕೆಲಸದವರು, ಕೃಷಿ ಕಾರ್ಮಿಕರು, ಇತರೆ ಅನ್ಯ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ಫಲಾನುಭವಿಗಳಾಗಬೇಕಿದೆ ಎಂದರು.

Advertisement

ಹಲವಾರು ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರನ್ನು ಯೋಜನೆಯ ಅಡಿಯಲ್ಲಿ ಸೇರಿಸುವಂತೆ ಮನವಿ ಮಾಡಿದ ಅವರು, ಎನ್‌ಪಿಎಸ್‌ ಯೋಜನೆಯಂತೆ ಈ ಯೋಜನೆ ನೆನೆಗುದಿಗೆ ಬೀಳದೇ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದರು. ಇಎಸ್‌ಐ ಅಧಿಕಾರಿ ಕುಮಾರಿ ಸುನೀತಾ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆ ಫಲಾನುಭವಿ ಅಸಂಘಟಿತ ಕಾರ್ಮಿಕನಾಗಿದ್ದು, 18 ರಿಂದ 40 ವರ್ಷದೊಳಗಿರಬೇಕು. 15 ಸಾವಿರಕ್ಕಿಂತ ಕಡಿಮೆ ಮಾಸಿಕ ವರಮಾನ ಹೊಂದಿರಬೇಕು. ಅರ್ಹರು ತಮ್ಮ ವಯೋಮಿತಿಗೆ ಅನುಗುಣವಾಗಿ ವಿಮೆ ಕಂತು ಪಾವತಿಸಬೇಕು. 

ಚಂದಾದರರಿಗೆ ಅವರ 60 ವರ್ಷದ ನಂತರ ಮಾಸಿಕ 3 ಸಾವಿರ ರೂ. ಪಿಂಚಣಿ ಮತ್ತು ಅವರ ಮರಣದ ನಂತರ ಚಂದಾದಾರರ ಸಂಗಾತಿ ಶೇ. 50ರಷ್ಟು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಜಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಬಳ್ಳಾರಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಮಹಮದ್‌ ಜಾಕಿರ್‌ ಇಬ್ರಾಹಿಂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಗೊಂದಲ ಗೂಡಾದ ಕಾರ್ಯಕ್ರಮ 
ದಾವಣಗೆರೆ: ಅರ್ಹರು ಯೋಜನೆ ಫಲಾನುಭವಿಗಳಾಗುತ್ತಿಲ್ಲ ಎಂಬ ವಿಷಯ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಒಂದು ರೀತಿ ಗೊಂದಲ ಗೂಡಾಯಿತು. ವಿದ್ಯಾರ್ಥಿಗಳು, ರೈತರಿಗೆ ಯೋಜನೆ ಕಾರ್ಡ್‌ ವಿತರಿಸಿರುವ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಂಸದ ಜಿ.ಎಂ.ಸಿದ್ದೇಶ್ವರ್‌, ಅರ್ಹರಿಗೆ ಯೋಜನೆ ಕಾರ್ಡ್‌ ಕೊಡಿ, ಯಾರ್ಯಾರಿಗೋ ಕಾರ್ಡ್‌ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸೇವಾ ಕೇಂದ್ರದ ಪ್ರತಿನಿಧಿಗಳು, ಅರ್ಹ ರಜೆ ಇದ್ದರೂ ಕೆಲಸ ಮಾಡಲಾಗಿದೆ. ನಮಗೆ ತರಾತುರಿಯಲ್ಲಿ ನೀಡಿದ್ದರಿಂದ ಲೋಪವಾಗಿದೆ ಎಂದು ಸಮಸ್ಯೆ ಬಗ್ಗೆ ಸಂಸದರ ಗಮನ ಸೆಳೆದರು. ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌ ಸಹ ಕಾರ್ಡ್‌ ವಿತರಣೆ ಸಂಬಂಧ ಬೇಸರ ವ್ಯಕ್ತಪಡಿಸಿ, ಈ ಕಾರ್ಯಕ್ರಮ ಆಯೋಜಿಸಿರುವವರು ಯಾರು? ಫಲಾನುಭವಿಗಳ ಆಯ್ಕೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾಗ ಸೇವಾ ಕೇಂದ್ರದ ಪ್ರತಿನಿಧಿಗಳು ಕಾರ್ಯಕ್ರಮದಿಂದ ಹೊರನಡೆದರು. ಈ ಮಧ್ಯೆ ಫಲಾನುಭವಿಯೊಬ್ಬರು ಕಾರ್ಡ್‌ ನೀಡಲು 2-3 ಸಾವಿರ ರೂ. ಪಡೆಯಲಾಗುತ್ತಿದೆ ಎಂದು ದೂರಿದರು.
 
ನಂತರ ಶೈಲಜಾ ಬಸವರಾಜ್‌ ಮಾತನಾಡಿ, ತುರ್ತಾಗಿ ಕಾರ್ಯಕ್ರಮಕ ಆಯೋಜಿಸಿದ್ದರಿಂದ ಕೆಲ ಲೋಪಗಳಾಗಿವೆ. ಇದನ್ನ ಸರಿಪಡಿಸಲು ಅವಕಾಶ ಇದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲಿ. ಲೋಪದೋಷ ಸರಿಪಡಿಸಲು ಜನಪ್ರತಿನಿಧಿಗಳ ನೆರವು ಪಡೆಯಲಿ ಎಂದು ಹೇಳಿದರು. ಕೊನೆಗೆ ಇಎಸ್‌ಐ ಅಧಿಕಾರಿ ಬಿ.ಎಂ. ಮಂಡಲ್‌, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದಾಗ ಕೆಲ ಗೊಂದಲಗಳಿಗೆ ತೆರೆಬಿತ್ತು. ಅಷ್ಟರಲ್ಲಿ ಸಾರ್ವಜನಿಕರು, ಕಾರ್ಮಿಕರು ಸಭಾಂಗಣದಿಂದ ತೆರಳಿದ್ದರು.

ಅರ್ಹರಿಗೆ ತಲುಪದ ಯೋಜನೆ ಶೇ.7ರಷ್ಟು ಮಾತ್ರ ದೇಶದಲ್ಲಿ ಸಂಘಟಿತ ಕಾರ್ಮಿಕ ವರ್ಗವಿದೆ. ಇನ್ನುಳಿದ ಶೇ. 93ರಷ್ಟು ಅಸಂಘಟಿತ ಕಾರ್ಮಿಕವರ್ಗದವರಾದ ಕಟ್ಟಡ, ಕೃಷಿ ಕಾರ್ಮಿಕರು, ಕ್ಷೌರಿಕರು, ದೋಬಿಗಳು ಇಂತಹ ಅನೇಕ ಕಾರ್ಮಿಕರು ಈ ಯೋಜನೆಯ ಫಲ ಪಡೆಯಬೇಕಿದೆ. ಸರ್ಕಾರದ ಹಲವಾರು ಯೋಜನೆಗಳಲ್ಲಿ ಲೋಪವಿದ್ದು, ಅರ್ಹ ಫಲಾನುಭವಿಗಳಿಗೆ ಯೊಜನೆ ತಲುಪುತ್ತಿಲ್ಲ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆಯಲ್ಲಿ ಕೂಡ ಕೆಲ ಲೋಪಗಳು ನಡೆದಿದ್ದು, ಕಾರ್ಡುಗಳು ವಿದ್ಯಾರ್ಥಿಗಳಿಗೆ, ಸ್ವಯಂ ಉದ್ಯೋಗಿಗಳಿಗೆ, ರೈತರಿಗೆ ವಿತರಣೆಯಾಗುತ್ತಿವೆ.
 ಎಚ್‌.ಕೆ. ರಾಮಚಂದ್ರಪ್ಪ, ಕಾರ್ಮಿಕ ಮುಖಂಡರು.

Advertisement

Udayavani is now on Telegram. Click here to join our channel and stay updated with the latest news.

Next