ವಿನೋದ್ ಪ್ರಭಾಕರ್ ನಾಯಕನಾಗಿ ಅಭಿನಯಿಸುತ್ತಿರುವ “ಲಂಕಾಸುರ’ ಸಿನಿಮಾದ ಮತ್ತೂಂದು ರೊಮ್ಯಾಂಟಿಕ್ ಹಾಡು “ಮಾಡರ್ನ್ ಮಹಾಲಕ್ಷ್ಮೀ’ ಇದೀಗ ಪ್ರೇಮಿಗಳ ದಿನದ ವಿಶೇಷವಾಗಿ ಬಿಡುಗಡೆಯಾಗಿದೆ.
ಇನ್ನು ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮತ್ತು ಧ್ವನಿಯಾಗಿರುವ “ಲಂಕಾಸುರ’ ಸಿನಿಮಾದ ಈ ಹಾಡಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ನಟಿಯರಾದ ಶ್ರುತಿ, ಮಾಲಾಶ್ರೀ ಮತ್ತು ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ. ಜಿ ರಾಮಮೂರ್ತಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಲಂಕಾಸುರ’ ಸಿನಿಮಾದ ಈ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ವಿನೋದ್ ಪ್ರಭಾಕರ್, “ಸಿನಿಮಾದ ಹೆಸರೇ ಹೇಳುವಂತೆ, ಇದೊಂದು ಆ್ಯಕ್ಷನ್ -ಥ್ರಿಲ್ಲರ್ ಶೈಲಿಯ ಸಿನಿಮಾ. ಈಗಾಗಲೇ ಬಿಡುಗಡೆಯಾಗಿರುವ “ಲಂಕಾಸುರ’ ಸಿನಿಮಾದ ಎರಡು ಹಾಡುಗಳು ಮತ್ತು ಟೀಸರ್ ಗೆ ಮಾಸ್ ಆಡಿಯನ್ಸ್ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲ ವರ್ಗದ ಆಡಿಯನ್ಸ್ಗೂ ಇಷ್ಟವಾಗುವಂತ ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆಯಿದೆ’ಎಂದರು.
ಟೈಗರ್ ಟಾಕೀಸ್ ಬ್ಯಾನರಿನಲ್ಲಿ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ “ಲಂಕಾಸುರ’ ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ವಿಜೇತ್ ಕೃಷ್ಣ ಸಂಗೀತ ಸಂಯೋಜಿಸಿದ್ದು, ಇಂದೂ ನಾಗರಾಜ್ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರಮೋದ್ ಕುಮಾರ್ ಡಿ. ಎಸ್ “ಲಂಕಾಸುರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಮಾರಂಭದಲ್ಲಿ ಹಾಜರಿದ್ದ “ಲಂಕಾಸುರ’ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ಮಾತನಾಡಿದರು.