Advertisement

ಮೈತ್ರಿ ಸರಕಾರ ಸ್ಥಿರವಾಗಲಿ

06:00 AM Jun 28, 2018 | |

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಟೇಕಾಫ್ ಆಗುತ್ತಿರುವಾಗಲೇ ಅಡಚಣೆಗಳು ಎದುರಾಗುತ್ತಿವೆ. ಪ್ರಸ್ತುತ ಬಜೆಟ್‌ ಮಂಡಿಸುವುದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸರಕಾರದ ಭವಿಷ್ಯದ ಮುಂದೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ. ಚುನಾವಣೆಗೆ ಕೆಲವೇ ತಿಂಗಳ ಮೊದಲು ತಾನು ಮಂಡಿಸಿದ ಬಜೆಟ್‌ ನಿಷ್ಪ್ರಯೋಜಕವಾಗುತ್ತದೆ ಎಂಬ ಆತಂಕ ಸಿದ್ದರಾಮಯ್ಯನವರಿಗಿರುವಂತಿದೆ. ಕುಮಾರಸ್ವಾಮಿಯವರ ಆದ್ಯತೆಗಳು ಬೇರೆಯಾಗಿರುವುದರಿಂದ ತನ್ನ ಜನಪ್ರಿಯ ಕಾರ್ಯಕ್ರಮಗಳು ಮೂಲೆಗುಂಪಾಗುವ ಭೀತಿಯಲ್ಲಿ ಅವರು ಬಜೆಟ್‌ ಮಂಡನೆಯನ್ನು ತಡೆಯಲು ಸಾಕಷ್ಟು ಪ್ರಯತ್ನಿಸಿ ವಿಫ‌ಲಗೊಂಡಿದ್ದಾರೆ. ತನ್ನ ಹಿನ್ನಡೆಯನ್ನು ಅರಗಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿರುವ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಕುಳಿತು ಉರುಳಿಸುತ್ತಿರುವ ದಾಳಗಳು ಸ್ವತಹ ಅವರ ಪಕ್ಷವನ್ನೇ ಕಂಗಾಲಾಗಿಸಿದೆ. 

Advertisement

ಸಮ್ಮಿಶ್ರ ಸರಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಎರಡೂ ಪಕ್ಷಗಳ ಪ್ರತಿನಿಧಿಗಳಿರುವ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಮತ್ತು ಸಿದ್ದರಾಮಯ್ಯನವರೇ ಇದರ ಅಧ್ಯಕ್ಷರಾಗಿದ್ದಾರೆ. ಆದರೆ ಕುಮಾರಸ್ವಾಮಿ ಈ ಸಮನ್ವಯ ಸಮಿತಿಯನ್ನು ಕಡೆಗಣಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಜತೆಗೆ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ವ್ಯವಹರಿಸುವುದು ಮೈತ್ರಿಧರ್ಮಕ್ಕೆ ತಕ್ಕುದಾದ ನಡೆಯಲ್ಲ. ಬಜೆಟ್‌ ಮಂಡನೆಗೂ ಅವರು ರಾಹುಲ್‌ ಗಾಂಧಿಯಿಂದಲೇ ಒಪ್ಪಿಗೆ ಪಡೆದು ಬಂದಿರುವುದು ಸಹಜವಾಗಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿದೆ. ಎಲ್ಲ ಸಮಸ್ಯೆಗಳ ಮೂಲ ಇರುವುದು ಇಲ್ಲಿ. 

ಆರಂಭದಿಂದಲೂ ಸರಕಾರ ಅಡಚಣೆಗಳನ್ನು ಎದುರಿಸುತ್ತಾ ಬಂದಿದೆ. ಸಚಿವ ಪದವಿ ಸಿಗದವರ ಅತೃಪ್ತಿ ಇನ್ನೂ ಪೂರ್ಣವಾಗಿ ಶಮನವಾಗಿಲ್ಲ. ಡಿ.ಕೆ.ಶಿವಕುಮಾರ್‌, ಎಂ. ಬಿ. ಪಾಟೀಲ್‌ ಮತ್ತಿತರರು ಪರಿಸ್ಥಿತಿಯ ಅನಿವಾರ್ಯತೆಯನ್ನು ಮನಗಂಡು ಸದ್ಯಕ್ಕೆ ತಣ್ಣಗಾಗಿದ್ದರೂ ಯಾವುದೇ ಕ್ಷಣದಲ್ಲಿ ಅವರ ಅಸಮಾಧಾನ ಸಿಡಿಯಬಹುದು. ಇದಕ್ಕೆ ತಕ್ಕಂತೆ ವಿವಿಧ ನಾಯಕರು ಸರಕಾರದ ಭವಿಷ್ಯಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಾ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲಾಗಿಸುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಒಂದು ವರ್ಷ ಬಾಳುವುದು ಅನುಮಾನ ಎಂದು ಹೇಳಿದರೆ ಉಪ ಮುಖ್ಯಮಂತ್ರಿ ಪರಮೇಶ್ವರ ಪೂರ್ತಿ ಐದು ವರ್ಷ ಅಧಿಕಾರದಲ್ಲಿರುತ್ತೇವೆ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರಾದಿಯಾಗಿ ಎಲ್ಲರೂ ಇನ್ನೂ ಸರಕಾರ ಸ್ಥಿರವಾಗಲು ಕಾಯುತ್ತಿರುವುದರಿಂದ ಆಡಳಿತ ಯಂತ್ರ ಮಾತ್ರ ಅವ್ಯವಸ್ಥೆಯ ಗೂಡಾಗಿದೆ. ಉತ್ತಮ ಆಡಳಿತ ನೀಡಬೇಕೆನ್ನುವ ಇರಾದೆ ಕುಮಾರಸ್ವಾಮಿಯವರಿಗಿದ್ದರೂ ಪರಿಸ್ಥಿತಿ ಅದಕ್ಕೆ ಸಹಕಾರ ನೀಡದಿರು ವುದರಿಂದ ಅವರು ಅಸಹಾಯಕರಾಗಿದ್ದಾರೆ. 

ವಿಪಕ್ಷ ಬಿಜೆಪಿಯೂ ಸರಕಾರ ಬೀಳುವ ಕ್ಷಣವನ್ನು ಕಾದು ಕುಳಿತಿದೆ. ತಾನಾಗಿ ಸರಕಾರ ಬೀಳಿಸುವುದಿಲ್ಲ ಎಂದು ಹೇಳುತ್ತಿದ್ದರೂ ಆ ಪ್ರಯತ್ನವನ್ನು ಮಾಡದೆ ಇಲ್ಲ ಎನ್ನುವುದು ಅದರ ನಡೆಯಿಂದ ಅರಿವಾಗುತ್ತಿದೆ. ಮಿತ್ರ ಪಕ್ಷಗಳ ಸಮನ್ವಯದ ಕೊರತೆಯಿಂದ ಸರಕಾರಕ್ಕೇನಾದರೂ ಸಮಸ್ಯೆಯಾದರೆ ಅದರಿಂದ ಲಾಭವಾಗುವುದು ಬಿಜೆಪಿಗೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೂ ಇದರ ಪರಿಣಾಮವಾಗಬಹುದು. ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭವೇ ವಿಪಕ್ಷಗಳ ಮಹಾಮೈತ್ರಿಕೂಟದ ಬಲಪ್ರದರ್ಶನದ ವೇದಿಕೆಯಾಗಿತ್ತು. ಇದೀಗ ಈ ಸರಕಾರ ಕೆಲವೇ ತಿಂಗಳಲ್ಲಿ ಅಸ್ಥಿರವಾಗುತ್ತದೆ ಅಥವಾ ಸುಗಮ ಆಡಳಿತ ನೀಡಲು ಆಗುತ್ತಿಲ್ಲ ಎಂದಾದರೆ ಅದರಿಂದ ನಕಾರಾತ್ಮಕವಾದ ಸಂದೇಶ ರವಾನೆಯಾಗುತ್ತದೆ. 

ಸಮ್ಮಿಶ್ರ ಸರಕಾರ ಎಂದಮೇಲೆ ಭಿನ್ನಾಭಿಪ್ರಾಯಗಳು ಇದ್ದದ್ದೇ. ಆದರೆ ಸರಕಾರದ ಗಮನವಿಡೀ ಈ ಸಮಸ್ಯೆಯಯನ್ನು ನಿಭಾಯಿಸುವುದಕ್ಕೆ ಸೀಮಿತವಾದರೆ ಆಡಳಿತ ನಡೆಸೋದು ಯಾವಾಗ? ಸರಕಾರ ರಚನೆಯಾಗಿ ಒಂದು ತಿಂಗಳಾಗುತ್ತಾ ಬಂದಿದ್ದರೂ ಇನ್ನೂ ಆಡಳಿತ ಯಂತ್ರ ಕಾರ್ಯಾರಂಭಿಸಿಲ್ಲ. ಒಂದಿಷ್ಟು ಅಧಿಕಾರಿಗಳ ವರ್ಗಾವಣೆ, ಕೆಲವು ನೇಮಕಾತಿಗಳನ್ನು ಮಾಡಿರುವುದು ಬಿಟ್ಟರೆ ಬೇರೆ ಯಾವ ಪ್ರಮುಖ ನಿರ್ಧಾರವೂ ಹೊರಬಿದ್ದಿಲ್ಲ. ಈ ನೇಮಕಾತಿ ,ವರ್ಗಾವಣೆಯಲ್ಲೂ ಮಿತ್ರಪಕ್ಷಗಳ ನಡುವೆ ಅಪಸ್ವರ ಕೇಳಿ ಬಂದಿತ್ತು. ಸಮ್ಮಿಶ್ರ ಸರಕಾರ ರಚನೆಯಾದಾಗ ಜನರು ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕನಿಷ್ಠ ಅವುಗಳನ್ನಾದರೂ ಈಡೇರಿಸದಿದ್ದರೆ ಸಮ್ಮಿಶ್ರ ಸರಕಾರಗಳ ಮೇಲೆಯೇ ಜನರು ವಿಶ್ವಾಸ ಕಳೆದುಕೊಳ್ಳಬಹುದು. ಎರಡೂ ಪಕ್ಷಗಳು ಒಂದಿಷ್ಟು ಹೊಂದಾಣಿಕೆ ಮಾಡಿಕೊಂಡು ಆಡಳಿತ ಮಾಡಿದರೆ ಅವುಗಳಿಗೂ ಉತ್ತಮ ರಾಜ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ನಾಯಕರು ಕಾರ್ಯೋನ್ಮುಖರಾಗಬೇಕು. 

Advertisement
Advertisement

Udayavani is now on Telegram. Click here to join our channel and stay updated with the latest news.

Next