Advertisement

Rabkavi Banhatti ಪೊಲೀಸ್ ಠಾಣೆ ಸ್ಥಾಪನೆಗೆ ಹೋರಾಟದ ಕೊರತೆ

08:06 PM Jun 01, 2023 | Team Udayavani |

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ಅವಳಿ ನಗರಗಳು ಒಂದೇ ನಗರಸಭೆಯ ವ್ಯಾಪ್ತಿಯಲ್ಲಿ ಬರುತ್ತವೆ. ಅದೇ ರೀತಿಯಾಗಿ ಸರ್ಕಾರ ಕೂಡಾ ರಬಕವಿ-ಬನಹಟ್ಟಿ ನಗರಗಳನ್ನು ಒಂದೇ ಎಂದು ಪರಿಗಣಿಸಿ ತಾಲ್ಲೂಕು ಎಂದು ಘೋಷಣೆ ಮಾಡಿವೆ. ತೇರದಾಳ ಕೂಡಾ ಪ್ರತ್ಯೇಕ ತಾಲ್ಲೂಕು ಆಗಿ ಘೋಷಣೆಯಾಗಿದೆ. ಆದರೆ ರಬಕವಿಯ ಜನರು ಪೊಲೀಸ್ ಠಾಣೆಯ ಕಾರ್ಯಗಳಿಗೆ ಒಂದೇ ಕಿ.ಮೀ ದೂರದಲ್ಲಿರುವ ಬನಹಟ್ಟಿಯ ಠಾಣೆಗೆ ಬರದೆ, ೧೦ ಕಿ. ಮೀ. ತೇರದಾಳ ಪೊಲೀಸ್ ಠಾಣೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

Advertisement

ನಾಲ್ಕುವರೆ ದಶಕಗಳ ಹಿಂದಿನ ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರ ಮತ್ತು ಇಲಾಖೆಗಳು ಗಮನ ನೀಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರಬಕವಿಯ ಜನರಲ್ಲಿ ಪೊಲೀಸ್ ಠಾಣೆಯ ಸ್ಥಾಪನೆಗೆ ಹೋರಾಟದ ಕೊರತೆಯಾಗಿದೆ. ಈ ಭಾಗಕ್ಕೆ ಬರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಸಚಿವರಿಗೆ ಮತ್ತು ಶಾಸಕರಿಗೆ ಮನವಿ ಪತ್ರಗಳನ್ನು ನೀಡುವ ಕಾರ್ಯ ನಡೆದಿದೆ. ಆದರೆ ಠಾಣೆಯ ಸ್ಥಾಪನೆಗೆ ನಿರಂತರದ ಹೋರಾಟ ನಡೆಯದೆ ಇರುವುದು ವಿಳಂಬಕ್ಕೆ ಕಾರಣವಾಗಿದೆ.

ರಬಕವಿ ಬನಹಟ್ಟಿಯ ಪೊಲೀಸ್ ಠಾಣೆಯ ಮಧ್ಯದಲ್ಲಿ ಕೇವಲ ಒಂದು ಕಿ.ಮೀ ಅಂತರವಿದೆ. ಆದರೆ ರಬಕವಿಯ ಜನರು ಏಳೆಂಟು ಕಿ.ಮೀ ದೂರದ ತೇರದಾಳ ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಉಂಟಾಗಿದೆ.

ರಬಕವಿಯಲ್ಲಿ ಠಾಣೆಯ ನಿರ್ಮಾಣಕ್ಕಾಗಿ ಇಲ್ಲಿನ ದುರಡಿ ಸಹೋದರರು ಹೊಸ ಬಸ್ ನಿಲ್ದಾಣದ ಮಾರ್ಗದಲ್ಲಿ ಒಂದು ಎಕರೆಗಿಂತ ಹೆಚ್ಚಿನ ಭೂಪ್ರದೇಶವನ್ನು ದಾನವಾಗಿ ನೀಡಿದ್ದಾರೆ. ಸದ್ಯ ಇಲ್ಲಿ ರಬಕವಿ ಔಟ್ ಪೋಸ್ಟ್ ಸ್ಥಳ ಎಂದು ನಾಮಫಲಕ ಮಾತ್ರವಿದೆ. ಈ ಪ್ರದೇಶ ಗಿಡಗಂಟಿಗಳಿಂದ ತುಂಬಿದೆ. ಇದು ನಗರದ ಮಧ್ಯ ಭಾಗದಲ್ಲಿದೆ.

ಇಲ್ಲಿಯ ಜನರು ಚಿಕ್ಕ ಪುಟ್ಟ ಕಾರ್ಯಗಳು, ಮೊಬೈಲ್ ಕಳವು, ಪಾಸ್ ಪೋರ್ಟ್ ಅರ್ಜಿ ಪರಿಶೀಲನೆ, ದಾಖಲೆಗಳ ಕಳುವಿನ ಕುರಿತು ದೂರು ಸೇರಿದಂತೆ ಪ್ರತಿಯೊಂದಕ್ಕೂ ತೇರದಾಳ ಪಟ್ಟಣಕ್ಕೆ ಹೋಗಬೇಕಾಗಿದೆ. ಇದರಿಂದಾಗಿ ಈ ಭಾಗದ ನೇಕಾರರಿಗೆ, ನದಿ ತೀರದ ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ಮತ್ತು ಮಹಿಳೆಯರಿಗೆ ಬಹಳಷ್ಟು ತೊಂದರೆಯಾಗಿದೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಸಿಬ್ಬಂದಿ ಇರದೆ ಇದ್ದರೆ ಮತ್ತೆ ಮರು ದಿವಸ ಹೋಗಬೇಕಾಗುತ್ತದೆ. ಇದು ಇಲ್ಲಿಯ ಜನರಿಗೆ ಆರ್ಥಿಕವಾಗಿ ಹೊರೆಯಾಗಿದೆ. ಇದರಿಂದಾಗಿ ಬಹುತೇಕ ಪ್ರಕರಣಗಳನ್ನು ದಾಖಲಿಸಲು ಇಲ್ಲಿಯ ಜನರು ತೇರದಾಳಕ್ಕೆ ಹೋಗುವುದೇ ಇಲ್ಲ. ರಬಕವಿ ನಗರದಲ್ಲಿ ಔಟ್ ಪೊಸ್ಟ್ ಠಾಣೆ ಇದ್ದರೂ ಯಾವುದೆ ಪ್ರಯೋಜನವಿಲ್ಲವಾಗಿದೆ ಎನ್ನುತ್ತಾರೆ ರಬಕವಿ-ಬನಹಟ್ಟಿ ನಗರಸಭೆ ಸದಸ್ಯ ಬಸವರಾಜ ಗುಡೋಡಗಿ

Advertisement

ರಬಕವಿಯ ಜನರು ಮನೆಯಂಗಳದಲ್ಲಿರುವ ಠಾಣೆಯ ಸೌಲಭ್ಯ ಪಡೆದುಕೊಳ್ಳದೆ ದೂರದ ತೇರದಾಳಕ್ಕೆ ಅಲೆಡಾಡುವಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಗಮನ ಸೆಳೆಯುವುದು ಒಂದು ಕಡೆಯಾದರೆ, ಪ್ರತ್ಯೇಕವಾದ ಠಾಣೆಗಾಗಿ ನಿರಂತರ ಮತ್ತು ಗಟ್ಟಿ ಹೋರಾಟದ ಅವಶ್ಯಕತೆ ಇದೆ. ಹೋರಾಟದ ಕೊರತೆಯಿಂದಾಗಿ ಠಾಣೆ ಸ್ಥಾಪನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಗಮನ ನೀಡಬೇಕಾಗಿದೆ.

ರಬಕವಿ ಬನಹಟ್ಟಿ ತಾಲ್ಲೂಕು ವ್ಯಾಪ್ತಿ ವಿಶಾಲವಾಗಿದೆ. ಆದ್ದರಿಂದ ರಬಕವಿಯಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸ್ಥಾಪನೆಗಾದರೂ ಕ್ರಮ ತೆಗೆದುಕೊಳ್ಳಬೇಕಾಗಿದೆ. ರಬಕವಿಯಲ್ಲಿ ಠಾಣೆ ನಿರ್ಮಾಣ ಮಾಡುವುದು ಸಾಧ್ಯವಾಗದೆ ಇದ್ದರೆ, ರಬಕವಿಯ ವ್ಯಾಪ್ತಿಯನ್ನು ಬನಹಟ್ಟಿ ಪೊಲೀಸ್ ಠಾಣೆಗೆ ಸೇರಿಸುವ ನಿಟ್ಟಿನಲ್ಲಿ ಗಮನ ನೀಡಬೇಕು. ರಬಕವಿಯಲ್ಲಿ ಠಾಣೆಯ ನಿರ್ಮಾಣದಿಂದ ಇಲ್ಲಿಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ತೇರದಾಳ ಠಾಣೆಯು ಬನಹಟ್ಟಿ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವುದರಿಂದ ವಕೀಲರಿಗೂ ಮತ್ತು ಕಕ್ಷಿದಾರರಿಗೂ ಅನುಕೂಲವಾಗಲಿದೆ.
-ವಿಜಯ ಹೂಗಾರ, ವಕೀಲರು ರಬಕವಿ

ಕಿರಣ ಶ್ರೀಶೈಲ ಆಳಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next