Advertisement

Legislative Council: ಪರಿಷತ್ತಿನಲ್ಲಿ ವಾಲ್ಮೀಕಿ ನಿಗಮ ಹಗರಣ ಜಟಾಪಟಿ

01:35 AM Jul 17, 2024 | Team Udayavani |

ಬೆಂಗಳೂರು: ಸರಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಮಗದ ಹಗರಣ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾವವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಯಿತು. ನಿಗಮದಲ್ಲಿ ನಡೆದಿರುವ ಹಣ ದುರುಪಯೋಗದ ಬಗ್ಗೆ ಸಭಾಪತಿ ಹೊರಟ್ಟಿ ಮಧ್ಯಾಹ್ನ ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸಿದರು.

Advertisement

ವಿಷಯ ಮಂಡಿಸಿದ ಸಿ.ಟಿ. ರವಿ, ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಮಾತೆತ್ತಿದರೆ ನಾವು ದಮನಿತರ ಪರ, ಪ್ರಾಮಾಣಿಕ ಮತ್ತು ಪಾರದರ್ಶಕ ಸರಕಾರ ಎಂದು ಹೇಳುತ್ತೀರಿ. ಪಾರದರ್ಶಕ ಎಂದರೆ ಇದುವೆಯಾ? ಅಹಿಂದ ಎನ್ನುವವರು ಈಗ ದಲಿತರ ಹಣ ಲೂಟಿ ಮಾಡಿದ್ದಾರೆ. “ಹೈದ್ರಾಬಾದ್‌ ಗ್ಯಾಂಗ್‌’ ಜತೆ ಸೇರಿ ಯೋಜಿತ ಸಂಚು ನಡೆಸಿದ್ದಾರೆ. ಇದು ಹಗಲು ದರೋಡೆಯಾಗಿದ್ದು, ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲವೇ? ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಾಮಾಣಿಕರಿಗೆ “ಆತ್ಮಹತ್ಯೆಗೆ ಭಾಗ್ಯ’
ನಿಮಗದ ಅಧಿಕಾರಿ ಚಂದ್ರಶೇಖರ್‌ ಅವರ ಡೆತ್‌ನೋಟ್‌ ಅಂಶಗಳನ್ನು, ಶಾಂಗ್ರಿಲಾ ಹೊಟೇಲ್‌ನಲ್ಲಿ ನಡೆದಿದೆ ಎನ್ನಲಾದ ಅಧಿಕಾರಿಗಳ ಸಂಭಾಷಣೆಗಳನ್ನು, ಬ್ಯಾಂಕ್‌ ಖಾತೆಗಳಲ್ಲಿ ನಡೆದ ಅವ್ಯವಹಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಿದ್ದ 94 ಕೋಟಿ ರೂ. ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಒಂದು ವೇಳೆ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಈ ಸರಕಾರದಲ್ಲಿ ಭ್ರಷ್ಟರಿಗೆ ರಾಜಯೋಗ, ಪ್ರಾಮಾಣಿಕರಿಗೆ “ಆತ್ಮಹತ್ಯೆಗೆ ಭಾಗ್ಯ’ ಎಂದು ಕುಟುಕಿದರು.

ಯಾರಧ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಯಾರಧ್ದೋ ದುಡ್ಡು ಎಂದರೆ ಬೇನಾಮಿ ಹಣ ಅಲ್ಲ, ಸರಕಾರದ ಹಣ. ಗೂಗಲ್‌ ಪೇ, ಫೋನ್‌ ಪೇ ಸೇರಿ ಬೇರೆ ಬೇರೆ ಮೂಲಗಳಲ್ಲಿ ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡಲಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆ, ರಾಜ್ಯದಲ್ಲಿ ನಡೆದ ಲೋಕಸಭೆ ಚುನಾವಣೆಗೆ, ಆಸ್ತಿ, ಚಿನ್ನ, ಲ್ಯಾಂಬರ್ಗಿನಿ ಕಾರು, ಜಮೀನು ಖರೀದಿಗೆ ಬಳಸಲಾಗಿದೆ ಎಂದು ಟೀಕಿಸಿದರು. ಹಣಕಾಸು ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದರ ಹಿಂದಿರುವ ಕಸ್ಟೋಡಿಯನ್‌ ಯಾರು? ಹೈದ್ರಾಬಾದ್‌ ಗ್ಯಾಂಗ್‌ಗೆ ಸಹಕರಿಸಿದ್ದು ಯಾರು ಎಂಬುದನ್ನು ಸರಕಾರ ಹೇಳಬೇಕಿದೆ ಎಂದರು.

ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಷ್ಟ್ರೀಯ ಬ್ಯಾಂಕ್‌ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಹಾಗಾದರೆ ಕೇಂದ್ರ ಹಣಕಾಸು ಸಚಿವರಿಗೆ ಇದು ಗೊತ್ತಿರಬೇಕಿತ್ತು ಅಲ್ಲವೇ? ನೀವು ಹೇಳಿದಂತೆ ಪ್ರಕರಣದಲ್ಲಿ ಕೇಂದ್ರ ಸಚಿವರನ್ನೂ ಹೊಣೆಗಾರರು ಮಾಡಬೇಕಾಗುತ್ತದೆ ಅಲ್ಲವೆ? ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಇಂತಹ ವೇಳೆ ಆಪಾದಿತರನ್ನು ಆಪರಾಧಿ ಎನ್ನುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಮಾತು ಮುಂದವರಿಸಿದ ಸಿ.ಟಿ. ರವಿ, ಪ್ರಕರಣ ಕಿಂಗ್‌ಪಿನ್‌ ನೆಕ್ಕುಂಟಿ ನಾಗರಾಜ್‌ ಜತೆ ಸಿಎಂ ಮತ್ತು ಡಿಸಿಎಂ ಇರುವ ಫೋಟೋ ಪ್ರದರ್ಶಿಸಿ ಸಿಎಂ ರಾಜೀನಾಮೆಗೆ ಆಗ್ರಹಿಸಿದರು.

Advertisement

ಕೂಡಲೇ ಕಾಂಗ್ರೆಸ್‌ ಶಾಸಕರು ಎದ್ದು ನಿಂತು ಮಾಜಿ ಸಚಿವ ಶ್ರೀರಾಮಲು ಮತ್ತು ಆನಂದ್‌ ಸಿಂಗ್‌ ಜತೆ ನೆಕ್ಕುಂಟಿ ನಾಗರಾಜ್‌ ಇರುವ ಮತ್ತು ಬಿಜೆಪಿ ಶಾಲು ಹಾಕಿರುವ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಿ ಇದಕ್ಕೇನು ಹೇಳುತ್ತೀರಿ ಎಂದು ಗದ್ದಲ ಎಬ್ಬಿಸಿದರು. ಬಿಜೆಪಿ ಸದಸ್ಯರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಇಡೀ ಸದನ ಗದ್ದಲದ ಗೂಡಾಯಿತು. ತಹಬದಿಗೆ ತರುವಲ್ಲಿ ವಿಫ‌ಲರಾದ ಸಭಾಪತಿಗಳು ಗುರುವಾರಕ್ಕೆ ಸದನವನ್ನು ಮುಂದೂಡಿದರು.

“ವೆಂಕಟೇಶಣ್ಣ ನನ್ನ, ನಿನ್ನ ಜಾತಕ ಸರಿಹೊಂದುತ್ತಿಲ್ಲ’: ಸಿ.ಟಿ.ರವಿ
ವೆಂಕಟೇಶ್‌ ಅಣ್ಣ, ನನ್ನ-ನಿನ್ನ ಜಾತಕ ಸರಿ ಹೊಂದುವುದಿಲ್ಲ. ಹಾಗಾಗಿ ನಾನು ಈಲ್ಡ್‌ ಆಗುವುದಿಲ್ಲ (ಮಾತು ನಿಲ್ಲಿಸುವುದಿಲ್ಲ) ಎಂದು ಹೇಳಿ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಸದನವನ್ನು ನಗೆಗಡಲಲ್ಲಿ ತೇಲಿಸಿದ ಪ್ರಸಂಗ ನಡೆ ಯಿತು. ವಾಲ್ಮೀಕಿ ನಿಗಮದಲ್ಲಿ ನಡೆದ ಹಣ ದುರುಪಯೋಗದ ಬಗ್ಗೆ ಸಿ.ಟಿ. ರವಿ ಮಾತನಾಡುತ್ತಿರುವ ವೇಳೆ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಪದೇಪದೆ ಮಧ್ಯಪ್ರವೇಶಿಸುವ ಪ್ರಯತ್ನ ಮಾಡಿದರು. ಆಗ ರವಿ ಮೇಲಿನಂತೆ ಪ್ರತಿಕ್ರಿಯಿಸಿ ಮಾತು ಮುಂದುವರಿಸಿದರು. ಸಭಾಪತಿಗಳ ಪೀಠದಲ್ಲಿದ್ದ ಉಪಸಭಾತಿ ಪ್ರಾಣೇಶ್‌, ರೀ… ವೆಂಕಟೇಶ್‌ ನೀವು ಪದೇಪದೆ ಮಾತನಾಡಿ ಕಲಾಪಕ್ಕೆ ಅಡ್ಡಿ ತರಬೇಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next