Advertisement

ಮಾದಾರ ಚನ್ನಯ್ಯನ ಸಂಶೋಧನೆ ಆಗಲಿ

10:19 AM Dec 20, 2021 | Team Udayavani |

ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರಲ್ಲಿ ಪ್ರಮುಖರಾದ ಮಾದಾರ ಚನ್ನಯ್ಯನವರ ಬಗ್ಗೆ ಮತ್ತಷ್ಟು ಆಳವಾದ ಅಧ್ಯಯನ ಮತ್ತು ಸಂಶೋಧನೆ ಅಗತ್ಯವಾಗಿದೆ ಎಂದು ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಪ್ರೊ| ಸಂಜಯ ಮಾಕಲ್‌ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ರವಿವಾರ ಶಿವಶರಣ ಮಾದಾರ ಚನ್ನಯ್ಯ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಮಾದಾರ ಚನ್ನಯ್ಯ ಜಯಂತ್ಯೋತ್ಸವ ಹಾಗೂ ಗಣ್ಯರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳುನಾಡಿನ ಮಾದಾರ ಚನ್ನಯ್ಯನವರು ಬಸವಾದಿ ಶರಣ ಅನುಭವ ಮಂಟಪ ಸೇರಿದ ಮೇರು ವ್ಯಕ್ತಿಯಾದರು. ತಮಿಳುನಾಡಿನ ರಾಜಧಾನಿ ಮದ್ರಾಸ್‌ ಎಂದಾಗಲಿ, ಚೆನ್ನೈ ಅಂದಾಗಲಿ, ಆ ಹೆಸರು ಮಾದಾರ ಚನ್ನಯ್ಯನವರಿಂದ ಬಂದಿದ್ದು ಎನ್ನಲಾಗುತ್ತದೆ. ಹೀಗಾಗಿ ಅವರ ಬಗ್ಗೆ ಹೆಚ್ಚಿನ ಸಂಶೋಧನೆ ಇನ್ನೂ ನಡೆಯಬೇಕಿದೆ ಎಂದರು.

ಬಸವಣ್ಣನವರ ವಿಚಾರ ಕ್ರಾಂತಿ ಬಹಳ ದೊಡ್ಡದು. ಅವರು ಶೋಷಿತ, ತುಳಿಯಲ್ಪಟ್ಟ ಸಮುದಾಯದವರನ್ನೇ ತಮ್ಮ ಹತ್ತಿರಕ್ಕೆ ಸೇರಿಸಿಕೊಂಡರು. ಮಾದಿಗ ಸಮುದಾಯವನ್ನು ತುತ್ಛವಾಗಿ ಕಾಣುತ್ತಿದ್ದ ಕಾಲದಲ್ಲಿ ಮಾದಾರ ಚನ್ನಯ್ಯನವರನ್ನು ಬಸವಣ್ಣನವರು “ಅಪ್ಪ’ ಎಂದು ಕರೆದಿದ್ದರು. “ಅಪ್ಪನು ನಮ್ಮ ಮಾದಾರ ಚನ್ನಯ್ಯ ಎಂದು ಬರೆದರು’. ಜಾತಿ ತಾರತಮ್ಯ ಮಟ್ಟಹಾಕುವಲ್ಲಿ ಬಸವಣ್ಣನವರು ಎಷ್ಟೊಂದು ಆಳಕ್ಕೆ ಇಳಿದಿದ್ದರು ಎಂಬುದೇ ರೋಮಾಂಚಕ ಎಂದರು.

ಜಗತ್ತಿನ ಮೊದಲ ಸಂಸತ್ತಾಗಿದ್ದ ಬಸವಣ್ಣನವರ ಅನುಭವ ಮಂಟಪದಲ್ಲಿ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಹರಳಯ್ಯನವರು ಸಂಸದರು ಆಗಿದ್ದರು. ಲಿಂಗಾಯತ ಧರ್ಮವನ್ನು ಇಂತಹ ಶರಣರೆಲ್ಲನ್ನೂ ಸೇರಿಸಿಕೊಂಡು ಬಸವಣ್ಣನವರು ಕಟ್ಟಿದರು. ಲಿಂಗಾಯತ ಧರ್ಮ ಪ್ರಜಾಪ್ರಭುತ್ವದ ಧರ್ಮ ಎಂದು ವಿಶ್ಲೇಷಿಸಿದರು.

Advertisement

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ನಿಕಾಯದ ಡೀನ್‌ ಡಾ| ಶಿವಗಂಗಾ ರುಮ್ಮಾ ಮಾತನಾಡಿ, ಶತಮಾನಗಳ ಹಿಂದೆ ಸಾಮಾಜಿಕ ಅವಶ್ಯಕ ವಸ್ತು ಉತ್ಪಾದಿಸುವವರೆಲ್ಲ ತೆರಿಗೆ ಕಟ್ಟುವ ಪದ್ಧತಿ ಜಾರಿಗೆ ಬಂತು. ಹಲವು ಕನ್ನಡ ಶಾಸನಗಳಲ್ಲಿ “ಮಾದಿಗದೆರೆ’ ಎಂಬ ಪದ ಬಳಕೆಯಾಗಿದೆ. ಅಂದರೆ ಮಾದಿಗ ಸಮುದಾಯದವರೂ ಆಗ ತೆರಿಗೆ ಕಟ್ಟುವ ಹಂತಕ್ಕಿದ್ದರು ಎಂದರು.

ಆದಿ ಜಾಂಬವ ಕಲ್ಯಾಣ ಸಂಘದ ಅಧ್ಯಕ್ಷ ಎ.ಎಚ್‌.ನಾಗೇಶ ಮತ್ತು ಮಹಾನಗರ ಪಾಲಿಕೆಯ ನೂತನ ಸದಸ್ಯೆ ನಿಂಗಮ್ಮ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ವಧು-ವರರ ಮಾಹಿತಿ ಕೇಂದ್ರದ ಅಧ್ಯಕ್ಷ ರಾಜಾ ಸಾಯಬಣ್ಣ ಅಧ್ಯಕ್ಷತೆ ವಹಿಸಿದ್ದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ಆಯೋಗದ ಸದಸ್ಯೆ ಗೀತಾ ರಾಜು ವಾಡೇಕರ್‌, ಮಾಜಿ ಮೇಯರ್‌ ಚಂದ್ರಿಕಾ ಪರಮೇಶ್ವರ, ಡಾ| ಬಿ.ಆರ್‌. ಅಂಬೇಡ್ಕರ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಬಿಲ್ಲವ, ಕುಡಾ ಮಾಜಿ ಸದಸ್ಯ ಶಾಮ್‌ ನಾಟೀಕಾರ, ಕರ್ನಾಟಕ ದಲಿತ- ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಲಿಂಗರಾಜ ತಾರಫೈಲ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅನಿಲಕುಮಾರ ಗೋಖಲೆ ಪಾಲ್ಗೊಂಡಿದ್ದರು.

ದೇಶದಲ್ಲಿ ಬುದ್ಧ, ಬಸವಣ್ಣನವರ ಆಶಯಗಳು ಡಾ| ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ಮೂಲಕ ಅನುಷ್ಠಾನಗೊಂಡಿವೆ. ಈಗ ಅದೇ ಸಂವಿಧಾನಕ್ಕೆ ಆಪತ್ತು ಎದುರಾಗಿದ್ದು, ಖಾಸಗೀಕರಣ ಮಾಡಿ, ಮೀಸಲಾತಿಯಿಂದ ವಂಚಿಸುವ ಹುನ್ನಾರ ನಡೆದಿದೆ. -ಪ್ರೊ| ಸಂಜಯ ಮಾಕಲ್‌, ಪ್ರಾಧ್ಯಾಪಕ, ಪಿಡಿಎ ಎಂಜಿನಿಯರಿಂಗ್‌ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next