Advertisement

ಶವ ಸಂಸ್ಕಾರಕ್ಕೆ ಕಾಡು-ಮೇಡು ಅಲೆದಾಟ

03:21 PM Jan 20, 2020 | Suhan S |

ಗದಗ: ಇದೊಂದು ಪುಟ್ಟ ತಾಂಡಾಯಾಗಿದ್ದರೂ, ಸ್ಥಿತಿವಂತರೇ ಹೆಚ್ಚು. ಸರಕಾರದ ನೆರವು ಸಾಕಾಗಲಿಲ್ಲವೆಂದರೆ, ಸ್ಥಳೀಯರೇ ಆರ್ಥಿಕವಾಗಿ ನೆರವಾಗುವ ಸಹೃದಯಿಗಳು. ಆದರೆ, ಈ ತಾಂಡೆಯಲ್ಲಿ ಯಾರಾದರೂ ನಿಧನರಾದರೆ, ಕುಟುಂಬಸ್ಥರ ಪಾಡು ಹೇಳತೀರದು. ಈ ಊರಿನಲ್ಲಿ ರುದ್ರಭೂಮಿ ಇಲ್ಲದೇ, ಶವ ಸಂಸ್ಕಾರಕ್ಕಾಗಿ ಕಾಡು-ಮೇಡು ಅಲೆಯುವುದು ಇಲ್ಲಿನ ದುಸ್ಥಿತಿ.

Advertisement

ಇದು, ಜಿಲ್ಲಾ ಕೇಂದ್ರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಡವಿಸೋಮಾಪುರ ದೊಡ್ಡ ತಾಂಡಾ ಜನರ ವ್ಯಥೆಯಿದು. ಅಡವಿಸೋಮಾಪುರ ಗ್ರಾ.ಪಂ ವ್ಯಾಪ್ತಿಯ ಈ ಗ್ರಾಮದಲ್ಲಿ 2011ರ ಜನ ಗಣತಿ ಪ್ರಕಾರ ಸುಮಾರು 1300 ಜನ ಸಂಖ್ಯೆಯಿದೆ. ಈ ಪೈಕಿ ಲಮಾಣಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುತೇಕರು ಗೋವಾ, ಪುಣೆ ಹಾಗೂ ಬೆಂಗಳೂರಿನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಹೆತ್ತವರು, ಮಕ್ಕಳು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ತಿಂಗಳಿಗೊಮ್ಮೆ ಅಥವಾ ಹಬ್ಬ, ಹರಿದಿನಗಳ ಸಂದರ್ಭದಲ್ಲಿ ಗ್ರಾಮಕ್ಕೆ ಮರಳುತ್ತಾರೆ. ಗ್ರಾಮಕ್ಕೆ ಸ್ಮಶಾನ ಕಲ್ಪಿಸುವಂತೆ ಆಗೊಮ್ಮೆ, ಈಗೊಮ್ಮೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ, ಬಳಿಕ ಅದನ್ನು ಫಾಲೋಅಪ್‌ ಮಾಡಲು ಸಾಧ್ಯವಾಗುತ್ತಿಲ್ಲ. ಮನವಿ ಸ್ವೀಕರಿಸಿದವರೂ, ಬಳಿಕ ಇತ್ತ ಗಮನ ಹರಿಸುವುದಿಲ್ಲ. ಹೀಗಾಗಿ ವರ್ಷಗಳಿಂದ ರುದ್ರ ಭೂಮಿಯ ಬೇಡಿಕೆ ಈಡೇರುತ್ತಿಲ್ಲ ಎಂಬುದು ಗ್ರಾಮಸ್ಥರ ಅಸಹಾಯಕ ನುಡಿಗಳು.

ಸರಕಾರಿ ಜಮೀನಿಗೆ ಅಡ್ಡಿ: ಒಂದೆರಡು ವರ್ಷಗಳ ಹಿಂದೆ ಗ್ರಾಮದಲ್ಲಿ ಸರಕಾರಕ್ಕೆ ಸಂಬಂಧಿಸಿದ 20 ಗುಂಟೆಯಲ್ಲಿ ಜಾಗೆಯಲ್ಲಿ ಸ್ಮಶಾನ ಅಭಿವೃದ್ಧಿಪಡಿಸಲು ಗ್ರಾಮದ ಹಿರಿಯರು ಬೇಡಿಕೆ ಇಟ್ಟಿದ್ದರು. ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಗ್ರಾ.ಪಂ. ಆಡಳಿತ, ಎನ್‌ಆರ್‌ ಇಜಿ ಯೋಜನೆಯಡಿ ಸುಮಾರು 10 ಲಕ್ಷ ರೂ. ಮೊತ್ತದಲ್ಲಿ ಕ್ರಿಯಾ ಯೋಜನೆಯನ್ನೂ ಸಿದ್ಧಗೊಳಿಸಿತ್ತು. ಆದರೆ, ರುದ್ರಭೂಮಿಗಾಗಿ ಗುರುತಿಸಿದ ಜಾಗೆಯ ಸುತ್ತಮುತ್ತಲಿನ ಜಮೀನು ಮಾಲೀಕರು ತಕರಾರರು ಮಾಡಿದ್ದರಿಂದ ಆ ಪ್ರಕ್ರಿಯೆ ಅಲ್ಲಿಗೆ ಸ್ಥಗಿತಗೊಂಡಿದೆ ಎನ್ನುತ್ತಿವೆ ಗ್ರಾ.ಪಂ ಮೂಲಗಳು.

ತಪ್ಪದ ಕಾಡು-ಮೇಡು ಅಲೆದಾಟ: ಈ ತಾಂಡಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲಾಖೆ ಖಾಲಿ ಜಾಗೆಯಲ್ಲಿ ಈ ವರೆಗೆ ಶವ ಸಂಸ್ಕಾರ ಮಾಡಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಹಸರೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲೆಡೆ ಸಸಿಗಳನ್ನು ನೆಟ್ಟು, ಪೋಷಿಸುತ್ತಿದ್ದಾರೆ. ಬೇಸಿಗೆಯಲ್ಲಿ ಶವ ದಹನದಿಂದ ಅರಣ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಂಭವವಿದ್ದರಿಂದ ಕೆಲವೊಮ್ಮೆ ಅರಣ್ಯ ಅಧಿಕಾರಿಗಳ ಕಿರಿಕಿರಿ ಎದುರಿಸುವಂತಾಗುತ್ತದೆ. ಸದ್ಯಕ್ಕೆ ಗುಡ್ಡದ ಮೂಲೆಯೊಂದನ್ನು ಶವಗಳ ದಹನಕ್ಕೆ ಸ್ಥಳ ಗೊತ್ತುಪಡಿಸಲಾಗಿದೆ. ಆದರೆ, ಸರಕಾರದಿಂದ ಜಮೀನು ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹ.

ಅಡವಿಸೋಮಾಪುರ ದೊಡ್ಡ ತಾಂಡೆಯನ್ನು ಅರಣ್ಯ ಪ್ರದೇಶ ಸುತ್ತುವರಿದಿದ್ದರಿಂದ ಶವ ಸಂಸ್ಕಾರ ಮಾಡುವುದೇ ದೊಡ್ಡ ಸವಾಲಾಗಿ ಪ ರಿಣಮಿಸುತ್ತದೆ. ತಾಂಡೆಯಲ್ಲಿ ಯಾರಾದರೂ, ಸತ್ತರೆ ಖಾಲಿ ಜಾಗೆಯನ್ನು ಹುಡುಕುತ್ತಾ ಶವಹೊತ್ತು ಸಾಗಬೇಕು. ಇಲ್ಲವೇ ಶವ ದಹನದ ವೇಳೆ ಅರಣ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಆತಂಕ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಸ್ಮಶಾನ ಭೂಮಿ ಒದಗಿಸಿಕೊಡಬೇಕು. -ಕಷ್ಣಪ್ಪ ಬೀರಪ್ಪ ರಾಥೋಡ, ಗ್ರಾಮಸ್ಥ

Advertisement

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next