Advertisement

ತಪ್ಪು ತಿದ್ದಿಕೊಳ್ಳುತ್ತಿದೆ ನೇಪಾಲ ; ಬಾಂಧವ್ಯ ವೃದ್ಧಿಸಲಿ

12:16 AM Nov 02, 2020 | mahesh |

ಕಳೆದ ಕೆಲವು ತಿಂಗಳಿಂದ ನೇಪಾಲ ಮತ್ತು ಭಾರತದ ನಡುವೆ ಸೃಷ್ಟಿಯಾಗಿದ್ದ ಬಿಕ್ಕಟ್ಟು ನಿಧಾನಕ್ಕೆ ಶಮನವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇತ್ತೀಚೆಗಷ್ಟೇ ಭಾರತದ “ರಾ’ ಮುಖ್ಯಸ್ಥ ಸಮಂತ್‌ ಕುಮಾರ್‌ ಗೋಯಲ್‌ ನೇಪಾಲ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಈಗ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಣೆಯವರು ನವೆಂಬರ್‌ 4ರಿಂದ ಮೂರು ದಿನಗಳ ನೇಪಾಲ ಪ್ರವಾಸ ಕೈಗೊಳ್ಳಲಿದ್ದು, ಓಲಿಯವರೊಂದಿಗೆ ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಸಲಿದ್ದಾರೆ. ಓಲಿ ಸರಕಾರ ಮಹಾಕಾಳಿ ನದಿ ದಂಡೆಯಲ್ಲಿನ ಪಂಚೇಶ್ವರ ಯೋಜನೆ ಸೇರಿದಂತೆ ಭಾರತದ ಸಹಭಾಗಿತ್ವದ ವಿವಿಧ ಹೈಡ್ರೋ-ಎಲೆಕ್ಟ್ರಿಕ್‌ ಯೋಜನೆಗಳಿಗೆ ಮರುಜೀವ ಕೊಡುವುದಕ್ಕೆ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.

Advertisement

ಗಡಿ ಭಾಗದಲ್ಲಿ ಭಾರತ ಮತ್ತು ಚೀನ ನಡುವೆ ಬಿಕ್ಕಟ್ಟು ಸೃಷ್ಟಿಯಾದ ಸಮಯ ದಿಂದಲೂ ನೇಪಾಲ ಸರಕಾರವು ಭಾರತಕ್ಕೆ ತಲೆನೋವಾಗಿ ಪರಿಣಮಿಸಲು ಪ್ರಯತ್ನಿಸುತ್ತಿತ್ತು. ಲಿಂಪಿಯಾಧುರಾ, ಲಿಪುಲೇಖ್‌, ಕಾಲಾ ಪಾನಿಯನ್ನು ನೇಪಾಲದ ಪ್ರದೇಶಗಳೆಂದು ಘೋಷಿಸಿದ ಓಲಿ, ಅದರ ನಕ್ಷೆಯನ್ನೂ ಬಿಡುಗಡೆ ಮಾಡಿ ಭಾರತದ ಮುನಿಸಿಗೆ ಪಾತ್ರರಾದರು. ಇದಷ್ಟೇ ಅಲ್ಲದೇ, ತಮ್ಮ ದೇಶದಲ್ಲಿ ಕೋವಿಡ್‌ ಹೆಚ್ಚಿರುವುದಕ್ಕೇ ಭಾರತವೇ ಕಾರಣ ಎಂದು ಆರೋಪಿಸಿದರು. ಚೀನದ ವೈರಸ್‌ಗಿಂತ ಭಾರತದ ವೈರಸ್‌ ಅಪಾಯಕಾರಿ ಎಂಬ ಅವರ ಹೇಳಿಕೆ ಭಾರತದಲ್ಲಷ್ಟೇ ಅಲ್ಲದೇ, ನೇಪಾಲದಲ್ಲೂ ಟೀಕೆಗೆ ಗುರಿಯಾಗಿತ್ತು. ಇನ್ನು ಎಲ್ಲಕ್ಕಿಂತ ಹೆಚ್ಚಾಗಿ, ರಾಮನ ಜನ್ಮಸ್ಥಾನದ ಕುರಿತು ಅವರು ನೀಡಿದ ವಿವಾದಾತ್ಮಕ ಹೇಳಿಕೆಯಂತೂ, ನೇಪಾಲ ಸರಕಾರ ಹದ್ದುಮೀರುತ್ತಿದೆ ಎನ್ನುವುದಕ್ಕೆ ಉದಾ ಹರಣೆಯಾಗಿತ್ತು. ಆದರೆ, ಚೀನದ ಕುಮ್ಮಕ್ಕಿನಿಂದ ಭಾರತದ ವಿರುದ್ಧ ಹೆಜ್ಜೆಯಿಡಲಾರಂಭಿಸಿದ್ದ ಓಲಿಯವರಿಗೆ ಅವರ ಈ ಧೂರ್ತ ನಡೆಗಳೇ ಕುರ್ಚಿಗೆ ಮಾರಕವಾಗುವಂಥ ಸ್ಥಿತಿ ತಂದಿಟ್ಟವು. ಸ್ವಪಪಕ್ಷೀಯರೇ ಓಲಿಯವರ ಚೀನ ಪರ ಧೋರಣೆಯನ್ನು ಪ್ರಶ್ನಿಸಲಾರಂಭಿಸಿದರು. ನೇಪಾಲದ ಚಿಂತಕರು, ನಿವೃತ್ತ ರಾಜ ಕಾರಣಿಗಳು ಹಾಗೂ ಸಾರ್ವಜನಿಕರೂ ಸಹ ಕೆ.ಪಿ. ಶರ್ಮಾ-ಜಿನ್‌ಪಿಂಗ್‌ರ ಅತಿಯಾದ ದೋಸ್ತಿಯನ್ನು ಖಂಡಿಸಲಾರಂಭಿಸಿದರು.

ಭಾರತದೊಂದಿಗೆ ದಶಕಗಳ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ನಂಟು ಹೊಂದಿರುವ ನೇಪಾಲ, ಚೀನದ ಹಿಡಿತಕ್ಕೆ ಸಿಲುಕಿಬಿಟ್ಟರೆ, ಆ ರಾಷ್ಟ್ರದ ಬುನಾದಿಯೇ ನುಚ್ಚುನೂರಾಗುತ್ತದೆ ಎನ್ನುವುದು ಭಾರತಕ್ಕೂ ಅರಿವಿದೆ. ಈ ಕಾರಣಕ್ಕಾಗಿಯೇ ನೇಪಾಲದ ವಿಷಯದಲ್ಲಿ ಹಲವು ತಿಂಗಳಿಂದ ಅದು ಎಚ್ಚರಿಕೆಯ, ಪ್ರಬುದ್ಧತೆಯ ನಡೆ ಇಡುತ್ತಲೇ ಬಂದಿತ್ತು.

ಭಾರತ ತನ್ನ ಸರ್ವಋತು ಗೆಳೆಯ ಎನ್ನುವ ಸಂಗತಿ ನೇಪಾಲಿಯರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ನೇಪಾಲದ ಮಾಧ್ಯಮಗಳು, ಪ್ರತಿಪಕ್ಷಗಳು, ಹಿರಿಯ ನಿವೃತ್ತ ಅಧಿಕಾರಿಗಳು ಭಾರತದ ವಿರೋಧ ಕಟ್ಟಿಕೊಳ್ಳಬೇಡಿ ಎಂದು ಓಲಿಯವರಿಗೆ ಎಚ್ಚರಿಸುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ನೇಪಾಲದ ಹಿರಿಯ ರಾಜಕಾರಣಿ ಡಾ| ಮೀನೇಂದ್ರ ರಿಜಲ್‌ ಸಹ, “ಮುಂದಿನ 20-25 ವರ್ಷಗಳಲ್ಲಿ ಭಾರತ ಪ್ರಪಂಚದಲ್ಲೇ ಅತೀದೊಡ್ಡ ಆರ್ಥಿಕತೆಯಾಗಬಹುದು. ಹೀಗಿರುವಾಗ, ಭಾರತದೊಂದಿಗಿನ ನಮ್ಮ ಸಂಬಂಧ ಮತ್ತಷ್ಟು ಬಲಿಷ್ಠಗೊಳ್ಳುತ್ತಾ ಸಾಗಬೇಕೇ ಹೊರತು, ನಂಟನ್ನು ಕಡಿದುಕೊಳ್ಳುತ್ತೇವೆಂಬಂತೆ ವರ್ತಿಸುವುದು ನಮ್ಮ ಕಾಲಿಗೆ ನಾವೇ ಕೊಡಲಿಪೆಟ್ಟು ಹಾಕಿದಂತೆ’ ಎಂದು ಹೇಳಿದ್ದರು. ಒಟ್ಟಲ್ಲಿ ನೇಪಾಲ ಹಾಗೂ ಭಾರತದ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಗಟ್ಟಿಯಾಗಲಿ ಎಂಬ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next