Advertisement

ಪೊಲೀಸ್‌ ಹುದ್ದೆಗೆ ಕರಾವಳಿಯಿಂದ ಕಡಿಮೆ ಅರ್ಜಿ

10:49 PM Dec 14, 2021 | Team Udayavani |

ಬೆಳಗಾವಿ: ಪೊಲೀಸ್‌ ಪೇದೆ ಹುದ್ದೆಗಳಿಗೆ ಕರಾವಳಿ ಜಿಲ್ಲೆಗಳಿಂದ ತೀರಾ ಕಡಿಮೆ ಅರ್ಜಿ ಬರುತ್ತಿದ್ದು, ಸ್ಥಳೀಯ ಅಭ್ಯರ್ಥಿಗಳ ನೇಮಕಕ್ಕೆ ಇದರಿಂದ ಸಮಸ್ಯೆಯಾಗುತ್ತಿದೆ. ಕರಾವಳಿಯ ಯುವ ಜನತೆ ಪೊಲೀಸ್‌ ಪೇದೆ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಶಾಸಕರು ವಿಶೇಷ ಗಮನ ಹರಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪೊಲೀಸ್‌ ಪೇದೆಗಳ ಆಯ್ಕೆ ಹಾಗೂ ಎಸ್‌ಪಿ ಕಚೇರಿ ಸ್ಥಳಾಂತರ ಕುರಿತು ಬಿಜೆಪಿ ಸದಸ್ಯ ಸಂಜೀವ ಮಠಂದೂರ್‌ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್‌ ಪೇದೆಗಳ ನೇಮಕಾತಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 3.60 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ ಕರಾವಳಿ ಜಿಲ್ಲೆಗಳ ಪಾಲು ಅತ್ಯಂತ ಕಡಿಮೆಯಾಗಿದೆ.

ಹೀಗಾಗಿ ಅಲ್ಲಿನ ಪೊಲೀಸ್‌ ಠಾಣೆಗೆ ಸ್ಥಳೀಯ ಅಭ್ಯರ್ಥಿಗಳ ನೇಮಕ ಸಾಧ್ಯವಾಗುತ್ತಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಸುಮಾರು 4 ಸಾವಿರ ಹುದ್ದೆಗಳು ಖಾಲಿ ಉಳಿಯುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ತಮ್ಮ ವ್ಯಾಪ್ತಿಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮಾಡಲು ವಿಶೇಷ ಗಮನ ಹರಿಸಬೇಕು ಎಂದು ಹೇಳಿದರು.

ಕೃಪಾಂಕ ನೀಡಿ
ಸ್ಥಳೀಯ ಯುವಜನತೆಗೆ ನೇಮಕಾತಿಯಲ್ಲಿ ಆದ್ಯತೆ ನೀಡಲು ಕೃಪಾಂಕ ಕೊಡುವ ಬಗ್ಗೆಯೂ ಚಿಂತನೆ ನಡೆಸಬೇಕು. ಜತೆಗೆ ಪೊಲೀಸ್‌ ಅಧೀಕ್ಷಕರ ಕಚೇರಿಯು ಗ್ರಾಮೀಣ ಭಾಗದಿಂದ ನೂರು ಕಿ.ಮೀಗೂ ದೂರವಿದೆ. ಇದರಿಂದ ಗ್ರಾಮೀಣ ಜನರಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕು ಎಂದು ಸಂಜೀವ ಮಠಂದೂರು ಮನವಿ ಮಾಡಿದರು.

ಇದನ್ನೂ ಓದಿ:ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ

Advertisement

ಪರಿಶೀಲಿಸಿ ಕ್ರಮ
ದ.ಕ. ಜಿಲ್ಲಾ ಕೇಂದ್ರದಲ್ಲಿರುವ ಪೊಲೀಸ್‌ ಅಧೀಕ್ಷಕರ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಿದ್ದೇವೆ. ಎಸ್‌ಪಿ ಕಚೇರಿ ಜತೆಗೆ ಡಿಆರ್‌ ಕೂಡ ಸ್ಥಳಾಂತರ ಮಾಡಬೇಕಾಗುತ್ತದೆ. ಹೀಗಾಗಿ ತತ್‌ಕ್ಷಣ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next