ದಾವಣಗೆರೆ: ಎರಡು ದಶಕಗಳ ನಿರಂತರ ಹೋರಾಟದ ಫಲವಾಗಿ ಮತ್ತೆ ತಾಲೂಕು ಮಾನ್ಯತೆ ಪಡೆದುಕೊಂಡರೂ ಅತ್ಯಗತ್ಯ ಮೂಲ ಸೌಲಭ್ಯ, ಕೆಲಸ-ಕಾರ್ಯಗಳಿಗೆ ಪರಿತಪಿಸಬೇಕಾದ ಹಾಗೂ ಪ್ರತಿಯೊಂದಕ್ಕೂ ಹಿಂದಿನ ತಾಲೂಕು ಕೇಂದ್ರ ಹೊನ್ನಾಳಿಗೆ ಅಲೆದಾಡಬೇಕಾದ ಅನಿವಾರ್ಯ ಸ್ಥಿತಿ ನೂತನ ನ್ಯಾಮತಿ ತಾಲೂಕಿನ ಜನರದ್ದಾಗಿದೆ!
ಹೌದು, ನ್ಯಾಮತಿ ತಾಲೂಕು ಕೇಂದ್ರವಾಗಿ ಮೂರು ವರ್ಷಗಳಾದರೂ ಪ್ರತಿಯೊಂದಕ್ಕೂ ಹೊನ್ನಾಳಿಯ ಕಚೇರಿಗಳಿಗೆ ಎಡತಾಕುವುದು ತಪ್ಪಿಲ್ಲ. ಆಧಾರ್ ಕಾರ್ಡ್ಗೂ ಹೊನ್ನಾಳಿಗೆ ಹೋಗಿ ಬರಬೇಕಾಗಿರುವುದು ಹೊಸ ತಾಲೂಕು ಕೇಂದ್ರ ನ್ಯಾಮತಿಯಲ್ಲಿ ಇನ್ನೂ ಆಡಳಿತ ಯಂತ್ರ ಕಾರ್ಯಾರಂಭ ಮಾಡಿಲ್ಲ ಎಂಬುದರ ಸಂಕೇತ.
ನ್ಯಾಮತಿ ಐತಿಹಾಸಿಕ ಸ್ಥಳವಾಗಿದ್ದು, ರಾಷ್ಟ್ರಕೂಟರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿತ್ತು. ರಾಷ್ಟ್ರಕೂಟರ ಎರಡನೇ ಕೃಷ್ಣ ಕಟ್ಟಿಸಿದ ಜೈನ ಬಸದಿ, ಅತ್ಯಾಕರ್ಷಕ, ಅಪರೂಪದ ಬೊಂತೊಮ್ಮನ ಶಿಲ್ಪ ಇಲ್ಲಿವೆ. ಪುರಾಣ ಪ್ರಸಿದ್ಧ ತಾಣ ತೀರ್ಥರಾಮೇಶ್ವರ ನ್ಯಾಮತಿ ತಾಲೂಕಿನಲ್ಲಿದೆ. ನ್ಯಾಮತಿ ವೈಭವದ ಇತಿಹಾಸ ಹೊಂದಿದ್ದರೂ ತಾಲೂಕು ಕೇಂದ್ರವಾಗಿ ನಿರೀಕ್ಷಿತ ಅಭಿವೃದ್ಧಿ ಹೊಂದಿಲ್ಲ ಎನ್ನುವುದು ವಾಸ್ತವ.
ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಿಲ್ಲ
Related Articles
ಬ್ರಿಟಿಷರ ಕಾಲದಲ್ಲಿ ನ್ಯಾಮತಿ, ಹೊನ್ನಾಳಿ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿತ್ತು. 1867ರಿಂದ 1882ರವರೆಗೆ ತಾಲೂಕು ಕೇಂದ್ರವಾಗಿತ್ತು. ಕಾರಣಾಂತರದಿಂದ ತಾಲೂಕು ಮಾನ್ಯತೆ ಕಳೆದುಕೊಂಡಿತ್ತು. ಮತ್ತೆ ತಾಲೂಕಾದರೆ ಇಲ್ಲಿಯೇ ಎಲ್ಲ ಕೆಲಸ-ಕಾರ್ಯಗಳು ಆಗುತ್ತವೆ, ಹೊನ್ನಾಳಿಗೆ ಹೋಗಿ ಬರುವುದು, ಅಲೆಯುವುದು ತಪ್ಪುತ್ತದೆ ಎಂದು ಜನರು ಕನಸು ಕಂಡಿದ್ದರು. ತಾಲೂಕು ಕೇಂದ್ರಕ್ಕಾಗಿ ಅಹರ್ನಿಶಿ ಹೋರಾಟವನ್ನೂ ಮಾಡಿದ್ದರು. ಆದರೆ ತಾಲೂಕು ಕೇಂದ್ರವಾದರೂ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗದೆ ನಿರಾಸೆ ಪಡುವಂತಾಗಿದೆ.
ಸರ್ಕಾರ ತಾಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ತಾಲೂಕಿನ ಜನರ ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ಕಚೇರಿಗಳು ಪ್ರಾರಂಭವಾಗಬೇಕಾಗಿದೆ. ಮೂರು ವರ್ಷ ಕಳೆದರೂ ಆಮೆಗತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬೆರಳಣಿಕೆಯಷ್ಟು ಅಲ್ಲೊಂದು ಇಲ್ಲೊಂದು ಸರ್ಕಾರಿ ಕಚೇರಿಗಳು ಕಾಣಲಾರಂಭಿಸಿವೆ. ಪೂರ್ಣ ಪ್ರಮಾಣದಲ್ಲಿ ತಾಲೂಕು ಆಡಳಿತ ಕಾರ್ಯ ನಿರ್ವಹಿಸಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ. ಏಕೆಂದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಚೇರಿಗಳು ಬರುವುದು ಬಾಕಿ ಇದೆ.
ಕೊನೆಗೂ ಸಿಕ್ಕಿತು ಮಾನ್ಯತೆ
ಹೊನ್ನಾಳಿಯಿಂದ 13 ಕಿಮೀ ದೂರದಲ್ಲಿರುವ ನ್ಯಾಮತಿ ಮತ್ತೆ ತಾಲೂಕು ಆಗಬೇಕು ಎಂಬ ಕೂಗು ಪ್ರಾರಂಭವಾಯಿತು. ನಿರಂತರ ಹೋರಾಟವೂ ನಡೆಯಿತು. ಜಗದೀಶ್ ಶೆಟ್ಟರ್ ಅಧಿಕಾರವಧಿಯಲ್ಲಿ ತಾಲೂಕು ಕೇಂದ್ರದ ಮಾನ್ಯತೆ ಮತ್ತೆ ದೊರೆಯಿತು. ನೂತನ ತಾಲೂಕಿನ ಘೋಷಣೆಯೂ ಆಯಿತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ಮಾಡಿರುವ ಘೋಷಣೆ ಕಾರ್ಯರೂಪಕ್ಕೆ ಬರುವುದೇ ಎಂಬ ಅನುಮಾನ ದಟ್ಟವಾಗಿತ್ತು.
ಆದರೆ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನ್ಯಾಮತಿ ತಾಲೂಕು ಉದ್ಘಾಟನೆ ಮಾಡಿದರು. ಹಾಗಾಗಿ ನ್ಯಾಮತಿ ತಾಲೂಕಿನ ಜನರ ಕನಸು ನನಸಾಯಿತು. ಈಗ ತಾಲೂಕು ಕೇಂದ್ರದಲ್ಲಿನ ಸ್ಥಿತಿ ನೋಡಿದರೆ ಜನತೆಗೆ ಮತ್ತೆ ತಾಲೂಕು ಕೇಂದ್ರವಾಗಿರುವ ಸಂತೋಷ ಬಿಟ್ಟರೆ ತಾಲೂಕು ಆಡಳಿತಕ್ಕೆ ಅತ್ಯಗತ್ಯವಾದ ಯಾವುದೇ ಕಟ್ಟಡಗಳಿಲ್ಲ. ಹಳೆಯ ನಾಡ ಕಚೇರಿಯನ್ನೇ ತಹಶೀಲ್ದಾರ್ ಕಚೇರಿಯನ್ನಾಗಿಸಿ ತಹಶೀಲ್ದಾರ್ ನೇಮಕ ಮಾಡಲಾಗಿದೆ. ತಾಲೂಕು ಪಂಚಾಯತಿ ಇದ್ದರೂ ಸ್ವಂತ ಕಟ್ಟಡ ಇಲ್ಲ.
ಸರ್ಕಾರಿ ಕಚೇರಿಗಳೇ ಇಲ್ಲ
ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಸಹಕಾರ ಸೇರಿದಂತೆ ಯಾವುದೇ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳೇ ಇಲ್ಲ. ನ್ಯಾಯಾಲಯವೂ ಸಹ ಪ್ರಾರಂಭವಾಗಿಲ್ಲ. ತಾಲೂಕು ಕೇಂದ್ರವಾಗಿದ್ದರೂ ಬಸ್ ನಿಲ್ದಾಣವೇ ಇಲ್ಲ. ಕ್ರೀಡಾಂಗಣ ಎಂಬುದು ಗಾವುದ ದೂರದ ಮಾತಾಗಿದೆ. ಇರುವುದರಲ್ಲೇ ಹೊಂದಾಣಿಕೆ ಮಾಡಿಕೊಂಡು ತಾಲೂಕು ಆಡಳಿತ ನಡೆಸುವಂತಾಗಿದೆ.
ತಾಲೂಕು ಕೇಂದ್ರವಾದ ನಂತರ ನ್ಯಾಮತಿಯಲ್ಲಿ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾರ್ಯ ನಡೆದಿದೆ. ಪ್ರಮುಖ ಬೀದಿಗಳಲ್ಲಿ ಅತ್ಯಾಧುನಿಕ ಬೀದಿದೀಪ ಇತರೆ ವ್ಯವಸ್ಥೆ ನಡೆಯುತ್ತಿದೆ. ರಸ್ತೆ ಇತರೆ ಸೌಲಭ್ಯಗಳ ಒದಗಿಸುವ ಕೆಲಸ ಪ್ರಗತಿಯಲ್ಲಿದೆ. ಆದರೆ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಮೂಲ ಸೌಲಭ್ಯ, ಸರ್ಕಾರಿ ಇಲಾಖೆ ಕಚೇರಿಗಳು ಆಗಬೇಕಿದೆ. ಬರೀ ತಾಲೂಕು ಕೇಂದ್ರ ಎಂದು ಘೋಷಣೆ ಮಾಡುವುದರಿಂದ ಏನೂ ಆಗುವುದೇ ಇಲ್ಲ. ಜನರಿಗೆ ಬೇಕಾದಂತಹ ಕೆಲಸಗಳು ಆಗಬೇಕು. ಆಗ ತಾಲೂಕು ಕೇಂದ್ರವಾಗಿದ್ದಕ್ಕೂ ಸಾರ್ಥಕ. ಹೆಸರಿಗೆ ತಾಲೂಕು ಆದರೆ ಪ್ರಯೋಜನ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಮುಖ ವ್ಯಾಪಾರ ಕೇಂದ್ರ
ಬೆಳಗುತ್ತಿ ಮತ್ತು ಗೋವಿನಕೋವಿ ಎರಡು ಹೋಬಳಿ ಕೇಂದ್ರ ಹೊಂದಿರುವ ನ್ಯಾಮತಿ ತಾಲೂಕು 371.949 ಚದರ ಕಿಮೀ ವಿಸ್ತೀರ್ಣ ಹೊಂದಿದೆ. 76 ಗ್ರಾಮಗಳಿರುವ ತಾಲೂಕಿನ ಜನಸಂಖ್ಯೆ 85 ಸಾವಿರದಷ್ಟಿದೆ. 14 ಬೇಚಾರಕ್, 18 ಗ್ರಾಪಂಗಳಿವೆ. ಇತಿಹಾಸ ಮತ್ತು ಪೌರಾಣಿಕ ಪ್ರಸಿದ್ಧ ತಾಣಗಳಿವೆ. ಮೈಸೂರು ಅರಸರ ಆಡಳಿತಾವಧಿಯಲ್ಲಿ ದಿವಾನ್ ಪೂರ್ಣಯ್ಯನವರಿಂದ ಅಭಿವೃದ್ಧಿ ಕಂಡಂತಹ ನ್ಯಾಮತಿ ಪಟ್ಟಣ ಮಲೆನಾಡು-ಅರೆ ಮಲೆನಾಡಿನ ಪ್ರಮುಖ ಸಂಪರ್ಕ ಕೇಂದ್ರವಾಗಿರುವುದಿಂದ ಉತ್ತಮ ವ್ಯಾಪಾರ ಕೇಂದ್ರವೂ ಆಗಿದೆ. ತಾಲೂಕು ಆಡಳಿತ ಪರಿಪೂರ್ಣ ಪ್ರಮಾಣದಲ್ಲಿ ಆದಲ್ಲಿ ವ್ಯಾಪಾರವೂ ವೃದ್ಧಿಸಲಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಯೂ ಆಗಲಿದೆ. ಆದರೆ ಅಂತಹ ಪ್ರಯತ್ನ ನಡೆಯದೇ ಇರುವುದು ಜನರ ಬೇಸರ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
–ರಾ. ರವಿಬಾಬು