Advertisement

ಅರ್ಪಾಜೆ ಕೆರೆ ಒತ್ತುವರಿ ಆರೋಪ: ಗಡಿ ಗುರುತಿಗೆ ವಿಳಂಬ

03:20 AM Jun 26, 2018 | Karthik A |

ಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ ಸರ್ವೆ ನಂ. 33/3ರಲ್ಲಿ  0.62 ಎಕರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ, ಕೆರೆಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿರುವುದರ ವಿರುದ್ಧ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ತಿಂಗಳ ಹಿಂದೆ ದೂರಿಗೆ ಸ್ಪಂದಿಸಿದ ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ ಅವರು, ಕೆರೆಯನ್ನು ಅಳೆದು ಗಡಿ ಗುರುತು ಮಾಡಿ, ಅತಿಕ್ರಮಣ ನಡೆದಿದ್ದರೆ ಕೂಡಲೇ ತೆರವುಗೊಳಿಸುವಂತೆ ಕಡಬ ಕಂದಾಯ ನಿರೀಕ್ಷಕರಿಗೆ ಮೌಖಿಕ ಆದೇಶ ನೀಡಿದ್ದರು. ಅದರಂತೆ ಕಂದಾಯ ನಿರೀಕ್ಷಕರು ಕೆರೆಯನ್ನು ಅಳತೆ ಮಾಡಿ ಗಡಿ ಗುರುತು ಮಾಡಿಕೊಡಲು ಪತ್ರ ಬರೆದಿದ್ದರೂ ಭೂಮಾಪನ ಇಲಾಖೆ ಗಡಿ ಗುರುತು ಮಾಡಿಲ್ಲ. ಕೆರೆಯ ಜಮೀನಿನ ಗಡಿ ಗುರುತು ಮಾಡಲು ಭೂಮಾಪನ ಇಲಾಖೆ ಮುಂದಾಗದಿರುವುದು ಸ್ಥಳೀ ಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪರಿಸರಕ್ಕೆ ನೀರುಣಿಸುತ್ತಿದ್ದ ಕೆರೆ
ಅರ್ಪಾಜೆಯ ಸರಕಾರಿ ಕೆರೆ ಉದೇರಿ, ನಾಲ್ಗುತ್ತು ಹಾಗೂ ಅರ್ಪಾಜೆ ಪರಿಸರದ ಕೃಷಿ ತೋಟಗಳಿಗೆ ಹಾಗೂ ಭತ್ತದ ಗದ್ದೆಗಳಿಗೆ ನೀರುಣಿಸುತ್ತಿತ್ತು. ಪರಿಸರದಲ್ಲಿ ಅಂತರ್ಜಲಮಟ್ಟ ಏರಿಕೆಗೂ ಕಾರಣವಾಗಿತ್ತು. ಆದರೆ ಇದೀಗ ಸದ್ರಿ ಕೆರೆಯಲ್ಲಿ ಮಳೆಗಾಲದಲ್ಲಿಯೂ ನೀರು ನಿಲ್ಲಲು ಅವಕಾಶ ನೀಡುತ್ತಿಲ್ಲ. ಕಾಲುವೆಯನ್ನು 7ರಿಂದ 8 ಅಡಿ ಆಳಗೊಳಿಸಿರುವುದರಿಂದ ನಿರಂತರ ಮಳೆ ಸುರಿದರೂ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೆರೆಯಲ್ಲಿ ನೀರು ನಿಲ್ಲದೇ ಇರುವುದರಿಂದ ಕೆರೆಯು ಬಯಲು ಪ್ರದೇಶದಂತಾಗಿದ್ದು, ಪರಿಸರ ದಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ. ಆದುದರಿಂದ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ನೀರು ಹರಿದು ಹೋಗುವ ಕಾಲುವೆಯನ್ನು ಮುಚ್ಚಿಸಿ ಕೆರೆಯನ್ನು ಸಂರಕ್ಷಣೆ ಮಾಡಬೇಕೆಂದು ಡಿಸಿ ನೀಡಿದ ದೂರಿನಲ್ಲಿ ಮನವಿ ಮಾಡಿದ್ದರು.

ಕೃಷಿಕರ ಮನವಿ
ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಮಳೆ ನೀರು ಇಂಗಿ ಪರಿಸರದ ಕೃಷಿ ಚಟುವಟಿಕೆಗಳಿಗೆ ಅನುಕೂಲ. ಬಾವಿಗಳಲ್ಲಿ ನೀರಿನ ಮಟ್ಟ ಏರುತ್ತದೆ. ಅರ್ಪಾಜೆ ಕೆರೆಯನ್ನು ಸ್ವಂತ ಖರ್ಚಿನಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ತಾಂತ್ರಿಕ ಅನುಮತಿ ನೀಡುವಂತೆ ಕೃಷಿಕ ಚಾಕೋ ಫಿಲಿಪ್‌ ಕಡಬ ಗ್ರಾ.ಪಂ. ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಆದರೆ ಕೆರೆಯ ಗಡಿ ಗುರುತು ಆಗದೆ ಅವರ ಮನವಿಗೆ ಇಲಾಖೆಗಳಿಂದೂ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ್ಲ.

ಅಭಿವೃದ್ಧಿಗೆ ಉತ್ಸುಕ
ಕೆರೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡುವಂತೆ ಕೃಷಿಕ ಚಾಕೋ ಫಿಲಿಪ್‌ ಅವರು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ. ಕೆರೆಗಳನ್ನು ಅಭಿವೃದ್ಧಿಪಡಿಸಲು ಪಂಚಾಯತ್‌ ಉತ್ಸುಕವಾಗಿದೆ. ಆದರೆ ಕೆರೆಯ ಗಡಿ ಗುರುತು ಆದ ಬಳಿಕವಷ್ಟೇ ನಾವು ಮುಂದುವರಿಯಲು ಸಾಧ್ಯ. ಕಂದಾಯ ಇಲಾಖೆಯಿಂದ ಕೆರೆಯನ್ನು ಅಳೆದುಕೊಡುವಂತೆ ಭೂಮಾಪನ ಇಲಾಖೆಗೆ ಪತ್ರ ಬರೆಯಲಾಗಿದೆ. ನಾವೂ ಪ್ರತ್ಯೇಕ ಪತ್ರ ಬರೆದಿದ್ದೇವೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ

— ನಾಗರಾಜ್‌ ಎನ್‌.ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next