Advertisement

ಪುನರ್ವಸತಿಗೆ ಸಂಘ-ಸಂಸ್ಥೆ ಕೈ ಜೋಡಿಸಲಿ

10:40 AM Aug 17, 2019 | Team Udayavani |

ಬೆಳಗಾವಿ: ಸಂಪೂರ್ಣ ಬೆಳಗಾವಿ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಅಲ್ಲಿನ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಸ್ಥಳಾಂತರ ನಂತರ ಈಗ ಪುನರ್ವಸತಿ ನಮ್ಮ ಮುಂದಿರುವ ದೊಡ್ಡ ಸವಾಲಾಗಿದ್ದು, ಈ ಕೆಲಸಕ್ಕೆ ಸಂಘ-ಸಂಸ್ಥೆಗಳಿಂದ ಎಲ್ಲ ಅಗತ್ಯ ನೆರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್‌. ಬಿ.ಬೊಮ್ಮನಹಳ್ಳಿ ಹೇಳಿದರು.

Advertisement

ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ಕಾರೇತರ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹ ಪೀಡಿತ 327 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 497 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಹತ್ತು ದಿನಗಳ ಕಾಲ ರಕ್ಷಣೆ, ಸ್ಥಳಾಂತರ, ಊಟೋಪಹಾರ ಒದಗಿಸಲಾಗಿದೆ. ಈ ಕೆಲಸದಲ್ಲಿ ಸಾರ್ವಜನಿಕರು, ದಾನಿಗಳು, ಸಂಘ-ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ ಎಂದರು.

ಸಂತ್ರಸ್ತರಿಗೆ ಅಗತ್ಯ ನೆರವು ತಲುಪಿಸುವಲ್ಲಿ ದಾನಿಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ನಡುವೆ ಜಿಲ್ಲಾಡಳಿತ ಕೊಂಡಿಯಾಗಿ ಕೆಲಸ ಮಾಡಲಿದೆ. ಗ್ರಾಮದ ಸ್ವಚ್ಛತೆಯ ಜೊತೆಗೆ ಜನರಿಗೆ ಆರೋಗ್ಯ ರಕ್ಷಣೆ ನೀಡುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಅಪರ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟ ಹಾಗೂ ಸಂತ್ರಸ್ತರ ಪುನರ್ವಸತಿ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಮೂಲಕ ಇನ್ನು ಮುಂದೆ ಮಾಡಬೇಕಿರುವ ಕೆಲಸಗಳ ಬಗ್ಗೆ ವಿವರಿಸಿದರು.

ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ್‌ ಕುಮಾರ್‌ ಮಾತನಾಡಿ, ನೆರೆ ಹಾವಳಿಯಿಂದ ಸಂತ್ರಸ್ತರಾದ ಜನರಿಗೆ ಎಲ್ಲ ಕಡೆಗಳಿಂದ ನೆರವು ಹರಿದು ಬರುತ್ತಿದೆ. ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಜಿಲ್ಲಾಡಳಿತದ ಜೊತೆಗೆ ಸಮನ್ವಯತೆಯಿಂದ ಸಂತ್ರಸ್ತರ ಪುನರ್ವಸತಿಗೆ ಕೈಜೋಡಿಸಬೇಕು ಎಂದರು.

Advertisement

ಅಗತ್ಯ ನೆರವಿಗೆ ಸಿದ್ಧ: ಬೆಳಗಾವಿ ಪ್ರಾಂತ ಸಮಾಜ ಸೇವಾ ಸಂಸ್ಥೆಯು ಸ್ವಚ್ಛತೆ, ಸಂತ್ರಸ್ತರಿಗೆ ಒಂದು ತಿಂಗಳು ರೇಷನ್‌ ಒದಗಿಸಲು ತೀರ್ಮಾನಿಸಿದ್ದು, ಖಾನಾಪುರ ಮತ್ತು ಚಿಕ್ಕೋಡಿ ತಾಲೂಕುಗಳ ಒಂದು ಸಾವಿರ ಕುಟುಂಬಗಳಿಗೆ ನಾವೇ ನೇರವಾಗಿ ಪರಿಹಾರ ತಲುಪಿಸಲಿದ್ದೇವೆ ಎಂದು ಫಾದರ್‌ ಪೀಟರ್‌ ಆಶೀರ್ವಾದ ಹೇಳಿದರು.

ಜೀತೋ ಸಂಸ್ಥೆಯ ಅಮಿತ್‌ ಮಾತನಾಡಿ, ಜೀತೋ ಸಂಸ್ಥೆ ವತಿಯಿಂದ ಈಗಾಗಲೇ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದೇವೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ದಾನಿಗಳು ಕಳುಹಿಸುವ ಸಾಮಗ್ರಿಗಳನ್ನು ಮಹಾವೀರ ಭವನದಲ್ಲಿ ಸಂಗ್ರಹಿಸಲಾಗಿದ್ದು, ಆದ್ಯತೆಯ ಮೇರೆಗೆ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜೇಶ್‌ ಕುಮಾರ್‌ ಮಾತನಾಡಿ, ರೋಟರಿ ಕ್ಲಬ್‌ ವತಿಯಿಂದ ಈಗಾಗಲೇ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಸೂಚಿಸುವ ಗ್ರಾಮಗಳಿಗೆ ತೆರಳಿ ಕೆಲಸ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ಮದೀನಾ ಮಸೀದಿ ರಿಲೀಫ್‌ ಫೌಂಡೇಷನ್‌ ಸಲೀಂ ಮಾತನಾಡಿ, 40 ಟನ್‌ ಅಕ್ಕಿ ಹಾಗೂ 6000 ಕುಡಿಯುವ ನೀರಿನ ಬಾಟಲ್ಗಳನ್ನು ಈಗಾಗಲೇ ವಿತರಿಸಿದ್ದೇವೆ. ದಾನಿಗಳು ನೀಡಿರುವ 25 ಸಾವಿರ ಬ್ಲಾಂಕೆಟ್ ಮತ್ತಿತರ ಬಗೆಯ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು. ಗ್ರಾಮಗಳ ಸ್ವಚ್ಛತೆಗೆ ಶ್ರಮದಾನ, ವೈದ್ಯಕೀಯ ಶಿಬಿರಗಳ ಆಯೋಜನೆ, ಔಷಧ ಸಾಮಗ್ರಿಗಳ ವಿತರಣೆ, ಆಹಾರ ಸಾಮಗ್ರಿ ವಿತರಣೆ, ಸ್ವಯಂಸೇವಕರನ್ನು ಒದಗಿಸುವುದು, ಶೌಚಾಲಯ ನಿರ್ಮಾಣ, ತ್ಯಾಜ್ಯ ವಿಲೇವಾರಿ, ನುರಿತ ಕೆಲಸಗಾರರನ್ನು ಒದಗಿಸುವುದಕ್ಕೆ ಸಿದ್ಧ ವಿರುವುದಾಗಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಭರವಸೆ ನೀಡಿದರು.

ಟಿಪ್ಪು ಸುಲ್ತಾನ್‌ ಸಂಘರ್ಷ ಸಮಿತಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರಿದ್ದು, ಯಾವುದೇ ಸಂದರ್ಭದಲ್ಲೂ ಜಿಲ್ಲಾಡಳಿತ ನೀಡುವ ಕೆಲಸ ನೀಡಲು ಸನ್ನದ್ಧ ರಾಗಿದ್ದೇವೆ. ಒಂದು ಹಂತದಲ್ಲಿ ಭಾವುಕರಾಗಿ ಮಾತನಾಡಿದ ಹಿಂದುಸ್ತಾನ ಬಂಗಾರದ ಗಿಣಿಯಂತಹ ದೇಶ. ಇದಕ್ಕೆ ಯಾವುದೇ ತೊಂದರೆಯಾಗದಂತೆ ರಕ್ಷಿಸಲು ನಾವು ಜಾತಿಧರ್ಮ ಭೇದವಿಲ್ಲದೇ ಕೈಜೋಡಿಸುತ್ತೇವೆ ಎಂದು ಸಮಿತಿಯ ಫೈಜಲ್ ಪಠಾಣ ಭಾವುಕರಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಅಗತ್ಯ ಆಧರಿಸಿ ಸರ್ಕಾರೇತರ ಸಂಸ್ಥೆಗಳ ಮತ್ತು ಸಾರ್ವಜನಿಕರ ನೆರವು ಪಡೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಉಪಸ್ಥಿತರಿದ್ದರು.

ಗ್ರಾಮಗಳ ಸ್ವಚ್ಛತೆಗೆ ಎಲ್ಲರೂ ಮುಂದಾಗಿ:

ಪ್ರವಾಹ ಬಾಧಿತ ಗ್ರಾಮಗಳನ್ನು ಸ್ವಚ್ಛಗೊಳಿಸಿ ಸಂತ್ರಸ್ತರನ್ನು ಗ್ರಾಮಕ್ಕೆ ಕಳಿಸಬೇಕಿದೆ. ಸಂಘ-ಸಂಸ್ಥೆಗಳಿಗೆ ಗ್ರಾಮಗಳ ಪಟ್ಟಿ ನೀಡಲಾಗುವುದು. ಸ್ವಚ್ಛತೆಗೆ ಅಗತ್ಯವಿರುವ ಸಲಕರಣೆಗಳನ್ನು ಸಹ ಒದಗಿಸಲಾಗುವುದು. ಅವುಗಳನ್ನು ಬಳಸಿಕೊಂಡು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಡಿಸಿ ಮನವಿ ಮಾಡಿದರು.
Advertisement

Udayavani is now on Telegram. Click here to join our channel and stay updated with the latest news.

Next