Advertisement

5ನೇ ಗ್ಯಾರಂಟಿಗೆ ನಾಂದಿ: ನಿರುದ್ಯೋಗಿ ಯುವಕರಿಗೆ ಭತ್ತೆ ನೀಡುವ ಯುವನಿಧಿಗೆ ಸಿಎಂ ಚಾಲನೆ

12:37 AM Dec 27, 2023 | Team Udayavani |

ಬೆಂಗಳೂರು: ಚುನಾವಣೆ ಪೂರ್ವ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಕೊನೆಯ ಯೋಜನೆ “ಯುವನಿಧಿ’ಗೆ ಕಾಂಗ್ರೆಸ್‌ ಸರಕಾರ ಮಂಗಳವಾರ ಚಾಲನೆ ನೀಡಿತು. ಅಲ್ಲಿಗೆ ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳು ಜಾರಿಯಾದಂತಾಗಿದೆ.

Advertisement

ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕೌಶಲಾಭಿ ವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ ಪಾಯ ಇಲಾಖೆ ಮಂಗಳವಾರ ಕಾರ್ಯ ಕ್ರಮ ಹಮ್ಮಿಕೊಂಡಿತ್ತು. ನಿರುದ್ಯೋಗ ಭತ್ತೆಗಾಗಿ ಪದವೀಧರರು ಮತ್ತು ಡಿಪ್ಲೊಮಾ ಪೂರೈಸಿ ದವ ರಿಂದ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಬರುವ ಜ. 12ರಿಂದ ಅರ್ಹ ಫ‌ಲಾನುಭವಿಗಳ ಖಾತೆಗೆ ಪ್ರತೀ ತಿಂಗಳು ಹಣ ಜಮೆ ಆಗಲಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “2023ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ 4.81 ಲಕ್ಷ ಪದವೀ  ಧರರು ಮತ್ತು 48 ಸಾವಿರ ಡಿಪ್ಲೊಮಾ ಪೂರೈಸಿ ದವರು ಸೇರಿ 5.29 ಲಕ್ಷ ಯುವಕರಿಗೆ ಸರಕಾರ  ದಿಂದ ಇನ್ನು ಮುಂದೆ ಪ್ರತೀ ತಿಂಗಳು ನಿರುದ್ಯೋಗ ಭತ್ತೆ ಸಿಗಲಿದೆ. ಸ್ವಾಮಿ ವಿವೇಕಾನಂದ ಜಯಂತಿಯಂದು ಅಂದರೆ ಬರುವ ಜ. 12ರಂದು ಶಿವಮೊಗ್ಗದಲ್ಲಿ ಸುಮಾರು ಒಂದು ಲಕ್ಷ ಯುವಕರನ್ನು ಸೇರಿಸಿ, ಉದ್ದೇಶಿತ ಯುವನಿಧಿ ಯೋಜನೆಗೆ ಅದ್ದೂರಿ ಚಾಲನೆ ನೀಡ ಲಾಗುವುದು. ಅಂದಿನಿಂದಲೇ ನೇರ ನಗದು ವರ್ಗಾವಣೆ ಮೂಲಕ ಫ‌ಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸರಕಾರ ಬರೀ ಭತ್ತೆ ಕೊಟ್ಟು ಸುಮ್ಮನಾಗುವುದಿಲ್ಲ. ಉಚಿತವಾಗಿ ಕೌಶಲ ತರಬೇತಿಯನ್ನೂ ನೀಡಿ ಎರಡು ವರ್ಷಗಳಲ್ಲಿ ಆ ನಿರುದ್ಯೋಗಿ ಯುವಕ/ ಯುವತಿಗೆ ಉದ್ಯೋಗ ದೊರೆಯುವಂತೆ ಮಾಡ ಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರ ಜತೆಗೆ ಮುಂದಿನ ದಿನ ಗಳಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಗಳನ್ನು ಕೂಡ ಹಂತ ಹಂತವಾಗಿ ಭರ್ತಿ ಮಾಡ ಲಾಗುವುದು ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, “ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಯಾಗಿದ್ದಾಗ ನಮಗೆ ಇಂತಹ ಭಾಗ್ಯಗಳು ಇರಲಿಲ್ಲ. ನೀವು ಅದೃಷ್ಟವಂತರು. ಮಹಿಳೆಯರು ಮತ್ತು ಯುವಕರು ದೇಶದ ಶಕ್ತಿ. ಆ ವರ್ಗಗಳಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ. ರಾಜ್ಯದ ಜನ ಕಾಂಗ್ರೆಸ್‌ ಮೇಲೆ ವಿಶ್ವಾಸವಿರಿಸಿ ಅಧಿಕಾರ ನೀಡಿದ್ದಾರೆ. ಈ ಗ್ಯಾರಂಟಿಗಳ ಮೂಲಕ ಋಣ ತೀರಿಸುವ ಕೆಲಸ ನಾವು ಮಾಡುತ್ತಿದ್ದೇವೆ’ ಎಂದರು.

Advertisement

ಸಚಿವ ಡಾಣ ಶರಣಪ್ರಕಾಶ ಪಾಟೀಲ ಮಾತ ನಾಡಿ, ಐದೂ ಗ್ಯಾರಂಟಿಗಳ ಮೂಲಕ ಅಸಂಖ್ಯಾಕ ಬಡವರ ಮನೆಬಾಗಿಲಿಗೆ ಸರಕಾರದ ಬೊಕ್ಕಸದ ಸಿಂಹಪಾಲು ತಲುಪಿಸುವ ಕೆಲಸ ಆಗುತ್ತಿದೆ. ಕೊಟ್ಟ ಮಾತು ಈಡೇರಿಸಿದ್ದೇವೆ. ಯುವನಿಧಿ ಜಾರಿಯಲ್ಲಿ ವಿಳಂಬವಾಗಿಲ್ಲ. ಈ ಮೊದಲೇ ಹೇಳಿದಂತೆ 2023ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರು, ಆರು ತಿಂಗಳು ಕೆಲಸ ಸಿಗದವರಿಗೆ ಯೋಜನೆ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಆರು ತಿಂಗಳಾಗುತ್ತಿದ್ದಂತೆ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪೋಸ್ಟರ್‌, ಚಿಹ್ನೆ ಬಿಡುಗಡೆ
ಕಾರ್ಯಕ್ರಮದಲ್ಲಿ ಯುವನಿಧಿಯ ಪೋಸ್ಟರ್‌ ಮತ್ತು ಚಿಹ್ನೆಗಳನ್ನು ಬಿಡುಗಡೆ ಮಾಡಲಾಯಿತು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಸಿ. ಸುಧಾಕರ್‌, ನಾಗೇಂದ್ರ, ಮುಖ್ಯಮಂತ್ರಿಗಳ ರಾಜ ಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ, ನಸೀರ್‌ ಅಹಮ್ಮದ್‌, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್ತಿನ ಸದಸ್ಯ ಯು.ಬಿ. ವೆಂಕಟೇಶ್‌ ಇದ್ದರು.

ನೋಂದಣಿ ಹೇಗೆ?
01ನೋಂದಣಿ ಉಚಿತ. ಅಭ್ಯರ್ಥಿಗಳು ಸೇವಾಸಿಂಧು ವೆಬ್‌ಸೈಟ್‌: //sevasindhugs.karnataka.gov.in/ ನಲ್ಲಿ ಲಾಗ್‌ಆನ್‌ ಆಗಿ ಅರ್ಜಿ ಸಲ್ಲಿಸಬೇಕು.
02ಕರ್ನಾಟಕ ಒನ್‌, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್‌ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು.
03ಲಾಗ್‌ಆನ್‌ ಆದ ಅನಂತರ ಅರ್ಜಿ ತೆರೆದು  ನಿಬಂಧನೆ  ಓದಿಕೊಂಡು ಮೊದಲ ಘೋಷಣೆ ನೀಡಬೇಕು.

04ಆಧಾರ್‌ ಸಂಖ್ಯೆ ನಮೂದಿಸಿ, ಒಟಿಪಿ ಪಡೆದು ಕೆವೈಸಿ ಮಾಹಿತಿ ಪಡೆದು ಕೊಳ್ಳ ಬೇಕು. ಜಿಲ್ಲೆ , ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.
05ವಿದ್ಯಾರ್ಹತೆ ಮಾಹಿತಿ ಭರ್ತಿ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಗಳು ಪ್ರಮಾಣ ಪತ್ರದಲ್ಲಿರುವ ನೋಂದಣಿ ಸಂಖ್ಯೆ ನಮೂದಿಸಿದ ತತ್‌ಕ್ಷಣ ಸ್ವಯಂಚಾಲಿತವಾಗಿ ಎನ್‌ಎಡಿ ಪೋರ್ಟಲ್‌ನಿಂದ ಯುವನಿಧಿ ಸಕ್ರಿಯವಾಗುತ್ತದೆ.

ಯುವನಿಧಿಗೆ ಚಾಲನೆ ನೀಡುವ ಮೂಲಕ ಚುನಾವಣೆ ಪೂರ್ವ ಹೇಳಿದ್ದ ಎಲ್ಲ ಐದು ಗ್ಯಾರಂಟಿಗಳನ್ನು ನಾವು ಈಡೇರಿಸಿದ್ದೇವೆ. ರಾಜ್ಯದ ಆರ್ಥಿಕ ಸದೃಢತೆಯನ್ನೂ ಕಾಯ್ದುಕೊಂಡಿದ್ದೇವೆ. ಆದರೆ ಪ್ರಧಾನಿ ಮೋದಿ ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಹತ್ತು ವರ್ಷವಾಯಿತು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದಿರಿ. ಹಾಗಿದ್ದರೆ ಮಾತು ತಪ್ಪಿದವರು ಯಾರು?
-ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯದ ಬಡವರ, ಯುವಕರ, ರೈತರ ಬದುಕಿನಲ್ಲಿ ಬದಲಾವಣೆ ತರುವ, ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ. ನಿರುದ್ಯೋಗ ಭತ್ತೆ ಸಹಿತ ಎಲ್ಲ ಯೋಜನೆಗಳನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿ ಕೊಳ್ಳ ಬಾರದು.
-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next