Advertisement

Case:ಅರಗಿನ ಅರಮನೆ ಸ್ಥಳ ಹಿಂದೂಗಳಿಗೆ ಸೇರಿದ್ದು; 53 ವರ್ಷಗಳ ಕಾನೂನು ಸಮರ, ಏನಿದು ವಿವಾದ?

11:44 AM Feb 06, 2024 | Team Udayavani |

ಲಕ್ನೋ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ವಾರಾಣಸಿ ಕೋರ್ಟ್‌ ಅನುಮತಿ ನೀಡಿದ್ದ ಬೆನ್ನಲ್ಲೇ ಉತ್ತರಪ್ರದೇಶ ಬರ್ನಾವಾದಲ್ಲಿರುವ ಬದ್ರುದ್ದೀನ್‌ ಗೋರಿ ಸ್ಥಳ ಮಹಾಭಾರತ ಕಾಲದ ಲಕ್ಷಗೃಹ (ಅರಗಿನ ಅರಮನೆ) ಪ್ರದೇಶವಾಗಿದೆ ಎಂಬ ಹಿಂದೂ ಅರ್ಜಿದಾರರ ವಾದಕ್ಕೆ ಬಾಗ್‌ ಪತ್‌ ಕೋರ್ಟ್‌ ಮನ್ನಣೆ ನೀಡಿದ್ದು, ಇದರೊಂದಿಗೆ ಕಳೆದ 53 ವರ್ಷಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

Advertisement

ಇದನ್ನೂ ಓದಿ:

ಪುರಾತನ ದಿಬ್ಬವನ್ನು ಲಕ್ಷಗೃಹ(ಅರಗಿನ ಅರಮನೆ ಸ್ಥಳ) ಎಂಬ ಕಕ್ಷಿದಾರ ಕೃಷ್ಣದತ್‌ ಜಿ ಮಹಾರಾಜ್‌ ಅವರ ವಾದವನ್ನು ಬಾಗ್‌ ಪತ್‌ ಕೋರ್ಟ್‌ ಪುರಸ್ಕರಿಸಿದ್ದು, ಆ ಸ್ಥಳ ದರ್ಗಾ ಮತ್ತು ಸ್ಮಶಾನ ಎಂಬ ಮುಸ್ಲಿಂ ಕಕ್ಷಿದಾರರ ವಾದವನ್ನು ತಳ್ಳಿಹಾಕಿದೆ.

ಲಕ್ಷ ಗೃಹ ಹಿಂದೂಗಳಿಗೆ ಸೇರಿದ್ದು ಎಂಬ ಕೋರ್ಟ್‌ ಆದೇಶದ ಬೆನ್ನಲ್ಲೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಏನಿದು ಲಕ್ಷಗೃಹ ವಿವಾದ?

Advertisement

ಮಹಾಭಾರತ ಕಾಲದಲ್ಲಿ ಕೌರವರು ನಿರ್ಮಿಸಿದ್ದ ಐಶಾರಾಮಿ ಅರಗಿನ ಅರಮನೆಯೇ ಲಕ್ಷಗೃಹ. ಅರಗು ತಕ್ಷಣವೇ ಬೆಂಕಿ ಹಿಡಿಯಬಲ್ಲ ವಸ್ತುವಾಗಿದೆ. ಮಹಾಭಾರತದ ಕಥೆಯ ಪ್ರಕಾರ, ರಾಜಕುಮಾರ ದುರ್ಯೋಧನ ತನ್ನ ಸೋದರ ಸಂಬಂಧಿಗಳಾದ ಪಾಂಡವರನ್ನು ಕೊಲ್ಲಲು ಯೋಜಿಸಿ ಈ ಅರಮನೆಯನ್ನು ನಿರ್ಮಿಸಿದ್ದ. ಅರಗನ್ನು ಬಳಸಿ ಅರಮನೆ ನಿರ್ಮಿಸಲು ವಾಸ್ತುಶಿಲ್ಪಿ ಪುರೋಚನಿಗೆ ಸೂಚಿಸಲಾಗಿತ್ತು. ಪೂರ್ವ ಯೋಜನೆಯಂತೆ ಪಾಂಡವರು ಅರಗಿನ ಅರಮನೆಯಲ್ಲಿ ವಾಸವಾಗಿರುವಂತೆ ಕೌರವ ಆಹ್ವಾನ ನೀಡಿದ್ದ. ಅರಮನೆಯಲ್ಲಿ ಪಾಂಡವರು ವಾಸವಾಗಿದ್ದ ವೇಳೆ ರಹಸ್ಯವಾಗಿ ಬೆಂಕಿ ಹಚ್ಚಿ ಕೊಲ್ಲುವುದು ದುರ್ಯೋಧನನ ಸಂಚು ಹೂಡಿದ್ದ. ಆದರೆ ವಿದುರನ ಉಪಾಯದಿಂದ ಪಾಂಡವರು ಸುರಂಗ ಕೊರೆದು ಪ್ರಾಣಾಪಾಯದಿಂದ ಪಾರಾಗಿದ್ದರು.

1970ರ ಮಾರ್ಚ್‌ 31ರಂದು ಬರ್ನಾವಾ ಗ್ರಾಮದ ಮುಕೀಂ ಖಾನ್‌ ಎಂಬವರು ಈ ದಿಬ್ಬ ಶೇಖ್‌ ಬದ್ರುದ್ದೀನ್‌ ಅವರ ಗೋರಿಯಾಗಿದ್ದು, ಇದು ಸ್ಮಶಾನ ಸ್ಥಳವಾಗಿದೆ ಎಂದು ಮೀರತ್‌ ಜಿಲ್ಲಾ ಕೋರ್ಟ್‌ ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಕೃಷ್ಣದತ್ತ ಜೀ ಮಹಾರಾಜ್‌ ಅವರು ಇದು ಸ್ಮಶಾನ ಜಾಗವಲ್ಲ, ಪುರಾತನ ಅರಗಿನ ಅರಮನೆ ಇದ್ದ ಸ್ಥಳವಾಗಿದ್ದು, ಹಿಂದೂಗಳ ಯಾತ್ರಾ ಪ್ರದೇಶವಾಗಿದೆ ಎಂದು ಪ್ರತಿವಾದ ಮಂಡಿಸಿದ್ದರು.

ಹಿಂದೂ ಮತ್ತು ಮುಸ್ಲಿಂ ಕಡೆಯ ವಾದ, ಪ್ರತಿವಾದ ಆಲಿಸಿದ ಕೋರ್ಟ್‌ ನ ಜಡ್ಜ್‌ ಶಿವಂ ದ್ವಿವೇದಿ ಅವರು ಸಾಕ್ಷ್ಯಗಳ ಆಧಾರದ ಮೇಲೆ ಬರ್ನಾವಾದಲ್ಲಿರುವ ದಿಬ್ಬ ಲಕ್ಷಗೃಹ ಎಂದು ತೀರ್ಪು ನೀಡಿದ್ದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಕೋರ್ಟ್‌, 108 ಎಕರೆ ಪ್ರದೇಶ ಸ್ಮಶಾನವಾಗಿತ್ತು ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ತಿಳಿಸಿ, ಮುಸ್ಲಿಂ ಕಕ್ಷಿದಾರರ ವಾದವನ್ನು ತಳ್ಳಿಹಾಕಿದೆ. ಮತ್ತೊಂದೆಡೆ ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದಾಗಿ ಮುಸ್ಲಿಂ ಕಕ್ಷಿದಾರರ ಪರ ವಕೀಲ ಶಾಹೀದ್‌ ಖಾನ್‌ ತಿಳಿಸಿದ್ದಾರೆ.

ಎಎಸ್‌ ಐ ದಾಖಲೆ:

ಭಾರತೀಯ ಪುರಾತತ್ತ್ವ ಇಲಾಖೆಯ ವರದಿಯ ಪ್ರಕಾರ, ಐತಿಹಾಸಿಕ ಸ್ಥಳದಲ್ಲಿ ಲಕ್ಷಗೃಹ ಇದ್ದಿರುವುದನ್ನು ಖಚಿತಪಡಿಸಿದೆ. ಬರ್ನಾವಾ ಗ್ರಾಮದಲ್ಲಿನ ಪುರಾತನ ದಿಬ್ಬ ಇದ್ದ ಸ್ಥಳದಲ್ಲಿ ಎಎಸ್‌ ಐ ಉತ್ಖನನ ನಡೆಸಿದ್ದು, ಸುಮಾರು 4,500 ವರ್ಷಗಳಷ್ಟು ಹಳೆಯ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next