Advertisement

ಕುಂದಾಪುರ: ನಕ್ಸಲ್‌ ನಾಯಕರು 10 ದಿನ ಪೊಲೀಸ್‌ ವಶಕ್ಕೆ  

11:11 PM May 11, 2022 | Team Udayavani |

ಕುಂದಾಪುರ: ಕೇರಳದಲ್ಲಿ ಬಂಧಿತರಾದ ನಕ್ಸಲ್‌ವಾದಿಗಳಾದ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದ ಬಿ. ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಬುಧವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮೇ 20 ರ ವರೆಗೆ 10 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

Advertisement

ತಾಲೂಕಿನ ಅಮಾಸೆಬೈಲ್‌ ಠಾಣೆಯಲ್ಲಿ 2006 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕಾರ್ಕಳ, ಹೆಬ್ರಿ ಹಾಗೂ ಅಜೆಕಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ3 ರಂದು ಪೊಲೀಸ್‌ ಕಸ್ಟಡಿ ಪಡೆದು ವಿಚಾರಣೆ ನಡೆಸಿ, ಸ್ಥಳ ಮಹಜರು ಮಾಡಲಾಗಿತ್ತು. ಬಳಿಕ ಮಂಗಳವಾರ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶಂಕರನಾರಾಯಣ ಪೊಲೀಸ್‌ ಠಾಣಾ ವ್ಯಾಪ್ತಿಯ ಕೇಶವ್‌ ಯಡಿಯಾಳ ಹತ್ಯೆ ಹಾಗೂ ಇತರ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪ ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಲುವಾಗಿ ಕಸ್ಟಡಿಗೆ ಕೇಳಲಾಗಿದೆ.

ಅಮಾಸೆಬೈಲ್‌ ಠಾಣೆಯಲ್ಲಿ ಇವರಿಬ್ಬರ ವಿರುದ್ಧ 4, ಶಂಕರನಾರಾಯಣ ಠಾಣೆಯಲ್ಲಿ 6 ಹಾಗೂ ಕೊಲ್ಲೂರು ಠಾಣೆಯಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ.

ಬಿ.ಜಿ. ಕೃಷ್ಣಮೂರ್ತಿ ವಿರುದ್ದ 53 ಹಾಗೂ ಸಾವಿತ್ರಿ ವಿರುದ್ಧ ಒಟ್ಟು 22 ಪ್ರಕರಣಗಳಿವೆ. ಕೇರಳದ ಗಡಿ ಭಾಗವಾದ ವಯನಾಡ್‌ನ‌ ಸುಲ್ತಾನ್‌ಬತೇರಿಯಲ್ಲಿ ನ.10ರಂದು ಕೇರಳದ ಭಯೋತ್ಪಾದನಾ ನಿಗ್ರಹ ಪಡೆಯಿಂದ ಅವರ ಬಂಧನವಾಗಿತ್ತು. ಫೆ.24 ರಂದು ಕೇರಳದ ಪೊಲೀಸರು ಅವರನ್ನು ಕರ್ನಾಟಕ ಪೋಲಿಸರಿಗೆ ಹಸ್ತಾಂತರಿಸಿದ್ದರು.

Advertisement

ನಕ್ಸಲ್‌ವಾದಿಗಳನ್ನು ಇರಿಸಿರುವ ಪೊಲೀಸ್‌ ಠಾಣೆಯ ಸುತ್ತ ವಿಶೇಷ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ ಕೆ. , ಸರ್ಕಲ್‌ ಇನ್ಸ್‌ಪೆಕ್ಟರ್‌ ಗೋಪಿಕೃಷ್ಣ ಕೆ. ಆರ್‌. ಹಾಗೂ ಉಪ ವಿಭಾಗದ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ವಿಚಾರಣೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next