Advertisement

ನಿಯಮ ಪಾಲನೆ ಸಾರ್ವಜನಿಕರ ಜವಾಬ್ದಾರಿಯೂ ಹೌದು

11:40 PM Dec 28, 2021 | Team Udayavani |

ಕೊರೊನಾ ರೂಪಾಂತರಿ ಒಮಿಕ್ರಾನ್‌ ನಿಯಂತ್ರಣ ಹಾಗೂ ಸಂಭವನೀಯ ಮೂರನೇ ಅಲೆ ತಟೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಕೇಂದ್ರದ ಸೂಚನೆ ಮೇರೆಗೆ ಹತ್ತು ದಿನಗಳ ಕಾಲ ನೈಟ್‌ ಕರ್ಫ್ಯೂ ಜಾರಿಗೊಳಿಸಿದೆ. ನೈಟ್‌ ಕರ್ಫ್ಯೂ ಜಾರಿಗೆ ಪರ-ವಿರೋಧದ ಮಾತು ರಾಜ್ಯವ್ಯಾಪಿ ಎಲ್ಲ ವಲಯಗಳಿಂದ ವ್ಯಕ್ತವಾಗುತ್ತಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರದ ಕ್ರಮಕ್ಕೆ ನಾಗರಿಕರ ಸ್ಪಂದನೆ ಅಗತ್ಯವಾಗಿದೆ.

Advertisement

ವರ್ಷಾಂತ್ಯ ಮತ್ತು ನೂತನ ವರ್ಷಾಚರಣೆ ಅಂಗವಾಗಿ ಪ್ರವಾಸಿ ತಾಣಗಳಲ್ಲಿ ದಟ್ಟಣೆ ಸಹಜವಾಗಿ ಉಂಟಾಗಲಿದೆ. ಇದರಿಂದ ಉಂಟಾಗ ಬಹುದಾದ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್‌ ಕರ್ಫ್ಯೂ ವಿಧಿಸಿದೆ. ಹೊಟೇಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಅವಕಾಶ ಕಲ್ಪಿಸಿ ಸಮಾರಂಭ, ಕಾರ್ಯಕ್ರಮ, ಪಾರ್ಟಿಗಳಿಗೆ ನಿರ್ಬಂಧ ಹೇರಿದೆ. ಆದರೆ ಹೊಟೇಲ್‌, ರೆಸಾರ್ಟ್‌ಗಳಲ್ಲಿ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಶೇ.50ರ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸರಕಾರದ ಕಾಳಜಿ ಅರ್ಥ ಮಾಡಿ ಕೊಂಡು ನಿಯಮ ಪಾಲನೆ ಇಂದಿನ ಅಗತ್ಯವೂ ಹೌದು.

ಆರ್ಥಿಕ ಚಟುವಟಿಕೆ ದೃಷ್ಟಿಯಿಂದ ನೋಡಿದರೆ ನೈಟ್‌ ಕರ್ಫ್ಯೂ ಜಾರಿ ಯಿಂದ ಸಮಸ್ಯೆಯುಂಟಾಗುತ್ತದೆ ಎಂಬ ವಾದವೂ ಇದೆ. ಕೊರೊನಾ ಮೊದಲ/ಎರಡನೇ ಅಲೆಯಲ್ಲಿ ಎದುರಾದ ಸಮಸ್ಯೆ ಹಾಗೂ ಸಾರ್ವಜ ನಿಕರು ಅನುಭವಿಸಿದ ಸಂಕಷ್ಟ ಕಡಿಮೆಯೇನಲ್ಲ. ಹೀಗಾಗಿ  ಸರಕಾರ ತಜ್ಞರ ಸಲಹೆ ಸೂಚನೆ ಮೇರೆಗೆ ನೈಟ್‌ ಕರ್ಫ್ಯೂ ಸೇರಿ ಕೆಲವು ನಿಯಮ ಜಾರಿಗೊಳಿಸಿದೆ. ಪರಿಸ್ಥಿತಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಬಹುದು.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದು ಸಮಾಧಾನಕರ ಸಂಗತಿ. ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ. ಹೀಗಾಗಿ ರಾಜ್ಯ ಸರಕಾರ ಕೈಗೊಂಡಿರುವ ಮುನ್ನಚ್ಚರಿಕೆ ಕ್ರಮ ಒಂದು ರೀತಿಯಲ್ಲಿ ಒಳ್ಳೆಯದೇ. ಸರಕಾರದ ಕಾಳಜಿ ಅರ್ಥ ಮಾಡಿಕೊಂಡು ಜನತೆ ಸಹಕರಿಸಬೇಕಾಗಿದೆ.

ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Advertisement

ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್‌ ಕೇಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸೋಮವಾರ ಮತ್ತು ಮಂಗಳವಾರ ದಿನವೊಂದಕ್ಕೆ 100 ಕೇಸ್‌ಗಳು ಹೆಚ್ಚಳವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಒಮಿಕ್ರಾನ್‌ ಕೇಸ್‌ಗಳೇ ಹೆಚ್ಚಾಗುವ ಆತಂಕವೂ ಇದೆ. ಹೀಗಾಗಿ ನೈಟ್‌ ಕರ್ಫ್ಯೂವಿನಂಥ ಕಠಿನ ಕ್ರಮಗಳ ಜತೆಗೆ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವ ಕುರಿತಂತೆಯೂ ಅರಿವು ಮೂಡಿಸಬೇಕು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ನೈಟ್‌ ಕರ್ಫ್ಯೂವಿಗೆ ಜನರ ವಿರೋಧವನ್ನು ನಿರ್ಲಕ್ಷಿಸಬಾರದು. ಇಲ್ಲಿ ಜನತೆ ಕೇಳುತ್ತಿರುವ ಪ್ರಶ್ನೆ, ಹಗಲು ಹೊತ್ತಲ್ಲಿ ಹೆಚ್ಚು ಜನ ಸೇರಲು ಅವಕಾಶ ಮಾಡಿಕೊಟ್ಟು ಕೇವಲ ರಾತ್ರಿ ವೇಳೆ ನಿರ್ಬಂಧ ಹಾಕಿದರೆ ಸಾಕೇ ಎನ್ನುವುದು. ಹೊಟೇಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ವ್ಯವಹಾರವಾಗುವುದು ಸಂಜೆಯ ಅನಂತರವೇ.ಈ ನಿಟ್ಟಿನಲ್ಲಿ ಸರಕಾರ ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳ ಸಮಸ್ಯೆಯನ್ನು ಆಲಿಸುವುದೂ ಅಗತ್ಯವಾಗಿದೆ. ರಾಜ್ಯ ಸರಕಾರ ಜ.3 ರಿಂದ 15 ರಿಂದ 18 ವರ್ಷದವರಿಗೆ ಲಸಿಕೆ ನೀಡಲು ಹಾಗೂ 60 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಸ್ವಾಗತಾರ್ಹ. ಇದಕ್ಕೂ ಸಾರ್ವಜನಿಕರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ಆಗ ಮಾತ್ರ ಕೊರೊನಾ ಅಥವಾ ರೂಪಾಂತರಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next