Advertisement

ಸಮ್ಮೇಳನದ ಠರಾವು ಅನುಷ್ಠಾನಕ್ಕೆ ಬರಲಿ

12:17 PM Nov 09, 2017 | |

ಬೆಂಗಳೂರು: ಸಾಹಿತ್ಯ ಸಮ್ಮೇಳನದ ಠರಾವುಗಳು ಸರ್ಕಾರದ ಮುಂದೆ ಮಂಡಿಸುವ “ದೈನಸಿ ಬಿನ್ನವತ್ತಳೆ’ ಅಲ್ಲ. ಆ ರೀತಿ ಆಗಲು ನಾನು ಬಿಡುವುದೂ ಇಲ್ಲ. ಆ ಠಾರವುಗಳನ್ನು ಒಂದು ವರ್ಷದ ಅವಧಿಯಲ್ಲಿ ಅನುಷ್ಠಾನಕ್ಕೆ ತರಿಸಲು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇನೆ ಎಂದು 83ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಚಂದ್ರಶೇಖರ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ಪ್ರಸ್‌ ಕ್ಲಬ್‌ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಬುಧವಾರ ಪ್ರಸ್‌ಕ್ಲಬ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಠರಾವುಗಳು ಬರೀ ನಿರ್ಣಯಗಳಷ್ಟೇ ಅಲ್ಲ. ಅದು ಕನ್ನಡ ಕುಲಕೋಟಿಯ ಸಮಸ್ಯೆಗಳ ಬಗ್ಗೆ ಪ್ರಭುತ್ವಕ್ಕೆ ಮಾಡುವ ಹಕ್ಕೊತ್ತಾಯ ಎಂದರು. 

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆ ದಿನ ಅಂಬಾರಿ ಸವಾರಿ ಮಾಡಿಸಿ ಮೆರೆಸುವುದಷ್ಟೇ ಸಾಹಿತ್ಯ ಪರಿಷತ್ತಿನ ಕೆಲಸ ಅಲ್ಲ. ಬದಲಾಗಿ ಈ ವರ್ಷದ ಸಾಹಿತ್ಯ ಸಮ್ಮೇಳನ ಮುಗಿದು ಬರುವ ವರ್ಷದ ಸಾಹಿತ್ಯ ಸಮ್ಮೇಳನ ಜರಗುವದೊರಳಗೆ ಠರಾವುಗಳು ಅನುಷ್ಠಾನಕ್ಕೆ ಬರಬೇಕು. ಅದಕ್ಕಾಗಿ ಸಮ್ಮೇಳನ ಮುಗಿದ ಮೇಲೆ ಅದರ ಅಧ್ಯಕ್ಷರನ್ನು ಜೊತೆಗೆ ಕರೆದು ಕೊಂಡು ರಾಜ್ಯ ಸುತ್ತಾಡಿ ಸಮ್ಮೇಳನದ ನಿರ್ಣಯಗಳ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಒತ್ತಡ ತರುವ ಕೆಲಸ ನಾನು ಮಾಡುತ್ತೇನೆ ಎಂದರು.

 ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಸಾಧಿಸುವುದು. ಶತ್ರು ಯಾರು, ಮಿತ್ರ ಯಾರು ಎಂದು ಗುರುತಿಸಿ ಅವರ ಮೇಲೆ ಕಣ್ಣು ಇಡುವುದು ಪ್ರಭುತ್ವದ ಮೂಲ ಅಂತರ್ಗತಗುಣ. ಇದೇ ವೇಳೆ ತುತ್ತೂರಿ ಊದುವರನ್ನು ಈ ಪ್ರಭುತ್ವ ಸಾಕುತ್ತಿರುತ್ತದೆ. ಇದರ ವಿರುದ್ಧ ಜನಾಂದೋಲನ ಅಗತ್ಯ ಎಂದು ಚಂಪಾ ಕರೆ ನೀಡಿದರು.

ಈಗಿನದ್ದು ಕನ್ನಡ ಸ್ನೇಹಿ ಸರ್ಕಾರ: ಆರ್‌. ಗುಂಡೂರಾವ್‌ ಅವರು ಕನ್ನಡ ವಿರೋಧಿ ಧೋರಣೆ ತೆಳೆದಾಗ ಗೋಕಾಕ್‌ ಚಳುವಳಿ ಹುಟ್ಟಿಕೊಂಡಿತು. ಮುಂದಿನ ಚುನಾವಣೆಯಲ್ಲಿ ಕನ್ನಡಿಗರು ಅವರಿಗೆ ತಕ್ಕಪಾಠ ಕಲಿಸಿದರು. ಅದಾದ ಮೇಲೆ ಬಂದಂತಹ ಬಹುತೇಕ ಎಲ್ಲ ಸರ್ಕಾರಗಳು ಸಾಹಿತ್ಯ ಪರಿಷತ್ತು, ಅಕಾಡೆಮಿಗಳಿಗೆ ಉದಾರ ಆರ್ಥಿಕ ನೇರವು ಕೊಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಕರ್ನಾಟಕ ಸರ್ಕಾರಗಳು ಬಂದಿದ್ದವು ಈಗ ಬಂದಿರುವುದು ಕನ್ನಡ ಸ್ನೇಹಿ ಸರ್ಕಾರ ಎಂದು ಹೇಳಿದರು. ಸಂವಾದಲ್ಲಿ ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಇದರ ಅಧ್ಯಕ್ಷ ಸದಾಶಿವ ಶೈಣೈ ಮತ್ತು ಇತರ ಪದಾಧಿಕಾರಿಗಳು ಇದ್ದರು.

Advertisement

ಖಚಿತ ನಿಲುವಿಲ್ಲ: ವಿವಾದಿತ ಟಿಪ್ಪು ಜಯಂತಿ ಆಚರಣೆಯ ಔಚಿತ್ಯದ ಬಗ್ಗೆ ಪ್ರತಿಕ್ರಿಯಿಸಿದ ಚಂಪಾ, “ಟಿಪ್ಪು ಹಿಂದೂ ವಿರೋಧಿ, ಮತ್ತು ಆತ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬ ಎರಡು ವಾದಗಳಿವೆ. ಈ ವಿಚಾರದಲ್ಲಿ ನನ್ನ ಖಚಿತ ನಿಲುವಿಲ್ಲ. ಆದರೆ, ಜಯಂತಿ ಆಚರಣೆಯ ಹೆಸರಲ್ಲಿ ಸರ್ಕಾರಿ ರಜೆ ಕೊಡುವುದು, ಹಣ, ಸಮಯ, ಮಾನವ ಸಂಪನ್ಮೂಲ ವ್ಯಯ ಮಾಡುವುದು ಸರಿಯಲ್ಲ. ಹೆಚ್ಚುವರಿ ಕೆಲಸ ಮಾಡಿದರೆ ರಾಷ್ಟ್ರಕ್ಕೆ ಕೊಡುಗೆಯಾಗುತ್ತದೆ. ಎಲ್ಲಕ್ಕಿಂತ ಮೇಲಾಗಿ ಸ್ವಾತಂತ್ಯೋತ್ಸವ ಗಣರಾಜ್ಯೋತ್ಸವ, ರಾಜ್ಯೋತ್ಸವ, ಗಾಂಧಿ ಜಯಂತಿ ಮತ್ತು ಅಂಬೇಡ್ಕರ್‌ ಜಯಂತಿಗೆ ಮಾತ್ರ ವರ್ಷದಲ್ಲಿ ಕೇವಲ 5 ದಿನ ಸರ್ಕಾರಿ ರಜೆ ಸಾಕು ಎಂಬುದು ನನ್ನ ಬಹುದಿನದ ಒತ್ತಾಯ ಎಂದರು. 

ಸಂಕೇತ ಸೇರಿಸಿ: ಕನ್ನಡ ಧ್ವಜ ನಮ್ಮ ಲಾಂಛನ, ಗುರುತು ಮತ್ತು ಅಸ್ಮಿತೆ. ಒಂದು ರಾಷ್ಟ್ರ ಒಂದು ಧ್ವಜ ನಿಲುವು ಸರಿ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತನ್ನದೇ ಆದ ಪ್ರತ್ಯೇಕ ಧ್ವಜ ಇಟ್ಟುಕೊಳ್ಳುವುದು ತಪ್ಪಲ್ಲ. ಇದರಿಂದ
ರಾಷ್ಟ್ರಧ್ವಜದ ಹಿರಿಮೆ-ಗರಿಮೆಗೆ ಯಾವ ಚ್ಯುತಿ ಬರುವುದಿಲ್ಲ. ಅಷ್ಟಕ್ಕೂ ಸಂವಿಧಾನದ “ಧ್ವಜ ಸಂಹಿತೆ’ಯಲ್ಲಿ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಇರಕೂಡದು ಎಂದೇನಿಲ್ಲ. ಕನ್ನಡಿಗರು ಭಾವನಾತ್ಮಕವಾಗಿ ಒಪ್ಪಿಕೊಂಡಿರುವ ಕೆಂಪು-ಹಳದಿ ಬಣ್ಣದ ಧ್ವಜ ಈಗಾಗಲೇ ಇದೆ. ಈಧ್ವಜದ ಮಧ್ಯೆ ಕನ್ನಡ ಸಾಹಿತ್ಯ ಪ್ರತಿನಿಧಿಸುವ ಸಂಕೇತ ಸೇರಿಸಿ ಕನ್ನಡದ ಅಧಿಕೃತ ಧ್ವಜ ಎಂದು ಘೋಷಿಸಬಹುದು ಎಂದು ಕನ್ನಡದ ಪ್ರತ್ಯೇಕ ಧ್ವಜದ ಬಗ್ಗೆ ಚಂಪಾ ಅಭಿಪ್ರಾಯ ತಿಳಿಸಿದರು.

3 ಸ್ಮರಣ ಸಂಚಿಕೆ ಬಿಡುಗಡೆ: ಅಖೀಲ ಭಾರತ ಮಟ್ಟದ ವಿಷಯಗಳಾಧರಿತ ‘ವಿಕಾಸ ಕರ್ನಾಟಕ’, ಮೈಸೂರು
ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿತ ‘ಮೈಸೂರು ನುಡಿ ಮಲ್ಲಿಗೆ’ ಮತ್ತು ಮೈಸೂರಿನಲ್ಲಿ ಇದುವರೆಗೂ ನಡೆದ
ಸಮ್ಮೇಳನ, ಚಳವಳಿ ಹಾಗೂ ಕನ್ನಡಪರ ಹೋರಾಟಗಾರರ ಕುರಿತ ಮಾಹಿತಿಯುಳ್ಳ ‘ಸಾಹಿತ್ಯ ಸಾಂಗತ್ಯ’ ಸಂಚಿಕೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಾರೋಟುಗಳಲ್ಲಿ ಸ್ವಾಗತ:  ಸಮ್ಮೇಳನದ ಅಧ್ಯಕ್ಷರನ್ನು ಈವರೆಗೆ ಜನಪದ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಮುಖ್ಯ ವೇದಿಕೆಗೆ ಕರೆದೊಯ್ಯುವ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಜಿಲ್ಲಾ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ಸಾರೋಟಿನ ಮುಂದೆ, ಸಾರೋಟುಗಳಲ್ಲಿ ಸ್ವಾಗತ ಕೋರುವ ರೀತಿಯಲ್ಲಿ ಸಾಗಲಿದ್ದು, ವಿಶೇಷ ಮೆರಗು ನೀಡಲಿದ್ದಾರೆ. ಈ ಮೆರವಣಿಗೆಯಲ್ಲಿ ಮೈಸೂರಿನ ಸಂಸ್ಕೃತಿ, ಕಲೆ ಪ್ರತಿಬಿಂಬಿಸುವ ಕಲಾ ತಂಡಗಳು, 5 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನ.24ರಿಂದ 26ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 

ವಿವಿಧ ವಿಷಯಗಳ ಮೇಲೆ 22 ಗೋಷ್ಠಿಗಳು ನಡೆಯಲಿದ್ದು, ಮೂರು ಕವಿ ಗೋಷ್ಠಿಗ ಳನ್ನು ಈ ಬಾರಿ ನಡೆಸಲು ತೀರ್ಮಾನಿಸಲಾಗಿದೆ. ಗೋಷ್ಠಿಗಳಲ್ಲಿ 480ಕ್ಕೂ ಹೆಚ್ಚು ವಿದ್ವಾಂಸರುಗಳು ಭಾಗವಹಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 83 ಮಂದಿ ಸಾಧಕರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸನ್ಮಾನಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು. 

ಮೆರವಣಿಗೆ: ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ನ.24ರಂದು ಬೆಳಗ್ಗೆ 9ಕ್ಕೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರ ಧ್ವಜಾರೋಹಣವನ್ನು ಮೈಸೂರು ಉಸ್ತುವಾರಿ ಸಚಿವ ಡಾ.ಎಚ್‌ .ಸಿ.ಮಹಾದೇವಪ್ಪನೆರವೇರಿಸುವರು. ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್‌ ಮಾಡುವರು. ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 

ಬಳಿಕ, 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ನಂತರ ಸಮ್ಮೇಳನಾಧ್ಯಕ್ಷ ಪ್ರೋ.ಚಂದ್ರಶೇಖರ ಪಾಟೀಲ್‌ ಸಮ್ಮೇಳನದ ಭಾಷಣ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ನೆರವೇರಿಸುವರು. ವಿರೋಧಪಕ್ಷದ ನಾಯಕ ಜಗದೀಶ್‌ಶೆಟ್ಟರ್‌ ಸ್ಮರಣ ಸಂಚಿಕೆ ಬಿಡುಗಡೆ
ಮಾಡುವರು. ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಸಚಿವ ತನ್ವೀರ್‌ಸೇಠ್ಠ್… ನೆರವೇರಿಸುವರು. ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನ.26ರಂದು ಸಂಜೆ 4.15ಕ್ಕೆ ನಡೆಯಲಿದೆ. ಅತಿಥಿಯಾಗಿ ಕೇಂದ್ರ ಸಚಿವ ಅನಂತಕುಮಾರ್‌ ಇತರ ಗಣ್ಯರು ಭಾಗವಹಿಸಲಿದ್ದಾರೆ. 

ಆರು ವೇದಿಕೆಗಳು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಹಾಮಂಟಪದಲ್ಲಿ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ, ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ನಾಡೋಜ ಡಾ.ದೇ.ಜವರೇಗೌಡ ವೇದಿಕೆ, ಕಲಾಮಂದಿರದಲ್ಲಿ ನಿರ್ಮಿಸಲಾಗಿರುವ ಶ್ರೀಮತಿ ನಂಜನಗೂಡು ತಿರುಮಲಾಂಬ ಮಹಾಮಂಟಪದ ಮುಳ್ಳೂರು ನಾಗರಾಜ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿ.

550 ಮಳಿಗೆ ನಿರ್ಮಾಣ : ಈ ಬಾರಿ ಸುಮಾರು 500 ಪುಸ್ತಕ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಪ್ರತಿ ಮಳಿಗೆಗೆ 2500 ರೂ.ನಂತೆ ಶುಲ್ಕ ನಿಗದಿ ಮಾಡಲಾಗಿದೆ. ಜತೆಗೆ, 30 ವಾಣಿಜ್ಯ ಮಳಿಗೆಗಳಿದ್ದು, ಪ್ರತಿ ಮಳಿಗೆಗಳಿಗೆ ತಲಾ 3000 ರೂ. ನಂತೆ ಶುಲ್ಕ ಪಡೆಯಲಾಗುವುದು. ನ.10 ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ. ಈ ಬಾರಿ ಚಿತ್ರಕಲಾ ಪ್ರದರ್ಶನಕ್ಕೆ ಉಚಿತವಾಗಿ 20 ಮಳಿಗೆಗಳನ್ನು ನೀಡಲಾಗುತ್ತಿದೆ.

ನಾನೊಬ್ಬ ಸಮಾಜವಾದಿ ಮತ್ತು ಎಡಪಂಥೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ನನಗೆ ಸಾಂಸ್ಥಿಕ ಧರ್ಮದಲ್ಲಿ ನಂಬಿಕೆ ಇಲ್ಲ. ಇದೇ ವೇಳೆ ನಾನೊಬ್ಬ ಜಂಗಮ, ನಮ್ಮದು ರಂಭಾಪುರಿ ಮಠ. ಆದರೆ, ನನ್ನನ್ನು ನಾನು
ವೀರಶೈವ ಎಂದು ಹೇಳಿಕೊಳ್ಳುವುದಿಲ್ಲ. ನನ್ನದು ಬಸವಣ್ಣನ ಪಾರ್ಟಿ. ಪ್ರತ್ಯೇಕ ಲಿಂಗಾಯತ ಧರ್ಮದ ಜನಾಂದೋಲದ ಪರ ನಾನಿದ್ದೇನೆ.
 ಪ್ರೊ. ಚಂದ್ರಶೇಖರ ಪಾಟೀಲ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next