Advertisement

ಜೆಡಿಎಸ್‌ ಪುನಶ್ಚೇತನಕ್ಕೆ ಹೊಣೆಗಾರಿಕೆ ಸೂತ್ರ

10:04 AM Jan 26, 2020 | Lakshmi GovindaRaj |

ಬೆಂಗಳೂರು: ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಸಮಾವೇಶದ ಬೆನ್ನಲ್ಲೇ ಜಿಲ್ಲಾ-ತಾಲೂಕು ಹಂತದಿಂದ ರಾಜ್ಯಮಟ್ಟದವರೆಗೆ ಪಕ್ಷದ ಎಲ್ಲ ಘಟಕಗಳ ಪುನರ್‌ರಚನೆಗೆ ಜೆಡಿಎಸ್‌ ತೀರ್ಮಾನಿಸಿದೆ. ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ, ವಿಭಾಗ ವಾರು ಕಾರ್ಯಾಧ್ಯಕ್ಷರು, ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ಪ್ರಮುಖ ಸಮುದಾಯ ಹಾಗೂ ವರ್ಚಸ್ಸಿ ನಾಯಕರಿಗೆ ನೀಡುವ ಮೂಲಕ ಪಕ್ಷಕ್ಕೆ ಬಲ ತುಂಬಲು ನಿರ್ಧರಿಸಲಾಗಿದೆ.

Advertisement

ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರನ್ನೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲು ಮುಂದಾಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜಿಲ್ಲಾಧ್ಯಕ್ಷ ಹುದ್ದೆಯ ಪಟ್ಟ ಕಟ್ಟಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಶಾಸಕರ ಜತೆಯೂ ಸಮಾಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಶಾಸಕರು, ವಿಧಾನಪರಿಷತ್‌ ಸದಸ್ಯರು ಪಕ್ಷ ಸಂಘಟನೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇರುತ್ತಾರೆ. ರಾಜ್ಯ ಮಟ್ಟದ ಸಮಾವೇಶ ನಡೆದಾಗ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಸೀಮಿತ ವಾಗಿರುತ್ತಾರೆ. ಜಿಲ್ಲಾಮಟ್ಟದಲ್ಲಿ ಪಕ್ಷ ಸಂಘಟನೆಗೆ ಶ್ರಮ ಹಾಕುವುದಿಲ್ಲ. ಅವರಿಗೂ ಪಕ್ಷ ಸಂಘಟನೆಯ ಹೊಣೆ ನೀಡಬೇಕು.

ಜಿಲ್ಲಾ ಘಟಕಗಳಿಗೆ ಶಾಸಕರು, ವಿಧಾನಪರಿಷತ್‌ ಸದಸ್ಯರು ಅಧ್ಯಕ್ಷರಾದರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ. ಕಾರ್ಯಕರ್ತರು ಹಾಗೂ ಮುಖಂಡರು ಅವರ ಮಾತು ಕೇಳುತ್ತಾರೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಚಿಂತನೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಮುಂದಿನ ಮೂರು ವರ್ಷದ ನಂತರ ನಡೆಯುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಿರಂತರವಾಗಿ ಪಕ್ಷ ಸಂಘಟನೆ ಮಾಡಲು ರಾಜ್ಯ ಪ್ರವಾಸ, ಸಮುದಾಯವಾರು ಸಮಾವೇಶ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬೂತ್‌ ಮಟ್ಟದಲ್ಲಿ ಸದಸ್ಯತ್ವ ನೋಂದಣಿ, ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೆಳೆದು ಜವಾಬ್ದಾರಿ ನೀಡುವ “ಸೂತ್ರ’ದಡಿ ಪಕ್ಷದ ಎಲ್ಲ ಘಟಕಗಳ ಪುನರ್‌ ರಚನೆಗೆ ತೀರ್ಮಾನಿಸಲಾಗಿದೆ.

Advertisement

ವಿಭಾಗಾವಾರು ಸಮಾವೇಶ: ಬಹುತೇಕ ಫೆಬ್ರವರಿ ಅಂತ್ಯದೊಳಗೆ ಈ ಪ್ರಕ್ರಿಯೆ ಮುಗಿಯಲಿದ್ದು ಆ ನಡುವೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮಾರ್ಚ್‌ ತಿಂಗಳಲ್ಲಿ ವಿಭಾಗವಾರು ಮಹಿಳಾ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರ ನೇಮಕವಾಗುತ್ತದೆ ಎಂಬುದನ್ನು ಜೆಡಿಎಸ್‌ ಕಾದು ನೋಡುತ್ತಿದ್ದು, ಆ ನಂತರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಯೋಚಿಸಲಿದೆ. ಅಲ್ಲಿವರೆಗೂ ಎಚ್‌.ಕೆ.ಕುಮಾರಸ್ವಾಮಿಯವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.

ಒಂದೊಮ್ಮೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರ ನೇಮಕವಾದರೆ ಯುವ ಘಟಕದ ಅಧ್ಯಕ್ಷ ಸ್ಥಾನವೂ ಬದಲಾಗಬಹುದು. ನಿಖೀಲ್‌ ಕುಮಾರಸ್ವಾಮಿ ಬದಲು ಬೇರೊಬ್ಬರ ನೇಮಕವಾಗಬಹುದು. ನಿಖೀಲ್‌ಗೆ ರಾಜ್ಯ ಘಟಕದಲ್ಲೇ ಪ್ರಮುಖ ಹೊಣೆಗಾರಿಕೆ ನೀಡಬಹುದು ಎಂದು ಹೇಳಲಾಗುತ್ತಿದೆ.

ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಬಲಪಡಿಸಲು ಚಿಂತನೆ: ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಬಲಪಡಿಸಿ ದೈನಂದಿನ ರಾಜಕೀಯ ಹಾಗೂ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿ ಆ ಮೂಲಕ ಜನರನ್ನು ತಲುಪುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಿಂತನೆ ನಡೆಸಿದ್ದು, ಅದಕ್ಕಾಗಿ ಸೂಕ್ತ ತಂಡ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next