Advertisement

Lack of Rain: ಬತ್ತಿದ ಕೆರೆ, ಒಣಗಿದ ಬೆಳೆ, ನೀರಿಗೂ ಸಂಕಷ್ಟ

04:37 PM Aug 28, 2023 | Team Udayavani |

ಎಚ್‌.ಡಿ.ಕೋಟೆ: ಮುಂಗಾರು ಮಳೆ ಕಣ್ಮರೆಯಾಗಿ ಮತ್ತೆ ಮಳೆ ಬರುವ ಸುಳಿವು ಕಾಣಿಸದ ಹಿನ್ನೆಲೆ ತಾಲೂಕಿನ ಕೆರೆಕಟ್ಟೆ ಬಿಸಿಲಿನ ತಾಪಕ್ಕೆ ಬತ್ತಿಹೋಗುತ್ತಿವೆ. ಈ ಹಿಂದೆ ಬಿದ್ದ ಮಳೆಗೆ  ಬಿತ್ತನೆ ಮಾಡಿದ್ದ ಬೆಳೆಗಳೂ ಬಾಡತೊಡಗಿವೆ.

Advertisement

ಪೂರ್ವ ಮುಂಗಾರು ಕೈಕೊಟ್ಟು, ಮುಂಗಾರು ತಡವಾದರೂ ಕಳೆದ ಜುಲೈ ತಿಂಗಳ ಮಧ್ಯದಲ್ಲಿ ಆಗಮಿಸಿ 15 ದಿನ ತಾಲೂಕಿನಾದ್ಯಂತ ಎಡಬಿಡದೆ ಮಳೆ ಸುರಿದಿತ್ತು. ಆಗ,  ಭಿತ್ತಿದ್ದ ಬೆಳೆ ಜೀವಕಳೆ ಪಡೆದು ರೈತರು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಆಗಸ್ಟ್‌ ನಲ್ಲಿ ಮುಂಗಾರು ಮತ್ತೆ ಕಣ್ಮರೆಯಾಗಿದೆ.

ಕುಡಿವ ನೀರಿಗೂ ಹಾಹಾಕಾರ?: ತಾಲೂಕಿನಲ್ಲಿ ಪ್ರತಿ ವರ್ಷ ಆಗಸ್ಟ್‌ನಲ್ಲೇ ಹೆಚ್ಚು ಮಳೆಯಾಗುತ್ತಿತ್ತು. ಈ ಬಾರಿ ತಿಂಗಳು ಮುಗಿಯುವ ಹಂತಕ್ಕೆ ಬಂದಿದ್ದರೂ ಮಳೆ ಬರುವ ಮನ್ಸೂಚನೆ ಕಾಣಿಸುತ್ತಿಲ್ಲ, ಬಿಸಿಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನ ಮತ್ತು ಜಾನುವಾರುಗಳಿಗೂ ಕುಡಿವ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಆಗಸ್ಟ್‌ನಲ್ಲಿ ವಾಡಿಕೆ ಮಳೆಯೂ ಬಂದಿಲ್ಲ: ಕಳೆದ ಜುಲೈ ನಲ್ಲಿ ವಾಡಿಕೆ 138 ಮಿ.ಮೀ ಮಳೆಗೆ 183 ಮಿ.ಮೀ ಮಳೆ ಸುರಿದು ವಾಡಿಕೆಗಿಂತಲೂ ಹೆಚ್ಚು ಮಳೆ ಯಾಗಿತ್ತು. ಆಗಸ್ಟ್‌ ತಿಂಗಳ ಆಶ್ಲೇಷಾ ಮತ್ತು ಮಖೆ ಮಳೆ ಕೈಕೊಟ್ಟ ಪರಿಣಾಮ ವಾಡಿಕೆ 64 ಮಿ.ಮೀ ಮಳೆಗೆ ಕೇವಲ 18 ಮಿ.ಮೀ ಮಳೆಯಾಗಿದೆ. ಹಾಲುಕಟ್ಟುವ ಹಂತದಲ್ಲಿದ್ದ ಮುಸುಕಿನ ಜೋಳ, ಕಾಯಿ ಕಟ್ಟುವ ಹಂತದಲ್ಲಿದ್ದ ಹತ್ತಿ ಬೆಳೆಗೆ ಹಿನ್ನಡೆಯಾಗಿದೆ.

ಬೆಳೆಗಳಿಗೆ ಫ‌ಲವತ್ತತೆ ಸಿಗಲ್ಲ: ಎಚ್‌.ಡಿ.ಕೋಟೆ ಕೃಷಿ ಇಲಾಖೆ ಕಚೇರಿ ಮೂಲಗಳ ಪ್ರಕಾರ ತಾಲೂಕಿನಲ್ಲಿ ಈ ವರ್ಷ ವಾಡಿಕೆ ಮಳೆ ಆಗದಿದ್ದರೂ ಅಲ್ಪಸ್ವಲ್ಪ ಮಳೆಗೆ ರೈತರು ಬಿತ್ತನೆ ಮಾಡಿದ್ದ ಬೆಳೆ ಒಣಗುತ್ತಿವೆ. ಮುಸುಕಿನ ಜೋಳ ಮತ್ತು ಹತ್ತಿ ಬೆಳೆಗೆ ಪ್ರಮುಖ ಹಂತದಲ್ಲಿ ಮಳೆ ಬೀಳದ ಹಿನ್ನಲೆ ಬೆಳೆ ಬಂದರೂ ಫಲವತ್ತತೆ ಸಿಗಲ್ಲ ಎಂದು ಸಹಾಯಕ ಕೃಷಿ ಅಧಿಕಾರಿ ಜಯರಾಮಯ್ಯ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

4 ಜಲಾಶಯ, ಅರೆ ಮಲೆನಾಡು ಖ್ಯಾತಿ: ತಾಲೂಕು ಅರೆ ಮಲೆನಾಡು ಖ್ಯಾತಿ ಹೊಂದಿದೆ. ಹೀಗಾಗಿ ತಾಲೂಕಿನಲ್ಲಿ 4 ಜಲಾಶಯಗಳಿದ್ದರೂ ತಾಲೂಕಿನ ಭಾಗಶಃ ರೈತರು ಮಳೆಯಾಶ್ರಿತ ಬೆಳೆಗಳ ಕೃಷಿ ಚಟುವಟಿಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಬಾರಿ ತಾಲೂಕಿನ ಪ್ರಮುಖ ಬೆಳೆ ಹತ್ತಿ, ತಂಬಾಕು ಬೆಳೆ ಬಿತ್ತನೆ ಕಡಿಮೆ ಮಾಡಿ ಮುಸುಕಿನ ಜೋಳ, ಶುಂಠಿ, ರಾಗಿ, ದ್ವೀದಳ ಧಾನ್ಯ ಸೇರಿ ಇತರ ತರಕಾರಿ ಬೆಳೆಗೆ ಮುಂದಾಗಿದ್ದರೂ, ತಿಂಗಳಿಂದ ಮುಂಗಾರು ಮಳೆ ಕೈಕೊಡುತ್ತಿದೆ. ಇದರಿಂದಾಗಿ ಬೆಳೆಗಳು ಮಳೆ ಇಲ್ಲದೇ ಒಣಗುತ್ತಿರುವುದರಿಂದ ಬಿತ್ತನೆ ಹಾಕಿದ್ದ ಮೂಲ ಬಂಡವಾಳವೂ ಕೈತಪ್ಪುವ ಭೀತಿ ಆವರಿಸಿದೆ.

ರೈತರು ಮುಂದಿನ ದಿನಗಳಲ್ಲಿ ಬರುವ ಮಳೆಗೆ ಅನುಗುಣವಾಗಿ ಬೆಳೆ ಬಿತ್ತನೆಗೆ ಮುಂದಾಗಬೇಕಿದ್ದು, ಅಲ್ಪಾವಧಿ ಬೆಳೆಗಳಾದ ಚೀಯಾ(ಗೇಲ್‌), ಅಲಸಂದೆ, ಕುಂಬಳ, ಉದ್ದು, ಹೆಸರು, ಬಿತ್ತನೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಜತೆಗೆ ಈಗ ತಾಲೂಕಿನ ಕಬಿನಿ ಸೇರಿ ತಾರಕ, ಹೆಬ್ಬಳ ಹಾಗೂ ನುಗು ಜಲಾಶಯಗಳ ಅಚ್ಚುಕಟ್ಟು ನಾಳೆಗಳಿಗೆ ಕಟ್ಟು ನೀರು ಹರಿಸುತ್ತಿರುವುದರಿಂದ ರೈತರು ಭತ್ತ ಬೆಳೆಯಲು ಮುಂದಾಗುತ್ತಿದ್ದಾರೆ.

ಮಳೆ ಕೊರತೆ ಇರುವ ಹಳ್ಳಿಗಳ ಸಮಗ್ರ ವರದಿಯನ್ನು ಇಲ್ಲಿನ ಕೃಷಿ ಅಧಿಕಾರಿಗಳು ಬೇಗ ಸರ್ಕಾರಕ್ಕೆ ಕಳುಹಿಸಿಕೊಡುವ ಮೂಲಕ ಎಚ್‌.ಡಿ.ಕೋಟೆ ತಾಲೂಕು ಈ ಬಾರಿ ಬರಪೀಡಿತ ತಾಲೂಕು ಎಂದು ಘೋಷಣೆಯಾಗುವಂತೆ ಶ್ರಮಿಸಬೇಕಿದೆ.

ಬರಪೀಡಿತ ತಾಲೂಕು ವರದಿಗೆ 26 ಹಳ್ಳಿಗಳಲ್ಲಿ ಸರ್ವೆ:

ತಾಲೂಕಿನಲ್ಲಿ ಈ ಬಾರಿ ಶೇ.86 ಮಳೆ ಕೊರತೆಯಾಗಿರುವ ಹಿನ್ನಲೆ ತಾಲೂಕನ್ನು ಈ ಬಾರಿ ಬರಪೀಡಿತವೆಂದು ಘೋಷಣೆ ಮಾಡಲು ಸರ್ಕಾರಕ್ಕೆ ವರದಿ ನೀಡುವ ಸಂಬಂಧ ತಾಲೂಕಿನಲ್ಲಿ ತೀರಾ ಕನಿಷ್ಠ ಮಳೆ ಆಗಿರುವ 26 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸೋಮವಾರದಿಂದ ಈ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಬೆಳೆ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟ ಆದ ಮೇಲೆ ಸರ್ಕಾರ ತಾಲೂಕನ್ನು ಬರಪೀಡಿತ ತಾಲೂಕು ಮಾಡಬೇಕೋ, ಬೇಡವೋ ಎಂದು ನಿರ್ಧಾರ ಮಾಡುತ್ತೆ, ಮೈಸೂರು ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ ಮತ್ತು ಟಿ.ನರಸೀಪುರ ಬರಪೀಡಿತ ತಾಲೂಕು ಸರ್ವೇಗೆ ಆಯ್ಕೆಯಾಗಿದ್ದು, ತಾಲೂಕು ಬರಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಜಯರಾಮಯ್ಯ ತಿಳಿಸಿದ್ದಾರೆ.

– ಬಿ.ನಿಂಗಣ್ಣಕೋಟೆ

 

Advertisement

Udayavani is now on Telegram. Click here to join our channel and stay updated with the latest news.

Next