Advertisement

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ|ಸುಧಾಕರ್‌

02:11 AM Dec 04, 2021 | Team Udayavani |

ಬೆಳ್ತಂಗಡಿ: ವಿಶ್ವವೇ ಭಾರತವನ್ನು ಗೌರವಿಸಿದೆ, ನಮ್ಮ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದೆ ಎಂದಾದರೆ ಅದು ನಮ್ಮ ಪೂರ್ವಿಕರು ಉಳಿಸಿದ ಧರ್ಮದ ಪರಂಪರೆಯ ಸಿದ್ಧಾಂತದಿಂದ. ಅದೇ ಮಾದರಿಯಲ್ಲಿ ಕಳೆದ 8 ದಶಕಗಳಿಂದ ಹೆಗ್ಗಡೆ ಕುಟುಂಬ ನಾಡನ್ನು ಬೆಳಗಿಸುವ, ಸಂಸ್ಕೃತಿ ಉಳಿಸುವ, ಸಾಹಿತ್ಯವನ್ನು ಪೋಷಿಸುವ ಸುಜ್ಞಾನವನ್ನು ಪಸರಿಸುವ ಲಕ್ಷದೀಪೋತ್ಸವವನ್ನು ಕೋಟ್ಯಂತರ ಕನ್ನಡಗರಿಗೆ ಅರ್ಪಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ಬಣ್ಣಿಸಿದರು.

Advertisement

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ. ಕ. ಜಿಲ್ಲೆ ಕಲಾರಾಧನೆಗೆ ಹೆಸರುವಾಸಿ, ಸಾಹಿತ್ಯ ಕ್ಷೇತ್ರಕ್ಕೆ ಮಹಾಕವಿ ರತ್ನಾಕರವರ್ಣಿ, ಮಂಜೇಶ್ವರ ಗೋವಿಂದ ಪೈ, ಕೆ.ಶಿವರಾಮ ಕಾರಂತ ಮೊದಲಾದವರು ಅಮೂಲ್ಯ ಕೊಡುಗೆ ನೀಡಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಕರ್ನಾಟಕದ ಹೆಮ್ಮೆ. ಹಾಗಾಗಿ ಸಾಹಿತ್ಯ ಬೆಳೆದರೆ ನಾಡು ಬೆಳೆಯುತ್ತದೆ ಎಂಬುದನ್ನು ಅರಿತು ಸಾಹಿತ್ಯ ವೃದ್ಧಿಗೆ ಪ್ರಥಮ ಆಧ್ಯತೆ ನೀಡಬೇಕಾಗಿದೆ ಎಂದರು.

ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮ ಮತ್ತು ಸಾಹಿತ್ಯ ಮಾನವರ ಏಳಿಗೆಗೆ ಪೂರಕ ಮತ್ತು ಪ್ರೇರಕ. ಧರ್ಮಸ್ಥಳದಲ್ಲಿ ಆಚರಿಸುವ ಸಾಹಿತ್ಯ ಸಮ್ಮೇಳನಗಳ ಉದ್ದೇಶವೂ ಸರ್ವರ ಹಿತ ಹಾಗೂ ಸಹಬಾಳ್ವೆಯ ಜನತೆಗೆ ಭಾಷಾ ಸಾಮರಸ್ಯ, ಭಾಷಾಭಿಮಾನದ ಜತೆಗೆ ಮಾನ ವೀಯ ಗುಣಗಳ ಉದ್ದೀಪನ ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ. ಉತ್ತಮ ಸಾಹಿತ್ಯದ ಅಧ್ಯಯನದಿಂದ ಮಾನವನ ಬದುಕಿಗೆ ಆವಶ್ಯಕವಾದ ನೈತಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳ ಪ್ರೇರಣೆ ದೊರೆಯುತ್ತದೆ ಎಂದರು.

ಧರ್ಮಸ್ಥಳದಲ್ಲಿ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಅನೇಕ ಪುರಾತನ ಹಸ್ತಪ್ರತಿಗಳು, ಸಾವಿರಾರು ಗ್ರಂಥಗಳು, 6 ಸಾವಿರ ತಾಳೆಗರಿ ಪ್ರತಿ, ಅನೇಕ ಸುಪ್ರಸಿದ್ಧ ಸಾಹಿತಿಗಳ ಅಗಣಿತ ಕೃತಿಗಳು ಹಾಗೂ ಭಾರತೀಯ ಭಾಷೆಗಳ ಮಹತ್ವದ ಗ್ರಂಥಗಳ ಅನುವಾದಿತ ಕೃತಿಗಳನ್ನು ಸಂರಕ್ಷಿಸಿಡಲಾಗಿದ್ದು, ಸಂಪಾದಕೀಯಗಳು, ಆಸಕ್ತ ಸಾಹಿತ್ಯಾಭಿಮಾನಿಗಳ, ಸಂಶೋಧಕರ, ವಿದ್ವಾಂಸರುಗಳು, ವಿದ್ಯಾರ್ಥಿಗಳಿಗೆ ಬಳಕೆಗೆ ಇದನ್ನು ಒದಗಿಸಲಾಗುತ್ತಿದೆ ಎಂದರು.

Advertisement

ಇದನ್ನೂ ಓದಿ:ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ಅಂತರಂಗದ ಶುದ್ಧೀಕರಣ
ಅಧ್ಯಕ್ಷತೆ ವಹಿಸಿದ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಸಾಹಿತ್ಯದಿಂದ ಅಂತರಂಗದ ಶುದ್ಧೀಕರಣ ವಾಗುತ್ತದೆ. ಸಾಹಿತ್ಯ ರಚನೆಯಲ್ಲಿ ತಣ್ತೀದ ಧಾತು ಇರಬೇಕು. ಆಧ್ಯಾತ್ಮ ಸಾಹಿತ್ಯ ಮತ್ತು ರಂಜನೀಯ ಸಾಹಿತ್ಯದ ಮಧ್ಯೆ ಸಮನ್ವಯ ಅಗತ್ಯ. ಅಂತಃಕರಣದ ಶುದ್ಧೀಕರಣದಿಂದ ಲೋಕದ ಶುದ್ಧೀಕರಣವೂ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಗರದ ಡಾ| ಗಜಾನನ ಶರ್ಮ, “ಐತಿಹಾಸಿಕ ಸಾಹಿತ್ಯ ಸೃಷ್ಟಿಯಲ್ಲಿ ಎದುರಾಗುವ ಸವಾಲುಗಳು’ ಎಂಬ ವಿಷಯದ ಬಗ್ಗೆ, ಚಿತ್ರದುರ್ಗದ ಡಾ. ಪಿ. ಚಂದ್ರಿಕಾ, “ಸಾಹಿತ್ಯ ಸಂವೇದನೆ ಮತ್ತು ಮಹಿಳಾ ಅಭಿವ್ಯಕ್ತಿ’ ವಿಷಯದಲ್ಲಿ ಹಾಗೂ ಬೆಂಗಳೂರಿನ ಡಾ. ಕೆ.ಪಿ. ಪುತ್ತೂರಾಯ “ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಡಿ. ರಾಜೇಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ನೀತಾ ರಾಜೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಬೆಂಗಳೂರು, ರಾಜವರ್ಮ ಬಲ್ಲಾಳ್‌, ಡಾ| ಎಲ್‌.ಎಚ್‌. ಮಂಜುನಾಥ್‌ ಉಪಸ್ಥಿತರಿದ್ದರು.ಸನ್ಮಾನಿತರ ಅಭಿನಂದನ ಪತ್ರವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಯೋಜನ ನಿರ್ದೇಶಕಡಿ. ಶ್ರೇಯಸ್‌ ಕುಮಾರ್‌ ಮತ್ತು ಕಸಾಪ ಜಿಲ್ಲಾ
ಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌ ವಾಚಿಸಿದರು. ಉಪನ್ಯಾಸಕರನ್ನು ಸ್ವಾಗತ ಸಮಿತಿ ಖಜಾಂಜಿ ಡಿ.ಹರ್ಷೇಂದ್ರ ಕುಮಾರ್‌ ಸಮ್ಮಾನಿಸಿ ಗೌರವಿಸಿದರು. ಡಾ| ಬಿ.ಪಿ. ಸಂಪತ್‌ ಕುಮಾರ್‌ ನಿರೂಪಿಸಿದರು. ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್‌ ವಂದಿಸಿದರು.

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ಸ್ಮಾರಕ ಉದ್ಯಾನ
ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಜತೆಗೆ ಕಾಳುಮೆಣಸಿನ ರಫ್ತಿನ ಬಗ್ಗೆ ವಿಶೇಷ ಆಧ್ಯತೆ ನೀಡಿ ವಾಣಿಜ್ಯ ವ್ಯವಹಾರ ಬೆಳವಣಿಗೆಗೆ ಕೊಡುಗೆ ನೀಡಿದ ಕಾಳುಮೆಣಸಿನ ರಾಣಿ ಚೆನ್ನ ಭೈರಾದೇವಿ ಸ್ಮಾರಕ ಉದ್ಯಾನ ಸದ್ಯದಲ್ಲಿಯೇ ಹೊನ್ನಾವರದಲ್ಲಿ ಎರಡೂವರೆ ಎಕ್ರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆ ಪ್ರಸ್ತಾಪಿಸಿದರು.

ಮೊದಲನೇ ಹಾಗೂ ಎರಡನೇ ಅಲೆಯನ್ನು ಸರಕಾರ ದಿಟ್ಟವಾಗಿ ಎದುರಿಸಿದ್ದು ಅಂತಿಮ ಜಯ ನಮ್ಮದಾಗಿದೆ. ನಾನು ಮಂಜುನಾಥ ಸ್ವಾಮಿಯಲ್ಲಿ ಬೇಡಿಕೊಳ್ಳುವುದು ಏನೆಂದರೆ ಮೂರನೇ ಅಲೆ ಏನಿದೆ ಅಥವಾ ಹೊಸ ಪ್ರಬೇಧ ಅತ್ಯಂತ ಸರಳವಾಗಿರಲಿ, ಯಾವುದೇ ಸಾವು ನೋವು ಸಂಭವಿಸದಿರಲಿ. ಸರಕಾರ ಅತ್ಯಂತ ಉತ್ತಮ ರೀತಿಯಲ್ಲಿ ನಿಯಂತ್ರಿಸಲು ಕ್ರಮ ವಹಿಸಿದೆ.
– ಡಾ| ಕೆ. ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವರು

ಕಂಚಿಮಾರುಕಟ್ಟೆ ಉತ್ಸವ ಸಂಪನ್ನ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ನಾಲ್ಕನೇ ದಿನವಾದ ಗುರುವಾರ ರಾತ್ರಿ ಶ್ರೀಮಂಜುನಾಥ ಸ್ವಾಮಿಯ ಕಂಚಿಮಾರು ಕಟ್ಟೆ ಉತ್ಸವ ಸಂಭ್ರಮದಿಂದ ನೆರವೇರಿತು. ಸಹಸ್ರಾರು ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.

ಕಂಚಿಮಾರು ಕಟ್ಟೆ ಉತ್ಸವಕ್ಕಾಗಿ ದೇವರನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಕೊಂಡೊಯ್ಯ ಲಾಯಿತು. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಪೂಜೆಗಳು ನಡೆದವು. ಉತ್ಸವದ ಬಳಿಕ ದೇವಸ್ಥಾನಕ್ಕೆ ಮರಳಿದ ದೇವರು ಬೆಳ್ಳಿರಥದಲ್ಲಿ ದೇವಸ್ಥಾನದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಬಂದು ದಿನದ ಉತ್ಸವ ಪೂರ್ಣಗೊಂಡಿತು.

ಇಂದು ಸಮವಸರಣ ಪೂಜೆ
ಡಿ. 4ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ತೀರ್ಥಂಕರರು ತಮ್ಮ ದಿವ್ಯಧ್ವನಿ ಮೂಲಕ ಧರ್ಮೋಪದೇಶ ನೀಡುವ ಧಾರ್ಮಿಕ ಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಪ್ರಾಣಿ,ಪಕ್ಷಿಗಳಿಗೂ, ಸರ್ವಧರ್ಮಿàಯರಿಗೂ ಅವರವರ ಭಾಷೆಯಲ್ಲಿ ಧರ್ಮೋ ಪದೇಶ ಕೇಳುವ ಅವಕಾಶವಿದೆ. ಜೈನರ ಆರಾಧನಾ ಕೇಂದ್ರವಾದ ಬಸದಿಗಳು ಸಮವಸರಣದ ಪ್ರತೀಕವಾಗಿದೆ. ಈ ಪ್ರಯುಕ್ತ ಅಷ್ಟವಿಧಾರ್ಚನೆ ಪೂಜೆ, ಮಂತ್ರ ಪಠಣ, ಜಿನಭಕ್ತಿ ಗೀತೆಗಳ ಗಾಯನ ಮೊದಲಾದ ಕಾರ್ಯಕ್ರಮ ಆಯೋಜಿಸಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಸಮಾಪನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next