Advertisement

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ

06:30 AM Aug 19, 2017 | Team Udayavani |

ವಿಜಯಪುರ: ರಾಜ್ಯದಲ್ಲಿ ಭೀಕರ ಬರ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರಿ ಸಂಘಗಳಲ್ಲಿರುವ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ರೈತರು ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

Advertisement

ನಗರದಲ್ಲಿ ಮೂರು ದಿನಗಳಿಂದ ಆಯೋಜಿಸಿದ್ದ “ಬರಮುಕ್ತ ಭಾರತ’ ಕಲ್ಪನೆಯ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪದಲ್ಲಿ ಸಂಘಟಕರು ನದಿಗಳ ಸಂರಕ್ಷಣೆಗಾಗಿ ಸಂಗ್ರಹಿಸಿರುವ ದೇಶದ 101 ನದಿಗಳ ನೀರಿನ ಬಿಂದಿಗೆಗಳನ್ನು ಸ್ವೀಕರಿಸಿ ಮಾತನಾಡಿದರು. ಕಳೆದ 16 ವರ್ಷಗಳಲ್ಲಿ 13 ವರ್ಷ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಇದರಲ್ಲಿ 7 ವರ್ಷ ಅತ್ಯಂತ ಗಂಭೀರ ಸ್ಥಿತಿ ಸೃಷ್ಟಿಸಿತ್ತು. ಹೀಗಾಗಿಯೇ ಸರಕಾರಕ್ಕೆ 8,165 ಕೋಟಿ ರೂ. ಹೊರೆಯಾದರೂ ರಾಜ್ಯದ ರೈತರ ಸಾಲ ಮನ್ನಾ ಮಾಡಿ, ರೈತರ ಬೆನ್ನಿಗೆ ನಿಂತಿದೆ ಎಂದರು.

ಚರ್ಚೆಯಾಗಲಿ: ಸಮಾವೇಶದಲ್ಲಿ ಅಂಗೀಕರಿಸಿರುವ ವಿಜಯಪುರ ಘೋಷಣೆ-2017 ಕುರಿತು ಸಂಸತ್‌ ಹಾಗೂ ಎಲ್ಲ ರಾಜ್ಯಗಳ ವಿಧಾನ ಮಂಡಲದಲ್ಲಿ ಚರ್ಚೆ ಆಗಬೇಕಿದೆ. ರಾಷ್ಟ್ರೀಯ ನೀತಿ ಆಯೋಗದಲ್ಲೂ ಈ ಕುರಿತು ಚರ್ಚೆ ನಡೆಯಬೇಕು. ದೇಶದ 125 ಕೋಟಿ ಜನರಿಗೆ ಜೀವ ಜಲ ಒದಗಿಸಲು, ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ನದಿಗಳ ಸಂರಕ್ಷಣೆಗೆ ರಾಷ್ಟ್ರೀಯ ನೀತಿ ರೂಪಿಸಬೇಕು. ನೀರಿನ ಬಳಕೆ ಹಾಗೂ ನಿರ್ವಹಣೆಯಲ್ಲಿ ಆಧುನಿಕ ಜಲ ತಂತ್ರಜ್ಞಾನ ಬಳಸಬೇಕು ಎಂದರು.

ಜಲಋಷಿ ಪ್ರಶಸ್ತಿ: ಸಿಎಂ ಸಿದ್ದರಾಮಯ್ಯನವರು ಜಲ ಸಂರಕ್ಷಣೆ ಸಾಕ್ಷರತೆಗೆ ಶ್ರಮಿಸಿದ ವಿನೋದರಿಗೆ 1 ಲಕ್ಷ ರೂ. ನಗದು ಸಹಿತ ಜಲಋಷಿ ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಕ್ರಿಕೆಟ್‌ ತಾರೆ ರಾಜೇಶ್ವರಿ ಗಾಯಕವಾಡರನ್ನು ಸನ್ಮಾನಿಸಿದರು. ಸಮಾವೇಶದ ಸಂಘಟಕ ಡಾ.ರಾಜೇಂದ್ರ ಸಿಂಗ್‌ ಅವರು ಸಿಎಂ ಸಿದ್ದರಾಮಯ್ಯನವರಿಗೆ ದೇಶದ 101 ನದಿಗಳ ಜಲ ತುಂಬಿದ ಬೆಳ್ಳಿ ಬಿಂದಿಗೆ ಹಸ್ತಾಂತರಿಸಿದರು. ಜಲಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಅವರು ಡಾ.ರಾಜೇಂದ್ರಸಿಂಗ್‌ರಿಗೆ ಕೃಷ್ಣಾ ಜಲ ತುಂಬಿದ ಬೆಳ್ಳಿ ಬಿಂದಿಗೆ ನೀಡಿದರು. ಜಲತಜ್ಞ ರಾಜೇಂದ್ರಸಿಂಗ್‌, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ಮಮದಾಪುರದ ಮುರುಘೇಂದ್ರ ಶ್ರೀಗಳು, ಶಾಸಕರಾದ ಶಿವಾನಂದ ಪಾಟೀಲ,  ಬಿ.ಆರ್‌.ಪಾಟೀಲ ಆಳಂದ, ಯಶವಂತ ರಾಯಗೌಡ ಪಾಟೀಲ, ಡಾ.ಎಂ. ಎಸ್‌.ಬಾಗವಾನ, ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್‌ ಸಂಗೀತಾ ಪೋಳ ವೇದಿಕೆಯಲ್ಲಿದ್ದರು.

ವ್ಯರ್ಥ ನೀರು ಸದ್ಬಳಕೆಗೆ ಯೋಜನೆ: ಸಿದ್ದರಾಮಯ್ಯ ಬೆಂಗಳೂರಿನಿಂದ ತಮಿಳುನಾಡಿಗೆ ಹರಿಯುತ್ತಿದ್ದ ನೀರನ್ನು ಶುದಿಟಛೀ ಕರಿಸುವ ಯೋಜನೆ ರೂಪಿಸಿ, 20 ಟಿಎಂಸಿ ಅಡಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ಇದೇ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದಕ್ಕಾಗಿ 2,500 ಕೋಟಿ ರೂ. ಯೋಜನೆ ರೂಪಿಸುವ ಮೂಲಕ ರಾಜ್ಯ ಸರ್ಕಾರ ರಾಜ್ಯದಲ್ಲಿ ಹನಿ ನೀರನ್ನೂ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದರು.

Advertisement

ದೇಶದ ಜೀವಸಂಕುಲಕ್ಕೆ ಆಧಾರವಾಗಿರುವ ನದಿ ಅಮೂಲ್ಯ ಸಂಪತ್ತು. ಇಂತಹ ನದಿಗಳನ್ನು ಈವರೆಗೆ ಪೂಜಿಸಿದ್ದು ಸಾಕು. ಇನ್ನು ಪ್ರೀತಿಯಿಂದ ಸಂರಕ್ಷಿಸುವ ಕೆಲಸವಾಗಬೇಕು. ಪ್ರಸಕ್ತ ಸಂದರ್ಭದಲ್ಲಿ ಅಂತಾರಾಜ್ಯ ಜಲ ವಿವಾದಗಳನ್ನು
ಸೌಹಾರ್ದಯುತ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು. ಮತ್ತೂಂದೆಡೆ ಸಂವಿಧಾನ ತಿದ್ದುಪಡಿ ಮಾಡಿಯಾದರೂ ಸರಿ, ನದಿಗಳನ್ನು ರಾಷ್ಟ್ರೀಕರಣಗೊಳಿಸಬೇಕು.

 – ಬಸವ ಜಯ ಮೃತ್ಯುಂಜಯ ಶ್ರೀ, ಕೂಡಲಸಂಗಮದ ಪಂಚಮಸಾಲಿ ಜಗದ್ಗುರು.

Advertisement

Udayavani is now on Telegram. Click here to join our channel and stay updated with the latest news.

Next