Advertisement

ವೈಯಕ್ತಿಕತೆ ವಿಕೃತಿಯಾಗದಂತೆ ತಡೆಯೋಣ

06:00 AM Oct 24, 2018 | |

ಅಂದಿನ ಸಮಾಜಕ್ಕೆ ಗೊತ್ತಿತ್ತು, ಏನೆಂದರೆ, ಮನುಷ್ಯನೊಳಗೆ ಒಂದು ಮೃಗೀಯತೆ ಇರುತ್ತದೆ. ಇಂತಹ ಮೃಗೀಯತೆಯನ್ನು ಮತ್ತು ಅನಾರ್ಕಿಸಂ ಅನ್ನು ನಿಯಂತ್ರಿಸಲು ಇವೆಲ್ಲ ಕಟ್ಟು ಪಾಡುಗಳು ಅಗತ್ಯ ಎನ್ನುವುದು. ಈ ರೀತಿಯ ಸಾಂಸ್ಕೃತಿಕ ಬಂಧನಗಳಿಂದಲೇ ಸಮಾಜಗಳು ತಮ್ಮನ್ನು ತಾವು ಸಾವಿರಾರು ವರ್ಷಗಳ ಕಾಲ ಮುನ್ನಡೆಸಿಕೊಳ್ಳತ್ತಾ¤ ಬಂದಿವೆ. ಚೌಕಟ್ಟುಗಳು ವ್ಯಕ್ತಿಗೆ ಧರ್ಮಕ್ಕೆ ಅಥವಾ ಸಮಾಜಕ್ಕೆ ಮತ್ತು ಆ ಪ್ರದೇಶಕ್ಕೆ ಸಂಬಂಧಿಸಿ, ಆ ಸಮಯದ ಬೇಡಿಕೆಗಳಿಗೆ ಸ್ಪಂದಿಸಿ ಲಿಬರಲ್‌ ಆಗಿ ಅಥವಾ ಕಠಿಣವಾಗಿ ಪರಿವರ್ತನೆಯಾಗುತ್ತಿದ್ದವು. 

Advertisement

ಸುಪ್ರೀಂ ಕೋರ್ಟ್‌ ಇತ್ತೀಚಿನ ತನ್ನ ಹಲವು ತೀರ್ಪುಗಳಲ್ಲಿ ಖಾಸಗಿತನದ ಹಕ್ಕುಗಳನ್ನು ಮತ್ತು ಘನತೆಯನ್ನು ಎತ್ತಿ ಹಿಡಿದಿರುವುದು ತಿಳಿದ ವಿಷಯ. ಚಿಕ್ಕದಾಗಿ ಹೇಳುವುದಾದರೆ ಹಿಂದೆ ಕ್ರಿಮಿನಲ್‌ಎಂದು ಭಾವಿಸಲಾಗಿದ್ದ ಪರ ಸಂಗಗಳನ್ನು ಸುಪ್ರೀಂ ಕೋರ್ಟ್‌ ವೈಯಕ್ತಿಕ ಘನತೆಯ, ಮೂಲಭೂತ ಹಕ್ಕುಗಳ ದೃಷ್ಟಿಯಿಂದ ನೋಡಿ, ಅಂತಹ ನಡವಳಿಕೆಯನ್ನು ಕಾನೂನು ಬಾಹಿರವಲ್ಲ ಎಂದು ಘೋಷಿಸಿದೆ. ದೇಶದಲ್ಲಿ ಮಾನವ ಘನತೆಯನ್ನು ಎತ್ತಿ ಹಿಡಿಯುವ ದೃಷ್ಟಿಯಲ್ಲಿ ಈ ತೀರ್ಪುಗಳು ಮೈಲುಗಲ್ಲುಗಳೇ ಸರಿ. 

ಇಂತಹ, ವ್ಯಕ್ತಿತ್ವದ ಘನತೆಯನ್ನು ಎತ್ತಿ ಹಿಡಿಯಬಲ್ಲ ಕಾನೂನಾತ್ಮಕ ವ್ಯವಸ್ಥೆಗಳು ದೇಶವೊಂದರಲ್ಲಿ ತುಂಬ ಅವಶ್ಯಕ. ಏಕೆಂದರೆ ಆಧುನಿಕ ಪೊಲಿಟಿಕಲ್‌ ರಾಷ್ಟ್ರಗಳು ಹಿಂದಿನ ಧಾರ್ಮಿಕ ವ್ಯವಸ್ಥೆ ಅಥವಾ ಫ್ಯೂಡಲ್‌ ವ್ಯವಸ್ಥೆಗಳಿಗಿಂತಲೂ ತುಂಬ ಶಕ್ತಿಯುತವಾದವು. ಸ್ಪಷ್ಟ ರೀತಿಯ ರಕ್ಷಣೆ ಇರದಿದ್ದರೆ ಎಲ್ಲ ವೈಯಕ್ತಿಕ ವಿಷಯಗಳೊಳಗೂ ಅವು ಮೂಗು ತೂರಿಸಬಹುದು. ಇದರಿಂದಾಗಿ ವ್ಯಕ್ತಿಗೆ ತನ್ನಷ್ಟಕ್ಕೆ ತಾನೆ, ತನ್ನೊಳಗೆ ಬದುಕುವ ಹಕ್ಕು ನಾಶವಾಗಿ ಹೋಗುತ್ತದೆ. ಎಲ್ಲ ವ್ಯಕ್ತಿಗಳೂ ಒಂದು ರೀತಿಯ ಮೋನೋ ಕಲ್ಚರ್‌ನಡಿಯಲ್ಲಿ ಬಂದು ಬಿಡುತ್ತಾರೆ. ಪೊಲಿಟಿಕಲ್‌ ಸ್ಟೇಟ್‌ಗಳು ಜನರ ವೈಯಕ್ತಿಕ ಬದುಕನ್ನೇ ಕಸಿದು ಹಾಕಿ ಎಲ್ಲರೂ ಹೀಗೆಯೇ ಬದುಕಬೇಕು ಎಂದು ಹೇಳಲಾರಂಭಿಸಬಹುದು. ಉದಾಹರಣೆಗೆ ಕಿಮ್‌ಜಾಂಗ್‌-ಉನ್‌ ನೇತೃತ್ವದ ಉತ್ತರ ಕೋರಿಯಾ ಸರಕಾರ. ಅದು ಒಂದು ವಿಪರೀತದ ಉದಾಹರಣೆ. ಇನ್ನೂ ಹಲವು ರಾಷ್ಟ್ರಗಳನ್ನು ಉದಾಹರಿಸಬಹುದು. ಹೀಗಾಗಿಯೇ ಗಾಂಧೀಜಿಯವರಿಗೆ ಸರಕಾರಿ ವ್ಯವಸ್ಥೆಗಳ ಕುರಿತು ಭಯ, ಆತಂಕ ಇತ್ತು. ರಾಷ್ಟ್ರಗಳು ಒಂದು ಸಂಘಟನೆಯಾದ ವ್ಯವಸ್ಥೆಯಾಗಿ ತಮಗೆ ಬೇಡವಾದವರ ಬದುಕನ್ನು ಒತ್ತಿ ಹಾಕಿಬಿಡಬಹುದು ಕೂಡ ಎಂಬ ಅರಿವು ಗಾಂಧಿಗೆ ಇತ್ತು. ಆದ್ದರಿಂದ ವ್ಯಕ್ತಿ ಮತ್ತು ರಾಷ್ಟ್ರದ ನಡುವಿನ ಆಯ್ಕೆಯಲ್ಲಿ ಗಾಂಧಿ ವ್ಯಕ್ತಿಯನ್ನೇ ಆಯ್ದುಕೊಳ್ಳುತ್ತಿದ್ದರು.

ಪೊಲಿಟಿಕಲ್‌ ಸ್ಟೇಟ್‌ಗಳ ವ್ಯವಸ್ಥೆಯಡಿಯಲ್ಲಿ ಸಿಕ್ಕಿ ಬಿದ್ದು ನಜ್ಜು-ಗುಜ್ಜಾಗಿ ಹೋದ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣವನ್ನು ಖ್ಯಾತ ಬ್ರಿಟಿಷ್‌ ಕವಿ ಡಬ್ಲು. ಎಚ್‌. ಆಡೆನ್‌ The Unknown Citizen ಎನ್ನುವ ಕವಿತೆಯಲ್ಲಿ ಕಟ್ಟಿಕೊಡುತ್ತಾನೆ. ಆ ವ್ಯಕ್ತಿ ಬದುಕಿರುವ ದೇಶದಲ್ಲಿ ಎಲ್ಲದಕ್ಕೂ ರೂಲ್‌ಗ‌ಳಿವೆ. ಆತ ಆ ರೂಲ್‌ಗ‌ಳು ಹೇಳುವಂತೆಯೇ ಬದುಕಬೇಕಾಗುತ್ತದೆ. ಬದುಕುತ್ತಾನೆ. ಉದಾಹರಣೆಗೆ ವ್ಯಕ್ತಿಯೊಬ್ಬ ಎರಡೇ ಮಕ್ಕಳನ್ನು ಮಾಡಿಕೊಳ್ಳ ಬೇಕೆಂದು ಕಾನೂನು ಇರುತ್ತದೆ. ಆತ ಎರಡೇ ಮಕ್ಕಳನ್ನು ಹುಟ್ಟಿ ಸುತ್ತಾನೆ. ಎಲ್ಲ ಕಡೆ ಸರಕಾರ ಹೇಳಿದಂತೆ ಇನ್ಸೂರೆನ್ಸ್‌ ಮಾಡಿಸುತ್ತಾನೆ. ಯಾವಾಗ ನಗಬೇಕೆಂದು ಆದೇಶ ಇದೆ ಎಂದು ಅವನಿಗೆ ಗೊತ್ತಿದೆ. ನಗುತ್ತಾನೆ. ಎಷ್ಟು ಹೊತ್ತು ಫ್ಯಾಕ್ಟರಿಯಲ್ಲಿ ಕೆಲಸ ಮಾಡಬೇಕೆಂದು ಗೊತ್ತಿದೆ. ಮಾಡುತ್ತಾನೆ. ವ್ಯಂಗ್ಯದ ಸಂಗತಿ ಎಂದರೆ ಎಲ್ಲರಂತೆಯೇ ಇರಲು, ಸರಕಾರ ಅಥವಾ ವ್ಯವಸ್ಥೆ ಹೇಳಿದಂತೆ ಕೇಳಲು ಅವನಿಗೆ ಎಲ್ಲ ಮೂಲಭೂತ ಹಕ್ಕುಗಳೂ ಇವೆ. ಒಂದು ದಿನ ಆತ ಸತ್ತು ಹೋಗುತ್ತಾನೆ. ಕವಿತೆ ಹೇಳುತ್ತದೆ: “ಆತ ಸಂತೋಷವಾಗಿದ್ದನೇ ಇತ್ಯಾದಿ ಪ್ರಶ್ನೆಗಳನ್ನು ಕೇಳಬೇಡಿ!’  ಅಂತಹ ಪ್ರಶ್ನೆಗಳು ಅಪ್ರಸ್ತುತ. ಆತ ಸಂತೋಷವಾಗಿದ್ದನೆಂದೇ ಭಾವಿಸಿಕೊಳ್ಳಬೇಕು. ಏಕೆಂದರೆ ವ್ಯಕ್ತಿಯ ಬದುಕನ್ನು ಸಂತೋಷವನ್ನು ಕೂಡ ನಿರ್ಧರಿಸುವುದು ಸರ್ಕಾರವೇ. 

ಆದರೆ ವ್ಯಕ್ತಿತ್ವದ ಖಾಸಗಿತನವನ್ನು ಮತ್ತು ಘನತೆಯನ್ನು ತ್ರ್ಯಆಗಿ ಎತ್ತಿ ಹಿಡಿಯುವ ಸಂದರ್ಭದಲ್ಲಿ ಸಾಮಾಜಿಕವಾಗಿ ಹಲವು ಸಂಕೀರ್ಣರೂಪದ ಸಮಸ್ಯೆಗಳನ್ನೂ ಗಮನಿಸಿಕೊಳ್ಳಬೇಕು. ಉದ್ಭವಿಸುವ ಪ್ರಶ್ನೆಗಳೇನೆಂದರೆ ಸಾಮಾಜಿಕ ದೃಷ್ಟಿಯಿಂದ ವ್ಯಕ್ತಿಯ ವೈಯಕ್ತಿಕತೆಯ ವಿಸ್ತಾರಕ್ಕೆ ಎಲ್ಲೆಗಳು ಇರಬೇಕೇ? ಎಲ್ಲೆಗಳನ್ನು ಯಾರು ಸೃಷ್ಟಿಸಬೇಕು? ಅವು ಹೇಗಿರಬೇಕು? ಈ ಪ್ರಶ್ನೆಗಳು ನಾಗರಿಕತೆಯ ಆರಂಭದಿಂದಲೇ ಹುಟ್ಟಿಕೊಂಡ ಪ್ರಶ್ನೆಗಳು. ಕುತೂಹಲಕರವೆಂದರೆ ಸಮಾಜಗಳು ಆರಂಭದಿಂದಲೇ ಈ ಪ್ರಶ್ನೆಗಳನ್ನು ಗುರುತಿಸಿ ಅವುಗಳಿಗೆ ಉತ್ತರಗಳನ್ನೂ ಕಂಡುಕೊಂಡಿದ್ದವು. ವ್ಯಕ್ತಿ ಮತ್ತು ಸಮಾಜದ ನಡುವೆ ಸುಮಧುರ ಸಂಬಂಧ ಕಾಪಾಡುವ ಸಲುವಾಗಿ ಅವು ಕಂಡುಕೊಂಡ ಉತ್ತರ ಒಂದು ಸ್ಥೂಲವಾದ ಮಾರ್ಗದರ್ಶಿ ಸೂತ್ರಗಳನ್ನೊಳಗೊಂಡ ಚೌಕಟ್ಟೊಂದರ ನಿರ್ಮಾಣ. ವ್ಯಕ್ತಿಯ ಸಾಮಾಜಿಕ ಬದುಕಿನ ಸ್ತಂಭಗಳಾದ ಮೌಲ್ಯಗಳನ್ನು ಹೊಂದಿದ್ದ ಇಂತಹ ಚೌಕಟ್ಟನ್ನೇ ಸಮಾಜಗಳು ಸಂಸ್ಕೃತಿ (ಕಲ್ಚರ್‌)ಎಂದು ಕರೆದಿದ್ದು. ಇಂತಹ ಚೌಕಟ್ಟುಗಳನ್ನು ಗೌರವಿಸಿ ಸಮಾಜಗಳು ಮತ್ತು ವ್ಯಕ್ತಿಗಳು ಬದುಕಿ ಬಂದಿದ್ದು ನಮಗೆ ಗೊತ್ತು. ಉದಾಹರಣೆಗೆ ಕೆಲವೇ ವರ್ಷಗಳ ಮೊದಲು ದೊಡ್ಡ ದೊಡ್ಡ ಒಟ್ಟು ಕುಟುಂಬಗಳು ಅಸ್ತಿತ್ವದಲ್ಲಿದ್ದವು. ಕುಟುಂಬಕ್ಕೊಬ್ಬ ಯಜಮಾನ/ಯಜಮಾನಿ ಇರುತ್ತಿದ್ದರು. ಹಾಗೆಯೇ ಆ ಕುಟುಂಬಕ್ಕೆ ಬದುಕಿಗೆ ಮಾರ್ಗದರ್ಶಿಯಾಗಬಲ್ಲ, ಸಮಕಾಲೀನಗೊಳಿಸಲಾದ ಒಂದು ಸೂತ್ರ ಇರುತ್ತಿತ್ತು. ಆ ಸಾಂಸ್ಕೃತಿಕ ಚೌಕಟ್ಟಿನೊಳಗೇ ಎಲ್ಲರೂ ಬದುಕಬೇಕಾಗುತ್ತಿತ್ತು. ತಮ್ಮ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು  ಪೂರೈಸಿಕೊಳ್ಳಬೇಕಾಗುತ್ತಿತ್ತು. ಕೆಲವರಿಗೆ ಎರಡು, ಮೂರು ಹೆಂಡತಿ ಹೀಗೆ ಇರುತ್ತಿದ್ದುದಿದೆ. ಇಲ್ಲವೆಂದೇನೂ ಅಲ್ಲ. ಅನೈತಿಕತೆ ಇರಲಿಲ್ಲ ಎಂದೇನೂ ಅಲ್ಲ. ಬಹುಶಃ ಮಾನವೀಯವಾದ ಇಂದು ಚರ್ಚಿತವಾಗುತ್ತಿರುವ ಎಲ್ಲವೂ ಎಲ್ಲ ಕಾಲದಲ್ಲಿಯೂ ಇತ್ತು ಮತ್ತು ಇದೆ. ಸಂಸ್ಕೃತಿ ಅವುಗಳನ್ನು ಬೆಡ್‌ಶೀಟ್‌ನ ಹಿಂದೆ ಮುಚ್ಚಿ ಹಾಕಿ ಬಿಡುತ್ತಿತ್ತು. ಅಂತಹ ಕೃತ್ಯಗಳನ್ನು ಸಮಾಜ ಪ್ರಚುರ ಪಡಿಸುತ್ತಿರಲಿಲ್ಲ. ಬದಲಿಗೆ ಸಂಸ್ಕೃತಿಯನ್ನು ಚಿಕ್ಕಂದಿನಿಂದಲೇ ಕಲಿಸಿ ಮನದಟ್ಟು ಮಾಡಿ ಬಿಡಲಾಗುತ್ತಿತ್ತು. ಸರಳ ಉದಾಹರಣೆಗಳೆಂದರೆ ಹುಡುಗಿಯರು ಹೂ ಮುಡಿದುಕೊಳ್ಳಬೇಕಾಗಿತ್ತು. ಹುಡುಗರು ಕೂದ‌ಲನ್ನು ನೀಟಾಗಿ ಕತ್ತರಿಸಿಕೊಳ್ಳಬೇಕಾಗುತ್ತಿತ್ತು. ಸ್ತ್ರೀಯರು ಕುಂಕುಮ ಇಟ್ಟುಕೊಳ್ಳಬೇಕಾಗುತ್ತಿತ್ತು. ಗೌರವಾನ್ವಿತವಾದ ಆಯಾ ವಯಸ್ಸಿಗೆ ಸುಂದರ ಮತ್ತು ಸಭ್ಯವೆನಿಸುವ ಬಟ್ಟೆ ತೊಡಬೇಕಾಗುತ್ತಿತ್ತು. ಹಬ್ಬ ಹರಿದಿನಗಳಲ್ಲಿ ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡಬೇಕಾಗಿತ್ತು. ಪ್ರೇಮ ವಿವಾಹಗಳು ಇತ್ಯಾದಿ ಇರಲಿಲ್ಲವೆಂದೇನೂ ಅಲ್ಲ. ಆದರೂ ಹೆಚ್ಚು ಕಡಿಮೆ ವಿವಾಹ ಸಂದರ್ಭವನ್ನೂ ಹಿಡಿದು ಎಲ್ಲ ಸಂದರ್ಭಗಳಲ್ಲಿಯೂ ಸಾಂಸ್ಕೃತಿಕ ಚೌಕಟ್ಟಿನ ಒಳಗಡೆ ಬದುಕಬೆೇಕಾಗುತ್ತಿತ್ತು. ಹುಟ್ಟಿನಿಂದ ಆರಂಭವಾಗಿ ಮರಣದವರೆಗೂ ಕೂಡ ವ್ಯಾಖ್ಯಾಯಿಸಲಾದ ಷೋಡಷ ಸಂಸ್ಕಾರದಲ್ಲಿ ಭಾಗವಹಿಸಬೇಕಾಗಿತ್ತು. ಈ ರೀತಿಯ, ಸಂಸ್ಕೃತಿಯ ಕಲ್ಪನೆ ಪ್ರತಿಯೊಂದು ಧರ್ಮದಲ್ಲಿಯೂ ಪ್ರತ್ಯೇಕವಾಗಿದೆ. ಆದರೂ ಸಂಸ್ಕೃತಿಯ ಪರಿಕಲ್ಪನೆ ಇದ್ದೇ ಇದೆ. 

Advertisement

ಸಮಾಜಕ್ಕೆ ಗೊತ್ತಿತ್ತು. ಏನೆಂದರೆ ಮನುಷ್ಯನೊಳಗೆ ಒಂದು ಮೃಗೀಯತೆ ಇರುತ್ತದೆ. ಇಂತಹ ಮೃಗೀಯತೆಯನ್ನು ಮತ್ತು ಅನಾರ್ಕಿಸಂ ಅನ್ನು ನಿಯಂತ್ರಿಸಲು ಇವೆಲ್ಲ ಕಟ್ಟು ಪಾಡುಗಳು ಅಗತ್ಯ ಎನ್ನುವುದು. ಈ ರೀತಿಯ ಸಾಂಸ್ಕೃತಿಕ ಬಂಧನಗಳಿಂದಾಗಿಯೇ, ಸಮಾಜಗಳು ತಮ್ಮನ್ನು ತಾವು ಸಾವಿರಾರು ವರ್ಷಗಳ ಕಾಲ ಮುನ್ನಡೆಸಿಕೊಳ್ಳತ್ತ ಬಂದಿವೆ. ಚೌಕಟ್ಟುಗಳು ವ್ಯಕ್ತಿಗೆ ಧರ್ಮಕ್ಕೆ ಅಥವಾ ಸಮಾಜಕ್ಕೆ ಮತ್ತು ಆ ಪ್ರದೇಶಕ್ಕೆ ಸಂಬಂಧಿಸಿ, ಆ ಸಮಯದ ಬೇಡಿಕೆಗಳಿಗೆ ಸ್ಪಂದಿಸಿ ಲಿಬರಲ್‌ ಆಗಿ ಅಥವಾ ಕಠಿಣವಾಗಿ ಪರಿವರ್ತನೆಯಾಗುತ್ತಿದ್ದವು. ಯಾವ ರೀತಿಯ ನಡವಳಿಕೆ ಸಂಸ್ಕೃತಿಯ ಒಳಗಿನದು ಮತ್ತು ಯಾವ ರೀತಿಯದು ಸಂಸ್ಕೃತಿಯ ಹೊರಗಿನದು ಎನ್ನುವುದರ ಕುರಿತ‌ ವ್ಯಾಖ್ಯೆ ಬಹಳ ಸ್ಪಷ್ಟವಾಗಿ ಇರುತ್ತಿತ್ತು.

ಭಾರತೀಯ ಸಮಾಜದ ಸಂದರ್ಭದಲ್ಲಿಯಂತೂ ಸಮಾಜ ಸುಸ್ಥಿರವಾಗಿ, ಸಾವಿರಾರು ವರ್ಷಗಳ ಕಾಲ ನಿಂತು ತನ್ನ ಅನನ್ಯತೆಯನ್ನು ಕಾಯ್ದುಕೊಂಡು  ಬಂದ ಕಾರಣ ಸಂಸ್ಕೃತಿಯೊಂದರ ಕುರಿತಾಗಿನ ಸ್ಪಷ್ಟವಾದ ಅರಿವು. ಪಾಶ್ಚಿಮಾತ್ಯ ರಾಷ್ಟ್ರಗಳು ಅನುಭವಿಸಿದ ಸಾಮಾಜಿಕ ಮತ್ತು ವೈಯಕ್ತಿಕ ಅಲ್ಲೋಲ ಕಲ್ಲೋಲ ಇಲ್ಲಿ ಹುಟ್ಟಿಕೊಳ್ಳದಿರುವುದಕ್ಕೆ ಕಾರಣ ಇದು. ಉದಾಹರಣೆಗೆ ಪಶ್ಚಿಮದಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡ ವಿಪರೀತ ರೀತಿಯ, ವ್ಯಕ್ತಿ ಆಧರಿತ ಅವಂಟ್‌ಗಾರ್ಡ್‌ ಚಳವಳಿಗಳು ಅಂದರೆ ನಂಬಿಗೆಗಳನ್ನು ಬುಡ ಮೇಲು ಮಾಡುವ ಚಳುವಳಿಗಳು ಹುಟ್ಟಿ ಕೊಂಡ ಕಾರಣವೂ ಇದು. ಏನೆಂದರೆ ಪಾಶ್ಚಾತ್ಯ ಸಮಾಜ ತನ್ನ ಸಂಸ್ಕೃತಿಯ ಕವಚವನ್ನು ಐತಿಹಾಸಿಕ ಕಾರಣಗಳಿಂದಾಗಿ ಕಳೆದುಕೊಂಡು ನಿಂತು ಬಿಟ್ಟಿದ್ದು ಕಾಮು ಮತ್ತು ಸಾತ್ರೆìಯಂತಹ ತತ್ವಜ್ಞಾನಿಗಳ “”ಬದುಕೇ ಅರ್ಥಹೀನವಾದುದು, ಮಾನವ ಕೇವಲ ತಬ್ಬಲಿ” ಇತ್ಯಾದಿ ವಿಚಾರಗಳನ್ನು ಹೊಂದಿದ ಅಸ್ತಿತ್ವವಾದಿ ತತ್ವಜ್ಞಾನ ಪಶ್ಚಿಮದಲ್ಲಿ ಅದೇ ಸಂದ‌ರ್ಭದಲ್ಲಿ ಹುಟ್ಟಿಕೊಂಡಿದ್ದಕ್ಕೆ ಕಾರಣವೂ ಅದು.

 ನಮ್ಮ ದೇಶದಲ್ಲಿ ಅಂತಹ ವಿಪರೀತವಾದ ವೈಯಕ್ತಿಕತೆಯನ್ನು ಪ್ರತಿಪಾದಿಸುವ ವಿಚಾರಗಳು ಹುಟ್ಟಿಕೊಳ್ಳದಿರುವುದಕ್ಕೆ ಕಾರಣ ನಮ್ಮಲ್ಲಿ ಸಂಸ್ಕೃತಿಯ ಪರಿಕಲ್ಪನೆ ಬಲವಾಗಿಯೇ ಇದ್ದಿದ್ದು. ನಮ್ಮಲ್ಲಿ ಸಂಸ್ಕೃತಿಯೇ ಬದುಕಿಗೆ ಅರ್ಥವನ್ನು ನೀಡುತ್ತಿತ್ತು. ನೀಡುತ್ತದೆ. ಬದುಕು ಅರ್ಥಹೀನ ಎಂಬ ಕಲ್ಪನೆಯ ಮನಸ್ಸಿಗೆ ಬರದಂತೆ ಅಥವಾ ವ್ಯಕ್ತಿಗಳ ವೈಯಕ್ತಿಕ ಎಕ್ಸೆಂಟ್ರಿಸಿಟಿಸ್‌ಗಳೇ ಮೇಲಾಗಿ ಹೋಗಿ ಸಮಾಜಗಳು ನಾಶವಾಗಿ ಹೋಗದಂತೆ ರಕ್ಷಿಸಿಕೊಂಡು ಬಂದಿದ್ದು ಸಂಸ್ಕೃತಿ.

ಹಾಗೆಂದು ಸಾಂಸ್ಕೃತಿಕ ಚೌಕಟ್ಟುಗಳು ಹಲವೊಮ್ಮೆ ದೋಷಪೂರಿತವಾಗಿ ಇದ್ದಿದ್ದೂ ಇಲ್ಲವೆಂದೇನೂ ಅಲ್ಲ. ಚೌಕಟ್ಟುಗಳು ಗೊಡ್ಡು ಸಂಪ್ರದಾಯಗಳಾಗಿ ಪರಿವರ್ತನೆಯಾಗಿದ್ದೂ ಇದೆ. ವಿಶೇಷವಾಗಿ ಮಹಿಳೆಯರನ್ನು ಮತ್ತು ಹಿಂದುಳಿದ ವರ್ಗದವರನ್ನು, ಸವರ್ಣೀಯರನ್ನು ಭಾರತವನ್ನೂ ಹಿಡಿದು ಜಗತ್ತಿನಾದ್ಯಂತ ಸಂಸ್ಕೃತಿಗಳು ಶೋಷಿಸಿದ್ದೂ ಇದೆ. ಚೌಕಟ್ಟುಗಳ ವಿರುದ್ಧವೇ ಜನ ಎದ್ದು ನಿಂತು ಹೋರಾಟ ಮಾಡಬೇಕಾದ ಪರಿಸ್ಥಿತಿಯೂ ಇತಿಹಾಸದಲ್ಲಿ ಪದೇ ಪದೇ ನಿರ್ಮಾಣವಾಗುತ್ತಲೇ ಹೋಗಿದೆ. ಹೀಗಾಗಿ ಸಂಸ್ಕೃತಿಗಳು ತಮ್ಮ ಹರಿವಿನ ದಾರಿಗಳನ್ನು ಪದೇ ಪದೇ ಬದಲಿಸಿಕೊಂಡಿವೆ. ಆದರೂ ಒಟ್ಟಾರೆಯಾಗಿ ನೋಡಿದರೆ ವ್ಯಕ್ತಿ ಮತ್ತು ಸಮುದಾಯಗಳ ನಡುವೆ ಅನುಬಂಧವೊಂದನ್ನು ಸೃಷ್ಟಿಸಿದ್ದು ಸಂಸ್ಕೃತಿ. ಸಂಸ್ಕೃತಿ ಇಲ್ಲದಿರುವುದಕ್ಕಿಂತಲೂ ಇರುವುದು ಒಳ್ಳೆಯದು. ಸಂಸ್ಕೃತಿಯ ರಾಜಕೀಯ ಮಹತ್ವ ಕೂಡ ನಮಗೆ ಗೊತ್ತಿದೆ. ಏನೆಂದರೆ ಒಂದು ಸಮಾಜ ತನ್ನ ಸಂಸ್ಕೃತಿಯನ್ನು ಕಳೆದುಕೊಂಡು ಕುಳಿತರೆ ಅದು ರಾಜಕೀಯವಾಗಿ ಕೂಡ ಅಶಕ್ತವಾಗಿ ಹೋಗುತ್ತದೆ ಎನ್ನುವುದು. ವಿಷಯ ಮೆಕಾಲೆಯಂತವರಿಗೆ ಗೊತ್ತಿತ್ತು. ಅದಕ್ಕೆ ಭಾರತವನ್ನು ದೀರ್ಘ‌ಕಾಲ ಆಳಲು ಸಾಧ್ಯವಾಗುವುದು ಜನರನ್ನು ಸಂಸ್ಕೃತಿ ಹೀನರನ್ನಾಗಿಸುವುದರ ಮೂಲಕ ಮಾತ್ರ ಸಾಧ್ಯ ಎಂದು ಮೆಕಾಲೆ ಹಾಗೂ ಅಂಥವರು ಯೋಚಿಸಿದ್ದು. ಯೋಚಿಸಿದ್ದು ಅಷ್ಟೇ ಅಲ್ಲ, ನಮ್ಮನ್ನು ಸಂಸ್ಕೃತಿ ಹೀನರನ್ನಾಗಿಸಲು ಪ್ರಯತ್ನಿಸಿದ್ದು ಕೂಡ. ಪಾಶ್ಚಾತ್ಯೀಕರಣದ ವಿರುದ್ಧ ನಮ್ಮ ಆತಂಕವೂ ಅದೇ. ಏನೆಂದರೆ ಅದು ನಮ್ಮ ಸಂಸ್ಕೃತಿಯ ಬೇರನ್ನೇ ಕಿತ್ತೆಸೆದೀತು ಎನ್ನುವುದು.

ಇಲ್ಲಿ ಒಂದು ಮಾತನ್ನು  ಹೇಳಿಕೊಳ್ಳಬೇಕು. ಏನೆಂದರೆ ಸಂಸ್ಕೃತಿಯನ್ನು ಒಂದು ಜಡ ವ್ಯವಸ್ಥೆಯನ್ನಾಗಿ ನಾವು ಗ್ರಹಿಸಬಾರದು. ಅದು ಒಂದು ಶೋಷಣೆಯ ವಿಧಾನವಾಗ ಬಾರದು. ಒಂದು ಚೈತನ್ಯಶೀಲವಾಗಿ ಹರಿಯುವ ನದಿಯಂತೆ ಇರಬೇಕು ಸಂಸ್ಕೃತಿ.

ಈ ಹಿನ್ನೆಲೆಯಲ್ಲಿ ನಾವು ಸುಪ್ರೀಂ ಕೋರ್ಟ್‌  ತೀರ್ಪನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದೇ ಭಾವನೆ. ಇಲ್ಲಿ ಕೆಲವು ಸಮಕಾಲೀನ ಆತಂಕಗಳಿವೆ. ಮುಖ್ಯವಾದದ್ದು ಸಾಮಾಜಿಕ ಆರೋಗ್ಯವನ್ನು ಧಿಕ್ಕರಿಸುತ್ತಿರುವಂತೆ ಕಾಣುತ್ತಿರುವ ವೈಯಕ್ತಿಕತೆ. ಇಂದು ವಿಪರೀತವೆನಿಸುವ ಖಾಸಗಿತನದ  ಬಯಕೆಗಳು ಹೆಚ್ಚಾಗುತ್ತಿವೆ ಎಂಬ ಭಾವನೆಯೂ ಇದೆ. ವಿವಾಹಗಳು ಮುರಿದು ಬೀಳಲು, ಕುಟುಂಬಗಳು ಒಡೆದು ಹೋಗಲು, ವಿಪರೀತ ವೈಯಕ್ತಿಕತೆಯ ಬಯಕೆ ಕಾರಣ ಎಂಬುದು ನಮಗೆ ಗೊತ್ತು. “”ತಂದೆ-ತಾಯಿಯರಿಗೆ ಬೇಸರವಾದರೇನಂತೆ ನಾನು ಕುಡಿಯುವವನೇ. ಅದು ನನ್ನ ವೈಯಕ್ತಿಕತೆ!” ಎಂದು ಹುಡುಗನೊಬ್ಬ ಹೇಳಿದರೆ, ಚಿಕ್ಕ ಪುಟ್ಟ ಕಾರಣಗಳಿಗೂ ಡೈವೋಸ್‌Õ ನೀಡಿ “”ಅದು ನನ್ನ ವೈಯಕ್ತಿಕ ವಿಚಾರ”ಎಂದು ಹುಡುಗಿಯೊಬ್ಬಳು ಹೇಳಬಹುದಾಗಿದೆ. 

ಇತ್ತೀಚೆಗೆ ಸ್ತ್ರೀ ಸ್ವಾತಂತ್ರ್ಯದ ಸಂಬಂಧದಲ್ಲಿ ಮುಜುಗರವೆನಿಸುವ ವಿಪರೀತ ಹೇಳಿಕೆಗಳು ಪರ ಮತ್ತು ವಿರೋಧಿ ಬಣಗಳೆರಡರಿಂದಲೂ ಹೊರಬಿದ್ದಿದ್ದವು. ಬಯಸಿದ್ದು ಏನು ಬೇಕಾದರೂ ತಿನ್ನುವುದು, ಕುಡಿಯುವುದು, ಬಯಸಿದಂತೆ ಬದುಕುವುದು ವ್ಯಕ್ತಿಯೊಬ್ಬನ ವೈಯಕ್ತಿಕತೆಯಾದರೂ ಅದನ್ನೇ ಸಾರ್ವಜನಿಕವಾಗಿ ಪ್ರದರ್ಶಿಸಲು ಹೋಗಿ ಬೇರೆಯುವರ ಮನಸ್ಸಿಗೆ ನೋವುಂಟಾಗುವ ಸಂದರ್ಭ ಗಳನ್ನೂ ನೋಡಿದ್ದೇವೆ.

 ಬಹುಶಃ ನಮಗೆ ಒಂದು ಸಾಂಸ್ಕೃತಿಕ ಚೌಕಟ್ಟನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಸಂಸ್ಕೃತಿ ಒಂದು ಸಮಾಜದ ಜೀವಾಳ. ವೈಯಕ್ತಿಕತೆಯನ್ನು ಪಾಶ್ಚಾತ್ಯ ಮಾದರಿಯಲ್ಲಿ ನಾವೂ ವಿಂಜೃಭಿಸುತ್ತ ಹೋದರೆ ನಮ್ಮ ದೇಶ ಮತ್ತು ಸಮಾಜಕ್ಕೆ ಅಪಾಯ ಉಂಟಾಗುತ್ತದೆ. ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧದ ಸೇತುವೆ ಕುಸಿದು ಬೀಳುತ್ತದೆ ಎಂದೇ ಅನಿಸುತ್ತದೆ. ನಾನು ಹೇಳುತ್ತಿರುವುದು, ಜಡವಾದ ರೀತಿಯ ಸಂಸ್ಕೃತಿಯ ಕುರಿತಾಗಿಯಲ್ಲ. ಗಾಂಧೀಜಿ ಕಲಿಸಿಕೊಟ್ಟಂತಹ ಪರಂಪರೆಯ ಶ್ರೇಷ್ಟ ಅಂಶಗಳನ್ನು ಹಾಗೆಯೇ ಆಧುನಿಕತೆಯ ಅಂಶ ಗಳನ್ನು ಮಿಳಿತವಾಗಿಸಿಕೊಳ್ಳುತ್ತ ಹೋಗುವ ಹರಿಯುವ ನೀರಿನಂತಹ ಸಂಸ್ಕೃತಿಯ ಕುರಿತು.

ವೈಯಕ್ತಿಕತೆ ವಿಕೃತಿಯಾಗಬಾರದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. 

ಡಾ.ಆರ್‌.ಜಿ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next