Advertisement

ಆನೆಗೊಂದಿ‌ ಸಂಸ್ಥಾನದ ಕುಪ್ಪಮ್ಮ ರಾಣಿಯ ಶಾಸನ ಸಾಣಾಪೂರದಲ್ಲಿ ಪತ್ತೆ       

02:21 PM Apr 04, 2023 | Team Udayavani |

ಗಂಗಾವತಿ : ವಿಜಯನಗರ ಪತನದ ನಂತರ ಬ್ರಿಟಿಷ್ ಆಗಮನದ ವರೆಗೂ ಅಸ್ತಿತ್ವದಲ್ಲಿ ಆನೆಗೊಂದಿ ಸಂಸ್ಥಾನದ ಕುರಿತು ಮಾಹಿತಿಯುಳ್ಳ ಶಿಲಾಶಾಸನಯೊಂದು ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ಪತ್ತೆಯಾಗಿದೆ.

Advertisement

ಆನೆಗೊಂದಿ ನರಪತಿ ಸಂಸ್ಥಾನದ ರಾಣಿ ಕುಪ್ಪಮ್ಮ ಶಾಸನವನ್ನು ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಸಂಶೋಧಿಸಿದ್ದಾರೆ.

ಸಾಣಾಪೂರ ಗ್ರಾಮದ ತುಂಗಭದ್ರಾ ನದಿಗೆ ನಿರ್ಮಿಸಿರುವ ಡ್ಯಾಂ ಎಡ ಭಾಗದ  ಮೇಲಿನ ಗಂಗಾಪರಮೇಶ್ವರಿ ದೇವಾಲಯದಲ್ಲಿ ಈ ಶಾಸನ ಪತ್ತೆಯಾಗಿದೆ

12 ಸಾಲುಗಳಲ್ಲಿರುವ ಈ ಶಾಸನ 1309ರ ಫಸಲಿ ವರ್ಷವನ್ನು ಉಲ್ಲೇಖಿಸುತ್ತಿದ್ದು ಅದು ಕ್ರಿ.ಶ. 1899 ಕ್ಕೆ ಸರಿ ಹೊಂದುತ್ತದೆ. ಶಾಸನವು ರಾಣಿ ಕುಪ್ಪಮ್ಮನವರ ಅಭಿಪ್ರಾಯದಂತೆ ಶ್ರೀರಂಗ ದೇವರಾಯ ಮಹಾರಾಯರ ಅಪ್ಪಣೆ ಪ್ರಕಾರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ನಂದ್ಯಾಲ್ ನಾರಾಯಣ ರಾಜರು ಶಾಸನವಿರುವ ದೇವಾಲಯವನ್ನು ಕಟ್ಟಿಸಿದ ವಿಷಯವನ್ನು ತಿಳಿಸುತ್ತದೆ.

ಆನೆಗೊಂದಿ ನರಪತಿ ಸಂಸ್ಥಾನದ ಧೀಮಂತ ರಾಣಿಯಾಗಿದ್ದ ರಾಣಿ ಕುಪ್ಪಮ್ಮ ತನ್ನ ಗಂಡ ಕೃಷ್ಣದೇವರಾಯನ ಅಕಾಲಿಕ ಮರಣಾದ ನಂತರ ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಧಿಕ್ಕರಿಸಿ ಸಂಸ್ಥಾನವನ್ನು ಉಳಿಸಿಕೊಳ್ಳಲು  ತನ್ನ ತಮ್ಮ ಪಂಪಾಪತಿರಾಜುವನ್ನು ದತ್ತು ಪಡೆದು ಶ್ರೀರಂಗದೇವರಾಯನೆಂದು ನಾಮಕರಣ ಮಾಡಿ ಪಟ್ಟಕ್ಕೆ ಕೂಡಿಸಿದಳು. ಅಲ್ಪವಯಸ್ಕ ನಾಗಿದ್ದ ಮಗನ ಪರವಾಗಿ ತಾನೇ ಆಡಳಿತ ನಡೆಸಿದಳು. ಜನಾನುರಾಗಿದ್ದ ಈಕೆ ಹಲವು ದಾನ ಧರ್ಮಗಳನ್ನು ಮಾಡಿದ್ದಾಳೆ.ಈಗಾಗಲೇ ರಾಣಿಯ ಹಲವು ಶಾಸನಗಳು ದೊರೆತಿದ್ದು ಅವು ವಾಲ್ಮೀಕಿ ಜನಾಂಗದ ಗುರುತ್ವ ಧಾರಣೆಯನ್ನು  ರಾಣಿ ವಹಿಸಿಕೊಂಡ ಬಗ್ಗೆ, ಕಂಪ್ಲಿ ಕಲ್ಮಠಕ್ಕೆ ಹಂಪಿಯಲ್ಲಿ ದಾಸೋಹಕ್ಕಾಗಿ ಮಂಟಪವೊಂದನ್ನು ದಾನ ನೀಡಿದ ಬಗ್ಗೆ ತಿಳಿಸುತ್ತವೆ.

Advertisement

ಪ್ರಸ್ತುತ ಶಾಸನ ದೇವಾಲಯ ನಿರ್ಮಾಣದ ಬಗ್ಗೆ ತಿಳಿಸುವುದರ ಮೂಲಕ ರಾಣಿಯ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ತಿಳಿಯಲು ಸಹಾಯಕವಾಗಿದೆ.

ಈ ಶಾಸನ ಸಂಶೋಧನೆಯಲ್ಲಿ   ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಇತಿಹಾಸ  ಪ್ರಾಧ್ಯಾಪಕ  ಭಜರಂಗಬಲಿ ಗೌಡಪ್ಪನೂರ್ , ಆನೆಗೊಂದಿ ಸತ್ಯರಾಜು, ಪತ್ರಕರ್ತ ಮಂಜುನಾಥ್ ಗುಡ್ಲಾನೂರ ನೆರವಾಗಿದ್ದಾರೆ ಎಂದು ಡಾ.  ಕೋಲ್ಕಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next