Advertisement

ಕಟ್ಟಡ ನಿರ್ಮಾಣವಾದರೂ ಮೂಲಸೌಕರ್ಯ ಕೊರತೆ

10:59 PM Jan 23, 2021 | Team Udayavani |

ಕಾರ್ಕಳ: ಪೊಲೀಸರು ಸಾಮಾಜಿಕ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಂದು ವ್ಯವಸ್ಥೆ, ರಕ್ಷಣೆಗೂ ಪೊಲೀಸರೆ ಬೇಕು. ವಿಪರ್ಯಾಸ ಎಂದರೆ  ಇವರಿಗೆ ಸೂಕ್ತ ವಸತಿ ವ್ಯವಸ್ಥೆ ಒದಗಿಸುವಲ್ಲಿ ಮಾತ್ರ  ಸಂಬಂಧಿಸಿದ ಇಲಾಖೆ  ಹಿಂದೆ ಬಿದ್ದಿದೆ!

Advertisement

ಕಾರ್ಕಳ ನಗರ ವ್ಯಾಪ್ತಿಯಲ್ಲಿ ಪೊಲೀಸರ ವಾಸ್ತವ್ಯಕ್ಕಾಗಿ ವಸತಿಗೃಹ ನಿರ್ಮಾಣಗೊಂಡಿದ್ದರೂ ಅದಕ್ಕಿನ್ನೂ ಮೂಲ ಸೌಕರ್ಯ ಜೋಡಿಸದೆ ಬಾಕಿ ಉಳಿದಿದೆ. ಆದ್ದರಿಂದ ಬಳಕೆಗಿನ್ನೂ ಕಾಲ ಕೂಡಿ ಬಂದಿಲ್ಲ.  ಮೂಲ ಸೌಕರ್ಯ ಕೊರತೆಗಳಿರುವ ಸೋರುವ  ಮನೆಗಳಲ್ಲೆ ಅವರು ಈಗಲೂ ತಮ್ಮ  ವಾಸ್ತವ್ಯವನ್ನು  ಮುಂದುವರೆಸುತ್ತಿದ್ದಾರೆ.

ಗುತ್ತಿಗೆ ಅವಧಿ 2019ಕ್ಕೆ ಮುಕ್ತಾಯ:

ಕಾರ್ಕಳ ಪೊಲೀಸ್‌ ಠಾಣೆಯ ಪಕ್ಕದಲ್ಲೇ ಪೊಲೀಸ್‌ ಸಿಬಂದಿ ವರ್ಗಕ್ಕೆ ವಸತಿಗೃಹ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣ ಸಹಿತ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ.  2018ರ ಜನವರಿಯಲ್ಲಿ  ಕಾಮಗಾರಿಗೆ ಚಾಲನೆ ದೊರಕಿತ್ತು. ಕಾಮಗಾರಿ ನಿಧಾನಗತಿಯಲ್ಲಿ  ನಡೆಯುತ್ತ ಬಂದಿದೆ. ಟೆಂಡರ್‌ ನಿಯಮದಂತೆ 2019ರ ಮೇ ತಿಂಗಳಲ್ಲಿ ಗುತ್ತಿಗೆದಾರರು ಕಟ್ಟಡವನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಬೇಕಿತ್ತು. ಅವಧಿ ಕಳೆದು 2 ವರ್ಷ ಕಳೆದರೂ ಅದಾಗಿಲ್ಲ.ಬಹು ವೆಚ್ಚದ ಸಮುತ್ಛಯಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇದರ ವತಿಯಿಂದ ಪೊಲೀಸ್‌ ಗೃಹ -2020 ಯೋಜನೆಯಡಿ ವಸತಿಗೃಹ ಕಟ್ಟಡ ನಿರ್ಮಾಣಕ್ಕೆ 9.29 ಕೋಟಿ ರೂ. ಬಿಡುಗಡೆಗೊಂಡಿತ್ತು. ಉಡುಪಿಯ ಶ್ರುತಿ ಎಂಜಿನಿಯರ್‌ ಅವರು ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದರು.

48 ನಿವೇಶನ :

Advertisement

ಪೊಲೀಸ್‌ ವಸತಿ ಸಮುಚ್ಚಯದಲ್ಲಿ  ಎರಡು ಅಂತಸ್ತಿನ 4 ಬ್ಲಾಕ್‌ಗಳಲ್ಲಿ ಒಟ್ಟು 48 ವಸತಿ ಗೃಹಗಳಿವೆ. ಇದರಿಂದ ಕಾರ್ಕಳ ನಗರ, ಗ್ರಾಮಾಂತರ ಹಾಗೂ ಅಜೆಕಾರು ಪೊಲೀಸ್‌ ಠಾಣೆಯ 48 ಪೊಲೀಸ್‌ ಕುಟುಂಬಕ್ಕೆ ಪ್ರಯೋಜನವಾಗಲಿದೆ. ಇವರೆಲ್ಲರೂ ಈಗ ಹಳೆ ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೆಲವರು ಬಾಡಿಗೆಗೆ ಮನೆ ಪಡೆದು ವ್ಯಾಸ್ತವ್ಯ ಹೊಂದಿದ್ದಾರೆ.

ಸೌಕರ್ಯ ಜೋಡಣೆ ಸಮಸ್ಯೆಯಿದೆ :

ಸಮುತ್ಛಯ ಭವನಕ್ಕೆ ನೀರು ಪೂರೈಕೆ, ಡ್ರೈನೇಜ್‌ಗೆ ಸಂಬಂಧಿಸಿ ಕೆಲಸ ಕಾರ್ಯಗಳು ಪೂರ್ಣವಾಗಿಲ್ಲ. ಗುತ್ತಿಗೆದಾರರು ಕಟ್ಟಡ ನಿರ್ಮಿಸಿ ಸುಮ್ಮನಿದ್ದಾರೆ. ನೀರು ಸಂಪರ್ಕ, ಇನ್ನಿತರ  ಮೂಲ ಸೌಕರ್ಯ ಒದಗಿಸುವಲ್ಲಿ  ಗುತ್ತಿಗೆದಾರರ ಮತ್ತು ಇಲಾಖೆ ಮಧ್ಯೆ ಹೊಂದಾಣಿಕೆ ಕೊರತೆಯಿದೆ. ಪರಿಣಾಮ ಕಟ್ಟಡ ಮಾತ್ರ ನಿರ್ಮಾಣಗೊಂಡು ನಿಂತಿದೆ. ಪಕ್ಕದಲ್ಲೇ ಇರುವ ಸರಕಾರಿ ಬಾವಿಗೆ ಪಂಪ್‌ ಅಳವಡಿಸಿ ಪೈಪ್‌ಲೈನ್‌ ಸಂಪರ್ಕ ನೀಡಿದಲ್ಲಿ  ನೀರಿನ ಸಮಸ್ಯೆ ಬಗೆಹರಿಯಲಿದೆ.

ಹಳೆಯ ಕಟ್ಟಡ ಶಿಥಿಲ :

35ಕ್ಕೂ  ಅಧಿಕ ವರ್ಷದ ಹಿಂದೆ ನಿರ್ಮಾಣವಾದ ಪೊಲೀಸ್‌ ವಸತಿಗೃಹಗಳು ಶಿಥಿಲಾವಸ್ಥೆಯಲ್ಲಿದ್ದು,  ಮನೆ ಛಾವಣಿ ಕುಸಿಯುವ  ಭೀತಿ ಹಂತಕ್ಕೆ ತಲುಪಿದೆ. ಪ್ರತಿ ಮಳೆಗಾಲದಲ್ಲಿ ನೀರು ಸೋರುತ್ತಿರುತ್ತದೆ.  ಮನೆ ಸಮಸ್ಯೆ ಸಿಬಂದಿಯನ್ನು ಕಾಡುತ್ತಿದೆ.

ಕಟ್ಟಡ ಸಿದ್ಧವಾಗಿದ್ದರೂ ಲೋಕಾರ್ಪಣೆ ವಿಳಂಬವಾಗಿದೆ. ಅಧಿವೇಶನ ಮುಗಿದ  ತತ್‌ಕ್ಷಣ ಉದ್ಘಾಟನೆಗೆ ಕ್ರಮ ವಹಿಸಲಾಗುವುದು. -ವಿ.ಸುನಿಲ್‌ ಕುಮಾರ್‌,  ಶಾಸಕರು, ಕಾರ್ಕಳ

ಸಮುಚ್ಛಯ ನಿರ್ಮಾಣಗೊಂಡು ಸಿದ್ಧವಾಗಿದೆ. ಒಳಚರಂಡಿಗೆ ಸಂಬಂಧಿಸಿದ ಕೆಲಸವಷ್ಟೇ  ಬಾಕಿಯಿದೆ. ಶೀಘ್ರ ಬಳಕೆಗೆ ಸಿಗುವಂತೆ ಮಾಡಲು ಇಲಾಖೆ  ಗಮನಕ್ಕೆ ತರಲಾಗಿದೆ. ಶೀಘ್ರ ಬಳಕೆಗೆ ಸಿಗುವ  ವಿಶ್ವಾಸವಿದೆ. -ಭರತ್‌ ರೆಡ್ಡಿ , ಡಿವೈಎಸ್ಪಿ , ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next