Advertisement

ಲಂಬಾಣಿ ಭಾಷೆ 8ನೇ ಪರಿಚ್ಛೇದಕ್ಕೆ ಸೇರಲಿ

12:25 PM Nov 26, 2018 | |

ಪುತ್ತೂರು: ತುಳು ಭಾಷೆಯ ಜತೆಗೆ ಲಂಬಾಣಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದು ಹೈಕೋರ್ಟ್‌ ವಕೀಲ ಅನಂತ ನಾಯ್ಕ ಹೇಳಿದರು. ನೆಹರೂನಗರದ ಸುದಾನ ವಸತಿಯುತ ಶಾಲಾ ಎಡ್ವರ್ಡ್‌ ಹಾಲ್‌ನಲ್ಲಿ ರವಿವಾರ ನಡೆದ ಬಂಜಾರ (ಲಂಬಾಣಿ) ಸಮುದಾಯದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

Advertisement

ಲಂಬಾಣಿ ಸಮುದಾಯ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸದ ಜತೆಗೇ ಲಂಬಾಣಿ ಸಮುದಾಯವನ್ನು ಮೀಸಲಾತಿಯಿಂದ ಹೊರಗಿಡುವ ಪ್ರಯತ್ನಗಳೂ ನಡೆಯುತ್ತಿವೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳಬೇಕು. ಅದರಲ್ಲೂ ಸಮುದಾಯದ ಮಹಿಳೆಯರಿಗೆ ಶಿಕ್ಷಣ ಕಡ್ಡಾಯ ಮಾಡಬೇಕು ಎಂದರು.

ಸಾಕಷ್ಟು ಜನಸಂಖ್ಯೆಯನ್ನು ಹೊಂದಿರುವ ಲಂಬಾಣಿ ಸಮುದಾಯದಲ್ಲಿ ಕ್ರಾಂತಿಯನ್ನೇ ಮಾಡಿರುವ ನೇತಾರ ಸೇವಾಲಾಲ್‌. ಸುಮಾರು 280 ವರ್ಷಗಳ ಹಿಂದೆಯೇ ಅವರು ಸಮುದಾಯದ ಉನ್ನತಿಗೆ ಶ್ರಮಿಸಿದರು. ಇವರ ಶ್ರಮವನ್ನು, ಸಮುದಾಯದ ಕೊಡುಗೆಯನ್ನು ಸಂಸ್ಕೃತಿಯ ಪುಟಗಳನ್ನು ಉಲ್ಲೇಖೀಸುವ ಅಗತ್ಯವಿದೆ.

ಬ್ರಿಟಿಷರನ್ನು ಹೊರತುಪಡಿಸಿದರೆ ಈಗಿನ ಸರಕಾರ ಅಥವಾ ಸಮಾಜದಿಂದ ಇಂತಹ ಕೆಲಸ ನಡೆದಿಲ್ಲ ಎಂದರು. ಸಂಘದ ಜಿಲ್ಲಾ ಕಾರ್ಯದರ್ಶಿ ಚಂದು ನಾಯ್ಕ ಮಾತನಾಡಿ, ಆಧುನಿಕತೆಯ ಭರಾಟೆಯಿಂದ ಪ್ರಸ್ತುತ ಬಂಜಾರ (ಲಂಬಾಣಿ) ಸಮುದಾಯದ ಸಂಸ್ಕೃತಿ, ಸಂಸ್ಕಾರಗಳು ಅಳಿದು ಹೋಗುತ್ತಿವೆ. ಮುಂದಿನ ತಲೆಮಾರಿಗೆ ಇದನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪಿಡಿಒ ರಮೇಶ್‌ ರಾಥೋಡ್‌ ದೀಪಾವಳಿ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ಚಿಂಚೊಳ್ಳಿ ವಿಧಾನಸಭಾ ಕ್ಷೇತ್ರದ ಸದಸ್ಯ ಉಮೇಶ್‌ ಜಾದವ್‌, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಡಿಎಂಇ ವೇಣುಗೋಪಾಲ್‌, ಬಂಟ್ವಾಳ ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಸುದಾನ ಶಾಲಾ ಸಂಚಾಲಕ ವಿಜಯ ಹಾರ್ವಿನ್‌ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ರಾಜಪ್ಪ, ಖಜಾಂಚಿ ಪ್ರದೀಪ್‌ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಖಜಾಂಚಿ ಪ್ರದೀಪ್‌ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಮೇಶ್‌ ಪಿ. ನಾಯ್ಕ ವಂದಿಸಿದರು. ಬಾಲಾಜಿ ಕಾರ್ಯಕ್ರಮ ನಿರೂಪಿಸಿದರು.

Advertisement

ಉದ್ಘಾಟನ ಸಮಾರಂಭದ ಬಳಿಕ ಲಂಬಾಣಿ ಮಹಿಳೆಯರಿಂದ ಬಂಜಾರ ನೃತ್ಯ ಹಾಗೂ ಬಂಜಾರ ಹಾಡು ಪ್ರದರ್ಶನಗೊಂಡಿತು. ಜಿಲ್ಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನ ಉನ್ನತ ಹುದ್ದೆಯಲ್ಲಿರುವ ಗದಗ, ಶಿವಮೊಗ್ಗ ಭಾಗದ ಸಮುದಾಯದ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದರು.

2017-18ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅತ್ಯ ಧಿಕ ಅಂಕ ಪಡೆದ ಪೂಜಾ ಎಂ. ನಾಯ್ಕ, ಶುಭಾ ಟಿ., ಪವನ್‌, ಲಿಖಿತಾ ಎಸ್‌., ಅಶ್ವಿ‌ನಿ ಎನ್‌., ಗೌತಮ್‌, ಮಂಜು ಬಲಾಜಿ ಎಂ.ಪಿ., ಹೇಮಂತ್‌, ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಶ್ರೇಯಾ ಬಿ. ನಾಯ್ಕ, ಚೇತನ್‌, ಪೃಥ್ವಿರಾಜ್‌, ಶ್ರೀಕಾಂತ್‌ ಲಮಾಣಿ, ಪ್ರೇಮಾ ಜಾಧವ್‌, ಶ್ರುತಿ ಜಾಧವ್‌, ಲತಾ, ವಿಜಯಲಕ್ಷ್ಮೀ, ನವೀನ್‌, ಮದನ್‌ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಪವರ್‌ ಲಿಫ್ಟರ್‌ ಜಯಪ್ಪ ಲಂಬಾಣಿ ಹಾಗೂ ಕೆಇಎಸ್‌ ಉತ್ತೀರ್ಣರಾದ ಸಂತೋಷ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.

ಲಂಬಾಣಿ ಸಮುದಾಯದ ಜಾಗ
ದೇಶದ ಪಾರ್ಲಿಮೆಂಟ್‌ ಕಟ್ಟಲು ನೀಡಿರುವ ಜಾಗ ಲಂಬಾಣಿ ಸಮುದಾಯದ ಕೊಡುಗೆ. ಮೂಲತಃ ವ್ಯಾಪಾರಿಗಳಾದ್ದ ಲಂಬಾಣಿ ಜನಾಂಗದವರು ಲಮಾಣಿ ಮಾರ್ಗಗಳನ್ನು ಬಳಸಿಕೊಂಡು ರೈಲ್ವೇ ಹಳಿಗಳನ್ನು ಕಟ್ಟುತ್ತಿದ್ದರು. 1923ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ಲಂಬಾಣಿ ಸಮುದಾಯವನ್ನು ಶೋಷಿತ ಜನಾಂಗದ ಪಟ್ಟಿಗೆ ಸೇರಿಸಿದ್ದರು. 
– ಅನಂತ ನಾಯ್ಕ,
ಹೈಕೋರ್ಟ್‌ ವಕೀಲ

Advertisement

Udayavani is now on Telegram. Click here to join our channel and stay updated with the latest news.

Next